
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಿದ ಆರ್ಸಿಬಿ (RCB), ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ಎದುರಿಸಿತ್ತು. ಕಳೆದ ಪಂದ್ಯದಲ್ಲಿ ಇದೇ ಚಿನ್ನಸ್ವಾಮಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತಿದ್ದ ಆರ್ಸಿಬಿ, ಇದೀಗ ಗುಜರಾತ್ ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮತ್ತೆ ಎರಡನೇ ಸ್ಥಾನವನ್ನು ಅಲಂಕರಿಸಿತು. ಇನ್ನು ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿಗೆ ಇದು 50ನೇ ಗೆಲುವಾಗಿದ್ದು, ಮತ್ತಷ್ಟು ವಿಶೇಷವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 206 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ 19ನೇ ಓವರ್ನಲ್ಲಿ ಗೆಲುವಿನ ದಡ ಮುಟ್ಟಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 3 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ತಂಡದ ಪರ ಸಾಯಿ ಸುದರ್ಶನ್ ಶತಕದ ಇನ್ನಿಂಗ್ಸ್ ಆಡಿದರು. ಹಾಗೆಯೇ ನಾಯಕ ಶುಭ್ಮನ್ ಗಿಲ್ ಅವರೊಂದಿಗೆ ಮೊದಲ ವಿಕೆಟ್ಗೆ ಶತಕದ ಜೊತೆಯಾಟವನ್ನು ಕಟ್ಟಿದರು. ಇವರಿಬ್ಬರು ಆಡುವಾಗ ಗುಜರಾತ್ ಬೃಹತ್ ಮೊತ್ತ ಕಲೆಹಾಕುವಂತೆ ತೋರುತ್ತಿತ್ತು. ಆದರೆ ನಾಯಕ ಶುಭಮನ್ ಗಿಲ್ 32 ರನ್ ಗಳಿಸಿ ಔಟಾಗುವುರೊಂದಿಗೆ ಇವರಿಬ್ಬರ ಜೊತೆಯಾಟ ಮುರಿದುಬಿತ್ತು. ಆ ಬಳಿಕ ಬಂದ ಜೋಸ್ ಬಟ್ಲರ್ ಕೂಡ 25 ರನ್ ಗಳಿಸಿ ಔಟಾದರು. ಇಲ್ಲಿಂದ ಗುಜರಾತ್ ಇನ್ನಿಂಗ್ಸ್ ಕುಸಿಯಿತು. ಕೊನೆಯಲ್ಲಿ ಜೇಸನ್ ಹೋಲ್ಡರ್ 23 ರನ್ ಗಳಿಸಿ ತಂಡವನ್ನು 200 ರನ್ಗಳ ಗಡಿ ದಾಟಿಸಿದರು. ಆರ್ಸಿಬಿ ಪರ ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ ಮತ್ತು ಜೋಶ್ ಹ್ಯಾಜಲ್ವುಡ್ ತಲಾ 1 ವಿಕೆಟ್ ಪಡೆದರು.
206 ರನ್ಗಳ ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ತಂಡ ಕಳಪೆ ಆರಂಭ ಪಡೆಯಿತು. ಈ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನು ಆಡುತ್ತಿದ್ದ ಜಾಕೋಬ್ ಬೆಥೆಲ್ ಅವರನ್ನು ಸಿರಾಜ್ 14 ರನ್ಗಳಿಗೆ ಔಟ್ ಮಾಡಿದರು. ಆದರೆ ಅದಕ್ಕೂ ಮುನ್ನ ಮೊದಲ ಓವರ್ನಲ್ಲಿಯೇ ವಿರಾಟ್ ಕೊಹ್ಲಿಗೆ ಜೀವದಾನ ನೀಡಲಾಯಿತು. ಸಿರಾಜ್ ಬೌಲಿಂಗ್ನಲ್ಲಿ, ಸುಂದರ್ ಸರಳ ಕ್ಯಾಚ್ ಕೈಬಿಟ್ಟರು. ವಿರಾಟ್ಗೆ ಜೀವದಾನ ನೀಡಿದ ಬಳಿಕ, ಗುಜರಾತ್ ಸಂಕಷ್ಟಕ್ಕೆ ಸಿಲುಕಿತು. ವಿರಾಟ್ ಕೊಹ್ಲಿ, ಪಡಿಕ್ಕಲ್ ಜೊತೆ ಸೇರಿ ಉತ್ತಮ ಜೊತೆಯಾಟ ಕಟ್ಟಿದರು. ಈ ಇಬ್ಬರು ಕೇವಲ 26 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡರು. ಹೀಗಾಗಿ ಆರ್ಸಿಬಿ ಒಂಬತ್ತು ಓವರ್ಗಳಲ್ಲಿ 100 ರನ್ಗಳ ಗಡಿ ದಾಟಿತು.
RCB vs GT IPL 2026 Highlights: ಗುಜರಾತ್ ವಿರುದ್ಧ ಆರ್ಸಿಬಿಗೆ ಸುಲಭ ಜಯ
ಪಡಿಕ್ಕಲ್ 20 ಎಸೆತಗಳಲ್ಲಿ ಆರು ಸಿಕ್ಸರ್ಗಳ ಮೂಲಕ ಅರ್ಧಶತಕ ಪೂರೈಸಿದರೆ, ವಿರಾಟ್ ಕೊಹ್ಲಿ ಅರ್ಧಶತಕ ಪೂರೈಸಲು 30 ಎಸೆತಗಳನ್ನು ತೆಗೆದುಕೊಂಡರು. ಈ ಇಬ್ಬರು ಬ್ಯಾಟ್ಸ್ಮನ್ಗಳು 47 ಎಸೆತಗಳಲ್ಲಿ ಶತಕದ ಜೊತೆಯಾಟ ನಡೆಸಿ ಗುಜರಾತ್ ತಂಡವನ್ನು ಪಂದ್ಯದಿಂದ ಹೊರದಬ್ಬಿದರು. ಆದಾಗ್ಯೂ, ವಿರಾಟ್ ಕೊಹ್ಲಿ ಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡರಾದರೂ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಕೊನೆಯಲ್ಲಿ ಕೃನಾಲ್ ಪಾಂಡ್ಯ ಅಜೇಯ 23 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:12 pm, Fri, 24 April 26