ಆರ್ಸಿಬಿ ಸಂಭ್ರಮಾಚರಣೆ ದುರಂತ; ನಮ್ಮ ಪಾತ್ರವಿಲ್ಲ ಎಂದ ಐಪಿಎಲ್, ಬಿಸಿಸಿಐ
RCB IPL Celebration Stampede: ಆರ್ಸಿಬಿ ಕಾರ್ಯಕ್ರಮದಲ್ಲಿ ನಡೆದ ಭಯಾನಕ ಕಾಲ್ತುಳಿತದಿಂದಾಗಿ ಇದುವರೆಗೆ 11 ಅಮಾಯಕರ ಪ್ರಾಣಪಕ್ಷಿ ಹಾರಿ ಹೋಗಿದೆ. ಇದೀಗ ಕರ್ನಾಟಕ ಸರ್ಕಾರ ಮತ್ತು ಆರ್ಸಿಬಿ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ. ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಈ ಘಟನೆಯಲ್ಲಿ ಐಪಿಎಲ್ ಮತ್ತು ಬಿಸಿಸಿಐ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಸೋಲಿಸುವ ಮೂಲಕ ಆರ್ಸಿಬಿ (RCB) ಮೊದಲ ಬಾರಿಗೆ ಐಪಿಎಲ್ (IPL 2025) ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರೊಂದಿಗೆ, ಆರ್ಸಿಬಿಯ 18 ವರ್ಷಗಳ ಪ್ರಶಸ್ತಿಯ ಬರವೂ ಕೊನೆಗೊಂಡಿತು. ಅತ್ತ ಅಹಮದಾಬಾದ್ನಲ್ಲಿ ಆರ್ಸಿಬಿ ವಿಜಯ ಪತಾಕೆ ಹಾರಿಸಿದರೆ, ಇತ್ತ ಇಡೀ ಕರ್ನಾಟಕ ಸಂಭ್ರಮಾಚರಣೆಯಲ್ಲಿ ಮುಳುಗಿತ್ತು. ಆರ್ಸಿಬಿ ಗೆದ್ದ ಬಳಿಕ ರಾತ್ರಿಯಿಡಿ ಸಾವಿರಾರು ಅಭಿಮಾನಿಗಳು ಪಟಾಕಿ ಸಿಡಿಸಿ ಬೀದಿಗಿಳಿದು ಸಂಭ್ರಮಿಸಿದ್ದರು. ಅಭಿಮಾನಿಗಳನ್ನು ರಂಜಿಸಲು ಟ್ರೋಫಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಆದರೆ ಮೆರವಣಿಗೆ ಆರಂಭಕ್ಕೂ ಮುನ್ನವೇ ನಡೆಯಬಾರದ ಅವಘಡ ನಡೆದು ಹೋಗಿದೆ.
ಆರ್ಸಿಬಿ ತಂಡ ಬೆಂಗಳೂರಿಗೆ ತಲುಪುತ್ತಿದ್ದಂತೆ, ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ವಿಧಾನ ಸೌಧ, ಚಿನ್ನಸ್ವಾಮಿ ಕ್ರೀಡಾಂಗಣ ಸೇರಿದಂತೆ ತಂಡದ ಬಸ್ ಬರುವ ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದರು. ಆದರೆ ಸರ್ಕಾರದ ಭದ್ರತಾ ವೈಫಲ್ಯದಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಉಂಟಾಯಿತು. ಈ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್ಸಿಬಿ; ವಿಡಿಯೋ
ಯಾವುದೇ ಮಾಹಿತಿ ಇರಲಿಲ್ಲ ಎಂದ ಅರುಣ್ ಧುಮಾಲ್
ಈ ಕಾಲ್ತುಳಿತಕ್ಕೆ ಕರ್ನಾಟಕ ಸರ್ಕಾರ ಮತ್ತು ಆರ್ಸಿಬಿ ಅಧಿಕಾರಿಗಳ ಭದ್ರತಾ ವ್ಯವಸ್ಥೆಗಳ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ. ಏತನ್ಮಧ್ಯೆ, ಈ ಬಗ್ಗೆ ಮಾತನಾಡಿರುವ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್, ಈ ಕಾರ್ಯಕ್ರಮದ ಬಗ್ಗೆ ತಮಗೆ ತಿಳಿದಿಲ್ಲ. ಇದರಲ್ಲಿ ಐಪಿಎಲ್ ಮತ್ತು ಬಿಸಿಸಿಐ ಯಾವುದೇ ಪಾತ್ರವಿಲ್ಲ. ಘಟನೆಯ ಬಗ್ಗೆ ತಿಳಿದ ತಕ್ಷಣ ನಾವು ಆರ್ಸಿಬಿ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಇದು ಖಂಡಿತವಾಗಿಯೂ ತುಂಬಾ ದುಃಖಕರ ಮತ್ತು ದುರದೃಷ್ಟಕರ ಘಟನೆ. ಮೃತರಿಗೆ ತಮ್ಮ ಸಂತಾಪಗಳು. ಈ ಕಾರ್ಯಕ್ರಮದ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಕ್ರೀಡಾಂಗಣದೊಳಗೆ ಇದ್ದ ಜನರಿಗೆ ಸಹ ಈ ಕಾಲ್ತುಳಿತದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆರ್ಸಿಬಿ ಅಧಿಕಾರಿಗಳೊಂದಿಗೆ ಮಾತನಾಡಿದಾಗ, ಈ ಕಾಲ್ತುಳಿತದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದರು. ಈ ಅವಘಡದ ಮಾಹಿತಿ ತಿಳಿದ ಕೂಡಲೇ ಕಾರ್ಯಕ್ರಮವನ್ನು ತಕ್ಷಣವೇ ಕೊನೆಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು ಎಂದು ಧುಮಾಲ್ ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
