Rohit Sharma: ಪಂದ್ಯ ಮುಗಿದ ಬಳಿಕ ಕೊಹ್ಲಿ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ರೋಹಿತ್ ಶರ್ಮಾ: ಏನಂದ್ರು ಗೊತ್ತೇ?
ENG vs IND T20I: ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟಿ20 ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದು ವಿರಾಟ್ ಕೊಹ್ಲಿ ಆಟದ ಬಗ್ಗೆ ಟೀಕೆ ಮಾಡುತ್ತಿದ್ದವರಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ಇಲ್ಲಿದೆ ನೋಡಿ ರೋಹಿತ್ ನೀಡಿದ ಸಂಪೂರ್ಣ ಹೇಳಿಕೆ.
ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಟಿ20 ಸರಣಿ ಮುಕ್ತಾಯಗೊಂಡಿದೆ. ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಿದೆ. ಆದರೆ, ಭಾನುವಾರ ರಾತ್ರಿ ನಡೆದ ಅಂತಿಮ ಮೂರನೇ ಟಿ20 ಕದನದಲ್ಲಿ ರೋಹಿತ್ ಪಡೆ ಸೋಲು ಕಂಡಿತು. ಡೇವಿಡ್ ಮಲನ್ ಅವರ 77 ರನ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಅಜೇಯ 42 ರನ್ಗಳ ನೆರವಿನಿಂದ ಇಂಗ್ಲೆಂಡ್ ತಂಡ ಭಾರತಕ್ಕೆ ಗೆಲ್ಲಲು 216 ರನ್ಗಳ ಬೆಟ್ಟದಂತಹ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಪರ ಸೂರ್ಯಕುಮಾರ್ ಯಾದವ್ (Suryakumar Yadav) ಆಕರ್ಷಕ ಶತಕ ಸಿಡಿಸಿ ಗೆಲುವಿಗೆ ಹೋರಾಟ ನಡೆಸಿದರೂ ಇತರೆ ಬ್ಯಾಟರ್ಗಳು ಸಾಥ್ ನೀಡಲಿಲ್ಲ. ಪರಿಣಾಮ ಭಾರತ 20 ಓವರ್ಗಳಲ್ಲಿ 198 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ (Rohit Sharma) ಏನಂದ್ರು ಕೇಳಿ.
“ನಮ್ಮದು ಅದ್ಭುತ ಚೇಸಿಂಗ್ ಆಗಿತ್ತು. ಟಾರ್ಗೆಟ್ಗೆ ತಲುಪಲು ಕೊಂಚ ರನ್ ಕಡಿಮೆ ಇದ್ದರೂ ನಾವು ಹೋರಾಟ ನೀಡಿದ ಬಗ್ಗೆ ಹೆಮ್ಮೆಯಿದೆ. ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ನೋಡಲು ಖುಷಿಯಾಗಿತ್ತು. ಅವರು ಈ ಮಾದರಿಯ ಆಟವನ್ನು ತುಂಬಾ ಇಷ್ಟಪಡುತ್ತಾರೆ. ಪಂದ್ಯದಿಂದ ಪಂದ್ಯಕ್ಕೆ ಅವರು ಉತ್ತಮರಾಗುತ್ತಿದ್ದಾರೆ. ತಂಡದಲ್ಲಿ ಸೂರ್ಯ ಇರುವುದು ನಮ್ಮ ಅದೃಷ್ಟ. ಇಂಗ್ಲೆಂಡ್ ತಂಡ ಬ್ಯಾಟರ್ಗಳು ನಮ್ಮ ಮೇಲೆ ಸಾಕಷ್ಟು ಒತ್ತಡ ಹಾಕಿದರು. ಈ ಸ್ಕೋರ್ ಅನ್ನು ಚೇಸ್ ಮಾಡಬೇಕಾದರೆ ನಿಮ್ಮ ಮೇಲೆ ನೀವು ನಂಬಿಕೆ ಇಡಬೇಕು. ನಾವು ಪ್ರತಿ ಪಂದ್ಯದ ಬಳಿಕ ಬಲಿಷ್ಠರಾಗುತ್ತೇವೆ. ಇಂದಿನ ಪಂದ್ಯ ನಮಗೊಂದು ಪಾಠ. ಈರೀತಿಯ ಪಂದ್ಯಗಳು ನಮಗೆ ಪಾಠ ಕಲಿಸುತ್ತದೆ,” ಎಂದು ರೋಹಿತ್ ಹೇಳಿದ್ದಾರೆ.
Virat Kohli: 4,6 ಮತ್ತು ಔಟ್: ಮೈ ಜುಮ್ ಎನಿಸುವ ಕೊಹ್ಲಿಯ ಎರಡು ಅದ್ಭುತ ಶಾಟ್ಗೆ ಫ್ಯಾನ್ಸ್ ಫಿದಾ
ಇನ್ನು ಇದೇ ಸಂದರ್ಭ ವಿರಾಟ್ ಕೊಹ್ಲಿ ಆಟದ ಬಗ್ಗೆ ಮಾತನಾಡಿದ ರೋಹಿತ್ ಟೀಕೆ ಮಾಡುತ್ತಿದ್ದವರಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. “ಕೆಲವರು ಕೊಹ್ಲಿಯ ಆಟವನ್ನು ಹೊರಗಡೆಯಿಂದ ನೋಡುತ್ತಿದ್ದಾರೆ. ಆದರೆ, ಇಲ್ಲಿ ಒಳಗಡೆ ಏನಾಗುತ್ತಿದೆ ಎಂದು ಅವರಿಗೆ ತಿಳಿದಿಲ್ಲ. ನಮಗೆ ನಮ್ಮದೆ ಆದ ಕೆಲ ಆಲೋಚನೆಗಳಿವೆ. ನಾವು ತಂಡ ಕಟ್ಟುತ್ತಿದ್ದೇವೆ. ಇದರ ಹಿಂದೆ ಯೋಜನೆಗಳಿವೆ. ಈ ವಿಚಾರವೆಲ್ಲ ಹೊರಗಡೆ ತಿಳಿಯುವುದಿಲ್ಲ. ಹೀಗಾಗಿ ಹೊರಗಡೆ ಏನಾಗುತ್ತದೆ ಅದು ಮುಖ್ಯವಲ್ಲ. ನಮಗೆ ಇಲ್ಲಿ ಒಳಗಡೆ ಏನು ನಡೆಯುತ್ತದೆ ಎಂಬುದಷ್ಟೆ ಮುಖ್ಯ,” ಎಂಬುದು ಹಿಟ್ಮ್ಯಾನ್ ಮಾತು.
“ನೀವು ಫಾರ್ಮ್ ವಿಚಾರವಾಗಿ ಮಾತನಾಡುತ್ತಿದ್ದರೆ ಏಳು-ಬೀಳು ಪ್ರತಿಯೊಬ್ಬ ಆಟಗಾರನಲ್ಲೂ ಇರುತ್ತದೆ. ಅದು ಆಟಗಾರನ ಗುಣಮಟ್ಟದ ಮೇಲೆ ಯಾವುದೇ ಪರಿಣಾಮ ಬೀಳುವುದಿಲ್ಲ. ಇದನ್ನು ನಾವು ತಲೆಯಲ್ಲಿ ಒಟ್ಟುಕೊಳ್ಳಬೇಕು. ಒಬ್ಬ ಆಟಗಾರನು ಇಷ್ಟು ವರ್ಷಗಳ ಕಾಲ ಉತ್ತಮವಾಗಿ ಆಡುತ್ತಿದ್ದಾಗ ಕೆಲ ಕೆಟ್ಟ ಸರಣಿಗಳು ಅವರನ್ನು ಕಳಪೆ ಆಟಗಾರನನ್ನಾಗಿ ಮಾಡುವುದಿಲ್ಲ. ಅವರ ಹಿಂದಿನ ಪ್ರದರ್ಶನಗಳನ್ನು ನಾವು ಕಡೆಗಣಿಸಬಾರದು. ತಂಡದಲ್ಲಿರುವ ನಮಗೆ ಆಟಗಾರನ ಮಹತ್ವ ಗೊತ್ತಿದೆ,” ಎಂದು ಖಡಕ್ ಆಗಿ ಹೇಳಿದ್ದಾರೆ.
ಕಪಿಲ್ ದೇವ್ ಹೇಳಿಕೆಯಲ್ಲಿ ಏನಿತ್ತು?:
ಇತ್ತೀಚೆಗಷ್ಟೆ ಕಪಿಲ್ ದೇವ್ ಅವರು ಕೊಹ್ಲಿ ಬಗ್ಗೆ ನೀಡಿದ ಹೇಳಿಕೆಗೆ ರೋಹಿತ್ ಉತ್ತರಿಸಿದ ರೀತಿ ಇದಾಗಿದೆ. ಕಪಿಲ್ ಅವರು, “ವಿರಾಟ್ ಕೊಹ್ಲಿ ಸುಮಾರು 3 ವರ್ಷಗಳಿಂದ ದೊಡ್ಡ ಇನ್ನಿಂಗ್ಸ್ ಆಡಲು ಹೋರಾಡುತ್ತಿದ್ದಾರೆ. ಭಾರತೀಯ ತಂಡದ ಆಡಳಿತವು ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಉತ್ತಮ ಲಯದಲ್ಲಿರುವ ಆಟಗಾರರಿಗೆ ಸಾಕಷ್ಟು ಅವಕಾಶಗಳನ್ನು ನೀಡದಿದ್ದರೆ, ಅದು ಅವರಿಗೆ ಮಾಡುವ ಅನ್ಯಾಯವಾಗುತ್ತದೆ. ಹೀಗಾಗಿ ಫಾರ್ಮ್ನಲ್ಲಿ ಇಲ್ಲದವರನ್ನು ಕೈ ಬಿಟ್ಟು ಫಾರ್ಮ್ನಲ್ಲಿ ಇರುವವರಿಗೆ ಅವಕಾಶ ನೀಡಿ. ದೀರ್ಘಕಾಲದಿಂದ ಲಯಕ್ಕೆ ಮರಳಲು ಹೋರಾಡುತ್ತಿರುವ ವಿರಾಟ್ ಕೊಹ್ಲಿ ಟಿ20 ತಂಡದಿಂದ ಹೊರಗುಳಿಯಬೇಕು,” ಎಂದು ಹೇಳಿದ್ದರು.
Published On - 9:13 am, Mon, 11 July 22