ಸತತ 2ನೇ ಪಂದ್ಯದಲ್ಲೂ ಸೂರ್ಯ ಫೇಲ್; ತಂಡಕ್ಕೆ ಗೆಲುವು ತಂದ ಶ್ರೇಯಸ್ ಅಯ್ಯರ್
Mumbai T20 League: ಕಳೆದ ಮೂರು ವರ್ಷಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಸೂರ್ಯಕುಮಾರ್ ಯಾದವ್, 2026ರ ಟಿ20 ಮುಂಬೈ ಲೀಗ್ನಲ್ಲೂ ಯಶಸ್ಸು ಕಂಡಿಲ್ಲ, ನಾಯಕತ್ವದಲ್ಲೂ ಸೋತಿದ್ದಾರೆ. ಭಾರತ ಟಿ20 ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತ ಟಿ20 ನಾಯಕ ಸ್ಥಾನಕ್ಕೆ ಆಯ್ಕೆಯಾಗುತ್ತಿರುವ ಶ್ರೇಯಸ್ ಅಯ್ಯರ್ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಈ ಇಬ್ಬರು ಆಟಗಾರರ ಭವಿಷ್ಯ ಈಗ ಕುತೂಹಲ ಮೂಡಿಸಿದೆ.

ಕಳೆದ ಮೂರು ವರ್ಷಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಭಾರತ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಈ ನಡುವೆ ತಮ್ಮ ಹಳೆಯ ಫಾರ್ಮ್ಗೆ ಮರಳಲು ಮುಂಬೈನ ಟಿ20 ಲೀಗ್ನಲ್ಲಿ ಆಡುತ್ತಿರುವ ಸೂರ್ಯಕುಮಾರ್ ಯಾದವ್ಗೆ ಈ ಲೀಗ್ನಲ್ಲೂ ಯಶಸ್ಸು ಸಿಕ್ಕಿಲ್ಲ. ಐಪಿಎಲ್ನಲ್ಲಿ ರನ್ ಬರ ಎದುರಿಸಿದ್ದ ಸೂರ್ಯ ಇದೀಗ ಮುಂಬೈ ಟಿ20 ಲೀಗ್ನಲ್ಲೂ ಅದನ್ನೇ ಮುಂದುವರೆಸಿದ್ದಾರೆ. ಸೂರ್ಯ ರನ್ ಬರ ಎದುರಿಸುವುದರ ಜೊತೆಗೆ ತಮ್ಮ ನಾಯಕತ್ವದಲ್ಲಿ ತಂಡವನ್ನು ಸೋಲಿನ ದವಡೆಗೆ ತಳ್ಳಿದ್ದಾರೆ.
ಶ್ರೇಯಸ್ ತಂಡಕ್ಕೆ ಮೊದಲ ಜಯ
ಮತ್ತೊಂದೆಡೆ, ಭಾರತ ಟಿ20 ತಂಡದ ನೂತನ ನಾಯಕನ ಸ್ಥಾನಕ್ಕೆ ಆಯ್ಕೆಯಾಗುತ್ತಿರುವ ಶ್ರೇಯಸ್ ಅಯ್ಯರ್ ಕೂಡ ಮುಂಬೈ ಟಿ20 ಲೀಗ್ನಲ್ಲಿ ಆಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಅಯ್ಯರ್ ತಂಡಕ್ಕೆ ಗೆಲುವು ಧಕ್ಕಿರಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ತಂಡಕ್ಕೆ ಮೊದಲ ಗೆಲುವು ಸಿಕ್ಕಿದೆ. ಈ ಇಬ್ಬರು ಆಟಗಾರರ ತಂಡಗಳ ಪಂದ್ಯಗಳು ಜೂನ್ 4 ರಂದು ನಡೆದವು. ಈ ಆವೃತ್ತಿಯ 7 ನೇ ಪಂದ್ಯದಲ್ಲಿ, ಶ್ರೇಯಸ್ ಅಯ್ಯರ್ ಪ್ರತಿನಿಧಿಸುವ ಸೋಬೊ ಮುಂಬೈ ಫಾಲ್ಕನ್ಸ್ ತಂಡ ಎಂಎಸ್ಸಿ ಮರಾಠಾ ರಾಯಲ್ಸ್ ತಂಡವನ್ನು ಎದುರಿಸಿದರೆ, 8 ನೇ ಪಂದ್ಯ ಸೂರ್ಯಕುಮಾರ್ ಯಾದವ್ ನಾಯಕತ್ವದ ಟ್ರಯಂಫ್ ನೈಟ್ ಎಂಎಸ್ಸಿ ಮತ್ತು ಬಾಂದ್ರಾ ಬ್ಲಾಸ್ಟರ್ಸ್ ನಡುವೆ ನಡೆಯಿತು.
ಶ್ರೇಯಸ್ ಅಯ್ಯರ್ ಪ್ರತಿನಿಧಿಸುವ ಸೋಬೊ ಮುಂಬೈ ಫಾಲ್ಕನ್ಸ್ ತಂಡ, ಎಂಎಸ್ಸಿ ಮರಾಠಾ ರಾಯಲ್ಸ್ ತಂಡವನ್ನು 3 ವಿಕೆಟ್ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಂಎಸ್ಸಿ ಮರಾಠಾ ರಾಯಲ್ಸ್ 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 152 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಸೊಬೊ ಮುಂಬೈ ಫಾಲ್ಕನ್ಸ್ 19.1 ಓವರ್ಗಳಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡು ಐದು ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು.
ಈ ಗೆಲುವಿನ ರನ್ ಚೇಸ್ನಲ್ಲಿ ಶ್ರೇಯಸ್ ಅಯ್ಯರ್ ಅವರ ಕೊಡುಗೆ 30 ರನ್ಗಳಾಗಿದ್ದು, ಇದರಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್ಗಳು ಸೇರಿದ್ದವು. ಈ ಮೂಲಕ ಸೋಬೊ ಮುಂಬೈ ಫಾಲ್ಕನ್ಸ್, 2026 ರ ಟಿ20 ಮುಂಬೈ ಲೀಗ್ನಲ್ಲಿ ಇದುವರೆಗೆ ಆಡಿದ ಎರಡು ಪಂದ್ಯಗಳಲ್ಲಿ ಇದು ಮೊದಲ ಗೆಲುವು ದಾಖಲಿಸಿತು. ಮೊದಲ ಪಂದ್ಯದಲ್ಲಿ, ಎಆರ್ಸಿಎಸ್ ಅಂಧೇರಿ ತಂಡ, ಸೋಬೊ ಮುಂಬೈ ಫಾಲ್ಕನ್ಸ್ ತಂಡವನ್ನು ಐದು ವಿಕೆಟ್ಗಳಿಂದ ಸೋಲಿಸಿತ್ತು. ಆ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಕೇವಲ ಐದು ರನ್ ಕಲೆಹಾಕಲಷ್ಟೇ ಶಕ್ತರಾದರು.
ನಾಯಕತ್ವದ ಜೊತೆಗೆ ಟಿ20 ತಂಡದಿಂದಲೂ ಸೂರ್ಯಕುಮಾರ್ಗೆ ಗೇಟ್ಪಾಸ್
ಸತತ 2ನೇ ಪಂದ್ಯದಲ್ಲೂ ಸೂರ್ಯ ಫೇಲ್
ಜೂನ್ 4 ರಂದು ನಡೆದ ತನ್ನ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟ್ರಯಂಫ್ ನೈಟ್ಸ್ ಎಂಎಸ್ಸಿ ತಂಡವು ಬಾಂದ್ರಾ ಬ್ಲಾಸ್ಟರ್ಸ್ ವಿರುದ್ಧ 4 ವಿಕೆಟ್ಗಳಿಂದ ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ ಟ್ರಯಂಫ್ ನೈಟ್ಸ್ ಎಂಎಸ್ಸಿ 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 178 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಬಾಂದ್ರಾ ಬ್ಲಾಸ್ಟರ್ಸ್ ತಂಡವು 19.3 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 179 ರನ್ ಗಳಿಸಿ ಇನ್ನೂ 3 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿತು. ಸೂರ್ಯಕುಮಾರ್ ಈ ಪಂದ್ಯದಲ್ಲಿ 6 ಎಸೆತಗಳನ್ನು ಎದುರಿಸಿ 4 ರನ್ ಗಳಿಸಿ ಔಟಾದರು.
2026 ರ ಟಿ20 ಮುಂಬೈ ಲೀಗ್ನಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟ್ರಯಂಫ್ ನೈಟ್ಸ್ ಎಂಎಸ್ಸಿಗೆ ಇದು ಸತತ ಎರಡನೇ ಸೋಲು. ಇದಕ್ಕೂ ಮೊದಲು, ಜೂನ್ 2 ರಂದು ನಡೆದಿದ್ದ ಪಂದ್ಯದಲ್ಲಿ ನಾರ್ತ್ ಮುಂಬೈ ಪ್ಯಾಂಥರ್ಸ್ ವಿರುದ್ಧ 21 ರನ್ಗಳ ಸೋಲನ್ನು ಅನುಭವಿಸಿತ್ತು. ಸೂರ್ಯಕುಮಾರ್ ಯಾದವ್ ಆ ಪಂದ್ಯದಲ್ಲೂ ಕೇವಲ 19 ರನ್ ಬಾರಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




