
ಕಳೆದ ಭಾನುವಾರ ನಡೆದ 2026 ರ ಟಿ20 ವಿಶ್ವಕಪ್ (T20 World Cup) ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್ಗಳಿಂದ ಸೋಲಿಸುವ ಮೂಲಕ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಈ ಗೆಲುವಿನ ನಂತರ ಭಾರತದಲ್ಲಿ ಭಾರಿ ಸಂಭ್ರಮಾಚರಣೆ ನಡೆಯಿತು. ಇದೀಗ ವಿಶ್ವಕಪ್ ಮುಗಿದ ನಾಲ್ಕು ದಿನಗಳ ನಂತರ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ತಂಡದ ಉಪನಾಯಕ ಅಕ್ಷರ್ ಪಟೇಲ್ (Axar Patel) ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ತಾನು ಮಾಡಿದ ಆ ತಪ್ಪಿನಿಂದ ಅಕ್ಷರ್ ಪಟೇಲ್ ತುಂಬಾ ಕೋಪಗೊಂಡಿದ್ದರು. ಅಲ್ಲದೆ ನಾವು ಆ ಪಂದ್ಯದಲ್ಲಿ ಸೋತಿದ್ದು,ಉರಿಯುವ ಬೆಂಕಿಗೆ ತುಪ್ಪ ಸುರಿದಂತ್ತಾಗಿತ್ತು ಎಂದು ಸೂರ್ಯಕುಮಾರ್ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅಕ್ಷರ್ ಪಟೇಲ್ ಕೋಪಗೊಂಡಿದ್ಯಾಕೆ? ಸೂರ್ಯಕುಮಾರ್ ಅವರ ಬಳಿ ಕ್ಷಮೆಯಾಚಿಸಿದ್ದು ಏಕೆ ಎಂಬುದನ್ನು ನೋಡುವುದಾದರೆ..
ವಾಸ್ತವವಾಗಿ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಫೈನಲ್ ಪಂದ್ಯವನ್ನು ಸೇರಿದಂತೆ ಒಟ್ಟು ಒಂಬತ್ತು ಪಂದ್ಯಗಳನ್ನು ಆಡಿತ್ತು. ಆದರೆ ಈ 9 ಪಂದ್ಯಗಳಲ್ಲಿ ಎರಡು ಪಂದ್ಯಗಳಿಂದ ತಂಡದ ಉಪನಾಯಕ ಅಕ್ಷರ್ ಪಟೇಲ್ ಅವರನ್ನು ಪ್ಲೇಯಿಂಗ್ 11ನಿಂದ ಕೈಬಿಡಲಾಗಿತ್ತು. ಅದರಲ್ಲೂ ಸೂಪರ್-8 ಸುತ್ತಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮಹತ್ವದ ಪಂದ್ಯಕ್ಕೂ ಅಕ್ಷರ್ ಪಟೇಲ್ ಅವರನ್ನು ತಂಡದಿಂದ ಕೈಬಿಡಲಾಯಿತು. ಇದರ ಪರಿಣಾಮವಾಗಿ ಟೀಂ ಇಂಡಿಯಾ ಈ ಪಂದ್ಯವನ್ನು 76 ರನ್ಗಳಿಂದ ಸೋತಿತು. ಈ ಸೋಲಿಗೆ ಅಕ್ಷರ್ ಪಟೇಲ್ರನ್ನು ತಂಡದಿಂದ ಕೈಬಿಟ್ಟಿದ್ದು, ಪ್ರಮುಖ ಕಾರಣವಾಗಿತ್ತು. ಏಕೆಂದರೆ ಅಕ್ಷರ್ ಬದಲಿಯಾಗಿ ಬಂದಿದ್ದ ವಾಷಿಂಗ್ಟನ್ ಸುಂದರ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ವಿಫಲರಾಗಿದ್ದರು. ಹೀಗಾಗಿ ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರು ನಾಯಕ ಸೂರ್ಯ ಹಾಗೂ ಗಂಭೀರ್ ವಿರುದ್ಧ ಗರಂ ಆಗಿದ್ದರು.
ಇತ್ತ ಅಕ್ಷರ್ ಪಟೇಲ್ ಕೂಡ ತನ್ನನ್ನು ಆ ಪಂದ್ಯದಿಂದ ಹೊರಗಿಟ್ಟಿದಕ್ಕೆ ಬೇಸರಗೊಂಡಿದ್ದರು. ಇದೀಗ ವಿಶ್ವಕಪ್ ಗೆದ್ದ ಬಳಿಕ ಆ ಘಟನೆಯ ಬಗ್ಗೆ ಮಾತನಾಡಿರುವ ಸೂರ್ಯಕುಮಾರ್ ಯಾದವ್, ತಮ್ಮ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲದೆ ಅಕ್ಷರ್ ಪಟೇಲ್ ಬಳಿ ಕ್ಷಮೆಯಾಚಿಸಿರುವುದಾಗಿ ಹೇಳಿದ್ದಾರೆ. ನಾನು ಮಾಡಿದ ಆ ತೀರ್ಮಾನಿಂದ ಅಕ್ಷರ್ ತುಂಬಾ ಕೋಪಗೊಂಡಿದ್ದರು. ಅವರು ಕೋಪ ಮಾಡಿಕೊಂಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ ಅಕ್ಷರ್ ಅನುಭವಿ ಆಟಗಾರ ಮತ್ತು ಐಪಿಎಲ್ ಫ್ರಾಂಚೈಸಿಯನ್ನು ಮುನ್ನಡೆಸುತ್ತಿದ್ದಾರೆ. ಅಂತಹ ಆಟಗಾರನನ್ನು ಕೈಬಿಟ್ಟಿದ್ದರಿಂದ ಅವರಿಗೆ ನೋವಾಗುವುದು ಸಹಜ.
ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಬದಲಾವಣೆಯ ಗಾಳಿ
ಹೀಗಾಗಿ ಪಂದ್ಯದ ನಂತರ ಅಕ್ಷರ್ ಪಟೇಲ್ ಅವರೊಂದಿಗೆ ಮಾತನಾಡಿ ನನ್ನ ನಿರ್ಧಾರಕ್ಕೆ ಕ್ಷಮೆಯಾಚಿಸಿದ್ದೆ. ತಂಡದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದರೂ, ಅದು ಸರಿಯಾದ ನಿರ್ಧಾರವಲ್ಲ. ಹೀಗಾಗಿ ನಾನು ಅಕ್ಷರ್ ಬಳಿ ಕ್ಷಮೆಯಾಚಿಸಿದೆ. ಆದರೆ ಅಕ್ಷರ್ ಬಹಳ ಪ್ರಬುದ್ಧವಾಗಿ ಪ್ರತಿಕ್ರಿಯಿಸಿದರು ಎಂದು ಸೂರ್ಯ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ