Operation Sindoor: ನೆಟ್ವರ್ಕ್ ಭದ್ರತೆಯನ್ನು ಬಿಗಿಗೊಳಿಸಲು ಏರ್ಟೆಲ್, ಜಿಯೋ, ಬಿಎಸ್ಎನ್ಎಲ್, ವಿಐಗೆ ಸರ್ಕಾರ ಆದೇಶ
ಸಂವಹನ ಸಚಿವಾಲಯ ಹೊರಡಿಸಿದ ಆದೇಶವು ಟೆಲಿಕಾಂ ಆಪರೇಟರ್ಗಳಾದ ಏರ್ಟೆಲ್, ಜಿಯೋ, ಬಿಎಸ್ಎನ್ಎಲ್ ಮತ್ತು ವಿಐಗಳಿಗೆ ಅಡೆತಡೆಯಿಲ್ಲದ ಸಂಪರ್ಕವನ್ನು ಕಾಪಾಡಿಕೊಳ್ಳಲು ಮತ್ತು ನೆಟ್ವರ್ಕ್ ಕಾರ್ಯಾಚರಣೆಗಳನ್ನು ಖಾತರಿಪಡಿಸಲು ಪರಸ್ಪರ ಸಮನ್ವಯಗೊಳಿಸಲು ನಿರ್ದೇಶಿಸಿದೆ. "ಅಂತರರಾಷ್ಟ್ರೀಯ ಗಡಿಯಿಂದ 100 ಕಿ. ಮೀ. ಒಳಗೆ ಬಿಟಿಎಸ್ ಸ್ಥಳಗಳ ಅಡೆತಡೆಯಿಲ್ಲದ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ಒತ್ತು ನೀಡಬೇಕು" ಎಂದು ಹೇಳಿದೆ.

ಬೆಂಗಳೂರು (ಮೇ. 08): ಆಪರೇಷನ್ ಸಿಂಧೂರ್: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದಲ್ಲಿರುವ (India Pakistan) ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನತೆ ಉಂಟಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ದೂರಸಂಪರ್ಕ ಇಲಾಖೆ (DoT) ಎಲ್ಲಾ ಖಾಸಗಿ ಮತ್ತು ಸರ್ಕಾರಿ ದೂರಸಂಪರ್ಕ ಕಂಪನಿಗಳಿಗೆ ವಿಪತ್ತು ಮಟ್ಟದ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳುವಂತೆ ಆದೇಶಿಸಿದೆ. ಅಲ್ಲದೆ, ದೂರಸಂಪರ್ಕ ಇಲಾಖೆಯು ಟೆಲಿಕಾಂ ಕಂಪನಿಗಳಿಗೆ ನೆಟ್ವರ್ಕ್ ಅನ್ನು ಸುರಕ್ಷಿತಗೊಳಿಸುವಂತೆ ಆದೇಶಿಸಿದೆ. ಸಂಭಾವ್ಯ ಸೈಬರ್ ದಾಳಿಯ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು DoT ಈ ಸೂಚನೆಗಳನ್ನು ನೀಡಿದೆ.
ತಡೆರಹಿತ ಸಂಪರ್ಕವನ್ನು ಕಾಪಾಡಿಕೊಳ್ಳಲು ಆದೇಶ
ಮನಿ ಕಂಟ್ರೋಲ್ ವರದಿಯ ಪ್ರಕಾರ, ಸಂವಹನ ಸಚಿವಾಲಯ ಹೊರಡಿಸಿದ ಆದೇಶವು ಟೆಲಿಕಾಂ ಆಪರೇಟರ್ಗಳಾದ ಏರ್ಟೆಲ್, ಜಿಯೋ, ಬಿಎಸ್ಎನ್ಎಲ್ ಮತ್ತು ವಿಐಗಳಿಗೆ ಅಡೆತಡೆಯಿಲ್ಲದ ಸಂಪರ್ಕವನ್ನು ಕಾಪಾಡಿಕೊಳ್ಳಲು ಮತ್ತು ನೆಟ್ವರ್ಕ್ ಕಾರ್ಯಾಚರಣೆಗಳನ್ನು ಖಾತರಿಪಡಿಸಲು ಪರಸ್ಪರ ಸಮನ್ವಯಗೊಳಿಸಲು ನಿರ್ದೇಶಿಸಿದೆ. ಭಾರತವು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದ ನಂತರ ನಡೆದ ಸಭೆಯಲ್ಲಿ, ದೂರಸಂಪರ್ಕ ಕಂಪನಿಗಳು, ಪ್ರಮುಖವಾಗಿ ಗಡಿ ಪ್ರದೇಶಗಳಲ್ಲಿ ವಿಶೇಷ ಗಮನ ಹರಿಸಲು ಮತ್ತು ತುರ್ತು ಸಂದರ್ಭದಲ್ಲಿ ಅವುಗಳ ಸುರಕ್ಷತೆ ಮತ್ತು ನಿರಂತರ ಕಾರ್ಯವನ್ನು ಖಚಿತಪಡಿಸಿಕೊಳ್ಳಲು ಪಟ್ಟಿಯನ್ನು ಸಿದ್ಧಪಡಿಸಲು ಕೇಳಲಾಯಿತು.
“ಅಂತರರಾಷ್ಟ್ರೀಯ ಗಡಿಯಿಂದ 100 ಕಿ. ಮೀ. ಒಳಗೆ ಬಿಟಿಎಸ್ ಸ್ಥಳಗಳ ಅಡೆತಡೆಯಿಲ್ಲದ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ಒತ್ತು ನೀಡಬೇಕು” ಎಂದು ದೂರಸಂಪರ್ಕ ಸಚಿವಾಲಯದ ವಿಪತ್ತು ನಿರ್ವಹಣಾ ವಿಭಾಗವು ಮೇ 7 ರಂದು ಎಲ್ಲಾ ದೂರಸಂಪರ್ಕ ಕಂಪನಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ. ಅಲ್ಲದೆ, ಭದ್ರತಾ ಸಂದರ್ಭಗಳಲ್ಲಿ ಮತ್ತು ವಿಪತ್ತು ಸಂದರ್ಭಗಳಲ್ಲಿ ನಿರಂತರ ಸಂವಹನವನ್ನು ಕಾಪಾಡಿಕೊಳ್ಳಲು ಟೆಲಿಕಾಂ ಆಪರೇಟರ್ಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿರುವ ತುರ್ತು ಕಾರ್ಯಾಚರಣೆ ಕೇಂದ್ರಗಳಲ್ಲಿ (EOC ಗಳು) ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡಿ ಎಂದು ಹೇಳಿದೆ.
ಭಾರತ-ಪಾಕಿಸ್ತಾನ ಯುದ್ಧ ಆರಂಭವಾಗಿ ಇಂಟರ್ನೆಟ್ ಸ್ಥಗಿತಗೊಂಡರೂ ವಾಟ್ಸ್ಆ್ಯಪ್ ಉಪಯೋಗಿಸಬಹುದು: ಹೇಗೆ ಗೊತ್ತೇ?
SOP ಅನ್ನು ಕಟ್ಟುನಿಟ್ಟಾಗಿ ಅನುಸರಿಸಿ
2020 ರ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೂರಸಂಪರ್ಕ ಇಲಾಖೆ ತನ್ನ ಆದೇಶದಲ್ಲಿ ನಿರ್ದೇಶಿಸಿದೆ. ಇದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪರಿಗಣಿಸಬೇಕು ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಇದಲ್ಲದೆ, ತುರ್ತು ಸಂದರ್ಭಗಳಲ್ಲಿ ಟೆಲಿಕಾಂ ಕಂಪನಿಗಳ ಲಾಜಿಸ್ಟಿಕ್ಸ್ ಚಲನೆಯನ್ನು ಸುಗಮಗೊಳಿಸಲು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳೊಂದಿಗೆ ಮಾತನಾಡಲು ದೂರಸಂಪರ್ಕ ಇಲಾಖೆಯ ಎಲ್ಲಾ ಎಲ್ಎಸ್ಎ ಮುಖ್ಯಸ್ಥರಿಗೆ ಸಚಿವಾಲಯ ನಿರ್ದೇಶನ ನೀಡಿದೆ.
ಇಂಟ್ರಾ ಸರ್ಕಲ್ ರೋಮಿಂಗ್
ವಿಪತ್ತಿನ ಸಮಯದಲ್ಲಿ, ಟೆಲಿಕಾಂ ಕಂಪನಿಗಳು ಇಂಟ್ರಾ ಸರ್ಕಲ್ ರೋಮಿಂಗ್ ಸೇವೆಯನ್ನು ಪ್ರಾರಂಭಿಸುತ್ತವೆ, ಇದರಿಂದಾಗಿ ಬಳಕೆದಾರರು ನೆಟ್ವರ್ಕ್ ಸಂಪರ್ಕದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ. ಕಳೆದ ವರ್ಷ ಒಡಿಶಾವನ್ನು ಅಪ್ಪಳಿಸಿದ ಚಂಡಮಾರುತದ ಸಮಯದಲ್ಲಿಯೂ ಸಹ, ಟೆಲಿಕಾಂ ಕಂಪನಿಗಳು ಇಂಟ್ರಾ-ಸರ್ಕಲ್ ರೋಮಿಂಗ್ ಅನ್ನು ಆನ್ ಮಾಡಿದ್ದವು, ಇದರಿಂದಾಗಿ ಬಳಕೆದಾರರು ಯಾವುದೇ ನೆಟ್ವರ್ಕ್ ಸಮಸ್ಯೆಯನ್ನು ಎದುರಿಸಲಿಲ್ಲ. ಇಂಟ್ರಾ-ಸರ್ಕಲ್ ರೋಮಿಂಗ್ ಆನ್ ಆಗಿರುವಾಗ, ವಿಪತ್ತಿನ ಸಂದರ್ಭದಲ್ಲಿ ಮತ್ತು ಹೋಮ್ ನೆಟ್ವರ್ಕ್ ಇಲ್ಲದಿದ್ದಾಗ, ಬಳಕೆದಾರರು ಯಾವುದೇ ಟೆಲಿಕಾಂ ಆಪರೇಟರ್ನ ನೆಟ್ವರ್ಕ್ ಬಳಸಿ ತಮ್ಮ ಸಂಖ್ಯೆಯಿಂದ ಕರೆಗಳನ್ನು ಮಾಡಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:56 pm, Thu, 8 May 25