
ಮಕ್ಕಳು ಸಣ್ಣಪುಟ್ಟ ವಿಷಯಗಳಿಗೆ ಹಟ ಮಾಡುವುದು, ಕೋಪ ಮಾಡಿಕೊಳ್ಳುವುದು ಮಾಡುತ್ತಿರುತ್ತಾರೆ. ಅದರಲ್ಲೂ ಕೆಲ ತುಂಟ ಮಕ್ಕಳು ಮನೆಯಲ್ಲಿ ಜಗಳವಾಡಿ ಮನೆ ಬಿಟ್ಟು ಹೋಗಿದ್ದು ಕೂಡಾ ಇದೆ. ಅದೇ ರೀತಿ ಇಲ್ಲೊಬ್ಬ 10 ವರ್ಷ ವಯಸ್ಸಿನ ಬಾಲಕ ಮನೆಯವರು ತನ್ನ ಬರ್ತ್ಡೇ ಸೆಲೆಬ್ರೇಟ್ ಮಾಡಿಲ್ಲವೆಂದು ಕೋಪದಲ್ಲಿ ಮನೆಬಿಟ್ಟು ಹೋಗಿದ್ದಾನೆ. ಮನೆಯವರು ಈ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು, ಹಲವು ಹೊತ್ತಿನ ಹುಡುಕಾಟದ ಬಳಿಕ ಸಿಕ್ಕ ಆ ಬಾಲಕನಿಗೆ ಗದರದೇ, ಪೊಲೀಸರು ಆತನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಹೌದು ಕೇಕ್ ಕಟ್ ಮಾಡಿಸಿ ಬಾಲಕನ ಹುಟ್ಟುಹಬ್ಬವನ್ನು ವಿಶೇಷಗೊಳಿಸಿದ್ದು, ಪೊಲೀಸರ ಈ ಮಾನವೀಯ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಈ ಘಟನೆ ನಾಗ್ಪರದ ವಾಠೋಡ ಎಂಬಲ್ಲಿ ನಡೆದಿದ್ದು, ಮನೆಯವರು ತನ್ನ ಬರ್ತ್ಡೇ ಸೆಲೆಬ್ರೇಟ್ ಮಾಡಿಲ್ಲವೆಂದು 10 ವರ್ಷದ ಬಾಲಕನೊಬ್ಬ ಮನೆಬಿಟ್ಟು ಹೋಗಿದ್ದಾನೆ. ನಂತರ ಪೊಲೀಸರೇ ಆತನ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಜನವರಿ 30 ರಂದು ಸಂಚಿತ್ ಅರವಿಂದ್ ಎಂಬ ಹುಡುಗನ ಹುಟ್ಟುಹಬ್ಬವಿತ್ತು. ಆದರೆ ಕಾರಣಾಂತರಗಳಿಂದ ಆತನ ಮನೆಯವರು ಬರ್ತ್ಡೇ ಸೆಲೆಬ್ರೇಟ್ ಮಾಡಿಲ್ಲ. ಇದರಿಂದ ಬೇಸರಗೊಂಡ ಸಂಚಿತ್ ಬೆಳಗ್ಗೆ 11 ಗಂಟೆಯ ಸುಮಾರಿಗೆ ಮನೆ ಬಿಟ್ಟು ಹೋಗಿದ್ದಾನೆ. ಅಕ್ಕಪಕ್ಕ ಹುಡುಕಿದರೂ ಸಂಚಿತ್ ಎಲ್ಲೂ ಕಾಣಿಸಿದೇ ಇದ್ದ ಕಾರಣ ಆತನ ಪೋಷಕರು ಪೊಲೀಸರಿಗೆ ದೂರನ್ನು ನೀಡಿದ್ದಾರೆ. ತಕ್ಷಣ ಪೊಲೀಸರು ಬಾಲಕನಿಗಾಗಿ ಹುಡುಕಾಟ ನಡೆಸಲಾರಂಭಿಸಿದರು. ಹೀಗೆ ಸಂಜೆಯ ವೇಳೆ ಗಸ್ತು ತಿರುಗುತ್ತಿದ್ದ ಕಾನ್ಸ್ಟೇಬಲ್ ಸ್ವಾಮಿನಾರಾಯಣ ದೇವಸ್ಥಾನದ ಬಳಿ ಸಂಚಿತ್ ಇರುವುದು ಪತ್ತೆ ಹಚ್ಚಿ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಬಾಲಕನೊಂದಿಗೆ ಮಾತನಾಡಿ, ಆತನನ್ನು ಮನೆಗೆ ಕರೆದುಕೊಂಡು ಹೋಗಿ ಕೇಕ್ ಕಟ್ ಮಾಡಿಸಿ ಆತನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಹೀಗೆ ಬಾಲಕನ ಹುಟ್ಟುಹಬ್ಬವನ್ನು ಸ್ಮರಣೀಯವಾಗಿ ಆಚರಿಸುವ ಮೂಲಕ ಮಾನವೀಯತೆಯನ್ನು ಮರೆದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ