ಅಮ್ಮನನ್ನು ಕಳೆದುಕೊಂಡು ಅನಾಥಳಾದ ಪುಟ್ಟ ಹುಡುಗಿ ಕುಡಿಯಲು ನೀರು ಸಿಗದೆ ಜೀವ ಬಿಟ್ಟಳು; ರಷ್ಯಾ ದಾಳಿ ಸೃಷ್ಟಿಸಿದ ಭೀಕರತೆ

| Updated By: Lakshmi Hegde

Updated on: Mar 09, 2022 | 10:30 AM

ಉಕ್ರೇನ್​ ಮೇಲೆ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದ ದಿನ ರಷ್ಯಾ ಅಧ್ಯಕ್ಷ ಪುಟಿನ್, ನಮಗೆ ಆ ದೇಶವನ್ನು ವಶಪಡಿಸಿಕೊಳ್ಳುವ ಇರಾದೆಯಿಲ್ಲ. ನಾಗರಿಕರ ಹತ್ಯೆಯೂ ನಮ್ಮ ಉದ್ದೇಶವಲ್ಲ ಎಂದು ಹೇಳಿದ್ದರು.

ಅಮ್ಮನನ್ನು ಕಳೆದುಕೊಂಡು ಅನಾಥಳಾದ ಪುಟ್ಟ ಹುಡುಗಿ ಕುಡಿಯಲು ನೀರು ಸಿಗದೆ ಜೀವ ಬಿಟ್ಟಳು; ರಷ್ಯಾ ದಾಳಿ ಸೃಷ್ಟಿಸಿದ ಭೀಕರತೆ
ಪ್ರಾತಿನಿಧಿಕ ಚಿತ್ರ
Follow us on

ಉಕ್ರೇನ್​ನಲ್ಲಿ ಯುದ್ಧ (War In Ukraine) ಭೀಕರತೆ ಹೆಚ್ಚುತ್ತಿದೆ. ರಷ್ಯಾ ಯುದ್ಧ ನಿಯಮಗಳನ್ನು ಮೀರುತ್ತಿದೆ. ನಾಗರಿಕರ ಮೇಲೆ ದಾಳಿ ನಡೆಸುತ್ತಿದೆ ಎಂದು ಉಕ್ರೇನ್​ ಆರೋಪ ಮಾಡುತ್ತಲೇ ಬಂದಿದೆ. ಈ ಮಧ್ಯೆ, ಮರಿಯುಪೋಲ್​​ನಲ್ಲಿ ಆರು ವರ್ಷದ ಬಾಲಕಿಯೊಬ್ಬಳು ಕುಡಿಯಲು ನೀರು ಸಿಗದೆ, ಡಿಹೈಡ್ರೇಶನ್​​ಗೆ ಒಳಗಾಗಿ ಮೃತಪಟ್ಟಿದ್ದಾಳೆ. ಇದಕ್ಕೂ ರಷ್ಯಾ ಸೇನೆ, ಅದು ನಡೆಸುತ್ತಿರುವ ದಾಳಿಯೇ ಕಾರಣ ಎಂದು ಉಕ್ರೇನ್​ ಆಡಳಿತ ಹೇಳಿದೆ. ರಷ್ಯಾದ ಆಕ್ರಮಣ ತೀವ್ರಋಉತೆ ಹೆಚ್ಚಿರುವ ಪ್ರದೇಶಗಳಲ್ಲಿ ಮರಿಯುಪೋಲ್​ ಕೂಡ ಒಂದು. ಅಲ್ಲಿನ ಕಟ್ಟಡವೊಂದರ ಮೇಲೆ ರಷ್ಯಾ ದಾಳಿ ನಡೆಸಿತ್ತು. ಆಗ ಈ ಪುಟ್ಟ ಬಾಲಕಿಯ ಅಮ್ಮ ಮೃತಪಟ್ಟಿದ್ದಾರೆ. ಅಮ್ಮನನ್ನು ಕಳೆದುಕೊಂಡು ಅನಾಥವಾಗಿದ್ದ ಹುಡುಗಿ, ಡಿಹೈಡ್ರೇಶನ್​​ನಿಂದ ಸಾವನ್ನಪ್ಪಿದ್ದಾಳೆ ಎಂದು ಉಕ್ರೇನ್​ ಆರೋಪಿಸಿದೆ.

ಉಕ್ರೇನ್​ ಮೇಲೆ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದ ದಿನ ರಷ್ಯಾ ಅಧ್ಯಕ್ಷ ಪುಟಿನ್, ನಮಗೆ ಆ ದೇಶವನ್ನು ವಶಪಡಿಸಿಕೊಳ್ಳುವ ಇರಾದೆಯಿಲ್ಲ. ನಾಗರಿಕರ ಹತ್ಯೆಯೂ ನಮ್ಮ ಉದ್ದೇಶವಲ್ಲ. ಉಕ್ರೇನ್​ ಸೇನೆಯನ್ನು ಹಿಮ್ಮೆಟ್ಟಿಸುವುದಷ್ಟೇ ನಮ್ಮ ಗುರಿ ಎಂದು ಹೇಳಿದ್ದರು. ಆದರೆ ಆ ಮಾತುಗಳನ್ನು ಮಾಸ್ಕೋ ಉಳಿಸಿಕೊಳ್ಳುತ್ತಿಲ್ಲ ಎಂದು ಉಕ್ರೇನ್​ ನಿರಂತರವಾಗಿ ಆರೋಪ ಮಾಡುತ್ತಲೇ ಬಂದಿದೆ. ಈಗಾಗಲೇ ಉಕ್ರೇನ್​ನಲ್ಲಿ ಹಲವು ನಾಗರಿಕರು ಮೃತಪಟ್ಟಿದ್ದು ವರದಿಯಾಗಿದೆ. ರಷ್ಯಾ ಉಕ್ರೇನ್​​ನಲ್ಲಿ ಯುದ್ಧ ಅಪರಾಧಗಳನ್ನು ಮಾಡುತ್ತಿದೆ ಎಂದು ಅಂತಾರಾಷ್ಟ್ರೀಯ ಕೋರ್ಟ್​ಗೆ ದೂರು ಕೂಡ ನೀಡಲಾಗಿತ್ತು.

ಮರಿಯುಪೋಲ್​​ನಲ್ಲಿ ರಷ್ಯಾ ಸೇನೆ ಬಾಂಬ್​, ಶೆಲ್ಲಿಂಗ್ ದಾಳಿ ನಡೆಸಿದೆ. ಬಾಲಕಿ ನೀರಿಲ್ಲದೆ ಮೃತಪಟ್ಟ ಬಗ್ಗೆ ಪ್ರತಿಕ್ರಿಯೆ ನೀಡಿದ ಅಲ್ಲಿನ ಮೇಯರ್​  ವಾಡಿಮ್ ಬೊಯಿಚೆಂಕೊ, ಆ ಪುಟ್ಟ ಹುಡುಗಿ ಏಕಾಂಗಿಯಾಗಿ ಎಷ್ಟು ಸಂಕಟಪಟ್ಟಳೋ? ಜೀವ ಉಳಿಸಿಕೊಳ್ಳಲು ಅದೆಷ್ಟು ಹೋರಾಟ ಮಾಡಿದಳೋ  ಕಲ್ಪಿಸಿಕೊಳ್ಳಲೂ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.  ಅಮ್ಮನನ್ನು ಕಳೆದುಕೊಂಡು, ತಾನು ಸಾಯುವ ಕೊನೇ ಕ್ಷಣದಲ್ಲಿ ಒಬ್ಬಳೇ ಇದ್ದಳು. ಮರಿಯುಪೋಲ್​ನಲ್ಲಿ ಈಗಾಗಲೇ ಇಂಥ ಘಟನೆಗಳು ಹಲವು ಆಗಿವೆ. ಕಳೆದ ಎಂಟು ದಿನಗಳಿಂದ ಇಲ್ಲಿನ ಜನರು ಪರದಾಡುತ್ತಿದ್ದಾರೆ ಎಂದೂ ನೋವು ತೋಡಿಕೊಂಡಿದ್ದಾರೆ.

ಮಗುವಿನ ಸಾವಿನ ಬಗ್ಗೆ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರೂ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇಂಥ 21ನೇ ಶತಮಾನದಲ್ಲಿ ಒಂದು ಹೀಗೆ, ಬಾಯಾರಿಕೆಯಿಂದ, ನೀರಿಲ್ಲದೆ ಸಾಯುತ್ತದೆ ಎಂಬುದನ್ನು ನಿರೀಕ್ಷೆ ಮಾಡಲೂ ಸಾಧ್ಯವಿಲ್ಲ ಎಂದಿದ್ದಾರೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಾಜಿಗಳು ಆಕ್ರಮಣ ಮಾಡಿದಾಗ ಏನೆಲ್ಲ ಕಷ್ಟ ಎದುರಾಗಿತ್ತೋ, ಈಗ ರಷ್ಯಾ ಆಕ್ರಮಣ ಮಾಡಿದ ಸಂದರ್ಭದಲ್ಲಿ ಉಕ್ರೇನ್​ನ ಹಲವು ನಗರಗಳಲ್ಲಿ ಅಂಥದ್ದೇ ಕಷ್ಟ ಬಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Video: ಕೀವ್​​ನಿಂದ ಪಾರಾಗಲು ಸಹಾಯ ಮಾಡಿದ್ದು ಭಾರತೀಯ ರಾಯಭಾರಿ ಕಚೇರಿ ಎಂದ ಪಾಕಿಸ್ತಾನಿ ಹುಡುಗಿ; ಪಿಎಂ ಮೋದಿಗೆ ಕೃತಜ್ಞತೆ

Published On - 9:53 am, Wed, 9 March 22