IIMB: ಇಂಡೋನೇಷ್ಯಾದಲ್ಲೂ ತಲೆ ಎತ್ತಲಿದೆ ಐಐಎಂ ಬೆಂಗಳೂರು, ಪ್ರಧಾನಿ ಮೋದಿ ಘೋಷಣೆ
ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾದಲ್ಲಿ ಐಐಎಂ ಬೆಂಗಳೂರಿನ ಹೊಸ ಕ್ಯಾಂಪಸ್ ಸ್ಥಾಪನೆ ಘೋಷಿಸಿದ್ದಾರೆ. ಇದು ಭಾರತದ ಎರಡನೇ ವಿದೇಶಿ ಐಐಎಂ ಕ್ಯಾಂಪಸ್ ಆಗಿದ್ದು, ಇಂಡೋನೇಷ್ಯಾದ ಸಿಂಘಾಸರಿ ವಿಶೇಷ ಆರ್ಥಿಕ ವಲಯದಲ್ಲಿ ತಲೆ ಎತ್ತಲಿದೆ. ಈ ಜಾಗತಿಕ ಕ್ಯಾಂಪಸ್ ಮ್ಯಾನೇಜ್ಮೆಂಟ್, AI, ಉದ್ಯಮಶೀಲತೆ ಕೋರ್ಸ್ಗಳನ್ನು ನೀಡಲಿದ್ದು, ASEAN ರಾಷ್ಟ್ರಗಳ ಯುವಕರಿಗೆ ಉತ್ತಮ ಶೈಕ್ಷಣಿಕ ಅವಕಾಶಗಳನ್ನು ಒದಗಿಸಲಿದೆ.

ಜಕಾರ್ತಾ, ಜುಲೈ 07: ಭಾರತದ ಪ್ರತಿಷ್ಠಿತ ಬಿಜಿನೆಸ್ ಸ್ಕೂಲ್ ಆದ ‘ಭಾರತೀಯ ನಿರ್ವಹಣಾ ಸಂಸ್ಥೆ ಬೆಂಗಳೂರು’ (IIM Bangalore – IIMB) ಇನ್ಮುಂದೆ ವಿದೇಶದಲ್ಲೂ ತನ್ನ ಹೆಜ್ಜೆಗುರುತನ್ನು ಮೂಡಿಸಲಿದೆ. ಇಂಡೋನೇಷ್ಯಾದಲ್ಲಿ ಐಐಎಂ ಬೆಂಗಳೂರಿನ ಹೊಸ ಅಂತರರಾಷ್ಟ್ರೀಯ ಕ್ಯಾಂಪಸ್ ಅನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜಕಾರ್ತಾದಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.
ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಈ ವಿಷಯವನ್ನು ತಿಳಿಸಿದ್ದು, ಈ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿವೆ.
ದೇಶದ 2ನೇ ವಿದೇಶಿ ಐಐಎಂ ಕ್ಯಾಂಪಸ್ ಭಾರತದ ಐಐಎಂ ಸಂಸ್ಥೆಗಳ ಪೈಕಿ ವಿದೇಶದಲ್ಲಿ ಆರಂಭವಾಗುತ್ತಿರುವ ಎರಡನೇ ಕ್ಯಾಂಪಸ್ ಇದಾಗಿದೆ. ಇದಕ್ಕೂ ಮುನ್ನ ಐಐಎಂ ಅಹಮದಾಬಾದ್ ತನ್ನ ಕ್ಯಾಂಪಸ್ ಅನ್ನು ದುಬೈನಲ್ಲಿ ತೆರೆಯುವುದಾಗಿ ಘೋಷಿಸಿತ್ತು. ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐಐಟಿ ಮದ್ರಾಸ್ (ಟಾಂಜಾನಿಯಾ) ಮತ್ತು ಐಐಟಿ ದೆಹಲಿ (ಅಬುಧಾಬಿ) ಈಗಾಗಲೇ ವಿದೇಶದಲ್ಲಿ ತಮ್ಮ ಶಾಖೆಗಳನ್ನು ತೆರೆದಿದ್ದು, ಈಗ ಈ ಸಾಲಿಗೆ ಐಐಎಂ ಬೆಂಗಳೂರು ಕೂಡ ಸೇರ್ಪಡೆಯಾಗಿದೆ.
ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NIRF – 2025) ಪ್ರಕಾರ, ಐಐಎಂ ಬೆಂಗಳೂರು ಇಡೀ ದೇಶದಲ್ಲೇ ಎರಡನೇ ಅತ್ಯುತ್ತಮ ಮ್ಯಾನೇಜ್ಮೆಂಟ್ ಸಂಸ್ಥೆಯಾಗಿದೆ.
ಕ್ಯಾಂಪಸ್ ಎಲ್ಲಿ ಬರಲಿದೆ? ಏನಿದರ ವಿಶೇಷ? ವಿಶೇಷ ಆರ್ಥಿಕ ವಲಯ: ಈ ಹೊಸ ಐಐಎಂ ಬೆಂಗಳೂರು ಕ್ಯಾಂಪಸ್ ಇಂಡೋನೇಷ್ಯಾದ ಪೂರ್ವ ಜಾವಾದ ಮಲಾಂಗ್ನಲ್ಲಿರುವ ‘ಸಿಂಘಾಸರಿ ವಿಶೇಷ ಆರ್ಥಿಕ ವಲಯ’ದಲ್ಲಿ (Singhasari SEZ) ತಲೆಯೆತ್ತಲಿದೆ. ಡಿಜಿಟಲ್ ಆರ್ಥಿಕತೆ, ನಾವೀನ್ಯತೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಮೀಸಲಾಗಿರುವ ಇಂಡೋನೇಷ್ಯಾದ ಮೊದಲ ವಿಶೇಷ ವಲಯ ಇದಾಗಿದೆ.
ಪ್ರಮುಖ ಕೋರ್ಸ್ಗಳು: ಈ ಕ್ಯಾಂಪಸ್ನಲ್ಲಿ ಮುಖ್ಯವಾಗಿ ಮ್ಯಾನೇಜ್ಮೆಂಟ್ (MBA), ಡಿಜಿಟಲ್ ಬಿಸಿನೆಸ್, ಕೃತಕ ಬುದ್ಧಿಮತ್ತೆ (AI), ಉದ್ಯಮಶೀಲತೆ (Entrepreneurship) ಮತ್ತು ನಾಯಕತ್ವ ಅಭಿವೃದ್ಧಿಯ ಕುರಿತು ಜಾಗತಿಕ ಮಟ್ಟದ ಕೋರ್ಸ್ಗಳನ್ನು ನೀಡಲಾಗುತ್ತದೆ.
ಮತ್ತಷ್ಟು ಓದಿ: Apply Now: IIM ಬೆಂಗಳೂರು ಡೇಟಾ ಸೈನ್ಸ್ ಮತ್ತು ಬಿ.ಎಸ್ಸಿ ಆನರ್ಸ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ
‘ಆಸಿಯಾನ್’ ಯುವಕರಿಗೆ ಆಸರೆ: ಈ ಕ್ಯಾಂಪಸ್ನಿಂದ ಕೇವಲ ಇಂಡೋನೇಷ್ಯಾ ಮಾತ್ರವಲ್ಲದೆ, ಇಡೀ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ (ASEAN) ಯುವಕರಿಗೆ ಅತ್ಯುನ್ನತ ಶಿಕ್ಷಣ ಪಡೆಯಲು ದೊಡ್ಡ ಅನುಕೂಲವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತ-ಇಂಡೋನೇಷ್ಯಾ ಸ್ನೇಹ ವೃದ್ಧಿ ಪ್ರಧಾನಿ ಮೋದಿಯವರ ಈ ಪ್ರವಾಸದಲ್ಲಿ ಕೇವಲ ಶಿಕ್ಷಣ ಮಾತ್ರವಲ್ಲದೆ ಕೃತಕ ಬುದ್ಧಿಮತ್ತೆ (AI), ದೂರಸಂಪರ್ಕ, ರಕ್ಷಣೆ (ಬ್ರಹ್ಮೋಸ್ ಮತ್ತು ಅಸ್ತ್ರ ಕ್ಷಿಪಣಿ), ಆರೋಗ್ಯ ಮತ್ತು ಕೃಷಿ ವಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಒಪ್ಪಂದಗಳು ನಡೆದಿವೆ. ಉಭಯ ದೇಶಗಳ ಈ ಕಾರ್ಯತಂತ್ರದ ಪಾಲುದಾರಿಕೆಯು ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಮತ್ತು ಆರ್ಥಿಕ ಪ್ರಗತಿಗೆ ಭಾರಿ ವೇಗ ನೀಡಲಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




