ಪಾಕ್ ಪ್ರಧಾನಿ ಎದುರಲ್ಲೇ ಭಯೋತ್ಪಾದನೆ ವಿರುದ್ಧ ಗುಡುಗಿದ ಮೋದಿ:ಟೆರರಿಸಂ ಯಾರಿಗೂ ಆಸ್ತಿಯಾಗಲ್ಲ, ಎರಡು ನಿಲುವು ಬಿಡಿ ಎಂದು ಖಡಕ್ ಎಚ್ಚರಿಕೆ
ಬಿಷ್ಕೆಕ್ನ ಎಸ್ಸಿಓ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪಾಕ್ ಎದುರೇ ಭಯೋತ್ಪಾದನೆ ವಿರುದ್ಧ ಗುಡುಗಿದರು. ಭಯೋತ್ಪಾದನೆ ಎಂದಿಗೂ ಕಾರ್ಯತಂತ್ರದ ಆಸ್ತಿಯಲ್ಲ; ಉಗ್ರರಿಗೆ ಆಶ್ರಯ ನೀಡುವ ದೇಶಗಳ ದ್ವಿಮುಖ ನೀತಿಗೆ ಜಾಗವಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು. ಜಾಗತಿಕ ಶಾಂತಿಗೆ ಸಂವಾದವೇ ಮಾರ್ಗ ಎಂದು ಪ್ರತಿಪಾದಿಸಿದ ಮೋದಿ, ಮಾದಕವಸ್ತು ಕಳ್ಳಸಾಗಣೆ, ಸೈಬರ್ ಅಪರಾಧದ ವಿರುದ್ಧ ಜಂಟಿ ಹೋರಾಟಕ್ಕೆ ಕರೆ ನೀಡಿದರು.

ಬಿಷ್ಕೆಕ್, ಸೆಪ್ಟೆಂಬರ್ 1: ಕಿರ್ಗಿಸ್ತಾನ್ ರಾಜಧಾನಿ ಬಿಷ್ಕೆಕ್ನಲ್ಲಿ ನಡೆದ 26ನೇ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸಮ್ಮುಖದಲ್ಲೇ ಪ್ರಧಾನಿ ನರೇಂದ್ರ ಮೋದಿ(Narendra Modi) ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ಭಯೋತ್ಪಾದನೆಯನ್ನು ವಿದೇಶಾಂಗ ನೀತಿಯ ಸಾಧನವಾಗಿ ಬಳಸಿಕೊಳ್ಳುವ ಹಾಗೂ ಉಗ್ರರಿಗೆ ಆಶ್ರಯ ನೀಡುವ ದೇಶಗಳಿಗೆ ಖಡಕ್ ಎಚ್ಚರಿಕೆ ನೀಡಿದ ಅವರು, ಈ ವಿಷಯದಲ್ಲಿ ಅಂತಾರಾಷ್ಟ್ರೀಯ ಸಮುದಾಯದ “ದ್ವಿಮುಖ ನೀತಿಗೆ (Double Standards) ಜಾಗವಿಲ್ಲ” ಎಂದು ಪ್ರತಿಪಾದಿಸಿದರು.
ಭಯೋತ್ಪಾದನೆ ಹಾಗೂ ಡ್ರಗ್ಸ್ ಜಾಲದ ವಿರುದ್ಧ ಕಠಿಣ ನಿಲುವು
ಕಾರ್ಯತಂತ್ರದ ಆಸ್ತಿಯಲ್ಲ: “ಭಯೋತ್ಪಾದನೆ ಎಂಬುದು ಎಂದಿಗೂ ಯಾರಿಗೂ ಕಾರ್ಯತಂತ್ರದ ಆಸ್ತಿಯಾಗಲು ಸಾಧ್ಯವಿಲ್ಲ. ಉಗ್ರರಿಗೆ ಹಣಕಾಸು, ಸುರಕ್ಷಿತ ನೆಲೆ ಮತ್ತು ಬೆಂಬಲ ನೀಡುವ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ನಾಶಪಡಿಸಲು ವಿಶ್ವ ಒಂದೇ ಧ್ವನಿಯಲ್ಲಿ ಮಾತನಾಡಬೇಕು” ಎಂದು ಪಾಕ್ ಪ್ರಧಾನಿ ಉಪಸ್ಥಿತಿಯಲ್ಲೇ ಪ್ರಧಾನಿ ಮೋದಿ ತಾಕೀತು ಮಾಡಿದರು.
ಪೋಸ್ಟ್
Statement by Prime Minister Narendra Modi during the 26th SCO Summit-
PM Modi says, “It is now time to move these three pillars beyond mere vision and translate them into concrete outcomes. The foremost requirement for this is peace and security. Terrorism remains a grave… pic.twitter.com/4TmoN6wMxl
— ANI (@ANI) September 1, 2026
ಮಾದಕ ದ್ರವ್ಯ-ಭಯೋತ್ಪಾದನೆ
ಯುವ ಪೀಳಿಗೆ ಹಾಗೂ ಪ್ರಾದೇಶಿಕ ಭದ್ರತೆಯನ್ನು ಹಾಳುಮಾಡುತ್ತಿರುವ ಮಾದಕವಸ್ತು ಕಳ್ಳಸಾಗಣೆ ಮತ್ತು ಸೈಬರ್ ಕ್ರೈಂ ವಿರುದ್ಧ ಎಸ್ಸಿಒ ಅಡಿಯಲ್ಲಿ ಜಂಟಿ ನಿಗಾ ಕೇಂದ್ರಗಳನ್ನು ಸ್ಥಾಪಿಸುವುದನ್ನು ಸ್ವಾಗತಿಸಿದರು.
ಮತ್ತಷ್ಟು ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಸುರಕ್ಷತೆಗೆ ಮೋದಿ ಒತ್ತು, ಜಾಗತಿಕ ಶಾಂತಿ, ಇಂಧನ ಭದ್ರತೆಯ ಸಂದೇಶ ಸಾರಿದ ಮೋದಿ
ಯುದ್ಧಭೂಮಿಯಲ್ಲ, ಸಂವಾದದಿಂದಲೇ ಜಾಗತಿಕ ಶಾಂತಿ:
ಜಾಗತಿಕ ದಕ್ಷಿಣದ ದೇಶಗಳ ಸಂಕಷ್ಟ: ಪಶ್ಚಿಮ ಏಷ್ಯಾ ಹಾಗೂ ಉಕ್ರೇನ್ ಯುದ್ಧದಿಂದಾಗಿ ಇಂಧನ ಭದ್ರತೆ ಮತ್ತು ಸರಕು ಪೂರೈಕೆ ಸರಪಳಿ ಹದಗೆಟ್ಟಿದ್ದು, ಇದರ ದೊಡ್ಡ ಹೊರೆಯನ್ನು ‘ಗ್ಲೋಬಲ್ ಸೌತ್’ಹೊರುತ್ತಿವೆ.
ಸಂವಾದವೇ ಅಂತಿಮ ಅಸ್ತ್ರ: ಯುದ್ಧಗಳು ಮತ್ತು ಉದ್ವಿಗ್ನತೆಗಳಿಗೆ ಯುದ್ಧಭೂಮಿಯಲ್ಲಿ ಪರಿಹಾರ ಸಿಗದು; ಸಂವಾದ ಮತ್ತು ರಾಜತಾಂತ್ರಿಕತೆಯೇ ಅಂತಿಮ ಮಾರ್ಗ ಎಂದು ಪುನರುಚ್ಚರಿಸಿದರು.
ಸಾರ್ವಭೌಮತ್ವದ ಗೌರವ ಮತ್ತು ಪ್ರಾದೇಶಿಕ ಸಂಪರ್ಕ
ಗಡಿ ಸಮಗ್ರತೆಗೆ ಗೌರವ: ವ್ಯಾಪಾರ ಮತ್ತು ಆರ್ಥಿಕ ಸಂಪರ್ಕ ಯೋಜನೆಗಳನ್ನು ಭಾರತ ಸದಾ ಬೆಂಬಲಿಸುತ್ತದೆ. ಆದರೆ ಇಂತಹ ಕಾರಿಡಾರ್ಗಳು ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಚೀನಾದ ಬಿಆರ್ಐ ಯೋಜನೆಗೆ ಪರೋಕ್ಷ ಚಾಟಿ ಬೀಸಿದರು.
ಜನಕೇಂದ್ರಿತ ಸಹಕಾರ: ಡಿಜಿಟಲ್ ಪಾವತಿ, ಸರಳ ಕಸ್ಟಮ್ಸ್ ಪ್ರಕ್ರಿಯೆ ಮತ್ತು ಲಾಜಿಸ್ಟಿಕ್ಸ್ ನೆಟ್ವರ್ಕ್ ಮೂಲಕ ಎಸ್ಸಿಒ ಸಹಕಾರದ ಲಾಭವು ಯುವಜನರು, ರೈತರು ಮತ್ತು ಉದ್ಯಮಿಗಳಿಗೆ ನೇರವಾಗಿ ತಲುಪಬೇಕು ಎಂದರು.
ನಾಯಕರ ಮುಖಾಮುಖಿ: ಗುಂಪು ಛಾಯಾಚಿತ್ರದ ವೇಳೆ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಪರಸ್ಪರ ಕೈಕುಲುಕಿ ಕೆಲ ಕ್ಷಣ ಮಾತುಕತೆ ನಡೆಸಿದರು. ಇದೇ ವೇಳೆ ಪಾಕ್ ಪ್ರಧಾನಿ ಷರೀಫ್ ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಚರ್ಚಿಸಿದರು.
ದ್ವಿಪಕ್ಷೀಯ ಮಾತುಕತೆಗಳು: ಶೃಂಗಸಭೆಯ ಅಂತ್ಯದಲ್ಲಿ ಪ್ರಧಾನಿ ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಹತ್ವದ ಪ್ರತ್ಯೇಕ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




