Nepal Flood: ನೇಪಾಳದಲ್ಲಿ ಭೀಕರ ಪ್ರವಾಹ; 105 ಭಾರತೀಯರು ಸೇರಿ 400 ಜನ ನಾಪತ್ತೆ

ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದ ನಂತರ ಕನಿಷ್ಠ 105 ಭಾರತೀಯರು ಸೇರಿ ಒಟ್ಟು 400 ಜನರು ನಾಪತ್ತೆಯಾಗಿದ್ದಾರೆ. ಟಿಬೆಟ್ ಗಡಿಯಲ್ಲಿರುವ ಕೇಂದ್ರ ನೇಪಾಳದ 2 ಜಿಲ್ಲೆಗಳಲ್ಲಿ ದಿಢೀರ್ ಉಂಟಾದ ಈ ಭಾರಿ ಪ್ರವಾಹಕ್ಕೆ ನದಿ ತೀರದ ಜನವಸತಿ ಪ್ರದೇಶಗಳು ಧ್ವಂಸಗೊಂಡಿವೆ. ಇಂದು ಬೆಳಗಿನ ಜಾವ ಕನಿಷ್ಠ ಒಂದು ಡಜನ್ ಜಲವಿದ್ಯುತ್ ಯೋಜನೆಗಳು ಹಾನಿಗೊಳಗಾಗಿವೆ. ನೇಪಾಳ ಸರ್ಕಾರದ ಪ್ರಕಾರ, ಇದುವರೆಗೆ 16 ಜನರು ಸಾವನ್ನಪ್ಪಿದ್ದಾರೆ.

Nepal Flood: ನೇಪಾಳದಲ್ಲಿ ಭೀಕರ ಪ್ರವಾಹ; 105 ಭಾರತೀಯರು ಸೇರಿ 400 ಜನ ನಾಪತ್ತೆ
Nepal Flood
Image Credit source: PTI

Updated on: Aug 26, 2026 | 5:26 PM

ಮುಖ್ಯಾಂಶಗಳು

  • ನೇಪಾಳದ ಪ್ರವಾಹದಲ್ಲಿ 16 ಜನ ಸಾವು
  • ಟಿಬೆಟ್ ಗಡಿಯಲ್ಲಿ 105 ಭಾರತೀಯರು ನಾಪತ್ತೆ
  • ಪರಿಹಾರ ಸಾಮಗ್ರಿ ಕಳುಹಿಸಲಿದೆ ಭಾರತ ಸರ್ಕಾರ

ಕಠ್ಮಂಡು, ಆಗಸ್ಟ್ 26: ನೇಪಾಳದ ರಸುವಾ ಪ್ರದೇಶದಲ್ಲಿ ಇಂದು ಉಂಟಾದ ಭೀಕರ ಪ್ರವಾಹದಲ್ಲಿ (Nepal Flood) ಇದುವರೆಗೂ ಈ ಪ್ರವಾಹಕ್ಕೆ ಸಿಲುಕಿ 16 ಜನರು ಮೃತಪಟ್ಟಿದ್ದಾರೆ. ನಾಪತ್ತೆಯಾಗಿರುವ 291 ವಿದೇಶಿ ಪ್ರಜೆಗಳಲ್ಲಿ ಕನಿಷ್ಠ 105 ಭಾರತೀಯ ಪ್ರವಾಸಿಗರು ಸೇರಿದ್ದಾರೆ. ನೇಪಾಳದವರೂ ಸೇರಿ ಒಟ್ಟು 400 ಜನರು ನಾಪತ್ತೆಯಾಗಿದ್ದಾರೆ ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿ ತಿಳಿಸಿದೆ. ನಾಪತ್ತೆಯಾದ ವಿದೇಶಿಯರಲ್ಲಿ ಅಮೆರಿಕದ ಮೂವರು, ಮಲೇಷ್ಯಾದ 17 ಜನ, ಯುಕೆಯ 12 ಜನ, ದಕ್ಷಿಣ ಆಫ್ರಿಕಾದ ನಾಲ್ವರು, ಆಸ್ಟ್ರೇಲಿಯಾದ ಒಬ್ಬರು ಮತ್ತು ನೆದರ್ಲೆಂಡ್ಸ್‌ನ ಒಬ್ಬರು ಸೇರಿದ್ದಾರೆ. ಇನ್ನುಳಿದ 103 ಜನರ ಪೌರತ್ವವನ್ನು ಇನ್ನೂ ದೃಢೀಕರಿಸಬೇಕಾಗಿದೆ.

ಟಿಬೆಟ್ ಗಡಿಗೆ ಹೊಂದಿಕೊಂಡಿರುವ ಮಧ್ಯ ನೇಪಾಳದ 2 ಜಿಲ್ಲೆಗಳಲ್ಲಿ ಉಂಟಾದ ದಿಢೀರ್ ಭಾರಿ ಪ್ರವಾಹದಲ್ಲಿ 16 ಜನರು ಸಾವನ್ನಪ್ಪಿದ್ದಾರೆ. ನದಿ ತೀರದ ಜನವಸತಿ ಪ್ರದೇಶಗಳು ಸಂಪೂರ್ಣವಾಗಿ ಧ್ವಂಸಗೊಂಡಿದೆ. ಟಿಬೆಟ್ ಕಡೆಯಿಂದ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಭೋಟೆ ಕೋಶಿ ನದಿಯಲ್ಲಿ ಹಠಾತ್ತನೆ ಹರಿದುಬಂದ ಈ ಪ್ರವಾಹವು ರಸುವಾ ಮತ್ತು ಧಾಡಿಂಗ್ ಜಿಲ್ಲೆಗಳು ಹಾಗೂ ಖಠ್ಮಂಡುವಿನ ನೈರುತ್ಯ ಭಾಗದಲ್ಲಿರುವ ನುವಾಕೋಟ್ ಜಿಲ್ಲೆಯ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: ಅಧಿಕಾರಕ್ಕೇರಿದ 150 ದಿನಗಳಲ್ಲೇ ರಾಜಕೀಯ ವರ್ಚಸ್ಸು ಕಳೆದುಕೊಂಡ ನೇಪಾಳದ ಪ್ರಧಾನಿ ಬಾಲೆನ್ ಶಾ

ಪರಿಹಾರ ಸಾಮಗ್ರಿ ಕಳುಹಿಸಲಿದೆ ಭಾರತ:

ನೇಪಾಳಕ್ಕೆ ಆದಷ್ಟು ಬೇಗ ಪರಿಹಾರ ಸಾಮಗ್ರಿಗಳನ್ನು ರವಾನಿಸಲು ಭಾರತ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.


ನೇಪಾಳದಲ್ಲಿ ದಿಢೀರ್ ಪ್ರವಾಹಕ್ಕೆ ಕಾರಣವೇನು?:

ಈ ಪ್ರವಾಹವು ರಸುವಾದಲ್ಲಿ ಬಿದ್ದ ಸ್ಥಳೀಯ ಮಳೆಯಿಂದ ಉಂಟಾಗಿಲ್ಲ, ಬದಲಿಗೆ ಟಿಬೆಟ್ ಭಾಗದಲ್ಲಿ ಬಿದ್ದ ಭಾರಿ ಮಳೆ ಅಥವಾ ಹಿಮಪಾತದಿಂದ ಉಂಟಾಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ: ಉತ್ತರಾಖಂಡದ ಚಮೋಲಿ ಸುರಂಗಕ್ಕೆ ದಿಢೀರ್ ನೀರು-ತ್ಯಾಜ್ಯ ಪ್ರವಾಹ: 7ಕಾರ್ಮಿಕರ ದಾರುಣ ಸಾವು, 14 ಗಾಯಾಳುಗಳು


ನೇಪಾಳದ ಕೆಳಮಟ್ಟದ ಜಿಲ್ಲೆಗಳಲ್ಲಿ ಹೈ ಅಲರ್ಟ್:

ಪ್ರವಾಹಪೀಡಿತ ಪ್ರದೇಶಗಳಲ್ಲಿ ನೇಪಾಳ ಸೇನೆಯ ನೆರವಿನೊಂದಿಗೆ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದ್ದು, ರಸುವಾ, ನುವಾಕೋಟ್, ಧಾಡಿಂಗ್ ಮತ್ತು ಚಿತ್ವಾನ್ ಸೇರಿದಂತೆ ಹಲವು ನದಿ ತಳಪ್ರದೇಶದ ಜಿಲ್ಲೆಗಳನ್ನು ಹೈ ಅಲರ್ಟ್‌ನಲ್ಲಿಡಲಾಗಿದೆ. ದಿಢೀರ್ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ರಸುವಾ ಜಿಲ್ಲೆಯ ತಿಮುರೆ ಮತ್ತು ಸಮೀಪದ ಸ್ಯಾಫ್ರುಬೆಸಿ ಪ್ರದೇಶದಲ್ಲಿ ವ್ಯಾಪಕ ವಿನಾಶ ಉಂಟಾಗಿದ್ದು, ವಾಹನಗಳು, ವಸ್ತುಗಳು ಮತ್ತು ಇತರ ಆಸ್ತಿಪಾಸ್ತಿಗಳು ಕೊಚ್ಚಿಹೋಗಿವೆ ಎಂದು ನೇಪಾಳ ಸೇನೆ ತಿಳಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:25 pm, Wed, 26 August 26

Loading...
Unable to load recommendations.
Follow Us