ಅಧಿಕಾರಕ್ಕೇರಿದ 150 ದಿನಗಳಲ್ಲೇ ರಾಜಕೀಯ ವರ್ಚಸ್ಸು ಕಳೆದುಕೊಂಡ ನೇಪಾಳದ ಪ್ರಧಾನಿ ಬಾಲೆನ್ ಶಾ
ನೇಪಾಳದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಾಲೆನ್ ಶಾ ಅವರು ತಮ್ಮ ಆಡಳಿತದ 150 ದಿನಗಳ ಅವಧಿಯಲ್ಲಿ ತೀವ್ರ ಸವಾಲುಗಳು, ಸಾರ್ವಜನಿಕ ಆಕ್ರೋಶ ಮತ್ತು ಸಂಸತ್ತಿನ ಒತ್ತಡವನ್ನು ಎದುರಿಸುತ್ತಿದ್ದಾರೆ. ಜೆನ್-ಜಿ (Gen Z) ಯುವಕರ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದಿದ್ದ ಬಾಲೆನ್ ಶಾ ಅವರ ವಿರುದ್ಧವೇ ಯುವಕರು ರಾಜಧಾನಿ ಕಠ್ಮಂಡುವಿನ ಮೈತಿಘರ್ ಮಂಡಲದಲ್ಲಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಬಾಲೆನ್ ಶಾ ಸರ್ಕಾರ ನಡೆಸುವುದರಲ್ಲಿ ಯಾವ ಮಟ್ಟಿಗೆ ಎಡವಿದ್ದಾರೆ ಎಂಬುದಕ್ಕೆ ನಿದರ್ಶನವಾಗಿದೆ.

ಕಠ್ಮಂಡು, ಆಗಸ್ಟ್ 25: ಈ ವರ್ಷ ಮಾರ್ಚ್ 27ರಂದು ನೇಪಾಳದ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಬಾಲೆಂದ್ರ ಶಾ (ಬಾಲೆನ್ ಶಾ) ನೇಪಾಳದ ಹಳೆಯ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಏರಿದ್ದರು. ಯುವಪೀಳಿಗೆಗೆ ಬಾಲೆನ್ ಶಾ (Balen Shah) ದೇಶದಲ್ಲಿ ಏನೋ ಕ್ರಾಂತಿ ತರಲಿದ್ದಾರೆ ಎಂಬ ವಿಶ್ವಾಸವಿತ್ತು. ಆದರೆ, ಅಧಿಕಾರ ವಹಿಸಿಕೊಂಡ ಕೇವಲ 150 ದಿನಗಳಲ್ಲಿ ಅವರ ಜನಪ್ರಿಯತೆ ನೆಲ ಕಚ್ಚಿದೆ!
ಮಾಜಿ ಅಂಡರ್ಗ್ರೌಂಡ್ ರ್ಯಾಪರ್, ಸ್ಟ್ರಕ್ಚರಲ್ ಎಂಜಿನಿಯರ್ ಹಾಗೂ ಕಠ್ಮಂಡುವಿನ ಮಾಜಿ ಮೇಯರ್ ಆಗಿದ್ದ ಬಾಲೆನ್ ಶಾ, ಯುವಜನರ ಬೆಂಬಲದೊಂದಿಗೆ ಮಾಜಿ ಪ್ರಧಾನಿ ಕೆ. ಪಿ. ಶರ್ಮಾ ಒಲಿ ಅವರನ್ನು ಸೋಲಿಸಿ, ತಮ್ಮ ರಾಷ್ಟ್ರೀಯ ಸ್ವತಂತ್ರ ಪಾರ್ಟಿ (RSP) ಮೂಲಕ ಬಹುಮತ ಗಳಿಸಿದ್ದರು. ಆದರೆ, ಜುಲೈ ತಿಂಗಳ ವೇಳೆಗೆ ಅದೇ ಯುವ ಸಮುದಾಯ ಅವರ ರಾಜೀನಾಮೆಗೆ ಆಗ್ರಹಿಸಿ ರಸ್ತೆಗಿಳಿದಿರುವುದು ವಿಪರ್ಯಾಸ.
ಇದನ್ನೂ ಓದಿ: ಭಾರತದ ಜೊತೆಗಿನ ಗಡಿ ವಿವಾದ ಬಗೆಹರಿಸಲು ಬ್ರಿಟನ್ ಸಹಾಯ ಬೇಕಿಲ್ಲ; ನೇಪಾಳದ ಪ್ರಧಾನಿ ಬಾಲೆನ್ ಶಾ ಸ್ಪಷ್ಟನೆ
ಬಾಲೆನ್ ಶಾ ಎಡವಿದ್ದೆಲ್ಲಿ?:
ಭಾರತದ ಬೆಳಗಾವಿಯಲ್ಲಿ ಇಂಜಿನಿಯರಿಂಗ್ ಓದಿದ್ದ ಬಾಲೆನ್ ಶಾ ನೇಪಾಳದ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಆರಂಭದಲ್ಲೇ ಭಾರತದ ಗಡಿ ಪ್ರದೇಶಗಳಿಂದ ತರಲಾಗುವ ನಿತ್ಯೋಪಯೋಗಿ ವಸ್ತುಗಳ ಮೇಲೆ ಕಠಿಣ ಸುಂಕ ವಿಧಿಸಿ, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ತುತ್ತಾಗಿ ಆ ನಿರ್ಧಾರವನ್ನು ಹಿಂಪಡೆದಿದ್ದರು. ಜೂನ್ನಲ್ಲಿ ಕಲಾಪಾನಿ ಮತ್ತು ಲಿಪುಲೇಖ್ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಅವರು ನೀಡಿದ ಹೇಳಿಕೆ ರಾಜತಾಂತ್ರಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಮತ್ತೊಂದೆಡೆ, ಆಡಳಿತಾರೂಢ ಆರ್ಎಸ್ಪಿ ಅಧ್ಯಕ್ಷ ರವಿ ಲಮಿಛಾನೆ ಭಾರತಕ್ಕೆ ಭೇಟಿ ನೀಡಿ ಪ್ರಮುಖ ನಾಯಕರನ್ನು ಭೇಟಿಯಾಗಿದ್ದು, ಬಾಲೆನ್ ಶಾ ಅವರ ವಿದೇಶಾಂಗ ನೀತಿ ಮತ್ತು ನಾಯಕತ್ವದ ಶೈಲಿಯ ಮೇಲಿನ ನಂಬಿಕೆಗೆ ಧಕ್ಕೆ ತಂದಿತು.
ಬಾಲೆನ್ ಶಾ ತಮ್ಮದೇ ಪಕ್ಷದ ಚಟುವಟಿಕೆಗಳಿಂದ ಹಾಗೂ ಸಂಸತ್ತಿನ ಕಲಾಪಗಳಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಆಡಳಿತ ಪಕ್ಷದಲ್ಲೂ ಅಸಮಾಧಾನ ಮೂಡಿಸಿದೆ. ಇತ್ತೀಚೆಗೆ ನಡೆದ ಪ್ರಮುಖ ಪಕ್ಷದ ಸಭೆಗೆ ಗೈರುಹಾಜರಾಗಿ ಪ್ರವಾಸ ಕೈಗೊಂಡಿದ್ದು ಹಾಗೂ ಸಂಸತ್ತಿನ ಸಭೆಗಳಿಗೆ ಸರಿಯಾಗಿ ಹಾಜರಾಗದಿರುವುದು ವಿಪಕ್ಷಗಳ ತೀವ್ರ ಟೀಕೆಗೆ ಕಾರಣವಾಗಿದೆ.
ಇದನ್ನೂ ಓದಿ: ನೇಪಾಳದಲ್ಲಿ ಮತ್ತೆ ಭುಗಿಲೆದ್ದ ಜೆನ್-ಝಡ್ ಪ್ರತಿಭಟನೆ; ಪ್ರಧಾನಿ ಬಾಲೆನ್ ಶಾ ವಿರುದ್ಧ ಆಕ್ರೋಶಕ್ಕೆ ಕಾರಣವೇನು?
ಪ್ರಧಾನಿಯಾದ ನಂತರ ಸಂಸತ್ತಿನ ಆರಂಭಿಕ 39 ಸಭೆಗಳಲ್ಲಿ ಕೇವಲ 5 ಸಭೆಗಳಿಗೆ ಮಾತ್ರ ಬಾಲೆನ್ ಹಾಜರಾಗಿದ್ದು, ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಕಾರಣವಾಗಿದೆ. ಜೊತೆಗೆ ಅವರ ಸ್ವಂತ ರಾಷ್ಟ್ರೀಯ ಸ್ವತಂತ್ರ ಪಾರ್ಟಿ (RSP) ನಾಯಕರು ಸಹ ಅವರ ಏಕಪಕ್ಷೀಯ ಆಡಳಿತ ಶೈಲಿ ಮತ್ತು ಸಮಾಲೋಚನೆಯಿಲ್ಲದ ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಆಕ್ರೋಶ ಮತ್ತು ಕೋಮು ಸಂಘರ್ಷ:
ನಗರಸಭೆ ಪೊಲೀಸರ ಕಠಿಣ ನಡವಳಿಕೆಯಿಂದ ಬೇಸತ್ತು ರೈಡ್-ಶೇರ್ ಚಾಲಕ ಗಣೇಶ್ ನೇಪಾಳಿ ಎಂಬುವವರು ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟ ಘಟನೆ ಮತ್ತು ಭೂ ರಹಿತರ ವಸತಿ ತೆರವು ಕಾರ್ಯಾಚರಣೆ ಬಾಲೆನ್ ಶಾ ನೇತೃತ್ವದ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಯಿತು. ಇದರ ಜೊತೆಗೆ ನೇಪಾಳದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ನಡೆದ ಕೋಮು ಸಂಘರ್ಷಗಳು ಅವರ ಆಡಳಿತದ ಸವಾಲನ್ನು ಮತ್ತಷ್ಟು ಹೆಚ್ಚಿಸಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




