ಭಾರತಕ್ಕೆ ಶಾಕ್ ನೀಡಲಿದೆಯೇ ರಷ್ಯಾ? ಏಪ್ರಿಲ್ 1 ರಿಂದ ಕಚ್ಚಾ ತೈಲ ರಫ್ತು ಸ್ಥಗಿತ!
ಏಪ್ರಿಲ್ 1 ರಿಂದ ಕಚ್ಚಾ ತೈಲ ರಫ್ತು ಸ್ಥಗಿತಗೊಳಿಸಲು ರಷ್ಯಾ ನಿರ್ಧರಿಸಿದ್ದು, ಇದು ಭಾರತದ ಇಂಧನ ಮಾರುಕಟ್ಟೆ ಮೇಲೆ ಕರಿನೆರಳು ಬೀರುವ ಸಾಧ್ಯತೆ ಇದೆ. ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಪಡೆಯುತ್ತಿದ್ದ ಭಾರತಕ್ಕೆ ರಫ್ತು ಸ್ಥಗಿತದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಭೀತಿ ಎದುರಾಗಿದೆಯೇ? ಈ ಬೆಳವಣಿಗೆಯಿಂದ ಭಾರತಕ್ಕಾಗುವ ಲಾಭ-ನಷ್ಟಗಳೇನು? ಇಲ್ಲಿದೆ ವಿವರ.

ನವದೆಹಲಿ, ಮಾರ್ಚ್ 28: ಇರಾನ್-ಇಸ್ರೇಲ್-ಅಮೆರಿಕ ಯುದ್ಧ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಮತ್ತೊಂದೆಡೆ, ಎಲ್ಪಿಜಿ ಗ್ಯಾಸ್ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಹಾಗೂ ಜಾಗತಿಕ ಬಿಕ್ಕಟ್ಟು ಎದುರಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವಂತಹ ನಿರ್ಧಾರವೊಂದನ್ನು ರಷ್ಯಾ (Russia) ಕೈಗೊಂಡಿದೆ. ಏಪ್ರಿಲ್ 1 ರಿಂದ ಕಚ್ಚಾ ತೈಲ ರಫ್ತನ್ನು (Crude Oil Export Ban) ಸ್ಥಗಿತಗೊಳಿಸಲು ರಷ್ಯಾ ಮುಂದಾಗಿದ್ದು, ಜುಲೈ 31 ರ ವರೆಗೆ ಇದು ಜಾರಿಯಲ್ಲಿರಲಿದೆ. ರಷ್ಯಾದ ಈ ನಿರ್ಧಾರ ಭಾರತದ (India) ಮೇಲೆ ಎಂತಹ ಪರಿಣಾಮ ಬೀರಲಿದೆ ಎಂಬ ಚರ್ಚೆ ಈಗ ಶುರುವಾಗಿದೆ.
ಉಕ್ರೇನ್ ಯುದ್ಧದ ನಂತರ ಭಾರತಕ್ಕೆ ರಿಯಾಯಿತಿ ದರದಲ್ಲಿ ತೈಲ ನೀಡುತ್ತಿದ್ದ ರಷ್ಯಾದ ಈ ನಡೆ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲದೆ, ಹಾರ್ಮುಜ್ ಜಲಸಂಧಿಯಲ್ಲಿ ಯುದ್ಧ ಭೀತಿಯಿಂದ ಭಾರತಕ್ಕೆ ಕಚ್ಚಾ ತೈಲ ಸಾಗಾಟಕ್ಕೆ ಅಡ್ಡಿಯಾದಾಗಲೂ ರಷ್ಯಾ ಆಪತ್ಬಾಂಧವನಂತೆ ಭಾರತಕ್ಕೆ ತೈಲ ಪೂರೈಕೆ ಮಾಡಿದೆ.
ಕಚ್ಚಾ ತೈಲ ರಫ್ತು ಸ್ಥಗಿತದ ರಷ್ಯಾ ನಿರ್ಧಾರಕ್ಕೆ ಕಾರಣವೇನು?
ಅಂತರರಾಷ್ಟ್ರೀಯ ಒಪ್ಪಂದದ ಭಾಗವಾಗಿ ಮತ್ತು ದೇಶದ ಆಂತರಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯನ್ನು ನಿಯಂತ್ರಣದಲ್ಲಿಡಲು ರಷ್ಯಾ ಉತ್ಪಾದನೆಯನ್ನು ಕಡಿತಗೊಳಿಸುತ್ತಿದೆ. ಜಾಗತಿಕವಾಗಿ ಕಚ್ಚಾ ತೈಲದ ಬೆಲೆಯನ್ನು ಸ್ಥಿರವಾಗಿರಿಸಲು ರಷ್ಯಾ ಈ ತಂತ್ರ ಅನುಸರಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತದ ಮೇಲೆ ಆಗುವ ಪರಿಣಾಮಗಳೇನು?
- ರಿಯಾಯಿತಿ ತೈಲಕ್ಕೆ ಬ್ರೇಕ್: ಉಕ್ರೇನ್ ಯುದ್ಧದ ಬಳಿಕ ರಷ್ಯಾ ಭಾರತದ ಅತಿದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿ ಹೊರಹೊಮ್ಮಿತ್ತು. ಕಡಿಮೆ ದರದಲ್ಲಿ ಸಿಗುತ್ತಿದ್ದ ತೈಲ ಪೂರೈಕೆ ಈಗ ಇಲ್ಲವಾಗುವ ಆತಂಕ ಎದುರಾಗಿದೆ.
- ಪೆಟ್ರೋಲ್, ಡೀಸೆಲ್ ದರ ಏರಿಕೆ ಸಾಧ್ಯತೆ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಪೂರೈಕೆ ಕಡಿಮೆಯಾದರೆ ಬೆಲೆ ಏರಿಕೆಯಾಗುವುದು ಸಹಜ. ಇದು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ನೇರ ಪರಿಣಾಮ ಬೀರಬಹುದು.
- ಬದಲಿ ಮಾರ್ಗಗಳ ಹುಡುಕಾಟ: ರಷ್ಯಾದಿಂದ ಪೂರೈಕೆ ಕಡಿಮೆಯಾದರೆ ಭಾರತ ಮತ್ತೆ ಇರಾಕ್, ಸೌದಿ ಅರೇಬಿಯಾದಂತಹ ಪಶ್ಚಿಮ ಏಷ್ಯಾ ರಾಷ್ಟ್ರಗಳ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಇದು ಆಮದು ವೆಚ್ಚವನ್ನು ಹೆಚ್ಚಿಸಬಹುದು.
ಇದನ್ನೂ ಓದಿ: ಮಧ್ಯಪ್ರಾಚ್ಯ ಸಂಘರ್ಷ ಕೋವಿಡ್ನಂತಹ ಜಾಗತಿಕ ಪರಿಣಾಮ ಬೀರಬಹುದು: ಪುಟಿನ್
ಆದರೆ, ಭಾರತವು ಈಗಾಗಲೇ ರಷ್ಯಾದೊಂದಿಗೆ ದೀರ್ಘಾವಧಿಯ ಒಪ್ಪಂದಗಳನ್ನು ಮಾಡಿಕೊಂಡಿರುವುದರಿಂದ ತಕ್ಷಣಕ್ಕೆ ಯಾವುದೇ ದೊಡ್ಡ ಬಿಕ್ಕಟ್ಟು ಎದುರಾಗಲಾರದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
