ಎಲ್ಐಸಿ ಐಪಿಒ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಇದೇ ವಾರದಲ್ಲಿ ಕೇಂದ್ರ ವಿತ್ತ ಸಚಿವಾಲಯದ ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಐಪಿಒ ದಿನಾಂಕಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಈ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟಪಡಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜಾಗತಿಕ ವಿದ್ಯಮಾನಗಳನ್ನು ಗಮನಿಸಿ ಸರ್ಕಾರವು ಐಪಿಒ ದಿನಾಂಕಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಬಹುದು ಎಂದು ಹೇಳಿದ್ದರು.
‘ಭಾರತದ ಆರ್ಥಿಕ ಪರಿಸ್ಥಿತಿಯನ್ನಷ್ಟೇ ಗಮನದಲ್ಲಿ ಇರಿಸಿಕೊಂಡು ನಾವು ಐಪಿಒಗೆ ದಿನಾಂಕಗಳನ್ನು ನಿಗದಿಪಡಿಸಿದ್ದೆವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಉಕ್ರೇನ್-ರಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ವಿದ್ಯಮಾನಗಳು ಬದಲಾಗಿವೆ. ಹೀಗಾಗಿ ಎಲ್ಐಸಿ ಐಪಿಒ ದಿನಾಂಕಗಳನ್ನೂ ಮರುನಿಗದಿ ಮಾಡಬೇಕಾದ ಸಂದರ್ಭ ಬಂದಿದೆ’ ಎಂದು ಸಚಿವರು ಹೇಳಿದ್ದರು.
ಎಲ್ಐಸಿ ಐಪಿಒಗಾಗಿ ಕರಡು ಪ್ರಸ್ತಾವವನ್ನು ಫೆಬ್ರುವರಿ 13ರಂದು ಬಿಡುಗಡೆ ಮಾಡಿತ್ತು. ಐಪಿಒ ಮೂಲಕ ಸರ್ಕಾರವು ಎಲ್ಐಸಿಯಲ್ಲಿದ್ದ ತನ್ನ ಪಾಲಿನಲ್ಲಿ ಶೇ 5ರಷ್ಟನ್ನು ಮಾರಾಟ ಮಾಡಲು ಮುಂದಾಗಿತ್ತು. 3.16 ಕೋಟಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ ಮಾಡುವ ಉದ್ದೇಶ ಹೊಂದಿತ್ತು. ‘ಈಗಾಗಲೇ ಷೇರುಪೇಟೆಯಲ್ಲಿ ಎಲ್ಐಸಿ ಐಪಿಒ ಬಗ್ಗೆ ಮಾತುಕತೆ ಬಿರುಸಾಗಿ ನಡೆಯುತ್ತಿದೆ. ಹೂಡಿಕೆದಾರರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಇದೇ ದಿನಾಂಕಗಳಂದು ಐಪಿಒ ಘೋಷಿಸಲು ಸರ್ಕಾರ ನಿರ್ಧರಿಸಿದೆ’ ಎಂದು ಈ ಹಿಂದೆ ಹೇಳಿದ್ದರು. ಆದರೆ ಇದೀಗ ಸರ್ಕಾರದ ಚಿಂತನೆ ಬದಲಾಗಬಹುದು ಎಂಬ ಮುನ್ನೋಟವನ್ನು ಬ್ಯುಸಿನೆಸ್ಲೈನ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ನೀಡಿದ್ದಾರೆ.
ಪೂರ್ವ ಯೂರೋಪ್ನಲ್ಲಿ ನಡೆಯುತ್ತಿರುವ ಮಿಲಿಟರಿ ಸಂಘರ್ಷವು ವಿಶ್ವದಾದ್ಯಂತ ತಲ್ಲಣಗಳನ್ನು ಸೃಷ್ಟಿಸಿದೆ. ಉಕ್ರೇನ್ ಮೇಲಿನ ದಾಳಿಗೆ ಪ್ರತಿಯಾಗಿ ವಿಶ್ವದ ಹಲವು ಸರ್ಕಾರಗಳು ರಷ್ಯಾ ವಿರುದ್ಧ ದಿಗ್ಬಂಧಗಳನ್ನು ಹೇರಿವೆ. ಮುಖ್ಯವಾಗಿ ಕಮಾಡಿಟಿ ಮಾರುಕಟ್ಟೆಯು ಕುಸಿಯುತ್ತಿದೆ. ಕಚ್ಚಾತೈಲದ ಬೆಲೆ ಬ್ಯಾರೆಲ್ಗೆ 110 ಅಮೆರಿಕನ್ ಡಾಲರ್ನಷ್ಟು ಏರಿಕೆಯಾಗಿದೆ. ರಷ್ಯಾ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಎದ್ದಿದೆ. ಯೂರೋಪ್ನ ಷೇರುಪೇಟೆಗಳಲ್ಲಿಯೂ ಷೇರುಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಜರ್ಮನಿ ಮತ್ತು ಫ್ರಾನ್ಸ್ನ ವಿನಿಮಯ ಕೇಂದ್ರಗಳು ಶೇ 3ರಷ್ಟು ಬಂಡವಾಳ ಕಳೆದುಕೊಂಡಿವೆ. ಕಳೆದ ಕೆಲವು ವಾರಗಳಿಂದ ಇದೇ ಬೆಳವಣಿಗೆ ಕಂಡುಬರುತ್ತಿದೆ.
ಇದನ್ನೂ ಓದಿ: LIC IPO: ಅಕಾಲದಲ್ಲಿ ಬರುತ್ತಿದೆಯೇ ಎಲ್ಐಸಿ ಐಪಿಒ: ಹೂಡಿಕೆ ತಜ್ಞರಿಂದ ಹಲವು ಪ್ರಶ್ನೆಗಳು
ಇದನ್ನೂ ಓದಿ: LIC IPO: ಎಲ್ಐಸಿ ಐಪಿಒ ಹೂಡಿಕೆಯಲ್ಲಿ ಲಾಭವೇ ಆಗುತ್ತೆ ಎಂಬ ಖಾತ್ರಿಯಿಲ್ಲ: ವೈಭವ್ ಅಗರ್ವಾಲ್