ಬಾರ್ನಲ್ಲಿ ಜೋರಾಗಿ ಮಾತನಾಡಬೇಡಿ ಎಂದಿದ್ದಕ್ಕೆ ಯುವಕ ಕೊಲೆ
ಬಾರ್ನಲ್ಲಿ ಜೋರಾಗಿ ಮಾತನಾಡಬೇಡಿ ಎಂದಿದ್ದ ಯುವಕನನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬನ್ನೇರುಘಟ್ಟ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇದರಲ್ಲಿ ಒಬ್ಬ ಬಾಲಕನೂ ಸೇರಿದ್ದಾನೆ. ಕಾಂತಿಕುಮಾರ್, ಗೋಪಾಲ್, ಕಿರಣ್ ಕುಮಾರ್ ಮತ್ತು ಬಾಲಕನನ್ನು ಬಂಧಿಸಲಾಗಿದೆ.ಮತ್ತೊಬ್ಬ ಆರೋಪಿ ವಿನೋದ್ ಪರಾರಿಯಾಗಿದ್ದಾನೆ. ಪೊಲೀಸರು ಅವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಆನೇಕಲ್, ಏಪ್ರಿಲ್ 27: ಬಾರ್ನಲ್ಲಿ (Bar) ಜೋರಾಗಿ ಮಾತನಾಡಬೇಡಿ ಎಂದಿದ್ದಕ್ಕೆ ಯುವಕನನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಬನ್ನೇರುಘಟ್ಟ ಪೊಲೀಸರು (Bannerghatta Police) ಬಂಧಿಸಿದ್ದಾರೆ. ಕೆಂಚಗಯ್ಯನದೊಡ್ಡಿ ವಾಸಿ ಕಾಂತಿಕುಮಾರ್ ಅಲಿಯಾಸ್ ಸೈಕೋ ಕಾಂತಿ (27), ಗೋಪಾಲ್ ಅಲಿಯಾಸ್ ಗೊಬ್ಬು ರಾಜ (40), ಕಿರಣ್ ಕುಮಾರ್ ಅಲಿಯಾಸ್ ಸಫೀನ್ಸ್ (28) ಮತ್ತು ಓರ್ವ ಬಾಲಕ ಬಂಧಿತರು. ಮತ್ತೊರ್ವ ಆರೋಪಿ ವಿನೋದ್ (30) ಗಾಗಿ ಪೊಲೀಸರು ಹುಡುಗಾಟ ನಡೆಸಿದ್ದಾರೆ.
ಶ್ಯಾನುಬೋಗನಹಳ್ಳಿ ತರಂಗಿಣಿ ಬಾರ್ನಲ್ಲಿ ಮೃತ ಸುರೇಶ್ ಜೋರಾಗಿ ಮಾತನಾಡಬೇಡಿ, ಸೈಲೆಂಟ್ ಆಗಿ ಇರಿ ಎಂದಿದ್ದಾರೆ. ಇಷ್ಟಕ್ಕೆ ಸುರೇಶ್ ಅವರ ಮನೆಗೆ ನುಗ್ಗಿದ್ದ ಆರೋಪಿಗಳು, ಆತನ ಹೆಂಡತಿ ಮಕ್ಕಳ ಮುಂದೆಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಬನ್ನೇರುಘಟ್ಟ ಪೊಲೀಸರು ಕೊಲೆ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಪತ್ನಿಯಿಂದ ಪತಿಯ ಕೊಲೆ ಯತ್ನ
ವಿಜಯಪುರ: ಪತ್ನಿಯೇ ಪತಿಯ ಕತ್ತಿಗೆ ಚಾಕುವಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ರವಿವಾರ (ಏ.27) ನಸುಕಿನ ಜಾವ ನಗರದ ಆಲಕುಂಟೆ ನಗರದ ನಿವಾಸಿ ತೇಜು ರಾಠೋಡ್ ಎಂಬುವರು, ತನ್ನ ಪತಿ ಅಜೀತ್ ರಾಠೋಡ್ ಅವರನ್ನು ಕೊಲೆ ಮಾಡಲು ಮುಂದಾದರು. ಪತಿ ಗಾಢ ನಿದ್ದೆಯಲ್ಲಿದ್ದಾಗ ಚಾಕೂನಿಂದ ಕತ್ತಿಗೆ ಬಲವಾಗಿ ಇರಿದಿದ್ದಾರೆ. ಆಗ ಅಜೀತ್ ಕಿರುಚಿಕೊಂಡಾಗ ಮನೆಯವರಿಗೆ ವಿಷಯ ಗೊತ್ತಾಗಿದೆ. ಕೂಡಲೇ ಅಜೀತ್ ಅವರನ್ನು ನಗರ ಬಿಎಲ್ಡಿಇ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಅಜೀತ್ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಪತ್ನಿ ತೇಜುಗೆ ಬುದ್ದಿಮಾತು ಹೇಳಿದ್ದೇ ಅಜೀತ್ ಪ್ರಾಣಕ್ಕೆ ಸಂಚಕಾರ ತಂದಿದೆ ಎನ್ನಲಾಗಿದೆ. ಸದಾ ಕಾಲ ಮೊಬೈಲ್ನಲ್ಲಿ ಬೇರೆಯವರೊಂದಿಗೆ ಚಾಟ್ ಮಾಡುತ್ತಿದ್ದ ಪತ್ನಿ ತೇಜು ಅವರಿಗೆ “ಚಾಟ್ ಮಾಡಬೇಡ ಎಂದು ಪತಿ ಅಜೀತ್ ಬುದ್ದಿಮಾತು ಹೇಳಿದ್ದಾರೆ. ಇಷ್ಟಕ್ಕೆ ಪತ್ನಿ ತೇಜು ಪತಿ ಅಜೀತ್ ಮೇಲೆ ಸಿಟ್ಟಾಗಿ ಇಂತ ದುಸ್ಸಾಹಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ನನ್ನ ಗಂಡ ಒಳ್ಳೆಯವನೆ ಆದ್ರೆ….: ಡೆತ್ ನೊಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ
ಇತರರೊಂದಿಗೆ ಮೊಬೈಲ್ನಲ್ಲಿ ಚಾಟ್ ಮಾಡುತ್ತಾ ಕಾಲ ಕಳೆಯುತ್ತಿದ್ದ ಪತ್ನಿಯ ನಡೆ ಅಜೀತ್ ರಾಠೋಡ್ ಅವರಿಗೆ ಸರಿ ಬರುತ್ತಿರಲಿಲ್ಲ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಅಜೀತ್ ಅವರನ್ನು ಕೊಲೆ ಮಾಡಲು ಪತ್ನಿ ತೇಜು ಯತ್ನಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರೆ ಆಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು, ಆದರ್ಶನಗರ ಪೊಲೀಸರು ಪತ್ನಿ ತೇಜುರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.