ಅಲ್ಲು ಅರ್ಜುನ್ ಅಭಿಮಾನಿಗಳಿಂದ ಸಮಾಜಮುಖಿ ಕೆಲಸ; 3 ಲಕ್ಷ ಯುವತಿಯರಲ್ಲಿ ಜಾಗೃತಿ

ಅಲ್ಲು ಅರ್ಜುನ್ ಅಭಿಮಾನಿ ಸಂಘವು 'ಸ್ವಸ್ಥ ನಾರಿ ವಿಕಸಿತ ಭಾರತ' ಅಭಿಯಾನದಡಿ ಬೃಹತ್ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿದೆ. ದೇಶದ 8 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 820 ಕಾಲೇಜುಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಹಾಗೂ ಹೆಚ್‌ಪಿವಿ ಲಸಿಕೆ ಕುರಿತು 3 ಲಕ್ಷಕ್ಕೂ ಹೆಚ್ಚು ಯುವತಿಯರಲ್ಲಿ ಜಾಗೃತಿ ಮೂಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಅಲ್ಲು ಅರ್ಜುನ್ ಅಭಿಮಾನಿಗಳಿಂದ ಸಮಾಜಮುಖಿ ಕೆಲಸ; 3 ಲಕ್ಷ ಯುವತಿಯರಲ್ಲಿ ಜಾಗೃತಿ
ಅಲ್ಲು ಅರ್ಜುನ್

Updated on: Sep 11, 2026 | 12:15 PM

ಮುಖ್ಯಾಂಶಗಳು

  • 3 ಲಕ್ಷ ಯುವತಿಯರನ್ನು ತಲುಪಿದ ಜಾಗೃತಿ ಅಭಿಯಾನ
  • 820 ಕಾಲೇಜುಗಳಲ್ಲಿ ಬೃಹತ್ ಕಾರ್ಯಕ್ರಮ
  • ಸಮಾಜಸೇವೆಯಲ್ಲಿ AAFA ಮುಂಚೂಣಿ

ತೆಲುಗು ನಟ ಅಲ್ಲು ಅರ್ಜುನ್ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಹಾಗೂ ಅವರ ಅಭಿಮಾನಿಗಳು ಸಮಾಜಮುಖಿ ಕೆಲಸಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಈಗ ಅಲ್ಲು ಅರ್ಜುನ್ ಅಭಿಮಾನಿ ಸಂಘ (AAFA) ಸಮಾಜ ಸುಧಾರಣೆಯತ್ತ ದೊಡ್ಡ ಹೆಜ್ಜೆ ಇಟ್ಟಿದೆ. ಕೇಂದ್ರ ಸರ್ಕಾರದ ‘ಸ್ವಸ್ಥ ನಾರಿ ವಿಕಸಿತ್ ಭಾರತ್’ ಕಾರ್ಯಕ್ರಮದ ಭಾಗವಾಗಿ, ಈ ಸಂಘವು ದೇಶಾದ್ಯಂತ ಗರ್ಭಕಂಠದ ಕ್ಯಾನ್ಸರ್ (ಸರ್ವಿಕ್ಸ್ ಕ್ಯಾನ್ಸರ್) ತಡೆಗಟ್ಟುವಿಕೆ ಮತ್ತು ಹೆಚ್‌ಪಿವಿ ಲಸಿಕೆಯ ಕುರಿತು ಜಾಗೃತಿ ಮೂಡಿಸುವ ಬೃಹತ್ ಅಭಿಯಾನವನ್ನು ಯಶಸ್ವಿಯಾಗಿ ಕೈಗೊಂಡಿದೆ.

3 ಲಕ್ಷ ಯುವತಿಯರಲ್ಲಿ ಜಾಗೃತಿ

ಈ ಅಭಿಯಾನದ ಭಾಗವಾಗಿ ಅಭಿಮಾನಿಗಳ ಸಂಘವು ಒಟ್ಟು 820 ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಸುಮಾರು 3 ಲಕ್ಷಕ್ಕೂ ಹೆಚ್ಚು ಯುವತಿಯರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಕರ್ನಾಟಕ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ 8 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾಲೇಜುಗಳಲ್ಲಿ ಈ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ಸಾಮಾಜಿಕ ಜವಾಬ್ದಾರಿಗೆ ಸಾರ್ವಜನಿಕ ಪ್ರಶಂಸೆ

ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಪ್ರದರ್ಶಿಸಿದ ಈ ಸಾಮಾಜಿಕ ಜವಾಬ್ದಾರಿ ಮತ್ತು ಪ್ರಯತ್ನವು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಮೆಚ್ಚುಗೆಗೆ ಪಾತ್ರವಾಗಿದೆ. ಹೆಣ್ಣುಮಕ್ಕಳು ಹಾಗೂ ಯುವತಿಯರ ಆರೋಗ್ಯಕರ ಭವಿಷ್ಯಕ್ಕಾಗಿ ದೇಶಾದ್ಯಂತದ ಅಭಿಮಾನಿಗಳು ಒಂದು ಒಳ್ಳೆಯ ಉದ್ದೇಶಕ್ಕಾಗಿ ಒಂದಾಗಿ ಶ್ರಮಿಸಿರುವುದು ನಿಜಕ್ಕೂ ಪ್ರಶಂಸನೀಯ ಸಾಧನೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: ‘ರಾಕಾ’ ಚಿತ್ರಕ್ಕಾಗಿ ದೊಡ್ಡ ಚಾಲೆಂಜ್ ಸ್ವೀಕರಿಸಿದ ಅಲ್ಲು ಅರ್ಜುನ್

ಮುಂದಿನ ಪಯಣ

ಚಿತ್ರರಂಗದ ವಿಚಾರಕ್ಕೆ ಬಂದರೆ, ಅಲ್ಲು ಅರ್ಜುನ್ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ‘ಪುಷ್ಪ 2’ ಚಿತ್ರದ ಮೂಲಕ ದೊಡ್ಡ ಹಿಟ್ ದಾಖಲಿಸಿದ್ದಾರೆ. ಪ್ರಸ್ತುತ ಅಲ್ಲು ಅರ್ಜುನ್ ಅವರು ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ರಾಕಾ’ ಎಂಬ ಪ್ಯಾನ್ ವರ್ಲ್ಡ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸನ್ ಪಿಕ್ಚರ್ಸ್ ಸಂಸ್ಥೆಯು ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದು, ರಶ್ಮಿಕಾ ಮಂದಣ್ಣ ಹಾಗೂ ಮೃಣಾಲ್ ಠಾಕೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಬಿಗ್ ಪ್ರಾಜೆಕ್ಟ್‌ನ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಹೊರಬರಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us