ಚುನಾವಣಾ ಕಣಕ್ಕೆ ಅಲ್ಲು ಅರ್ಜುನ್: ಸೋದರ ಮಾವನ ಬಿಟ್ಟು ಮಾವನ ಕೈಹಿಡಿಯಲಿರುವ ಪುಷ್ಪ

Allu Arjun: ನಟ ಅಲ್ಲು ಅರ್ಜುನ್ ಚುನಾವಣಾ ಪ್ರಚಾರ ಕಣಕ್ಕೆ ಧುಮುಕಲಿದ್ದಾರೆ. ಆದರೆ ತಮ್ಮ ಹತ್ತಿರದ ಸಂಬಂಧಿ ಪವನ್ ಕಲ್ಯಾಣ್ ಪರವಾಗಿ ಅಲ್ಲ.

ಚುನಾವಣಾ ಕಣಕ್ಕೆ ಅಲ್ಲು ಅರ್ಜುನ್: ಸೋದರ ಮಾವನ ಬಿಟ್ಟು ಮಾವನ ಕೈಹಿಡಿಯಲಿರುವ ಪುಷ್ಪ
Follow us
|

Updated on: Feb 18, 2024 | 6:33 PM

ತೆಲುಗು ಚಿತ್ರರಂಗ (Tollywood) ಹಾಗೂ ರಾಜಕೀಯ ಎರಡರಲ್ಲೂ ಕುಟುಂಬ ಪಾರುಪತ್ಯ ಹೆಚ್ಚಿದೆ. ನಂದಮೂರಿ ಕುಟುಂಬದವರು ತೆಲುಗು ಚಿತ್ರರಂಗ ಹಾಗೂ ರಾಜಕೀಯ ಎರಡರಲ್ಲೂ ಹೇರಳವಾಗಿದ್ದಾರೆ. ಮೆಗಾಸ್ಟಾರ್ ಕುಟುಂಬದವರು ಚಿತ್ರರಂಗದಲ್ಲಿ ಮುಂದಿದ್ದಾರಾದರೂ ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದೀಗ ಮೆಗಾಸ್ಟಾರ್ ಚಿರಂಜೀವಿ ಸಹೋದರ ಪವನ್ ಕಲ್ಯಾಣ್ (Pawan Kalyan) ರಾಜಕೀಯ ಪಕ್ಷ ಸ್ಥಾಪಿಸಿ ಲೋಕಸಭೆ ಚುನಾವಣೆ ಹಾಗೂ ಆಂಧ್ರ ವಿಧಾನಸಭೆ ಚುನಾವಣೆಗೆ ರೆಡಿಯಾಗುತ್ತಿದ್ದಾರೆ. ತಮ್ಮ ಕುಟುಂಬದ ಹಾಗೂ ಚಿತ್ರರಂಗದ ಗೆಳೆಯರ ಬೆಂಬಲವನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ ಅವರದ್ದೇ ಕುಟುಂಬದ ಪ್ರಮುಖ ನಟನ ಬೆಂಬಲ ಅವರಿಗೆ ಸಿಗಲಿಕ್ಕಿಲ್ಲ ಎನ್ನಲಾಗುತ್ತಿದೆ.

ಮೆಗಾಸ್ಟಾರ್ ಕುಟುಂಬದ ಪ್ರಮುಖ ನಟ ಅಲ್ಲು ಅರ್ಜುನ್. ಚಿರಂಜೀವಿಯವರ ಸೋದರಿಯ ಪುತ್ರ ಅಲ್ಲು ಅರ್ಜುನ್ ಒಂದರ್ಥದಲ್ಲಿ ರಾಮ್ ಚರಣ್​ಗಿಂತಲೂ ಮುಂಚೆಯೇ ಸ್ಟಾರ್ ನಟನಾಗಿ ಬೆಳೆದಿದ್ದರು. ಆಂಧ್ರ-ತೆಲಂಗಾಣಗಳಲ್ಲಿ ಭಾರಿ ದೊಡ್ಡ ಅಭಿಮಾನಿ ಬಳಗವನ್ನೂ ಸಹ ಅಲ್ಲು ಅರ್ಜುನ್ ಹೊಂದಿದ್ದಾರೆ. ಮೆಗಾಸ್ಟಾರ್ ಕುಟುಂಬದವರೇ ಆಗಿದ್ದರೂ ಸಹ ಮುಂದಿನ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಪರವಾಗಿ ಅಲ್ಲು ಅರ್ಜುನ್ ನಿಲ್ಲುವುದಿಲ್ಲ ಬದಲಿಗೆ ಪವನ್​ಗೆ ಎದುರಾಗಿ ನಿಲ್ಲಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓಧಿ:‘ಯಾತ್ರ 2’ ಪ್ರದರ್ಶನದ ವೇಳೆ ಪವನ್ ಕಲ್ಯಾಣ್-ಜಗನ್ ಅಭಿಮಾನಿಗಳ ನಡುವೆ ಮಾರಾಮಾರಿ

ಅಲ್ಲು ಅರ್ಜುನ್​ರ ಪತ್ನಿ ಸ್ನೇಹಾ ರೆಡ್ಡಿಯವರ ತಂದೆ ಅಂದರೆ ಮಾವ ಚಂದ್ರಶೇಖರ ರೆಡ್ಡಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಚಂದ್ರಶೇಖರ ರೆಡ್ಡಿ ಈ ಬಾರಿ ಕಾಂಗ್ರೆಸ್​ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಅಲ್ಲು ಅರ್ಜುನ್ ಮಾವನ ಪರವಾಗಿ ಚುನಾವಣೆ ಪ್ರಚಾರಕ್ಕೆ ಹೋಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಲ್ಲು ಅರ್ಜುನ್​ರ ಮಾವ ಕಂಚರ್ಲ ಚಂದ್ರಶೇಖರ ರೆಡ್ಡಿ ಹಲವು ವರ್ಷಗಳಿಂದ ಬಿಆರ್​ಎಸ್ ಪಕ್ಷದಲ್ಲಿದ್ದರು. ಇತ್ತೀಚೆಗಷ್ಟೆ ಬಿಆರ್​ಎಸ್ ಅನ್ನು ತ್ಯಜಿಸಿ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ಪಕ್ಷ ಸೇರಿಕೊಂಡ ಬಳಿಕ ಮಾತನಾಡಿರುವ ಚಂದ್ರಶೇಖರ ರೆಡ್ಡಿ ತಮ್ಮ ಪರವಾಗಿ ತಮ್ಮ ಅಳಿಯ ಅಲ್ಲು ಅರ್ಜುನ್ ಚುನಾವಣಾ ಪ್ರಚಾರ ಮಾಡಲಿದ್ದಾರೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಈ ಹಿಂದೆಯೂ ಸಹ ಬಿಆರ್​ಎಸ್​ ಪಕ್ಷದಲ್ಲಿದ್ದಾಗ ಚುನಾವಣಾ ಸಭೆಗೆ ಅಲ್ಲು ಅರ್ಜುನ್ ಅನ್ನು ಚಂದ್ರಶೇಖರ ರೆಡ್ಡಿ ಕರೆಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ