ಚಪ್ಪಲಿ ಬಿಚ್ಚಿಟ್ಟು ‘ಹನುಮಾನ್ ಅಂಶ್’ ಸಿನಿಮಾ ನೋಡಿದ ಮುಸ್ಲಿಂ ವ್ಯಕ್ತಿ: ವಿಡಿಯೋ ವೈರಲ್
ಆಗಸ್ಟ್ 7ರಂದು ಬಿಡುಗಡೆಯಾದ ‘ಹನುಮಾನ್ ಅಂಶ್’ ಸಿನಿಮಾ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಇದುವರೆಗೆ ಸುಮಾರು 72.88 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಈ ಸಿನಿಮಾಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಭಕ್ತಿಪ್ರಧಾನ ಕಥಾಹಂದರ ಇರುವ ಈ ಸಿನಿಮಾವನ್ನು ಪ್ರೇಕ್ಷಕರು ಧರ್ಮಭೇದವಿಲ್ಲದೇ ನೋಡುತ್ತಿದ್ದಾರೆ ಎಂಬುದು ವಿಶೇಷ.

ಬಾಲಿವುಡ್ನ ಯಾವುದೇ ಘಟಾನುಘಟಿ ಸೂಪರ್ಸ್ಟಾರ್ಗಳಿಲ್ಲದೆ, ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡುತ್ತಿರುವ ಭಕ್ತಿಪ್ರಧಾನ ಸಿನಿಮಾ ‘ಹನುಮಾನ್ ಅಂಶ್’ ಬಗ್ಗೆ ಎಲ್ಲ ಕಡೆಗಳಲ್ಲಿ ಚರ್ಚೆ ನಡೆಯುತ್ತಿದೆ. ಆರಂಭದ ದಿನಗಳಲ್ಲಿ ಕೇವಲ 10 ಲಕ್ಷ ರೂಪಾಯಿ ಗಳಿಕೆ ಮಾಡಿದ್ದ ಈ ಸಿನಿಮಾ, ಪ್ರೇಕ್ಷಕರ ಬಾಯಿಮಾತಿನ ಪ್ರಚಾರದಿಂದಾಗಿ ಈಗ ಕೋಟಿ ಕೋಟಿ ರೂಪಾಯಿ ಬಾಚಿಕೊಳ್ಳುತ್ತಿದೆ. ಇದರ ನಡುವೆ, ಮುಸ್ಲಿಂ ವ್ಯಕ್ತಿಯೊಬ್ಬರು ಥಿಯೇಟರ್ನಲ್ಲಿ ಬರಿಗಾಲಿನಲ್ಲಿ ಕುಳಿತು ಈ ಸಿನಿಮಾ ವೀಕ್ಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಬಿಳಿ ಬಣ್ಣದ ಕುರ್ತಾ-ಪೈಜಾಮ ಹಾಗೂ ಟೋಪಿ ಧರಿಸಿರುವ ಮುಸ್ಲಿಂ ವ್ಯಕ್ತಿಯೊಬ್ಬರು ಬರಿಗಾಲಿನಲ್ಲಿ ಕುಳಿತು ಅತ್ಯಂತ ತನ್ಮಯತೆಯಿಂದ ‘ಹನುಮಾನ್ ಅಂಶ್’ ಸಿನಿಮಾ ವೀಕ್ಷಿಸುವುದನ್ನು ಕಾಣಬಹುದು. ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ ಚಿತ್ರವನ್ನು ಈ ವ್ಯಕ್ತಿ ಇಷ್ಟೊಂದು ಭಕ್ತಿಯಿಂದ ವೀಕ್ಷಿಸುತ್ತಿರುವುದಕ್ಕೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋಗೆ ಕಾಮೆಂಟ್ ಮಾಡಿರುವ ಬಳಕೆದಾರರೊಬ್ಬರು, ‘ರಾಜಕೀಯ ಲಾಭಕ್ಕಾಗಿ ದಶಕಗಳಿಂದ ನಡೆಯುತ್ತಿರುವ ಧ್ರುವೀಕರಣ ಇವರ ಮನಸ್ಸನ್ನು ಕಲುಷಿತಗೊಳಿಸಲು ಸಾಧ್ಯವಾಗಿಲ್ಲ’ ಎಂದಿದ್ದಾರೆ. ಮತ್ತೊಬ್ಬರು ‘ಇದು ರಾಜಕೀಯವಿಲ್ಲದ ನಿಜವಾದ ಭಾರತ’ ಎಂದಿದ್ದಾರೆ. ‘ನಾನು ಮುಸ್ಲಿಂ, ಆದರೆ ಈ ಸಿನಿಮಾ ನನಗಿಷ್ಟವಾಯಿತು. ಏಕೆಂದರೆ ಇದರಲ್ಲಿ ಯಾವುದೇ ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಲ್ಲ’ ಎಂಬ ಕಮೆಂಟ್ ಕೂಡ ಬಂದಿದೆ.
ವೈರಲ್ ವಿಡಿಯೋ:
You watched or not ? pic.twitter.com/m99ePJffK2
— Bhagavad Gita 🪷 (@Geetashloks) September 2, 2026
‘ಹನುಮಾನ್ ಅಂಶ್’ ಸಿನಿಮಾದ ಕಥೆ ಏನು?
ವಿಶಾಲ್ ಚತುರ್ವೇದಿ ಬರೆದು ನಿರ್ದೇಶಿಸಿರುವ ಈ ಚಿತ್ರವು ‘ಡಿವೈನ್ ಡಿಟೂರ್: ದಟ್ ಚೇಂಜ್ಡ್ ಮೈ ಲೈಫ್’ ಪುಸ್ತಕವನ್ನು ಆಧರಿಸಿದೆ. ತಾಯಿಯನ್ನು ಕಳೆದುಕೊಂಡ ಲಕ್ಷ್ಮಣ್ ದಾಸ್ ಎಂಬ ಹುಡುಗ, ಜೀವನ ಮತ್ತು ದೇವರ ಹುಡುಕಾಟದಲ್ಲಿ ಆಧ್ಯಾತ್ಮಿಕ ಪಯಣ ಬೆಳೆಸುವ ಕಥೆ ಇಲ್ಲಿದೆ. ಉತ್ತರ ಭಾರತದಾದ್ಯಂತ ಸಂಚರಿಸಿ ಸಾಧು-ಸಂತರನ್ನು ಭೇಟಿಯಾಗುವ ಆತ, ಮುಂದೆ ನೀಮ್ ಕರೋಲಿ ಬಾಬಾ ಆಗಿ ಬದಲಾಗುವ ಹಂತವನ್ನು ಚಿತ್ರದಲ್ಲಿ ಮನಮುಟ್ಟುವಂತೆ ತೋರಿಸಲಾಗಿದೆ. ಶೋಭಿನವ್ ಸತ್ಯಾ ಹಾಗೂ ಚಂದನ್ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ‘ಹನುಮಾನ್ ಅಂಶ್’ ಮೆಚ್ಚಿದ ಕಂಗನಾ: ಆದರೆ ಚಿತ್ರತಂಡಕ್ಕೆ ಪ್ರೇಮಾನಂದ್ ಮಹಾರಾಜ್ ಎಚ್ಚರಿಕೆ
ಬಾಲಿವುಡ್ ಮಂದಿ ಆರಂಭದಲ್ಲಿ ಬೆಂಬಲ ನೀಡದಿದ್ದರೂ, ಚಿತ್ರದ ಯಶಸ್ಸು ಕಂಡು ಈಗ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ. ಈ ನಡುವೆ, ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಈ ಸಿನಿಮಾವನ್ನು ಸೆಪ್ಟೆಂಬರ್ 11ರಂದು ವಿದೇಶಗಳಲ್ಲೂ ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲದೆ, ಈ ಸೂಪರ್ ಹಿಟ್ ಚಿತ್ರಕ್ಕೆ ಸೀಕ್ವೆಲ್ ಕೂಡ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




