‘ದೇವರ’ ಚಿತ್ರತಂಡ ಉದ್ದೇಶಪೂರ್ವಕವಾಗಿ ಇವೆಂಟ್ ರದ್ದು ಮಾಡಿತೆ?
Devera: ಭಾನುವಾರ ಆಯೋಜನೆಗೊಂಡಿದ್ದ ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ರದ್ದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಇವೆಂಟ್ ಅನ್ನು ಉದ್ದೇಶಪೂರ್ವಕವಾಗಿ ರದ್ದು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಇನ್ನು ಎರಡು ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾಕ್ಕಾಗಿ ಭರ್ಜರಿ ಪ್ರಚಾರ ಮಾಡಿರುವ ಜೂ ಎನ್ಟಿಆರ್, ಸೆಪ್ಟೆಂಬರ್ 22 ರ ಭಾನುವಾರದಂದು ಹೈದರಾಬಾದ್ನಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಟಿಕೆಟ್ ಮಾರಾಟ ಸಹ ಮಾಡಲಾಗಿತ್ತು. ಆದರೆ ಕಾರ್ಯಕ್ರಮವನ್ನು ರದ್ದು ಮಾಡಲಾಯ್ತು. 5000 ಜನ ಸೇರಬೇಕಿದ್ದ ಜಾಗದಲ್ಲಿ 15 ಸಾವಿರ ಮಂದಿ ಬಂದ ಕಾರಣದಿಂದಾಗಿ ಜನರನ್ನು ನಿಯಂತ್ರಿಸುವುದು ಕಷ್ಟವಾದ ಕಾರಣ ಇವೆಂಟ್ ಅನ್ನು ರದ್ದು ಮಾಡಬೇಕಾಯ್ತು ಎಂದು ಆಯೋಜಕರು ಹೇಳಿದರು. ಜೂ ಎನ್ಟಿಆರ್ ಸಹ ಈ ಬಗ್ಗೆ ವಿಷಾಧ ವ್ಯಕ್ತಪಡಿಸಿದರು. ಆದರೆ ಈ ಇವೆಂಟ್ ಅನ್ನು ರದ್ದು ಮಾಡುವ ಉದ್ದೇಶದಿಂದಲೇ ಆಯೋಜನೆ ಮಾಡಲಾಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.
‘ದೇವರ’ ಚಿತ್ರತಂಡ ಅಭಿಮಾನಿಗಳನ್ನು ಮೂರ್ಖರನ್ನಾಗಿಸಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ. ಜೂ ಎನ್ಟಿಆರ್ ಅದೆಷ್ಟು ದೊಡ್ಡ ಸ್ಟಾರ್ ನಟ, ಹೈದರಾಬಾದ್ನಂಥಹಾ ಪ್ರಮುಖ ನಗರದಲ್ಲಿ ಅವರ ಕಾರ್ಯಕ್ರಮ ಆಯೋಜಿಸುತ್ತಿರುವಾಗ ದೊಡ್ಡ ಜಾಗದಲ್ಲಿ ಆಯೋಜಿಸಬೇಕು ಎಂಬುದು ಕನಿಷ್ಟ ಕಾಮನ್ಸೆನ್ಸ್ನ ವಿಷಯ ಹಾಗಿದ್ದರೂ ಸಹ ಹೋಟೆಲ್ನಲ್ಲಿ ಕಾರ್ಯಕ್ರಮ ಆಯೋಜಿಸಲು ಕಾರಣವೇನು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.
ಇವೆಂಟ್ ಆಯೋಜಿಸಿದ್ದ ಸ್ಥಳದಲ್ಲಿ 5000 ಮಂದಿಗಷ್ಟೆ ಕೆಪಾಸಿಟಿ ಇದ್ದ ಮೇಲೆ 10-15 ಸಾವಿರ ಟಿಕೆಟ್ಗಳನ್ನು ಮಾರಾಟ ಮಾಡಲು ಕಾರಣವೇನು? ಅಷ್ಟು ಜನರಿಗೆ ಸ್ಥಳಾವಕಾಶವೇ ಇಲ್ಲ ಎಂದ ಮೇಲೆ ಅಷ್ಟೋಂದು ಟಿಕೆಟ್ಗಳನ್ನು ಮಾರಾಟ ಮಾಡಿದ್ದು ಹೇಗೆ? ಎಂದು ಸಹ ಕೆಲವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಈಗ ಮಾರಾಟವಾದ ಟಿಕೆಟ್ಗಳಿಗೆ ಕೊಡಲಾಗಿರುವ ಹಣದ ರೀಫಂಡ್ ಹೇಗೆ ಎಂಬ ಬಗ್ಗೆ ಈ ವರೆಗೆ ಮಾಹಿತಿ ನೀಡಲಾಗಿಲ್ಲವಂತೆ.
ಇದನ್ನೂ ಓದಿ:ಜೂ ಎನ್ಟಿಆರ್ ಮನವಿಗೆ ಸ್ಪಂದಿಸಿದ ನಿರ್ದೇಶಕ ವೆಟ್ರಿಮಾರನ್
ಕಾರ್ಯಕ್ರಮ ರದ್ದಾಗುತ್ತದೆ ಎಂಬುದು ಮೊದಲೇ ಗೊತ್ತಿದ್ದರಿಂದ ಸಿನಿಮಾದ ನಾಯಕಿ ಜಾನ್ಹವಿ ಕಪೂರ್ ಆಗಲಿ, ನಟ ಸೈಫ್ ಅಲಿ ಖಾನ್ ಇನ್ನಿತರರು ಹೈದರಾಬಾದ್ಗೆ ಆಗಮಿಸಿಯೇ ಇರಲಿಲ್ಲ ಎನ್ನಲಾಗುತ್ತಿದೆ. ಸೈಫ್ ಅಲಿ ಖಾನ್ ಹಾಗೂ ಜಾನ್ಹವಿ ಮುಂಬೈನಲ್ಲಿಯೇ ಇದ್ದರಂತೆ. ಇವೆಂಟ್ ರದ್ದಾಗುತ್ತದೆ ಎಂಬುದು ಅವರಿಗೆ ಮೊದಲೇ ಗೊತ್ತಿತ್ತಾದ್ದರಿಂದಲೇ ಅವರು ಹೈದರಾಬಾದ್ಗೆ ಬಂದಿರಲಿಲ್ಲ ಎನ್ನಲಾಗುತ್ತಿದೆ.
ಇನ್ನು ಜೂ ಎನ್ಟಿಆರ್ಗೆ ಭಾನುವಾರ ರಾತ್ರಿ 11 ಗಂಟೆಗೆ ಅಮೆರಿಕದ ಫ್ಲೈಟ್ ವಾರದ ಮೊದಲೇ ಬುಕ್ ಆಗಿತ್ತು. ಅಮೆರಿಕದಲ್ಲಿ ‘ದೇವರ’ ಸಿನಿಮಾದ ಮೊದಲ ಶೋ ನೋಡಲು ಅಲ್ಲಿ ಪ್ರಚಾರ ಮಾಡಲು ಜೂ ಎನ್ಟಿಆರ್ ತೆರಳಬೇಕಿತ್ತು, ಇವೆಂಟ್ ರದ್ದಾಗಲೂ ಇದೂ ಸಹ ಒಂದು ಕಾರಣ ಎನ್ನಲಾಗುತ್ತಿದೆ. ಜೂ ಎನ್ಟಿಆರ್, ವಿಮಾನ ಹತ್ತಲು ನಿಲ್ದಾಣಕ್ಕೆ ಬಂದ ವಿಡಿಯೋಗಳನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾನುವಾರ ಇವೆಂಟ್ ರದ್ದಾದ ಬಳಿಕ ಜೂ ಎನ್ಟಿಆರ್, ಹಂಚಿಕೊಂಡಿರುವ ವಿಡಿಯೋವನ್ನು ವಿಮಾನ ನಿಲ್ದಾಣದ ವಿಶೇಷ ಲಾಂಚ್ನಲ್ಲಿಯೇ ಶೂಟ್ ಮಾಡಲಾಗಿದೆ ಎನ್ನಲಾಗುತ್ತಿದೆ.
ಇನ್ನು ಇವೆಂಟ್ ರದ್ದಾದ ಬಗ್ಗೆ ಆಯೋಜಕರು ನೀಡಿರುವ ಸ್ಪಷ್ಟನೆಯಲ್ಲಿ, ಮಳೆ ಬರಬಹುದೆಂಬ ಕಾರಣಕ್ಕೆ ನಾವು ಇಂಡೋರ್ನಲ್ಲಿ ಇವೆಂಟ್ ಆಯೋಜನೆ ಮಾಡಿದ್ದೆವು. ಆದರೆ ನಮ್ಮ ನಿರೀಕ್ಷೆಗೂ ಮೀರಿ ಭಾರಿ ಸಂಖ್ಯೆಯಲ್ಲಿ ಜನ ಬಂದು, ಅಷ್ಟು ಮಂದಿಯನ್ನು ನಿಯಂತ್ರಿಸುವುದು ಅಸಾಧ್ಯ ಎಂಬ ಕಾರಣಕ್ಕೆ ನಾವು ಇವೆಂಟ್ ರದ್ದು ಮಾಡಿದೆವು ಎಂದಿದ್ದಾರೆ. ಆದರೆ ಇವೆಂಟ್ ನಡೆದ ದಿನ ಅಂದರೆ ಭಾನುವಾರ ಹೈದರಾಬಾದ್ನಲ್ಲಿ ತುಸುವೂ ಸಹ ಮಳೆ ಬಂದಿಲ್ಲ. ಒಟ್ಟಾರೆಯಾಗಿ ಇವೆಂಟ್ ರದ್ದು ಮಾಡಿದ್ದಕ್ಕೆ ಜೂ ಎನ್ಟಿಆರ್ ಅಭಿಮಾನಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ