
ಬೆಂಗಳೂರು, ಮಾರ್ಚ್ 17: ಚಿನ್ನ ಕಳ್ಳಸಾಗಾಣಿಕೆಯಲ್ಲಿ (Gold Smuggling) ನಟಿ ರನ್ಯಾ ರಾವ್ (Ranya Rao) ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ಬಂಧಿಸಿದ್ದಾರೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್ ಅವರೊಂದಿಗೆ ಉದ್ಯಮಿ ಪುತ್ರ ತರುಣ್ ಅವರ ಹೆಸರೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಡಿಆರ್ಐ ಅಧಿಕಾರಿಗಳು ತರುಣ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ತರುಣ್ ವಿಚಾರಣೆಯಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗಗೊಂಡಿವೆ.
ನಟಿ ರನ್ಯಾ ರಾವ್ ಮತ್ತು ನಾನು (ತರುಣ್) ಕಾಲೇಜು ದಿನಗಳಿಂದಲೇ ಸ್ನೇಹಿತರಾಗಿದ್ವಿ. ಬಳಿಕ ಇಬ್ಬರೂ ಸೇರಿ 2023ರಲ್ಲಿ ದುಬೈನಲ್ಲಿ 50:50 ಪಾಲುದಾರಿಕೆಯಲ್ಲಿ ವೀರಾ ಡೈಮಂಡ್ಸ್ ಟ್ರೇಡಿಂಗ್ LLC ಎಂಬ ಹೆಸರಿನ ಕಂಪನಿ ಪ್ರಾರಂಭಿಸಿದೇವು. ವ್ಯವಹಾರದ ಉದ್ದೇಶ, ದುಬೈಗೆ ಚಿನ್ನವನ್ನು ಆಮದು ಮಾಡಿಕೊಳ್ಳುವುದು ಮತ್ತು ಚಿನ್ನವನ್ನು ಮಾರಾಟ ಮಾಡುವುದಾಗಿತ್ತು. ದುಬೈ ವ್ಯವಹಾರದಲ್ಲಿ ರನ್ಯಾ ಏಕೈಕ ಹೂಡಿಕೆದಾರರಾಗಿದ್ದರು. ನಾನು ಕಾರ್ಯನಿರತ ಪಾಲುದಾರರಾಗಿದ್ದೆ. ದುಬೈನಲ್ಲಿ ಡೀಲರ್ಗಳಿಗೆ ವಿದೇಶಿ ಕರೆನ್ಸಿಯಲ್ಲಿ ಹಣ ಪಾವತಿ ಮಾಡಲಾಗಿತ್ತು.
ಓರ್ವ ಡೀಲರ್ ಒಮ್ಮೆ ದುಬೈನಲ್ಲಿ ಚಿನ್ನವನ್ನು ಪೂರೈಸದಿದ್ದರಿಂದ 1.7 ಕೋಟಿ ರೂ. ಮೋಸ ಹೋಗಿದ್ವಿ. 1.7 ಕೋಟಿ ಹಣವನ್ನು ರನ್ಯಾ ರಾವ್ ಭಾರತದಿಂದ ದುಬೈಗೆ ಹವಾಲಾ ಮೂಲಕ ತರಿಸಿದ್ದರು. ರನ್ಯಾ ರಾವ್ಗೆ ತನ್ನ ಕುಟುಂಬದ ಸಂಪರ್ಕದ ಮೂಲಕ ಜಿನೇವಾ ಮತ್ತು ಬ್ಯಾಂಕಾಕ್ನಲ್ಲಿ ಡೀಲರ್ಗಳ ಪರಿಚಯ ಇದೆ. ರನ್ಯಾ ರಾವ್ ಚಿನ್ನವನ್ನು ಖರೀದಿಸುತ್ತಿದ್ದಳು, ಕಸ್ಟಮ್ಸ್ ಅಧಿಕಾರಿಗಳ ಬಳಿ ಜಿನೇವಾಗೆ ತೆಗೆದುಕೊಂಡು ಹೋಗುತ್ತೇನೆ ಅಂತ ನನ್ನ ಹೆಸರಲ್ಲಿ ಡಿಕ್ಲರೇಷನ್ ಕೊಡುತ್ತಿದ್ದಳು. ಏಪ್ರಿಲ್ 2024 ರಿಂದ ಜಿನೇವಾ ಅಥವಾ ಬ್ಯಾಂಕಾಕ್ನಿಂದ ಚಿನ್ನವನ್ನು ಖರೀದಿಸಲಾಗಿದೆ. ರನ್ಯಾ ತನ್ನ HDFC ಬ್ಯಾಂಕ್ ಮೂಲಕ VIRA DIAMONDS ಕಂಪನಿ ರಚನೆಗಾಗಿ 8-10 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾಳೆ ಎಂದು ತರುಣ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಇದನ್ನೂ ಓದಿ: ರನ್ಯಾ ರಾವ್ ಪ್ರಕರಣಕ್ಕೆ ಇಡಿ ಎಂಟ್ರಿ; ಹೊರ ಬಿತ್ತು ಹವಾಲಾ ದಂಧೆ
ಚಿನ್ನ ಕಳ್ಳಸಾಗಾಣಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ನಟಿ ರನ್ಯಾ ರಾವ್ ಅವರನ್ನು ಸಿಬಿಐ ತನ್ನ ಕಸ್ಡಡಿಗೆ ಪಡೆಯುವ ಸಾಧ್ಯತೆ ಇದೆ. ಸಿಬಿಐ ಈಗಾಗಲೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಇಬ್ಬರು ಪೊಲೀಸ್ ಕಾನ್ಸಟೇಬಲ್ ಹೇಳಿಕೆ ಪಡೆದಿದೆ. ಹಾಗೇ ವಿಮಾನ ನಿಲ್ದಾಣದಲ್ಲಿ ಮಹಜರು ನಡೆಸಿದೆ. ಇದರ ಮುಂದಿನ ಭಾಗವಾಗಿ ನಟಿ ರನ್ಯಾ ರಾವ್ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದೆ. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಅನುಮತಿ ಪಡೆದು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ನಟಿ ರನ್ಯಾ ರಾವ್ ಸದ್ಯ ಪರಪ್ಪನ ಅಗ್ರಹಾರ ಜೈಲ್ಲಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ
Published On - 10:28 am, Mon, 17 March 25