ಆ ಒಂದು ಕಾರಣಕ್ಕೆ ರಾಜಮೌಳಿ ಸಿನಿಮಾದಲ್ಲಿ ನಟಿಸುವುದಿಲ್ಲವಂತೆ ಮೆಗಾಸ್ಟಾರ್ ಚಿರಂಜೀವಿ
Megastar Chiranjeevi: ಎಸ್ಎಸ್ ರಾಜಮೌಳಿ ಜೊತೆ ಕೆಲಸ ಮಾಡಲು ವಿಶ್ವದಾದ್ಯಂತ ನಟರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಆದರೆ ಮೆಗಾಸ್ಟಾರ್ ಚಿರಂಜೀವಿ ಮಾತ್ರ, ತಾವು ರಾಜಮೌಳಿ ಜೊತೆಗೆ ನಟಿಸುವುದಿಲ್ಲ ಎಂದಿದ್ದಾರೆ. ಇದಕ್ಕೆ ಕಾರಣವನ್ನೂ ಸಹ ವಿವರಿಸಿದ್ದಾರೆ ಚಿರಂಜೀವಿ. ಅಂದಹಾಗೆ ಚಿರಂಜೀವಿ, ರಾಜಮೌಳಿ ನಿರ್ದೇಶನದ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಎಸ್ಎಸ್ ರಾಜಮೌಳಿ (SS Rajamouli) ಈಗ ಪ್ಯಾನ್ ಇಂಡಿಯಾ (Pan India) ನಿರ್ದೇಶಕ ಅಲ್ಲ ಬದಲಿಗೆ ಪ್ಯಾನ್ ವರ್ಲ್ಡ್ ನಿರ್ದೇಶಕ. ವಿಶ್ವ ಸಿನಿಮಾರಂಗದ ದಿಗ್ಗಜರಾದ ಜೇಮ್ಸ್ ಕ್ಯಾಮರನ್, ಸ್ಟೀಫನ್ ಸ್ಪೀಲ್ಬರ್ಗ್ ಅಂಥಹವರೇ ರಾಜಮೌಳಿಯನ್ನು ಹಾಲಿವುಡ್ಗೆ ಆಹ್ವಾನ ಮಾಡಿದ್ದಾರೆ. ಆದರೆ ರಾಜಮೌಳಿ ಭಾರತದಲ್ಲೇ ಉಳಿದಿದ್ದಾರೆ. ಭಾರತ ಚಿತ್ರರಂಗದ ನಟರು ಮಾತ್ರವೇ ಅಲ್ಲದೆ ಹಾಲಿವುಡ್ ಸೇರಿದಂತೆ ಇನ್ನೂ ಬೇರೆ ಬೇರೆ ಚಿತ್ರರಂಗಗಳ ನಟ-ನಟಿಯರು ಸಹ ರಾಜಮೌಳಿ ಸಿನಿಮಾದಲ್ಲಿ ಕೆಲಸ ಮಾಡಲು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮಾತ್ರ, ತಾವು ರಾಜಮೌಳಿ ಜೊತೆ ಕೆಲಸ ಮಾಡುವುದಿಲ್ಲ ಎಂದಿದ್ದರು, ಅದಕ್ಕೆ ಕಾರಣವನ್ನೂ ನೀಡಿದ್ದಾರೆ.
ಚಿರಂಜೀವಿ ತಮ್ಮ ಹಿಂದಿನ ಸಿನಿಮಾ ‘ಗಾಡ್ಫಾದರ್’ ಪ್ರಮೋಷನ್ ವೇಳೆ ರಾಜಮೌಳಿ ಬಗ್ಗೆ ಮಾತನಾಡಿದ್ದರು. ನೀವು ರಾಜಮೌಳಿ ಜೊತೆ ನಟಿಸುವ ಅವಕಾಶ ಸಿಕ್ಕರೆ ನಟಿಸುತ್ತೀರ ಎಂದು ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಚಿರಂಜೀವಿ, ರಾಜಮೌಳಿ, ಒಂದು ಸಿನಿಮಾ ಮಾಡಲು ತೆಗೆದುಕೊಳ್ಳುವ ಸಮಯ ಬಹಳ ಹೆಚ್ಚು, ಅಷ್ಟು ನನಗೆ ಕಾಯಲು ಸಾಧ್ಯವಿಲ್ಲ. ಒಂದು ಸಿನಿಮಾ ಮಾಡಲು ಅವರು ನಾಲ್ಕು ವರ್ಷ ತೆಗೆದುಕೊಳ್ಳುತ್ತಾರೆ. ಅಷ್ಟರಲ್ಲಿ ನಾನು ಆರೇಳು ಸಿನಿಮಾಗಳಲ್ಲಿ ನಟಿಸಿ ಬಿಡುತ್ತೇನೆ’ ಎಂದಿದ್ದರು ಚಿರಂಜೀವಿ.
ನಾನು ಒಂದು ಬಾರಿ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದೂ ಇದೆ. ಆದರೆ ಒಂದೇ ಸಿನಿಮಾಕ್ಕಾಗಿ 3-4 ವರ್ಷ ಕೊಡಬೇಕು ಎಂದರೆ ನನ್ನಿಂದ ಸಾಧ್ಯವಿಲ್ಲ. ರಾಜಮೌಳಿ ಜೊತೆ ಕೆಲಸ ಮಾಡಿ, ನಾನು ಪ್ಯಾನ್ ಇಂಡಿಯಾ ಸ್ಟಾರ್ ಹೌದೋ ಇಲ್ಲವೋ ಎಂಬುದು ಪ್ರೂವ್ ಮಾಡುವುದರ ಅವಶ್ಯಕತೆ ನನಗೆ ಇಲ್ಲ. ನನ್ನ ಮಿತಿಯಲ್ಲಿ, ನನಗೆ ಸರಿ ಎನಿಸಿದ ರೀತಿ ನಾನು ಸಿನಿಮಾಗಳನ್ನು ಮಾಡಿಕೊಂಡು ಹೋಗುತ್ತೀನಿ’ ಎಂದಿದ್ದಾರೆ ಚಿರಂಜೀವಿ.
ಇದನ್ನೂ ಓದಿ:ತಾಯಿಯ ಹುಟ್ಟುಹಬ್ಬ ಆಚರಣೆ ಮಾಡಿದ ಮೆಗಾಸ್ಟಾರ್ ಚಿರಂಜೀವಿ, ಇಲ್ಲಿದೆ ವಿಡಿಯೋ
ಮೆಗಾಸ್ಟಾರ್ ಚಿರಂಜೀವಿ, ರಾಜಮೌಳಿ ನಿರ್ದೇಶನದ ಸಿನಿಮಾ ಒಂದರ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜಮೌಳಿ ನಿರ್ದೇಶಿಸಿ, ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ನಟಿಸಿರುವ ‘ಮಗಧೀರ’ ಸಿನಿಮಾದ ಒಂದು ಹಾಡಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ಒಂದೆರಡು ಸ್ಟೆಪ್ ಸಹ ಹಾಕಿದ್ದಾರೆ. ಚಿರಂಜೀವಿ, ರಾಜಮೌಳಿ ಸಿನಿಮಾನಲ್ಲಿ ನಾಯಕನಾಗಿ ನಟಿಸಿಲ್ಲವಾದರೂ ಚಿರಂಜೀವಿ ಪುತ್ರ ರಾಮ್ ಚರಣ್, ರಾಜಮೌಳಿಯ ಎರಡು ಸಿನಿಮಾನಲ್ಲಿ ನಾಯಕನಾಗಿ ನಟಿಸಿದ್ದಾರೆ.
ಚಿರಂಜೀವಿ ಪ್ರಸ್ತುತ ‘ವಿಶ್ವಂಭರ’, ಶ್ರೀಕಾಂತ ಒಡೆಲ ಜೊತೆಗೆ ಹೊಸ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಹೊಸ ರೀಮೇಕ್ ಸಿನಿಮಾ ಒಂದರಲ್ಲಿ ಚಿರು ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಬಾಲಕೃಷ್ಣ ಹಾಗೂ ಚಿರಂಜೀವಿ ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಲಿದ್ದು ಆ ಕುರಿತು ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:01 am, Fri, 4 April 25