‘ನಾಗಿಣಿ’ ತ್ರಿಶೂಲ್​-ಶಿವಾನಿ ಅದ್ದೂರಿ ಮದುವೆ! ಸಾವಿರಾರು ಫ್ಯಾನ್ಸ್​ ಎದುರು ಆರತಕ್ಷತೆ

ತಮ್ಮದೇ ಕುಟುಂಬದ ಸಮಾರಂಭದ ರೀತಿಯಲ್ಲಿ ಅಭಿಮಾನಿಗಳು ಇದರಲ್ಲಿ ಭಾಗವಹಿಸಿದರು. ಬಂದಿದ್ದ ಎಲ್ಲ ಅಭಿಮಾನಿಗಳಿಗೆ ಬಾಳೆ ಎಲೆಯಲ್ಲಿ ಶ್ಯಾಮಿಗೆ ಪಾಯಸದ ಭರ್ಜರಿ ಭೋಜನ ಬಡಿಸಲಾಯಿತು!

‘ನಾಗಿಣಿ’ ತ್ರಿಶೂಲ್​-ಶಿವಾನಿ ಅದ್ದೂರಿ ಮದುವೆ! ಸಾವಿರಾರು ಫ್ಯಾನ್ಸ್​ ಎದುರು ಆರತಕ್ಷತೆ
ನಾಗಿಣಿ ಸೀರಿಯಲ್​ ಶಿವಾನಿ - ತ್ರಿಶೂಲ್​ ಆರತಕ್ಷತೆ
Follow us
|

Updated on: Apr 06, 2021 | 11:57 AM

ಕನ್ನಡ ಕಿರುತೆರೆ ಲೋಕದ ವ್ಯಾಪ್ತಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಮೇಕಿಂಗ್​ ವಿಚಾರದಲ್ಲಿ ಸಿನಿಮಾಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಧಾರಾವಾಹಿಗಳು ನಿರ್ಮಾಣ ಆಗುತ್ತಿವೆ. ಅಷ್ಟೇ ಅಲ್ಲದೆ, ಹೊಸ ಹೊಸ ಪ್ರಯೋಗಳನ್ನು ಮಾಡಲಾಗುತ್ತಿದೆ. ವಿನೂತನ ಕಾನ್ಸೆಪ್ಟ್​ಗಳನ್ನು ಇಟ್ಟುಕೊಂಡು ವೀಕ್ಷಕರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಈಗ ಜೀ ಕನ್ನಡ ವಾಹಿನಿಯ ‘ನಾಗಿಣಿ 2’ ಧಾರಾವಾಹಿ ಕೂಡ ಒಂದು ಹೊಸ ಹೆಜ್ಜೆ ಇಟ್ಟಿದೆ. ಈ ಸೀರಿಯಲ್​ನ ಮುಖ್ಯ ಪಾತ್ರಗಳಾದ ತ್ರಿಶೂಲ್​ ಮತ್ತು ಶಿವಾನಿ ಮದುವೆಯನ್ನು ವಿಭಿನ್ನವಾಗಿ ಮಾಡಲಾಗಿದೆ!

ಶಿವಾನಿ ಪಾತ್ರಕ್ಕೆ ನಮೃತಾ ಗೌಡ ಬಣ್ಣ ಹಚ್ಚಿದ್ದಾರೆ. ತ್ರಿಶೂಲ್​ ಪಾತ್ರದಲ್ಲಿ ನಿನಾದ್​ ಅಭಿನಯಿಸುತ್ತಿದ್ದಾರೆ. ಇಬ್ಬರ ಮದುವೆ ದೃಶ್ಯಗಳನ್ನು ಅದ್ದೂರಿಯಾಗಿ ಚಿತ್ರಿಸಲಾಗಿದೆ. ಅದರ ಜೊತೆಗೆ ಆರತಕ್ಷತೆ ಕಾರ್ಯಕ್ರಮವನ್ನು ಅಭಿಮಾನಿಗಳ ಮಧ್ಯದಲ್ಲಿ ಚಿತ್ರೀಕರಿಸಲಾಗಿದೆ. ಮಂಡ್ಯದಲ್ಲಿ ಇದರ ಶೂಟಿಂಗ್​ ನಡೆದಿದ್ದು ಸಾವಿರಾರು ಅಭಿಮಾನಿಗಳು ಇದರಲ್ಲಿ ಭಾಗವಹಿಸಿದ್ದಾರೆ.

‘ನಾಗಿಣಿ 2’ ಧಾರಾವಾಹಿಗೆ ದೊಡ್ಡ ವೀಕ್ಷಕ ವರ್ಗವಿದೆ. ಈ ಸೀರಿಯಲ್​ ಕಲಾವಿದರನ್ನು ಭೇಟಿ ಮಾಡಬೇಕು ಮತ್ತು ಅವರ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಬೇಕು ಎಂಬುದು ಅನೇಕ ಅಭಿಮಾನಿಗಳ ಆಸೆ. ಅಂಥವರಿಗೆಲ್ಲ ಒಂದು ಚಾನ್ಸ್​ ನೀಡಲಾಗಿತ್ತು. ಮಂಡ್ಯದಲ್ಲಿನ ಅನೇಕ ಅಭಿಮಾನಿಗಳ ಮನೆಗೆ ತೆರಳಿದ ಧಾರಾವಾಹಿ ತಂಡದವರು ಮಿಸ್​ ಕಾಲ್​ ನೀಡುವ ಸ್ಪರ್ಧೆ ಆಯೋಜಿಸಿದ್ದರು. ಅದರಲ್ಲಿ ಆಯ್ಕೆ ಆದವರಿಗೆ ಈ ಆರತಕ್ಷತೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಯಿತು.

ಇದು ತಮ್ಮದೇ ಕುಟುಂಬದ ಸಮಾರಂಭ ಎಂಬ ರೀತಿಯಲ್ಲಿ ಅಭಿಮಾನಿಗಳು ಭಾಗವಹಿಸಿದರು. ‘ನಾಗಿಣಿ 2’ ತಂಡದವರ ಜೊತೆ ವೀಕ್ಷಕರು ಸಂವಾದ ಕೂಡ ನಡೆಸಿದರು. ಆರತಕ್ಷತೆಗೆ ಬಂದ ಮೇಲೆ ರುಚಿಯಾದ ಊಟ ಇಲ್ಲದಿದ್ದರೆ ಹೇಗೆ? ಅದರ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಬಂದಿದ್ದ ಎಲ್ಲ ಅಭಿಮಾನಿಗಳಿಗೆ ಬಾಳೆ ಎಲೆಯಲ್ಲಿ ಶ್ಯಾಮಿಗೆ ಪಾಯಸದ ಭರ್ಜರಿ ಭೋಜನ ಬಡಿಸಲಾಯಿತು. ಒಟ್ಟಿನಲ್ಲಿ ಅಭಿಮಾನಿಗಳ ಜೊತೆ ಸಂಬಂಧ ಗಟ್ಟಿಗೊಳಿಸಲು ಈ ಆರತಕ್ಷತೆ ಕಾರ್ಯಕ್ರಮ ನೆರವಾಯಿತು.

ಈ ವಿಶೇಷ ಎಪಿಸೋಡ್​ಗಳು ಜೀ ಕನ್ನಡದಲ್ಲಿ ಪ್ರಸಾರ ಆಗಲಿವೆ. ಕಳೆದ ವರ್ಷ ಫೆಬ್ರವರಿಯಲ್ಲಿ ‘ನಾಗಿಣಿ 2’ ಧಾರಾವಾಹಿ ಶುರು ಆಯಿತು. ಆದರೆ ಲಾಕ್​ಡೌನ್​ ಪರಿಣಾಮ ಕೆಲವು ತಿಂಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ನಂತರ ಮತ್ತೆ ಪ್ರಸಾರ ಶುರುಮಾಡಿದ ಈ ಸೀರಿಯಲ್​ನಲ್ಲಿ ಮೋಹನ್​ ಮತ್ತು ಮುನಿರಾಜು ಕೂಡ ಮುಖ್ಯಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ: ಗೀತಾ ಧಾರಾವಾಹಿ ನಟಿ ಭವ್ಯಾ ಗೌಡಗೆ ಬೆಳ್ಳಿತೆರೆ ಆಫರ್​; ಸಿನಿಮಾ ಯಾವುದು?

(Naagini 2 Kannada Serial Shivani and Trishul marriage reception)