ಹಿರಿಯ ನಟ ಪ್ರದೀಪ್ ರಾವತ್ ನಿಧನ: ‘ಘಜಿನಿ’, ‘ಲಗಾನ್’ ಖ್ಯಾತಿಯ ಖಳನಟ ಇನ್ನಿಲ್ಲ

‘ಘಜಿನಿ’ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ಹಿರಿಯ ನಟ ಪ್ರದೀಪ್ ರಾವತ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರನ್ನು ಒಂದು ತಿಂಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೇ ಅವರು ಕೊನೆಯುಸಿರು ಎಳೆದಿದ್ದಾರೆ. ಪ್ರದೀಪ್ ರಾವತ್ ನಿಧನಕ್ಕೆ ಅಭಿಮಾನಿಗಳು, ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಹಿರಿಯ ನಟ ಪ್ರದೀಪ್ ರಾವತ್ ನಿಧನ: ‘ಘಜಿನಿ’, ‘ಲಗಾನ್’ ಖ್ಯಾತಿಯ ಖಳನಟ ಇನ್ನಿಲ್ಲ
Pradeep Rawat

Updated on: Aug 04, 2026 | 10:31 PM

ಖ್ಯಾತ ಹಿರಿಯ ನಟ ಪ್ರದೀಪ್ ರಾವತ್ (Pradeep Rawat) ಅವರು ಆಗಸ್ಟ್ 4ರ ಸಂಜೆ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ‘ಲಗಾನ್’ (Lagaan), ‘ಘಜಿನಿ’ ಮುಂತಾದ ಜನಪ್ರಿಯ ಸಿನಿಮಾ ಹಾಗೂ ‘ಮಹಾಭಾರತ’ ರೀತಿಯ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು, ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ಪ್ರದೀಪ್ ರಾವತ್ ನಿಧನರಾದ (Pradeep Rawat Death) ಸುದ್ದಿಯನ್ನು ಅವರ ಸಹನಟ ಯಶ್‌ಪಾಲ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಿಂದಿ, ಕನ್ನಡ, ತೆಲುಗು, ತಮಿಳು ಸೇರಿದಂತೆ ಇಡೀ ಭಾರತೀಯ ಚಿತ್ರರಂಗದ ಸೆಲೆಬ್ರಿಟಿಗಳು ಪ್ರದೀಪ್ ರಾವತ್ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.

ವರದಿಗಳ ಪ್ರಕಾರ, ಪ್ರದೀಪ್ ರಾವತ್ ಅವರು ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರ ಆರೋಗ್ಯ ಸ್ಥಿತಿ ಏಕಾಏಕಿ ಕ್ಷೀಣಿಸಿ ಕೊನೆಯುಸಿರೆಳೆದರು. ನೈಜ ಜೀವನದಲ್ಲಿ ಅತ್ಯಂತ ಶಾಂತ ಹಾಗೂ ಸೌಮ್ಯ ಸ್ವಭಾವದವರಾಗಿದ್ದ ಪ್ರದೀಪ್ ರಾವತ್ ಅವರ ಅಗಲಿಕೆಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

ಖಳನಟನಾಗಿ ಅಪಾರ ಜನಪ್ರಿಯತೆ:

ಬಿ.ಆರ್. ಚೋಪ್ರಾ ಅವರ ಜನಪ್ರಿಯ ‘ಮಹಾಭಾರತ’ (1988) ಧಾರಾವಾಹಿಯಲ್ಲಿ ಅಶ್ವತ್ಥಾಮನ ಪಾತ್ರದ ಮೂಲಕ ಪ್ರದೀಪ್ ರಾವತ್ ಅವರು ದೇಶದಾದ್ಯಂತ ಮನೆಮಾತಾಗಿದ್ದರು. ತಮಿಳು ಹಾಗೂ ಹಿಂದಿಯ ‘ಘಜಿನಿ’ ಸಿನಿಮಾದಲ್ಲಿ ಘಜಿನಿ ಧರ್ಮತ್ಮ ಎಂಬ ಪಾತ್ರವನ್ನು ಮಾಡುವ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಖಳನಾಯಕನಾಗಿ ಅವರು ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.

ಆಮಿರ್ ಖಾನ್ ಅಭಿನಯದ ‘ಲಗಾನ್’ ಸಿನಿಮಾದಲ್ಲಿ ದೇವ ಎಂಬ ಸಿಖ್ ಯೋಧನ ಪಾತ್ರದಲ್ಲಿ ಪ್ರದೀಪ್ ರಾವತ್ ಅವರು ನಟಿಸಿ ಮೆಚ್ಚುಗೆ ಗಳಿಸಿದ್ದರು. ಎಸ್.ಎಸ್. ರಾಜಮೌಳಿ ನಿರ್ದೇಶನದ ತೆಲುಗಿನ ‘ಸೈ’ ಚಿತ್ರದ ಭಿಕ್ಷು ಯಾದವ್ ಪಾತ್ರಕ್ಕೆ ಫಿಲ್ಮ್‌ಫೇರ್ ಅತ್ಯುತ್ತಮ ಖಳನಟ ಪ್ರಶಸ್ತಿಯನ್ನೂ ಪಡೆದಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಫೇಮಸ್ ಆಗಿದ್ದ ಪ್ರದೀಪ್ ರಾವತ್ ಅವರ ನಟನೆಗೆ ಅಭಿಮಾನಿಗಳು ಭೇಷ್ ಎಂದಿದ್ದರು.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಖ್ಯಾತ ಕಿರುತೆರೆ ನಟ ನಿಧನ, ಮೂವರ ಸ್ಥಿತಿ ಗಂಭೀರ

ಪ್ರದೀಪ್ ರಾವತ್ ನಟಿಸಿದ ಕನ್ನಡ ಸಿನಿಮಾಗಳು:

ಕನ್ನಡ ಚಿತ್ರರಂಗದಲ್ಲಿ ಕೂಡ ಪ್ರದೀಪ್ ರಾವತ್ ಅವರಿಗೆ ಬೇಡಿಕೆ ಇತ್ತು. ಖಳನಾಯಕನಾಗಿ ಅವರು ಸ್ಯಾಂಡಲ್​ವುಡ್​ನಲ್ಲಿ ಅಬ್ಬರಿಸಿದ್ದರು. ಉಪೇಂದ್ರ ನಟನೆಯ ‘ಪರೋಡಿ’, ದರ್ಶನ್ ನಟನೆಯ ‘ಗಜ’, ‘ಅಭಯ್’, ಕಿಚ್ಚ ಸುದೀಪ್ ನಟನೆಯ ‘ಬಚ್ಚನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರದೀಪ್ ರಾವತ್ ಅವರು ಅಭಿನಯಿಸಿದ್ದರು. ಬೆಂಗಾಲಿ, ಮರಾಠಿ, ಭೋಜ್​ಪುರಿ, ನೇಪಾಳಿ ಭಾಷೆಯ ಸಿನಿಮಾಗಳಲ್ಲಿ ಸಹ ಅವರು ನಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us