ಕನ್ನಡ ಚಿತ್ರರಂಗದ ಕರಾಳ ಮುಖ ತೆರೆದಿಟ್ಟ ಅಜಯ್ ರಾವ್; ಎದುರಿಸಿದ ಸಮಸ್ಯೆಗಳೇನು?
ಅಜಯ್ ರಾವ್ ಅವರು ಸಿನಿಮಾ ಯಶಸ್ಸು ಮತ್ತು ವಿಫಲತೆಯ ಹಿಂದಿನ ನಿಜವಾದ ಚಿತ್ರಣವನ್ನು ಬಹಿರಂಗಪಡಿಸಿದ್ದಾರೆ. ಸಿನಿಮಾ ಹಿಟ್ ಆದರೆ ಇಡೀ ತಂಡಕ್ಕೆ ಹೊಗಳಿಕೆ, ಸೋತರೆ ನಟನಿಗೆ ಮಾತ್ರ ದೂಷಣೆ ಎಂಬ ಸಮಸ್ಯೆಯನ್ನು ಅವರು ಎತ್ತಿ ತೋರಿಸಿದ್ದಾರೆ. ಬರಹಗಾರರು ಮತ್ತು ತಾಂತ್ರಿಕ ವರ್ಗದ ಪಾತ್ರವನ್ನು ಅವರು ಒತ್ತಿಹೇಳಿದ್ದಾರೆ ಮತ್ತು ತಮ್ಮ ದೊಡ್ಡ ಸಾಲದ ಬಗ್ಗೆಯೂ ಮಾತನಾಡಿದ್ದಾರೆ.

ಸಿನಿಮಾ ಹಿಟ್ ಆದಾಗ ಇಡೀ ತಂಡವನ್ನು ಹೊಗಳಲಾಗುತ್ತದೆ. ಅದೇ ಸಿನಿಮಾ ಸೋತಾಗ ಹೀರೋನ ಬಯ್ಯಲಾಗುತ್ತದೆ ಎಂಬ ಮಾತಿದೆ. ಅನೇಕರು ಇದನ್ನು ಒಪ್ಪಿಕೊಳ್ಳುತ್ತಾರೆ. ಇನ್ನೂ ಕೆಲವರು ಇದನ್ನು ಅಲ್ಲಗಳೆಯುತ್ತಾರೆ. ಈ ಬಗ್ಗೆ ಕನ್ನಡದ ನಟ ಅಜಯ್ ರಾವ್ (Ajay Rao) ಅವರು ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಕರಾಳ ಮುಖವನ್ನು ಅವರು ತೆರೆದಿಟ್ಟಿದ್ದಾರೆ. ಅವರ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.
‘ಆರ್ಟಿಸ್ಟ್ಗಳ ದುರಂತ ಏನಿರುತ್ತದೆ ಎಂದರೆ ನಾವು ಏನಾದರೂ ಕೇಳಿದರೆ ಎಲ್ಲದರಲ್ಲೂ ಮಧ್ಯೆ ಮೂಗು ತೂರಿಸುತ್ತಾನೆ ಎಂದು ಭಾವಿಸುತ್ತಾರೆ. ನಟ ಏನು ಸಫರ್ ಮಾಡುತ್ತಾ ಇರುತ್ತಾನೆ ಎಂಬುದು ಆತನಿಗೆ ಮಾತ್ರ ಗೊತ್ತಿರುತ್ತದೆ. ಸಿನಿಮಾ ಸೋತಾಗ ಫ್ಲಾಪ್ ಹೀರೋ. ಸಿನಿಮಾ ಹಿಟ್ ಆದಾಗ ಅದಕ್ಕೆ ಸುಮಾರು ಜನ ತಂದೆ ತಾಯಿಯರು ಸಿಗುತ್ತಾರೆ. ಬರಹಗಾರ ಹಾಗೂ ತಾಂತ್ರಿಕ ವರ್ಗದವರ ಮೇಲೆ ಸಿನಿಮಾ ನಿಂತಿದೆ’ ಎಂದಿದ್ದಾರೆ ಅಜಯ್ ರಾವ್.
ಇದನ್ನೂ ಓದಿ: ಒಂದು ಕಾಲದಲ್ಲಿ ಬೇಡಿಕೆಯ ಹೀರೋ ಆಗಿದ್ದ ಅಜಯ್ ರಾವ್ಗೆ ಈಗ ಕೋಟಿ ಕೋಟಿ ರೂಪಾಯಿ ಸಾಲ
‘ಸಿನಿಮಾ ಗೆದ್ದಿದೆ ಎಂದರೆ ಆ ಕ್ರೆಡಿಟ್ನ ನಾನು ಬರಹಗಾರ ಹಾಗೂ ನಿರ್ದೇಶಕನಿಗೆ ಕೊಡುತ್ತೇನೆ. ಏಕೆಂದರೆ ನಾನು ಫ್ಲಾಪ್ ಸಿನಿಮಾಗೂ ಅಷ್ಟೇ ಎಫರ್ಟ್ ಹಾಕಿರುತ್ತೇನೆ, ಗೆದ್ದ ಸಿನಿಮಾಗೂ ಅಷ್ಟೇ ಎಫರ್ಟ್ ಹಾಕಿರುತ್ತೇನೆ. ಅವನ ಬರವಣಿಗೆ, ನಿರ್ದೇಶಕನ ಎಫರ್ಟ್, ನಿರ್ಮಾಪಕ ಹಣ ಹಾಕಿದ್ದರಿಂದ ಸಿನಿಮಾ ಗೆದ್ದಿದೆ. ನನ್ನ ಎಫರ್ಟ್ ಸಿನಿಮಾದಲ್ಲಿ ಒಂದೇ ರೀತಿ ಇರುತ್ತದೆ. ಕಥೆನ, ಬರಹಗಾರನ ನಂಬಬೇಕು’ ಎಂದು ಅವರು ಹೇಳಿದ್ದಾರೆ.
View this post on Instagram
ಅಜಯ್ ರಾವ್ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈಗ ಅವರು ಅಷ್ಟು ಅಗ್ರೆಸ್ಸಿವ್ ಆಗಿ ಸಿನಿಮಾಗಳನ್ನು ಮಾಡುತ್ತಿಲ್ಲ. ಅದಕ್ಕೆ ಕಾರಣವನ್ನು ಅವರು ವಿವರಿಸಿಲ್ಲ. ಇನ್ನು ಅಜಯ್ ರಾವ್ ಅವರು ತಮಗೆ ಕೋಟಿ ಕೋಟಿ ರೂಪಾಯಿ ಸಾಲ ಇದೆ ಎಂದು ಹೇಳಿಕೊಂಡಿದ್ದಾರೆ. ಈ ಸಾಲ ಹೇಗಾಯಿತು, ಏಕಾಯಿತು ಎಂಬುದನ್ನು ಅವರು ವಿವರಿಸಿಲ್ಲ. ಅಜಯ್ ರಾವ್ ಅವರು ಸದ್ಯ ‘ಯುದ್ಧಕಾಂಡ’ ಹೆಸರಿನ ಸಿನಿಮಾ ಮಾಡಿದ್ದಾರೆ. ಪವನ್ ಭಟ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.