ರಾಜ್ಯ ಸರ್ಕಾರ ಶೇ.2 ಸೆಸ್​ ವಿಧಿಸಿದ್ದಕ್ಕೆ ಚಿತ್ರರಂಗದ ವಿರೋಧ; ಮಂಡಳಿ ಅಧ್ಯಕ್ಷರು ಹೇಳಿದ್ದೇನು?

ಕರ್ನಾಟಕ ಸರ್ಕಾರವು ಸಿನಿಮಾ, ಒಟಿಟಿ ಸಬ್​ಸ್ಕ್ರಿಪ್ಷನ್​​ ಮೇಲೆ ಶೇಕಡ 2ರಷ್ಟು ಸೆಸ್ ವಿಧಿಸಲು ನಿರ್ಧರಿಸಿದ್ದು, ಅದಕ್ಕೆ ಚಿತ್ರರಂಗದಲ್ಲಿ ವಿರೋಧ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸುದ್ದಿಗೋಷ್ಠಿ ನಡೆಸಿದೆ. ಹೆಚ್ಚುವರಿ ಸೆಸ್​ನಿಂದ ಕನ್ನಡ ಚಿತ್ರರಂಗಕ್ಕೆ ಯಾವ ರೀತಿ ಹೊರೆ ಆಗಲಿದೆ ಎಂಬುದನ್ನು ತಿಳಿಸಲಾಗಿದೆ.

ರಾಜ್ಯ ಸರ್ಕಾರ ಶೇ.2 ಸೆಸ್​ ವಿಧಿಸಿದ್ದಕ್ಕೆ ಚಿತ್ರರಂಗದ ವಿರೋಧ; ಮಂಡಳಿ ಅಧ್ಯಕ್ಷರು ಹೇಳಿದ್ದೇನು?
ಎನ್​.ಎಂ. ಸುರೇಶ್​
Follow us
| Updated By: ಮದನ್​ ಕುಮಾರ್​

Updated on: Jul 27, 2024 | 3:12 PM

ಇತ್ತೀಚೆಗೆ ಅಂಗೀಕಾರಗೊಂಡ ‘ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಮಸೂದೆ 2024’ ಕಾರಣದಿಂದ ಚಿತ್ರರಂಗಕ್ಕೆ ಶೇ.ರಷ್ಟು ಸೆಸ್​ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಅದನ್ನು ಕನ್ನಡ ಚಿತ್ರರಂಗದ ಅನೇಕರು ಖಂಡಿಸಿದ್ದಾರೆ. ಈ ಕುರಿತು ಮಾಹಿತಿ ನೀಡಲು ಇಂದು (ಜುಲೈ 27) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಮಂಡಳಿಯ ಅಧ್ಯಕ್ಷರಾದ ಎನ್.ಎಂ. ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಮಂಡಳಿಯ ಇನ್ನುಳಿದ ಪದಾಧಿಕಾರಿಗಳು ಭಾಗಿಯಾಗಿದ್ದರು.

‘ತೆರಿಗೆ ಹೆಚ್ಚಳದ ಬಗ್ಗೆ ಈ ಮುಂಚೇನೆ ವಿರೋಧ ಮಾಡಿದ್ವಿ. ಈಗಾಗಲೇ ‌ನಿರ್ಮಾಪಕರು ಸಂಕಷ್ಟದಲ್ಲಿದ್ದಾರೆ. ಈಗ ಹೆಚ್ಚಳ ಆಗಿರೋ ಕಾರಣ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೆವು. ಸಿನಿಮಾರಂಗ ದಿನೇ ದಿನೇ ಮುಳುಗುತ್ತಿದೆ ಎಂದು ಸಂತೋಷ್ ಲಾಡ್ ಬಳಿಯೂ ಹೇಳಿಕೊಂಡಿದ್ದೆವು. ಅವರು ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ. ಸಿಎಂಗೆ ಹೇಳ್ತಿನಿ ಅಂತ ಹೇಳಿದ್ದಾರೆ’ ಎಂದು ಮಂಡಳಿ ಪ್ರಮುಖರು ಹೇಳಿದ್ದಾರೆ.

‘ತೆರಿಗೆ ಕಡಿಮೆ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ಕನ್ನಡ ಸಿನಿಮಾಗಳಿಗೆ ಸೆಸ್ ಹಾಕಬೇಡಿ ಅಂತ ಗಮನಕ್ಕೆ ತಂದಿದ್ದೇವೆ. ಬೇರೆ ಭಾಷೆಯ ಸಿನಿಮಾಗಳಿಗೆ ಹಾಕೋದು ಅವರ ಇಷ್ಟ. ನಿರ್ಮಾಪಕರಿಗೆ ಹೊರೆ ಹಾಕಿ ಕಾರ್ಮಿಕರ ಕಲ್ಯಾಣ ನಿಧಿಗೆ ಕೊಡ್ತಾರೆ. ನಿಧಿಗೆ ಕೊಡಲಿ, ಆದರೆ ನಿರ್ಮಾಪಕರಿಗೆ ತೆರಿಗೆ ಹೆಚ್ಚಳ ಬೇಡ. ಕನ್ನಡ ಸಿನಿಮಾಗಳಿಗೆ ತೆರಿಗೆ ಹೆಚ್ಚಳ ಬಿಲ್ ಇಂಪ್ಲಿಮೆಂಟ್ ಮಾಡಬೇಡಿ ಎಂದು ಈ ಸುದ್ದಿಗೋಷ್ಠಿ ಮೂಲಕ ಮನವಿ ಮತ್ತು ಗಮನಕ್ಕೆ ತರುತ್ತಿದ್ದೇವೆ’ ಎಂದಿದ್ದಾರೆ.

ವಾಣಿಜ್ಯ ಮಂಡಳಿ ವತಿಯಿಂದ ಸಿಎಂ ಭೇಟಿಗೆ ನಿರ್ಧರಿಸಿರುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಹೇಳಿದ್ದಾರೆ. ‘ಸಿನಿಮಾ ಟಿಕೆಟ್ ಮೇಲೆ ಶೇ.2 ಸೆಸ್ ಮಸೂದೆ ಹೊರಡಿಸಿದೆ. ಸರ್ಕಾರ ನಮ್ಮ ಜತೆ ಎರಡು ತಿಂಗಳ ಹಿಂದೆ ಸಭೆ ನಡೆಸಿತ್ತ. ಇದಕ್ಕೆ ನಾವು ವಿರೋಧ ಹೊರಹಾಕಿದ್ದೆವು. ಈಗಾಗಲೇ ಸಿನಿಮಾ ನಿರ್ಮಾಪಕರು, ನಿರ್ದೇಶಕರು ಸಂಕಷ್ಟದಲ್ಲಿದ್ದಾರೆ. ನಿನ್ನೆ ಕೂಡ ನಾವು ಸಿಎಂ ಭೇಟಿ ಮಾಡಿದ್ದೇವೆ. 637 ಥಿಯೇಟರ್​ಗಳ ಪೈಕಿ 130 ಥಿಯೇಟರ್​ಗಳು ಮುಚ್ಚುವ ಹಂತಕ್ಕೆ ಬಂದಿದೆ. ಜನ ಥಿಯೇಟರ್​ನತ್ತ ಬರುತ್ತಿಲ್ಲ. ನಾವು ಕಾರ್ಮಿಕ ಸಚಿವರನ್ನು ಭೇಟಿ‌ ಮಾಡಿ ವಾಸ್ತವಿಕ ವಿಚಾರವನ್ನು ತಿಳಿಸಿದ್ದೇವೆ. ಸಿಎಂ ಹಾಗೂ ಕಾರ್ಮಿಕ ಸಚಿವರಿಗೆ ನಾವು ಮನವಿಯನ್ನು ನೀಡಿದ್ದೇವೆ’ ಎಂದ ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಿನಿಮಾ, ಒಟಿಟಿ ಸಬ್​ಸ್ಕ್ರಿಪ್ಷನ್​ಗೆ ಸೆಸ್: ರಾಜ್ಯಕ್ಕಿದೆಯೇ ಅಧಿಕಾರ? ತಜ್ಞರು ಹೇಳಿದ್ದೇನು ನೋಡಿ

‘ಮಸೂದೆಗೆ ಯಾರು ವಿರೋಧ ವ್ಯಕ್ತಪಡಿಸದ ಕಾರಣ, ಮಂಡನೆ ಆಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ಆದರೆ ನಮ್ಮನ್ನು ಕೇಳದೆ, ಏಕಾಏಕಿ ಜಾರಿ‌ ಮಾಡಿರುವುದು ಸರಿಯಲ್ಲ. ಕನ್ನಡ ಭಾಷೆ, ನೆಲ-ಜಲದ ಉಳಿವಿಗೆ ಕನ್ನಡ ಚಿತ್ರರಂಗ ಬಹಳ‌ ಮುಖ್ಯ ಪಾತ್ರ ವಹಿಸುತ್ತದೆ. ಕಾರ್ಮಿಕರ ಕಲ್ಯಾಣಕ್ಕೆ ಸೆಸ್ ಹಣವೇ ಬೇಕಿಲ್ಲ. ಬೇರೆ ಕಾರ್ಯಕ್ರಮಗಳನ್ನು ರೂಪಿಸಿ’ ಎಂದು ಎನ್​.ಎಂ. ಸುರೇಶ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.