AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ, ಒಟಿಟಿ ಸಬ್​ಸ್ಕ್ರಿಪ್ಷನ್​ಗೆ ಸೆಸ್: ರಾಜ್ಯಕ್ಕಿದೆಯೇ ಅಧಿಕಾರ? ತಜ್ಞರು ಹೇಳಿದ್ದೇನು ನೋಡಿ

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಅನ್ನು ಇತ್ತೀಚೆಗೆ ಹೆಚ್ಚಿಸಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಸಿನಿಮಾ, ಒಟಿಟಿ ಸಬ್​ಸ್ಕ್ರಿಪ್ಷನ್​​ಗೆ ಶೇ 2ರಷ್ಟು ಸೆಸ್ ವಿಧಿಸುವ ಹೊಸ ಮಸೂದೆಗೆ ವಿಧಾನಸಭೆಯಲ್ಲಿ ಅನುಮೋದನೆ ಪಡೆದಿದೆ. ಆದರೆ, ಮನರಂಜನೆಗೆ ಈಗಾಗಲೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್​​ಟಿ) ವಿಧಿಸಲಾಗುತ್ತಿದೆ. ಹೀಗಿರುವಾಗ ರಾಜ್ಯ ಸರ್ಕಾರಕ್ಕೆ ಮತ್ತೆ ತೆರಿಗೆ ವಿಧಿಸಲು ಅವಕಾಶ ಇದೆಯೇ? ಈ ಬಗ್ಗೆ ತಜ್ಞರು ಹೇಳಿದ್ದೇನು ಎಂಬುದನ್ನು ತಿಳಿಯಲು ಮುಂದೆ ಓದಿ.

ಸಿನಿಮಾ, ಒಟಿಟಿ ಸಬ್​ಸ್ಕ್ರಿಪ್ಷನ್​ಗೆ ಸೆಸ್: ರಾಜ್ಯಕ್ಕಿದೆಯೇ ಅಧಿಕಾರ? ತಜ್ಞರು ಹೇಳಿದ್ದೇನು ನೋಡಿ
ಸಿನಿಮಾ, ಒಟಿಟಿ ಸಬ್​ಸ್ಕ್ರಿಪ್ಷನ್​ಗೆ ಸೆಸ್: ರಾಜ್ಯಕ್ಕಿದೆಯೇ ಅಧಿಕಾರ?
Ganapathi Sharma
|

Updated on:Jul 27, 2024 | 1:24 PM

Share

ಬೆಂಗಳೂರು, ಜುಲೈ 27: ಸಿನಿಮಾ, ಒಟಿಟಿ ಸಬ್​ಸ್ಕ್ರಿಪ್ಷನ್​​ಗೆ ಶೇ 2ರಷ್ಟು ಸೆಸ್ ವಿಧಿಸುವ ‘ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಮಸೂದೆ 2024’ಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ವಿಧಾನಸಭೆಯಲ್ಲಿ ಅನುಮೋದನೆ ಪಡೆದಿದೆ. ಇದರ ಬೆನ್ನಲ್ಲೇ, ಮಲ್ಟಿಪ್ಲೆಕ್ಸ್​​ಗಳಲ್ಲಿ ಸಿನಿಮಾ ಟಿಕೆಟ್, ಒಟಿಟಿ ಸಬ್​ಸ್ಕ್ರಿಪ್ಷನ್​ಗೆ ತೆರಿಗೆ ಪಾವತಿಸಬೇಕಾದ ಅನಿವಾರ್ಯತೆ ಜನರಿಗೆ ಎದುರಾಗಲಿದೆ.

ಗ್ಯಾರಂಟಿ ಯೋಜನೆಗಳಿಗೆ ದುಡ್ಡುಹೊಂದಿಸಲು ಕಾಂಗ್ರೆಸ್ ಸರ್ಕಾರ ತೆರಿಗೆ ವಿಧಿಸುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ಇತ್ತೀಚೆಗಷ್ಟೇ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರ ಹೆಚ್ಚಿಸಿತ್ತು. ಆದರೆ, ಇದೀಗ ಮನರಂಜನೆಗೂ ತೆರಿಗೆ ವಿಧಿಸಿದೆ. ಸರಕು ಮತ್ತು ಸೇವಾ ತೆರಿಗೆಯಡಿ (ಜಿಎಸ್​ಟಿ) ಈಗಾಗಲೇ ಮನರಂಜನೆ ತೆರಿಗೆ ವಿಧಿಸಲಾಗುತ್ತಿರುವುದರಿಂದ ಇದೀಗ ಸಿನಿಮಾ ಟಿಕೆಟ್, ಒಟಿಟಿ ಸಬ್​ಸ್ಕ್ರಿಪ್ಷನ್​ಗೆ ಸೆಸ್ ವಿಧಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆಯೇ? ಈ ಪ್ರಶ್ನೆ ಮೂಡುವುದು ಸಹಜ. ಈ ಬಗ್ಗೆ ಕಾನೂನು ತಜ್ಞರು ಉತ್ತರ ನೀಡಿದ್ದಾರೆ.

ಸಿನಿಮಾ ಟಿಕೆಟ್, ಒಟಿಟಿ ಸಬ್​ಸ್ಕ್ರಿಪ್ಷನ್ ಸೆಸ್​ ಅನ್ನು ಕಂಪನಿಗಳು ಪ್ರತಿ ತಿಂಗಳ 9ನೇ ತಾರೀಖಿನೊಳಗೆ ಪಾವತಿಸಬೇಕಾಗುತ್ತದೆ. ಸಂಗ್ರಹಿಸಿದ ನಿಧಿಯು ರಾಜ್ಯದ ಸಿನಿ ಮತ್ತು ಸಾಂಸ್ಕೃತಿಕ ಕಲಾವಿದರ ಕಲ್ಯಾಣವನ್ನು ಬೆಂಬಲಿಸುವ ಉದ್ದೇಶವನ್ನು ಹೊಂದಿದೆ ಎಂದು ಮಸೂದೆ ಉಲ್ಲೇಖಿಸಿದೆ.

ಒಟಿಟಿಗೆ ಸೆಸ್ ವಿಧಿಸಲು ರಾಜ್ಯಕ್ಕಿದೆಯೇ ಅಧಿಕಾರ?

ಸಿನಿಮಾ ಥಿಯೇಟರ್​​ಗಳ ಮೇಲೆ ಸೆಸ್ ವಿಧಿಸುವುದು ರಾಜ್ಯದ ವಿಶೇಷಾಧಿಕಾರಕ್ಕೆ ಒಳಪಡುತ್ತದೆಯಾದರೂ, ರಾಷ್ಟ್ರವ್ಯಾಪಿ ವ್ಯಾಪ್ತಿಯನ್ನು ಹೊಂದಿರುವ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ಟಿವಿ ಚಾನೆಲ್‌ಗಳಿಂದ ಸೆಸ್ ಸಂಗ್ರಹಿಸುವ ಕಾರ್ಯವಿಧಾನವು ಅಸ್ಪಷ್ಟವಾಗಿದೆ. ಈ ಬೆಳವಣಿಗೆಯು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದು ನ್ಯಾಯವ್ಯಾಪ್ತಿಯ ವಿಷಯದಲ್ಲಿ ಪ್ರಾದೇಶಿಕ ಅತಿಕ್ರಮಣದ ಉದಾಹರಣೆಯೇ? ಹೆಚ್ಚುವರಿಯಾಗಿ, ಟಿವಿ ಪ್ರಸಾರವು ಒಕ್ಕೂಟ ವ್ಯವಸ್ಥೆಯ ವಿಷಯವಾಗಿರುವುದರಿಂದ, ಇದು ರಾಜ್ಯದ ವ್ಯಾಪ್ತಿಗೆ ಬರುತ್ತದೆಯೇ? ಕರ್ನಾಟಕ ಸರ್ಕಾರದ ಸೆಸ್ ವಿಧಿಸುವ ಈ ಉಪಕ್ರಮವನ್ನು ಹೇಗೆ ನೋಡಬೇಕು ಎಂಬ ಬಗ್ಗೆ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾದ ಅಧ್ಯಕ್ಷ ಕಮಲ್ ಜಿಯಾನ್‌ಚಂದಾನಿ, ಇವೈ ಇಂಡಿಯಾದ ಪರೋಕ್ಷ ತೆರಿಗೆಗಳ ಪಾಲುದಾರ ದಿವ್ಯೇಶ್ ಲ್ಯಾಪ್ಸಿವಾಲ ‘ಸಿಎನ್​​ಬಿಸಿ-ಟಿವಿ18’ಗೆ ನೀಡಿದ ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ.

‘ಸಿನಿಮಾ ಟಿಕೆಟ್ ಮೇಲೆ ತೆರಿಗೆ ದುರದೃಷ್ಟಕರ’

ಸಿನಿಮಾ ಟಿಕೆಟ್‌ಗಳ ಮೇಲೆ ಹೆಚ್ಚುವರಿ ತೆರಿಗೆ ಅಥವಾ ಸೆಸ್ ವಿಧಿಸುವ ಪರಿಕಲ್ಪನೆ ದುರದೃಷ್ಟಕರವಾದದ್ದಾಗಿದೆ. ದೇಶದ ಎಲ್ಲಾ ಮಲ್ಟಿಪ್ಲೆಕ್ಸ್‌ಗಳಿಗೆ ಅತಿ ದೊಡ್ಡ ಅಪೆಕ್ಸ್ ಬಾಡಿಯಾಗಿರುವ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾದಿಂದ ನಮಗೆ ಈ ಕುರಿತು ಸಲಹೆ ನೀಡಲಾಗಿಲ್ಲ. ಸರ್ಕಾರವನ್ನು ಭೇಟಿ ಮಾಡಲು ಅಥವಾ ನಮ್ಮ ಅಭಿಪ್ರಾಯವನ್ನು ಮಂಡಿಸಲು ನಮಗೆ ಅವಕಾಶ ನೀಡಲಿಲ್ಲ. ಮಾಧ್ಯಮಗಳಲ್ಲಿ ವರದಿಯಾದ ನಂತರ, ನಾವು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ನಮ್ಮ ಅಭಿಪ್ರಾಯವನ್ನು ಕಳುಹಿಸಿದ್ದೇವೆ. ನಾವು ಈ ವಿಷಯವನ್ನು ವಿವರವಾಗಿ ಚರ್ಚಿಸಲು ಅವಕಾಶ ದೊರೆಯಬಹುದು ಎಂದು ಭಾವಿಸುತ್ತೇವೆ ಎಂದು ಕಮಲ್ ಜಿಯಾನ್‌ಚಂದಾನಿ ಹೇಳಿದ್ದಾರೆ.

ಕರ್ನಾಟಕವೇ ಮೊದಲು

ದೇಶದ ಇತರ ರಾಜ್ಯಗಳ ಪೈಕಿ ಕರ್ನಾಟಕ ಮಾತ್ರ ಈ ಸೆಸ್ ಹೊರತಂದಿದೆ. ಜಿಎಸ್‌ಟಿಗೆ ಹೆಚ್ಚುವರಿಯಾಗಿ, ಸ್ಥಳೀಯ ಸಂಸ್ಥೆ ಮನರಂಜನಾ ತೆರಿಗೆ ಎಂದು ಕರೆಯಲ್ಪಡುವ ವಿಭಿನ್ನ ತೆರಿಗೆಯನ್ನು ಕೇರಳ ಮತ್ತು ತಮಿಳುನಾಡು ಜಾರಿಗೆ ತಂದಿವೆ. ಆದರೆ ಈ ಎರಡು ರಾಜ್ಯಗಳನ್ನು ಹೊರತುಪಡಿಸಿದರೆ ಇಡೀ ದೇಶದಲ್ಲಿ ಜಿಎಸ್‌ಟಿ ಹೊರತುಪಡಿಸಿ ಯಾವುದೇ ಹೆಚ್ಚುವರಿ ತೆರಿಗೆ, ಹೆಚ್ಚುವರಿ ಸೆಸ್ ಹೊಂದಿರುವ ರಾಜ್ಯವಿಲ್ಲ ಎಂದು ಕಮಲ್ ಜಿಯಾನ್‌ಚಂದಾನಿ ತಿಳಿಸಿದ್ದಾರೆ.

ಜಿಎಸ್​​ಟಿ ಇರುವಾಗ ರಾಜ್ಯಕ್ಕಿದೆಯೇ ಸೆಸ್ ವಿಧಿಸುವ ಅಧಿಕಾರ?

ಸ್ಥಳೀಯ ಮನರಂಜನಾ ತೆರಿಗೆಯನ್ನು ವಿಧಿಸುವ ಅವಕಾಶ ರಾಜ್ಯ ಸರ್ಕಾರಗಳಿದೆ ಇದೆ. ಆದರೆ ಅದು ತೀರಾ ಸ್ಥಳೀಯ ಮಟ್ಟದ್ದಾಗಿರುತ್ತವೆ. ಜಿಎಸ್‌ಟಿಯನ್ನು ಪರಿಚಯಿಸಿದಾಗ, ಕೇಂದ್ರ ಮತ್ತು ರಾಜ್ಯಗಳ ನಡುವೆ, ರಾಜ್ಯಗಳಿಗೆ ಸಂಬಂಧಿಸಿದ ಯಾವ ತೆರಿಗೆಗಳು ಜಿಎಸ್‌ಟಿಯಲ್ಲಿ ವಿಲೀನಗೊಳ್ಳುತ್ತವೆ ಎಂಬುದರ ಕುರಿತು ಸಾಕಷ್ಟು ಮಾತುಕತೆ ನಡೆದಿತ್ತು. ರಾಜ್ಯ ಮಟ್ಟದ ಮನರಂಜನಾ ತೆರಿಗೆಯನ್ನು ವಿಲೀನಗೊಳಿಸಬೇಕೆಂದು ಕೇಂದ್ರವು ಮಾತುಕತೆ ನಡೆಸಿ ಮನವರಿಕೆ ಮಾಡಿಕೊಟ್ಟಿತು. ನಾವು ಹಿಂದೆ ಚಲನಚಿತ್ರ ಟಿಕೆಟ್‌ಗಳಿಗೆ ಪಾವತಿಸುತ್ತಿದ್ದ ಮನರಂಜನಾ ತೆರಿಗೆಯನ್ನು ಜಿಎಸ್‌ಟಿಯೊಂದಿಗೆ ವಿಲೀನಗೊಳಿಸಲಾಯಿತು. ಹೀಗಾಗಿ ಈಗ ಮತ್ತೆ ರಾಜ್ಯದಲ್ಲಿ ಮನರಂಜನಾ ತೆರಿಗೆ ವಿಧಿಸಬಹುದೇ ಎಂಬುದು ಪ್ರಶ್ನೆಯಾಗಿ ಉಳಿದಿದೆ ಇವೈ ಇಂಡಿಯಾದ ಪರೋಕ್ಷ ತೆರಿಗೆಗಳ ಪಾಲುದಾರ ದಿವ್ಯೇಶ್ ಲ್ಯಾಪ್ಸಿವಾಲ ತಿಳಿಸಿದ್ದಾರೆ.

ಇದೇ ಮೊದಲಲ್ಲ

ಈ ರೀತಿ ಸೆಸ್ ವಿಧಿಸುತ್ತಿರುವುದು ಇದೇ ಮೊದಲಲ್ಲ. 2013 ರಲ್ಲಿ ಕೇರಳ ರಾಜ್ಯವು ಸೆಸ್ ವಿಧಿಸಿತ್ತು. ಆ ಸಮಯದಲ್ಲಿ, ಕೇರಳ ಹೈಕೋರ್ಟ್ ರಾಜ್ಯದ ಕ್ರಮವನ್ನು ಎತ್ತಿಹಿಡಿದಿತ್ತು. ಆದರೆ ಅದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳು ಮತ್ತು ಅರ್ಜಿಗಳು ಇನ್ನೂ ಇತ್ಯರ್ಥವಾಗಿಲ್ಲ ಎಂಬುದು ಗಮನಾರ್ಹ.

ಇದನ್ನೂ ಓದಿ: ಸರ್ಕಾರದಿಂದ ಹೊಸ ಸಿನಿಮಾ ಮಸೂದೆ, ಹೆಚ್ಚಾಗಲಿದೆ ಸಿನಿಮಾ ಟಿಕೆಟ್ ಬೆಲೆ

ಸದ್ಯ ದೇಶದ ತೆರಿಗೆ ವ್ಯವಸ್ಥೆಯಲ್ಲಿ ಜಿಎಸ್‌ಟಿ ಕಾನೂನುಗಳು ದೊಡ್ಡ ಪಾತ್ರವನ್ನು ವಹಿಸುತ್ತವೆ. ಈಗಾಗಲೇ ಜಿಎಸ್‌ಟಿ ರೂಪದಲ್ಲಿ ಮನರಂಜನಾ ತೆರಿಗೆ ಇದೆ. ಆಗ ರಾಜ್ಯವು ಮತ್ತೆ ತೆರಿಗೆ ವಿಧಿಸಲು ಅರ್ಹವಾಗಿರುವುದಿಲ್ಲ. ಹಾಗಾಗಿ ರಾಜ್ಯಕ್ಕೆ ಮನರಂಜನೆ ತೆರಿಗೆ ವಿಧಿಸಲು ಶಾಸಕಾಂಗ ಸಾಮರ್ಥ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಇನ್ನಷ್ಟು ಸೂಕ್ಷ್ಮವಾಗಿ ಅವಲೋಕಿಸಬೇಕಾದ ಅಗತ್ಯವಿದೆ ಎಂದು ಸಾಯಿಕೃಷ್ಣ ಆ್ಯಂಡ್ ಅಸೋಸಿಯೇಟ್ಸ್​​​ನ ಪಾರ್ಟನರ್ ಸ್ನೇಹಾ ಜೈನ್ ಅಭಿಪ್ರಾಯಪಟ್ಟಿದ್ದಾರೆ.

ಸಿನಿಮಾ ಸಂಬಂಧಿತ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Sat, 27 July 24

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ