ಇಂದ್ರಜಿತ್​ ಲಂಕೇಶ್​ ಪುತ್ರನ ಮೊದಲ ಸಿನಿಮಾ ಹೆಸರು ‘ಗೌರಿ’; ಮುಹೂರ್ತಕ್ಕೆ ಸಿದ್ದರಾಮಯ್ಯ ಅತಿಥಿ

‘ಗೌರಿ’ ಸಿನಿಮಾ ಸಲುವಾಗಿ ಸಮರ್ಜಿತ್​ ಲಂಕೇಶ್​ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಆಗಸ್ಟ್​ 31ರಂದು ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ‘ಗೌರಿ’ ಎಂದು ಶೀರ್ಷಿಕೆ ಇಟ್ಟಿರುವುದು ಯಾಕೆ ಎಂಬ ಪ್ರಶ್ನೆಗೆ ಮುಹೂರ್ತದ ವೇಳೆ ಇಂದ್ರಜಿತ್​ ಲಂಕೇಶ್​ ಅವರಿಂದ ಉತ್ತರ ಸಿಗುವ ನಿರೀಕ್ಷೆ ಇದೆ.

ಇಂದ್ರಜಿತ್​ ಲಂಕೇಶ್​ ಪುತ್ರನ ಮೊದಲ ಸಿನಿಮಾ ಹೆಸರು ‘ಗೌರಿ’; ಮುಹೂರ್ತಕ್ಕೆ ಸಿದ್ದರಾಮಯ್ಯ ಅತಿಥಿ
ಸಮರ್ಜಿತ್​ ಲಂಕೇಶ್​. ಸಾನ್ಯಾ ಅಯ್ಯರ್​
Edited By:

Updated on: Aug 31, 2023 | 11:53 AM

ಪಿ. ಲಂಕೇಶ್​ ಅವರ ಕುಟುಂಬ ಪತ್ರಿಕೋದ್ಯಮ ಮತ್ತು ಸಿನಿಮಾ ರಂಗದಲ್ಲಿ ತೊಡಗಿಕೊಂಡಿದೆ. ಇಂದ್ರಜಿತ್​ ಲಂಕೇಶ್​ (Indrajit Lankesh) ಅವರು ನಿರ್ದೇಶಕನಾಗಿ ಹೆಸರು ಮಾಡಿದ್ದಾರೆ. ಈಗ ಅವರ ಪುತ್ರ ಸಮರ್ಜಿತ್​ ಲಂಕೇಶ್​ (Samarjit Lankesh) ಅವರು ಹೀರೋ ಆಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಮೊದಲ ಸಿನಿಮಾ ಸೆಟ್ಟೇರಲು ದಿನಾಂಕ ನಿಗದಿ ಆಗಿದೆ. ವಿಶೇಷ ಏನೆಂದರೆ, ಈ ಸಿನಿಮಾಗೆ ‘ಗೌರಿ’ ಎಂದು ಶೀರ್ಷಿಕೆ ಇಡಲಾಗಿದೆ. ಅಲ್ಲದೇ, ಇದು ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಸಿನಿಮಾ ಎಂಬುದು ಗಮನಿಸಬೇಕಾದ ಅಂಶ. ಈ ಎಲ್ಲ ಕಾರಣಗಳಿಂದಾಗಿ ‘ಗೌರಿ’ ಸಿನಿಮಾ (Gauri Movie) ಮೇಲೆ ಕೌತುಕ ನಿರ್ಮಾಣ ಆಗಿದೆ. ಈ ಸಿನಿಮಾದ ಮುಹೂರ್ತ ಸಮಾರಂಭ ಆಗಸ್ಟ್ 31ರಂದು ನಡೆಯಲಿದೆ. ಆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

‘ಗೌರಿ’ ಸಿನಿಮಾ ಸಲುವಾಗಿ ಸಮರ್ಜಿತ್​ ಲಂಕೇಶ್​ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಸಿಕ್ಸ್​ ಪ್ಯಾಕ್​ ಆ್ಯಬ್ಸ್​ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ. ಅವರ ಫೋಟೋಗಳು ಈಗಾಗಲೇ ಹೈಲೈಟ್​ ಆಗಿವೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವ ಕುತೂಹಲ ನಿರ್ಮಾಣ ಆಗಿದೆ. ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಆಗಸ್ಟ್​ 31ರಂದು ಬೆಳಗ್ಗೆ 10 ಗಂಟೆಗೆ ‘ಗೌರಿ’ ಸಿನಿಮಾದ ಮುಹೂರ್ತ ನೆರವೇರಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಇದನ್ನೂ ಓದಿ: ‘ಬಡವರ, ಸಾಮಾನ್ಯರ ಪರವಾಗಿ ನನ್ನ ಹೋರಾಟ ಸದಾ ಇರುತ್ತದೆ’; ಇಂದ್ರಜಿತ್​ ಲಂಕೇಶ್​

ಈ ಸಿನಿಮಾಗಾಗಿ ಸಮರ್ಜಿತ್​ ಲಂಕೇಶ್​ ಅವರು ಡ್ಯಾನ್ಸ್​, ಫೈಟಿಂಗ್​, ಕುದುರೆ ಸವಾರಿ ಸೇರಿದಂತೆ ಅನೇಕ ಕಲೆಗಳನ್ನು ಕಲಿತು ಬಂದಿದ್ದಾರೆ. ಜಾಹೀರಾತು ಕ್ಷೇತ್ರದಲ್ಲಿ ಅವರಿಗೆ ಅನುಭವ ಇದೆ. ‘ಗೌರಿ’ ಚಿತ್ರದಲ್ಲಿ ಸಮರ್ಜಿತ್​ ಲಂಕೇಶ್​ಗೆ ಜೋಡಿಯಾಗಿ ‘ಬಿಗ್​ ಬಾಸ್​’ ಖ್ಯಾತಿಯ ಸಾನ್ಯಾ ಅಯ್ಯರ್​ ಅವರು ನಟಿಸಲಿದ್ದಾರೆ. ಆ ಕಾರಣದಿಂದಲೂ ‘ಗೌರಿ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಇವರಿಬ್ಬರ ಫೋಟೋಶೂಟ್​ ಕೂಡ ಮಾಡಿಸಲಾಗಿದೆ. ಅಷ್ಟಕ್ಕೂ ಈ ಸಿನಿಮಾಗೆ ‘ಗೌರಿ’ ಎಂದು ಶೀರ್ಷಿಕೆ ಇಟ್ಟಿರುವುದು ಯಾಕೆ? ಈ ಪ್ರಶ್ನೆಗೆ ಮುಹೂರ್ತದ ಸಂದರ್ಭದಲ್ಲಿ ಉತ್ತರ ಸಿಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಪುನೀತ್​ ಜನ್ಮದಿನವನ್ನು ‘ಅಪ್ಪು ದಿನಾಚರಣೆ’ಯನ್ನಾಗಿ ಆಚರಿಸಿ; ಇಂದ್ರಜಿತ್​ ಲಂಕೇಶ್​

‘ತುಂಟಾಟ’, ‘ಲಂಕೇಶ್​ ಪತ್ರಿಕೆ’, ‘ಮೊನಾಲಿಸಾ’, ‘ಐಶ್ವರ್ಯಾ’, ‘ಲವ್​ ಯೂ ಆಲಿಯಾ’, ‘ಶಕೀಲಾ’ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಇಂದ್ರಜಿತ್​ ಲಂಕೇಶ್​ ಅವರು ಈಗ ಮತ್ತೆ ಡೈರೆಕ್ಟರ್​ ಕ್ಯಾಪ್​ ತೊಡುತ್ತಿದ್ದಾರೆ. ಮಗನ ಚೊಚ್ಚಲ ಸಿನಿಮಾಗೆ ಅವರು ನಿರ್ದೇಶನ ಮಾಡಲಿದ್ದಾರೆ. ಜೆಸ್ಸಿ ಗಿಫ್ಟ್​ ಮತ್ತು ಚಂದನ್​ ಶೆಟ್ಟಿ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಎ.ಜೆ. ಶೆಟ್ಟಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನದಲ್ಲಿ ಈ ಸಿನಿಮಾ ಮೂಡಿಬರಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:00 pm, Tue, 29 August 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us