ಇಂದ್ರಜಿತ್​ ಲಂಕೇಶ್​ ಪುತ್ರನ ಮೊದಲ ಸಿನಿಮಾ ಹೆಸರು ‘ಗೌರಿ’; ಮುಹೂರ್ತಕ್ಕೆ ಸಿದ್ದರಾಮಯ್ಯ ಅತಿಥಿ

| Updated By: ರಾಜೇಶ್ ದುಗ್ಗುಮನೆ

Updated on: Aug 31, 2023 | 11:53 AM

‘ಗೌರಿ’ ಸಿನಿಮಾ ಸಲುವಾಗಿ ಸಮರ್ಜಿತ್​ ಲಂಕೇಶ್​ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಆಗಸ್ಟ್​ 31ರಂದು ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ‘ಗೌರಿ’ ಎಂದು ಶೀರ್ಷಿಕೆ ಇಟ್ಟಿರುವುದು ಯಾಕೆ ಎಂಬ ಪ್ರಶ್ನೆಗೆ ಮುಹೂರ್ತದ ವೇಳೆ ಇಂದ್ರಜಿತ್​ ಲಂಕೇಶ್​ ಅವರಿಂದ ಉತ್ತರ ಸಿಗುವ ನಿರೀಕ್ಷೆ ಇದೆ.

ಇಂದ್ರಜಿತ್​ ಲಂಕೇಶ್​ ಪುತ್ರನ ಮೊದಲ ಸಿನಿಮಾ ಹೆಸರು ‘ಗೌರಿ’; ಮುಹೂರ್ತಕ್ಕೆ ಸಿದ್ದರಾಮಯ್ಯ ಅತಿಥಿ
ಸಮರ್ಜಿತ್​ ಲಂಕೇಶ್​. ಸಾನ್ಯಾ ಅಯ್ಯರ್​
Follow us on

ಪಿ. ಲಂಕೇಶ್​ ಅವರ ಕುಟುಂಬ ಪತ್ರಿಕೋದ್ಯಮ ಮತ್ತು ಸಿನಿಮಾ ರಂಗದಲ್ಲಿ ತೊಡಗಿಕೊಂಡಿದೆ. ಇಂದ್ರಜಿತ್​ ಲಂಕೇಶ್​ (Indrajit Lankesh) ಅವರು ನಿರ್ದೇಶಕನಾಗಿ ಹೆಸರು ಮಾಡಿದ್ದಾರೆ. ಈಗ ಅವರ ಪುತ್ರ ಸಮರ್ಜಿತ್​ ಲಂಕೇಶ್​ (Samarjit Lankesh) ಅವರು ಹೀರೋ ಆಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಮೊದಲ ಸಿನಿಮಾ ಸೆಟ್ಟೇರಲು ದಿನಾಂಕ ನಿಗದಿ ಆಗಿದೆ. ವಿಶೇಷ ಏನೆಂದರೆ, ಈ ಸಿನಿಮಾಗೆ ‘ಗೌರಿ’ ಎಂದು ಶೀರ್ಷಿಕೆ ಇಡಲಾಗಿದೆ. ಅಲ್ಲದೇ, ಇದು ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಸಿನಿಮಾ ಎಂಬುದು ಗಮನಿಸಬೇಕಾದ ಅಂಶ. ಈ ಎಲ್ಲ ಕಾರಣಗಳಿಂದಾಗಿ ‘ಗೌರಿ’ ಸಿನಿಮಾ (Gauri Movie) ಮೇಲೆ ಕೌತುಕ ನಿರ್ಮಾಣ ಆಗಿದೆ. ಈ ಸಿನಿಮಾದ ಮುಹೂರ್ತ ಸಮಾರಂಭ ಆಗಸ್ಟ್ 31ರಂದು ನಡೆಯಲಿದೆ. ಆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

‘ಗೌರಿ’ ಸಿನಿಮಾ ಸಲುವಾಗಿ ಸಮರ್ಜಿತ್​ ಲಂಕೇಶ್​ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಸಿಕ್ಸ್​ ಪ್ಯಾಕ್​ ಆ್ಯಬ್ಸ್​ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ. ಅವರ ಫೋಟೋಗಳು ಈಗಾಗಲೇ ಹೈಲೈಟ್​ ಆಗಿವೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವ ಕುತೂಹಲ ನಿರ್ಮಾಣ ಆಗಿದೆ. ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಆಗಸ್ಟ್​ 31ರಂದು ಬೆಳಗ್ಗೆ 10 ಗಂಟೆಗೆ ‘ಗೌರಿ’ ಸಿನಿಮಾದ ಮುಹೂರ್ತ ನೆರವೇರಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಇದನ್ನೂ ಓದಿ: ‘ಬಡವರ, ಸಾಮಾನ್ಯರ ಪರವಾಗಿ ನನ್ನ ಹೋರಾಟ ಸದಾ ಇರುತ್ತದೆ’; ಇಂದ್ರಜಿತ್​ ಲಂಕೇಶ್​

ಈ ಸಿನಿಮಾಗಾಗಿ ಸಮರ್ಜಿತ್​ ಲಂಕೇಶ್​ ಅವರು ಡ್ಯಾನ್ಸ್​, ಫೈಟಿಂಗ್​, ಕುದುರೆ ಸವಾರಿ ಸೇರಿದಂತೆ ಅನೇಕ ಕಲೆಗಳನ್ನು ಕಲಿತು ಬಂದಿದ್ದಾರೆ. ಜಾಹೀರಾತು ಕ್ಷೇತ್ರದಲ್ಲಿ ಅವರಿಗೆ ಅನುಭವ ಇದೆ. ‘ಗೌರಿ’ ಚಿತ್ರದಲ್ಲಿ ಸಮರ್ಜಿತ್​ ಲಂಕೇಶ್​ಗೆ ಜೋಡಿಯಾಗಿ ‘ಬಿಗ್​ ಬಾಸ್​’ ಖ್ಯಾತಿಯ ಸಾನ್ಯಾ ಅಯ್ಯರ್​ ಅವರು ನಟಿಸಲಿದ್ದಾರೆ. ಆ ಕಾರಣದಿಂದಲೂ ‘ಗೌರಿ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಇವರಿಬ್ಬರ ಫೋಟೋಶೂಟ್​ ಕೂಡ ಮಾಡಿಸಲಾಗಿದೆ. ಅಷ್ಟಕ್ಕೂ ಈ ಸಿನಿಮಾಗೆ ‘ಗೌರಿ’ ಎಂದು ಶೀರ್ಷಿಕೆ ಇಟ್ಟಿರುವುದು ಯಾಕೆ? ಈ ಪ್ರಶ್ನೆಗೆ ಮುಹೂರ್ತದ ಸಂದರ್ಭದಲ್ಲಿ ಉತ್ತರ ಸಿಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಪುನೀತ್​ ಜನ್ಮದಿನವನ್ನು ‘ಅಪ್ಪು ದಿನಾಚರಣೆ’ಯನ್ನಾಗಿ ಆಚರಿಸಿ; ಇಂದ್ರಜಿತ್​ ಲಂಕೇಶ್​

‘ತುಂಟಾಟ’, ‘ಲಂಕೇಶ್​ ಪತ್ರಿಕೆ’, ‘ಮೊನಾಲಿಸಾ’, ‘ಐಶ್ವರ್ಯಾ’, ‘ಲವ್​ ಯೂ ಆಲಿಯಾ’, ‘ಶಕೀಲಾ’ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಇಂದ್ರಜಿತ್​ ಲಂಕೇಶ್​ ಅವರು ಈಗ ಮತ್ತೆ ಡೈರೆಕ್ಟರ್​ ಕ್ಯಾಪ್​ ತೊಡುತ್ತಿದ್ದಾರೆ. ಮಗನ ಚೊಚ್ಚಲ ಸಿನಿಮಾಗೆ ಅವರು ನಿರ್ದೇಶನ ಮಾಡಲಿದ್ದಾರೆ. ಜೆಸ್ಸಿ ಗಿಫ್ಟ್​ ಮತ್ತು ಚಂದನ್​ ಶೆಟ್ಟಿ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಎ.ಜೆ. ಶೆಟ್ಟಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನದಲ್ಲಿ ಈ ಸಿನಿಮಾ ಮೂಡಿಬರಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:00 pm, Tue, 29 August 23