ಯೋಗಿ ಕಿವಿಗೆ ಏಟು ಬಿದ್ದಾಗ ಪುನೀತ್​ ಏನು ಮಾಡಿದ್ರು? ‘ಹುಡುಗರು’ ಘಟನೆ ನೆನೆದ ರವಿ ವರ್ಮಾ

ಪುನೀತ್​ ರಾಜ್​ಕುಮಾರ್​ ನಟನೆಯ ‘ಹುಡುಗರು’ ಸಿನಿಮಾ 2011ರಲ್ಲಿ ರಿಲೀಸ್​ ಆಯ್ತು. ಆ ಚಿತ್ರದ ಶೂಟಿಂಗ್​ ವೇಳೆ ಕೆಲವು ಅಚ್ಚರಿಯ​ ಘಟನೆಗಳು ನಡೆದಿದ್ದವು.

ಯೋಗಿ ಕಿವಿಗೆ ಏಟು ಬಿದ್ದಾಗ ಪುನೀತ್​ ಏನು ಮಾಡಿದ್ರು? ‘ಹುಡುಗರು’ ಘಟನೆ ನೆನೆದ ರವಿ ವರ್ಮಾ
ಲೂಸ್​ ಮಾದ ಯೋಗಿ, ರವಿ ವರ್ಮಾ, ಪುನೀತ್​ ರಾಜ್​ಕುಮಾರ್​​
Follow us
| Updated By: ಮದನ್​ ಕುಮಾರ್​

Updated on: Mar 10, 2022 | 9:40 AM

ಫೈಟಿಂಗ್​ ವಿಚಾರದಲ್ಲಿ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರಿಗೆ ಸರಿಸಾಟಿ ಆಗಬಲ್ಲ ಮತ್ತೋರ್ವ ನಟ ಇಲ್ಲ ಎನ್ನುತ್ತಾರೆ ಅಭಿಮಾನಿಗಳು. ಸಾಹಸ ನಿರ್ದೇಶಕರು ಕೂಡ ಈ ಮಾತನ್ನು ಒಪ್ಪಿಕೊಳ್ಳುತ್ತಾರೆ. ಪುನೀತ್​ ರಾಜ್​ಕುಮಾರ್​ ಜೊತೆ 13 ಸಿನಿಮಾಗಳಲ್ಲಿ ಫೈಟ್​ ಮಾಸ್ಟರ್​ ಆಗಿ ಕೆಲಸ ಮಾಡಿದ್ದಾರೆ ರವಿ ವರ್ಮಾ. ಮಾ.17ರಂದು ಬಿಡುಗಡೆ ಆಗುತ್ತಿರುವ ‘ಜೇಮ್ಸ್​’ ಚಿತ್ರಕ್ಕೂ ಅವರೇ ಸಾಹಸ ನಿರ್ದೇಶನ ಮಾಡಿದ್ದಾರೆ. ಪುನೀತ್​ ಜೊತೆಗಿನ ಹಲವು ವರ್ಷಗಳ ಒಡನಾಟವನ್ನು ರವಿ ವರ್ಮಾ (Fight Master Ravi Varma) ಅವರೀಗ ಮೆಲುಕು ಹಾಕಿದ್ದಾರೆ. ಟಿವಿ9 ಡಿಜಿಟಲ್​ ನಡೆಸಿದ ಸಂದರ್ಶನದಲ್ಲಿ ಅವರು ಹಲವು ಸಂಗತಿಗಳನ್ನು ನೆನಪು ಮಾಡಿಕೊಂಡಿದ್ದಾರೆ. ‘ಹುಡುಗರು’ (Hudugaru Movie) ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಜೊತೆ ಲೂಸ್​ ಮಾದ ಯೋಗಿ, ಶ್ರೀನಗರ ಕಿಟ್ಟಿ ಮುಂತಾದವರು ನಟಿಸಿದ್ದರು. ಒಂದು ಆ್ಯಕ್ಷನ್​ ದೃಶ್ಯದಲ್ಲಿ ಯೋಗಿ ಕಿವಿಗೆ ಪೆಟ್ಟಾಗಿತ್ತು. ಆ ವೇಳೆ ಏನು ನಡೆಯಿತು ಎಂಬುದನ್ನು ರವಿ ವರ್ಮಾ ವಿವರಿಸಿದ್ದಾರೆ. ಸಹನಟರ ಬಗ್ಗೆ ಪುನೀತ್​ ತೋರುತ್ತಿದ್ದ ಕಾಳಜಿಗೆ ಆ ಘಟನೆ ಸೂಕ್ತ ಉದಾಹರಣೆ ಆಗಿದೆ. ‘ಅಣ್ಣಾವ್ರು ಬಂಗಾರದ ಮನುಷ್ಯ. ಅಪ್ಪು ಸರ್​ ಮುತ್ತಿನಂಥ ಮನುಷ್ಯ’ ಎಂದು ಅವರು ಬಣ್ಣಿಸಿದ್ದಾರೆ.

2011ರಲ್ಲಿ ‘ಹುಡುಗರು’ ಸಿನಿಮಾ ರಿಲೀಸ್​ ಆಯ್ತು. ಆ ಚಿತ್ರದ ಶೂಟಿಂಗ್​ ವೇಳೆ ಕೆಲವು ಅಚ್ಚರಿಯ​ ಘಟನೆಗಳು ನಡೆದಿದ್ದವು. ಚಿತ್ರದಲ್ಲಿ ಲೂಸ್​ ಮಾದ ಯೋಗಿ ಅವರ ಕಿವಿಗೆ ಏಟು ಬೀಳುವ ಒಂದು ದೃಶ್ಯ ಇದೆ. ಅದು ಆ ಸಿನಿಮಾದಲ್ಲಿನ ಪ್ರಮುಖ ದೃಶ್ಯಗಳಲ್ಲೊಂದು. ಆ ಬಗ್ಗೆ ರವಿ ವರ್ಮಾ ಮಾತನಾಡಿದ್ದಾರೆ. ‘ಲೂಸ್​ ಮಾದ ಅವರ ಕಿವಿಗೆ ಹೊಡೆಯುವ ದೃಶ್ಯಕ್ಕೆ ಅಂದಾಜು 10 ಬಂಬು ಒಡೆದಿದ್ದೇವೆ. ಅದು ಒಂದು ಎಮೋಷನಲ್​ ಸೀನ್​ ಆದ ಕಾರಣ ನೈಜವಾಗಿ ಮೂಡಿಬರಬೇಕು ಅಂತ ರಾಘಣ್ಣ ಹೇಳಿದ್ದರು. ಇಡೀ ಟೀಂ ಕಷ್ಟಪಟ್ಟು ಮಾಡಿದ ಸಿನಿಮಾ ಅದು. ಯೋಗಿ ಕಿವಿಗೆ ಏಟು ಬಿದ್ದಾಗ ಅಪ್ಪು ಅವರೇ ಬಂದು ಟಿಂಚರ್​ ಹಚ್ಚಿದ್ದರು. ಫೈಟ್​ ಮಾಸ್ಟರ್​ಗೆ ಇಂಥ ಹೀರೋ ಸಿಗಬೇಕು ಎಂಬ ಆಸೆ ಇರುತ್ತದೆ’ ಎಂದಿದ್ದಾರೆ ರವಿ ವರ್ಮಾ.

ರವಿ ವರ್ಮಾ ಸಾಹಸ ನಿರ್ದೇಶನ ಮಾಡಿದ್ದ ‘ಮಾಸ್ತಿ ಗುಡಿ’ ಸಿನಿಮಾದ ಶೂಟಿಂಗ್​ ವೇಳೆ ಅನಿಲ್​ ಮತ್ತು ಉದಯ್​ ದುರಾದೃಷ್ಟವಶಾತ್​ ನಿಧನರಾದರು. ಆ ಬಳಿಕ ಕನ್ನಡ ಚಿತ್ರರಂಗದಲ್ಲಿ ರವಿ ವರ್ಮಾ ಅವರಿಗೆ ಯಾರೂ ಕೆಲಸ ಕೊಡುತ್ತಿರಲಿಲ್ಲ. ಹಾಗಾಗಿ ಅವರು ತೆಲುಗು ಚಿತ್ರಗಳನ್ನು ಮಾಡುತ್ತಿದ್ದರು. ಆಗ ರವಿ ವರ್ಮಾ ಅವರನ್ನು ಮತ್ತೆ ಕರೆದು ಕೆಲಸ ಕೊಟ್ಟಿದ್ದೇ ಪುನೀತ್​ ರಾಜ್​ಕುಮಾರ್​. ಆ ಘಟನೆಯನ್ನು ಈಗಲೂ ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸುತ್ತಾರೆ ರವಿ ವರ್ಮಾ. ‘ಮಾಸ್ತಿ ಗುಡಿ ದುರಂತದ ಬಳಿಕ ನನ್ನ ಬಗ್ಗೆ ಜನರು ಏನೇನೋ ಮಾತನಾಡಿದರು. ಆ ಬಗ್ಗೆ ಮತ್ತೆ ಮಾತಾಡಲು ನಾನು ಇಷ್ಟಪಡಲ್ಲ. ಆ ಸಂದರ್ಭದಲ್ಲಿ ನಾನು ಮತ್ತೆ ಆ್ಯಕ್ಷನ್​ ಶುರು ಮಾಡಿದ್ದೇ ಅಪ್ಪು ಅವರ ‘ಅಂಜನಿ ಪುತ್ರ’ ಸಿನಿಮಾದಿಂದ. ಬನ್ನಿ ಮಾಸ್ಟರ್​ ಏನೂ ತಲೆ ಕೆಡಿಸಿಕೊಳ್ಳಬೇಡಿ ಅಂತ ಅವರು ನನಗೆ ಸಪೋರ್ಟ್​ ಮಾಡಿದ್ರು’ ಎಂದಿದ್ದಾರೆ ರವಿ ವರ್ಮಾ.

ಇದನ್ನೂ ಓದಿ:

ಪುನೀತ್​ ಫ್ಯಾನ್ಸ್​ ಕುತ್ತಿಗೆ ಮೇಲೆ ‘ಜೇಮ್ಸ್​’ ಟ್ಯಾಟೂ; ವೈರಲ್​ ಆಗ್ತಿದೆ ಅಭಿಮಾನದ ಫೋಟೋ

‘ಫ್ಯಾನ್ಸ್​ಗೆ ಸೆಲ್ಫಿ ಕೊಡಲು ಕಾರು ತಿರುಗಿಸಿಕೊಂಡು ವಾಪಸ್​ ಬಂದಿದ್ದರು ಪುನೀತ್​’: ಆ ಘಟನೆ ನೆನೆದ ಹರ್ಷ