ಹುಟ್ಟೂರಿನ ಜನರ ಕಷ್ಟಕ್ಕೆ ಮಿಡಿದ ನಿರ್ದೇಶಕ ಆರ್​​. ಚಂದ್ರು; ಸಾವಿರ ಕುಟುಂಬಕ್ಕೆ ಅಕ್ಕಿ ವಿತರಣೆ

Director R Chandru: ನಾನು ಕೂಡ ರೈತನ ಮಗ. ಕೊರೊನಾ ಸಂಕಷ್ಟದ ಕಾಲದಲ್ಲಿ ನನ್ನೂರಿನ ಜನರಿಗೆ ನೆರವಾಗುವುದು ನನ್ನ ಧರ್ಮ. ಹುಟ್ಟೂರಿನ ಮಣ್ಣಿನ ಋಣ ತೀರಿಸಲು ನಾನು ಸದಾ ಮುಂದಾಗಿರುತ್ತೇನೆ ಎಂದು ಆರ್​. ಚಂದ್ರು ಹೇಳಿದ್ದಾರೆ.

ಹುಟ್ಟೂರಿನ ಜನರ ಕಷ್ಟಕ್ಕೆ ಮಿಡಿದ ನಿರ್ದೇಶಕ ಆರ್​​. ಚಂದ್ರು; ಸಾವಿರ ಕುಟುಂಬಕ್ಕೆ ಅಕ್ಕಿ ವಿತರಣೆ
ಅಕ್ಕಿ ವಿತರಿಸಿದ ನಿರ್ದೇಶಕ ಆರ್​. ಚಂದ್ರು
Follow us
| Updated By: ರಾಜೇಶ್ ದುಗ್ಗುಮನೆ

Updated on: Jun 05, 2021 | 3:54 PM

ಕೊರೊನಾ ವೈರಸ್ ನಿಯಂತ್ರಿಸಲು ಎಲ್ಲ ಕಡೆಗಳಲ್ಲಿ ಲಾಕ್​ಡೌನ್​ ಜಾರಿ ಆಗಿದೆ. ಈ ಕಷ್ಟಕಾಲದಲ್ಲಿ ಅನೇಕರಿಗೆ ಉದ್ಯೋಗವಿಲ್ಲ. ಹಾಗಾಗಿ ಜೀವನ ನಡೆಸುವುದು ಕಷ್ಟ ಆಗಿದೆ. ಹಳ್ಳಿಗಳಲ್ಲಿ ಇರುವವರ ಪರಿಸ್ಥಿತಿ ಕೂಡ ಕಠಿಣವಾಗಿದೆ. ಹಾಗಾಗಿ ಸ್ಯಾಂಡಲ್​ವುಡ್​ ನಿರ್ದೇಶಕ ಆರ್​. ಚಂದ್ರು ಅವರು ಗ್ರಾಮೀಣ ಭಾಗದ ಜನರ ಕೈ ಹಿಡಿದಿದ್ದಾರೆ. ತಮ್ಮ ಹುಟ್ಟೂರಿನವರ ನೆರವಿಗೆ ಅವರು ಧಾವಿಸಿದ್ದಾರೆ. ಬೆಂಗಳೂರಿಗೆ ಬಂದು ಯಶಸ್ಸು ಕಂಡ ಬಳಿಕ ಮತ್ತೆ ಹಳ್ಳಿಗಳ ಕಡೆಗೆ ಗಮನ ಹರಿಸುವವರು ಕಡಿಮೆ. ಆದರೆ ಆರ್​. ಚಂದ್ರು ಈ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಊರಿನ ಜನರನ್ನು ಮರೆತಿಲ್ಲ.

ನಿರ್ದೇಶಕ ಆರ್​. ಚಂದ್ರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಕೇಶಾವರ ಗ್ರಾಮದವರು. ಲಾಕ್​ಡೌನ್​ನಿಂದಾಗಿ ಹಳ್ಳಿಗರು ಕೂಡ ಕಷ್ಟಪಡುತ್ತಿದ್ದಾರೆ. ಇದನ್ನು ಮನಗಂಡಿರುವ ಚಂದ್ರು ಅವರು ಕೇಶಾವರ ಗ್ರಾಮದ ಸುಮಾರು ಸಾವಿರ ಮನೆಗಳಿಗೆ ತಲಾ 25 ಕೆಜಿಯ ಅಕ್ಕಿ ಮೂಟೆಗಳನ್ನು ನೀಡಿದ್ದಾರೆ. ಆ ಮೂಲಕ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.

‘ಚಿತ್ರರಂಗದಲ್ಲಿ ನಿರ್ದೇಶಕನಾಗಿದ್ದರೂ ನಾನು ಕೂಡ ರೈತನ ಮಗ. ಕೊರೊನಾ ಸಂಕಷ್ಟದ ಕಾಲದಲ್ಲಿ ನನ್ನೂರಿನ ಜನರಿಗೆ ನೆರವಾಗುವುದು ನನ್ನ ಧರ್ಮ. ಹುಟ್ಟೂರಿನ ಮಣ್ಣಿನ ಋಣ ತೀರಿಸಲು ನಾನು ಇಂದು ಮತ್ತು ಎಂದೆಂದಿಗೂ ಮುಂದಾಗಿರುತ್ತೇನೆ’ ಎಂದು ಆರ್​. ಚಂದ್ರು ಹೇಳಿದ್ದಾರೆ. ಚಿತ್ರರಂಗದ ಅನೇಕರಿಗೂ ಸಹ ಚಂದ್ರು ಸಹಾಯ ಮಾಡಿದ್ದಾರೆ. ಅವರ ರೀತಿಯೇ ಉಪೇಂದ್ರ, ಹರ್ಷಿಕಾ ಪೂಣಚ್ಚ, ಭುವನ್​ ಪೊನ್ನಣ್ಣ, ವಿಜಯ್​ ಕಿರಗಂದೂರು, ಸತೀಶ್​ ನೀನಾಸಂ, ಯಶ್​ ಸೇರಿದಂತೆ ಅನೇಕರು ಜನರಿಗೆ ನೆರವು ನೀಡುತ್ತಿದ್ದಾರೆ.

2008ರಲ್ಲಿ ‘ತಾಜ್​ ಮಹಲ್​’ ಸಿನಿಮಾ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಕಾಲಿಟ್ಟ ಆರ್​. ಚಂದ್ರುಗೆ ಮೊದಲ ಸಿನಿಮಾದಲ್ಲಿಯೇ ಭರ್ಜರಿ ಯಶಸ್ಸು ಸಿಕ್ಕಿತು. ಬಳಿಕ ಪ್ರೇಮ್​ ಕಹಾನಿ, ಮೈಲಾರಿ, ಚಾರ್​ಮಿನಾರ್​, ಬ್ರಹ್ಮ ಮುಂತಾದ ಸಿನಿಮಾಗಳ ಮೂಲಕ ಗಮನ ಸೆಳೆದರು. ನಿರ್ದೇಶನದಲ್ಲಿ ಯಶಸ್ಸು ಗಳಿಸಿದ ನಂತರ ನಿರ್ಮಾಪಕರಾಗಿಯೂ ಅವರು ಬಡ್ತಿ ಪಡೆದುಕೊಂಡರು. 2019ರಲ್ಲಿ ಉಪೇಂದ್ರ ಜೊತೆ ಮಾಡಿದ ‘ಐ ಲವ್​ ಯೂ’ ಸಿನಿಮಾ ಕೂಡ ಅವರಿಗೆ ಗೆಲುವು ತಂದುಕೊಟ್ಟಿತು. ಈಗ ಮತ್ತೆ ಉಪೇಂದ್ರ ನಾಯಕತ್ವದಲ್ಲಿ ಅವರು ‘ಕಬ್ಜ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

(ಚಿಕ್ಕಬಳ್ಳಾಪುರ ಜಿಲ್ಲೆಯ ಕೇಶಾವರ ಗ್ರಾಮದವರ ಜೊತೆ ಆರ್​. ಚಂದ್ರು)

ಹಲವು ದಿನಗಳ ಹಿಂದೆಯೇ ‘ಕಬ್ಜ’ ಚಿತ್ರದ ಶೂಟಿಂಗ್​ ಆರಂಭ ಆಗಿತ್ತು. ರೆಟ್ರೋ ಕಥೆಯುಳ್ಳ ಈ ಚಿತ್ರಕ್ಕೆ ಬೃಹತ್​ ಸೆಟ್​​ಗಳನ್ನು ಹಾಕಿ ಚಿತ್ರೀಕರಣ ಮಾಡಲಾಗುತ್ತಿತ್ತು. ಆದರೆ ಲಾಕ್​ಡೌನ್​ ಜಾರಿ ಆದ ಬಳಿಕ ಶೂಟಿಂಗ್​ ಸ್ಥಗಿತಗೊಳಿಸಲಾಗಿದೆ. ಕನ್ನಡ ಮಾತ್ರವಲ್ಲದೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಬಹುಭಾಷಾ ಕಲಾವಿದರು ಇದರಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:

‘ಕಬ್ಜ’ ಮಾಡಲು ಲಾಂಗ್ ಹಿಡಿದ ಸ್ಯಾಂಡಲ್​ವುಡ್​ನ ಸೂಪರ್​ ಸ್ಟಾರ್​ ಉಪೇಂದ್ರ

Upendra: ನಟ ಉಪೇಂದ್ರ ತಲೆಗೆ ರಾಡ್​ನಿಂದ ಪೆಟ್ಟು! ಕಬ್ಜ ಸಿನಿಮಾ ಶೂಟಿಂಗ್​ ವೇಳೆ ಅವಘಡ