AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಟ್ಟೂರಿನ ಜನರ ಕಷ್ಟಕ್ಕೆ ಮಿಡಿದ ನಿರ್ದೇಶಕ ಆರ್​​. ಚಂದ್ರು; ಸಾವಿರ ಕುಟುಂಬಕ್ಕೆ ಅಕ್ಕಿ ವಿತರಣೆ

Director R Chandru: ನಾನು ಕೂಡ ರೈತನ ಮಗ. ಕೊರೊನಾ ಸಂಕಷ್ಟದ ಕಾಲದಲ್ಲಿ ನನ್ನೂರಿನ ಜನರಿಗೆ ನೆರವಾಗುವುದು ನನ್ನ ಧರ್ಮ. ಹುಟ್ಟೂರಿನ ಮಣ್ಣಿನ ಋಣ ತೀರಿಸಲು ನಾನು ಸದಾ ಮುಂದಾಗಿರುತ್ತೇನೆ ಎಂದು ಆರ್​. ಚಂದ್ರು ಹೇಳಿದ್ದಾರೆ.

ಹುಟ್ಟೂರಿನ ಜನರ ಕಷ್ಟಕ್ಕೆ ಮಿಡಿದ ನಿರ್ದೇಶಕ ಆರ್​​. ಚಂದ್ರು; ಸಾವಿರ ಕುಟುಂಬಕ್ಕೆ ಅಕ್ಕಿ ವಿತರಣೆ
ಅಕ್ಕಿ ವಿತರಿಸಿದ ನಿರ್ದೇಶಕ ಆರ್​. ಚಂದ್ರು
ಮದನ್​ ಕುಮಾರ್​
| Edited By: |

Updated on: Jun 05, 2021 | 3:54 PM

Share

ಕೊರೊನಾ ವೈರಸ್ ನಿಯಂತ್ರಿಸಲು ಎಲ್ಲ ಕಡೆಗಳಲ್ಲಿ ಲಾಕ್​ಡೌನ್​ ಜಾರಿ ಆಗಿದೆ. ಈ ಕಷ್ಟಕಾಲದಲ್ಲಿ ಅನೇಕರಿಗೆ ಉದ್ಯೋಗವಿಲ್ಲ. ಹಾಗಾಗಿ ಜೀವನ ನಡೆಸುವುದು ಕಷ್ಟ ಆಗಿದೆ. ಹಳ್ಳಿಗಳಲ್ಲಿ ಇರುವವರ ಪರಿಸ್ಥಿತಿ ಕೂಡ ಕಠಿಣವಾಗಿದೆ. ಹಾಗಾಗಿ ಸ್ಯಾಂಡಲ್​ವುಡ್​ ನಿರ್ದೇಶಕ ಆರ್​. ಚಂದ್ರು ಅವರು ಗ್ರಾಮೀಣ ಭಾಗದ ಜನರ ಕೈ ಹಿಡಿದಿದ್ದಾರೆ. ತಮ್ಮ ಹುಟ್ಟೂರಿನವರ ನೆರವಿಗೆ ಅವರು ಧಾವಿಸಿದ್ದಾರೆ. ಬೆಂಗಳೂರಿಗೆ ಬಂದು ಯಶಸ್ಸು ಕಂಡ ಬಳಿಕ ಮತ್ತೆ ಹಳ್ಳಿಗಳ ಕಡೆಗೆ ಗಮನ ಹರಿಸುವವರು ಕಡಿಮೆ. ಆದರೆ ಆರ್​. ಚಂದ್ರು ಈ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಊರಿನ ಜನರನ್ನು ಮರೆತಿಲ್ಲ.

ನಿರ್ದೇಶಕ ಆರ್​. ಚಂದ್ರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಕೇಶಾವರ ಗ್ರಾಮದವರು. ಲಾಕ್​ಡೌನ್​ನಿಂದಾಗಿ ಹಳ್ಳಿಗರು ಕೂಡ ಕಷ್ಟಪಡುತ್ತಿದ್ದಾರೆ. ಇದನ್ನು ಮನಗಂಡಿರುವ ಚಂದ್ರು ಅವರು ಕೇಶಾವರ ಗ್ರಾಮದ ಸುಮಾರು ಸಾವಿರ ಮನೆಗಳಿಗೆ ತಲಾ 25 ಕೆಜಿಯ ಅಕ್ಕಿ ಮೂಟೆಗಳನ್ನು ನೀಡಿದ್ದಾರೆ. ಆ ಮೂಲಕ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.

‘ಚಿತ್ರರಂಗದಲ್ಲಿ ನಿರ್ದೇಶಕನಾಗಿದ್ದರೂ ನಾನು ಕೂಡ ರೈತನ ಮಗ. ಕೊರೊನಾ ಸಂಕಷ್ಟದ ಕಾಲದಲ್ಲಿ ನನ್ನೂರಿನ ಜನರಿಗೆ ನೆರವಾಗುವುದು ನನ್ನ ಧರ್ಮ. ಹುಟ್ಟೂರಿನ ಮಣ್ಣಿನ ಋಣ ತೀರಿಸಲು ನಾನು ಇಂದು ಮತ್ತು ಎಂದೆಂದಿಗೂ ಮುಂದಾಗಿರುತ್ತೇನೆ’ ಎಂದು ಆರ್​. ಚಂದ್ರು ಹೇಳಿದ್ದಾರೆ. ಚಿತ್ರರಂಗದ ಅನೇಕರಿಗೂ ಸಹ ಚಂದ್ರು ಸಹಾಯ ಮಾಡಿದ್ದಾರೆ. ಅವರ ರೀತಿಯೇ ಉಪೇಂದ್ರ, ಹರ್ಷಿಕಾ ಪೂಣಚ್ಚ, ಭುವನ್​ ಪೊನ್ನಣ್ಣ, ವಿಜಯ್​ ಕಿರಗಂದೂರು, ಸತೀಶ್​ ನೀನಾಸಂ, ಯಶ್​ ಸೇರಿದಂತೆ ಅನೇಕರು ಜನರಿಗೆ ನೆರವು ನೀಡುತ್ತಿದ್ದಾರೆ.

2008ರಲ್ಲಿ ‘ತಾಜ್​ ಮಹಲ್​’ ಸಿನಿಮಾ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಕಾಲಿಟ್ಟ ಆರ್​. ಚಂದ್ರುಗೆ ಮೊದಲ ಸಿನಿಮಾದಲ್ಲಿಯೇ ಭರ್ಜರಿ ಯಶಸ್ಸು ಸಿಕ್ಕಿತು. ಬಳಿಕ ಪ್ರೇಮ್​ ಕಹಾನಿ, ಮೈಲಾರಿ, ಚಾರ್​ಮಿನಾರ್​, ಬ್ರಹ್ಮ ಮುಂತಾದ ಸಿನಿಮಾಗಳ ಮೂಲಕ ಗಮನ ಸೆಳೆದರು. ನಿರ್ದೇಶನದಲ್ಲಿ ಯಶಸ್ಸು ಗಳಿಸಿದ ನಂತರ ನಿರ್ಮಾಪಕರಾಗಿಯೂ ಅವರು ಬಡ್ತಿ ಪಡೆದುಕೊಂಡರು. 2019ರಲ್ಲಿ ಉಪೇಂದ್ರ ಜೊತೆ ಮಾಡಿದ ‘ಐ ಲವ್​ ಯೂ’ ಸಿನಿಮಾ ಕೂಡ ಅವರಿಗೆ ಗೆಲುವು ತಂದುಕೊಟ್ಟಿತು. ಈಗ ಮತ್ತೆ ಉಪೇಂದ್ರ ನಾಯಕತ್ವದಲ್ಲಿ ಅವರು ‘ಕಬ್ಜ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

(ಚಿಕ್ಕಬಳ್ಳಾಪುರ ಜಿಲ್ಲೆಯ ಕೇಶಾವರ ಗ್ರಾಮದವರ ಜೊತೆ ಆರ್​. ಚಂದ್ರು)

ಹಲವು ದಿನಗಳ ಹಿಂದೆಯೇ ‘ಕಬ್ಜ’ ಚಿತ್ರದ ಶೂಟಿಂಗ್​ ಆರಂಭ ಆಗಿತ್ತು. ರೆಟ್ರೋ ಕಥೆಯುಳ್ಳ ಈ ಚಿತ್ರಕ್ಕೆ ಬೃಹತ್​ ಸೆಟ್​​ಗಳನ್ನು ಹಾಕಿ ಚಿತ್ರೀಕರಣ ಮಾಡಲಾಗುತ್ತಿತ್ತು. ಆದರೆ ಲಾಕ್​ಡೌನ್​ ಜಾರಿ ಆದ ಬಳಿಕ ಶೂಟಿಂಗ್​ ಸ್ಥಗಿತಗೊಳಿಸಲಾಗಿದೆ. ಕನ್ನಡ ಮಾತ್ರವಲ್ಲದೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಬಹುಭಾಷಾ ಕಲಾವಿದರು ಇದರಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:

‘ಕಬ್ಜ’ ಮಾಡಲು ಲಾಂಗ್ ಹಿಡಿದ ಸ್ಯಾಂಡಲ್​ವುಡ್​ನ ಸೂಪರ್​ ಸ್ಟಾರ್​ ಉಪೇಂದ್ರ

Upendra: ನಟ ಉಪೇಂದ್ರ ತಲೆಗೆ ರಾಡ್​ನಿಂದ ಪೆಟ್ಟು! ಕಬ್ಜ ಸಿನಿಮಾ ಶೂಟಿಂಗ್​ ವೇಳೆ ಅವಘಡ

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More