ಅಜಯ್ ರಾವ್ (Ajay Rao) ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದರು. ಸುದೀಪ್ ನಟನೆಯ ‘ಕಿಚ್ಚ’ ಸಿನಿಮಾದಲ್ಲಿ ಕಥಾ ನಾಯಕನ ಗೆಳೆಯನ ಪಾತ್ರ ಮಾಡಿದ್ದರು. ಇದು ಅವರು ನಟಿಸಿದ ಮೊದಲ ಸಿನಿಮಾ. ಆ ಬಳಿಕ ‘ಎಕ್ಸ್ಕ್ಯೂಸ್ ಮಿ’ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತು. ಆ ಬಳಿಕ ಸಾಲು ಸಾಲು ಸಿನಿಮಾ ಆಫರ್ಗಳು ಬಂದವು. ‘ತಾಜ್ ಮಹಲ್’, ‘ಕೃಷ್ಣನ್ ಲವ್ ಸ್ಟೋರಿ’ ರೀತಿಯ ಸಿನಿಮಾಗಳನ್ನು ಅವರು ಮಾಡಿದರು. ಈಗ ಅವರಿಗೆ ಕೋಟಿ ಕೋಟಿ ರೂಪಾಯಿ ಸಾಲ ಇದೆ. ಈ ಬಗ್ಗೆ ಅವರು ರ್ಯಾಪಿಡ್ ರಶ್ಮಿ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
‘ಮುಜುಗರ ಇಲ್ಲದೆ ಹೇಳುತ್ತೇನೆ. ನನಗೆ ಕೋಟಿ ಕೋಟಿ ಸಾಲ ಇದೆ. ಇದಕ್ಕೆ ನನಗೆ ಬೇಸರ ಇಲ್ಲ. ನಾನು ಕೋಟಿ ರೂಪಾಯಿ ಸಾಲವನ್ನು ನಿಭಾಯಿಸಬಲ್ಲೆನಲ್ಲ ಎನ್ನುವ ಖುಷಿ ಇದೆ. ಮೊದಲು ಮೆಜೆಸ್ಟಿಕ್ನಿಂದ ಬಸವೇಶ್ವರ ನಗರ ನಡೆದುಕೊಂಡು ಹೋಗುತ್ತಿದ್ದೆ. ಏಕೆಂದರೆ ಕೈಯಲ್ಲಿ ದುಡ್ಡು ಇರುತ್ತಾ ಇರಲಿಲ್ಲ. ಹೀಗೆ ಒಂದು ವರ್ಷ ಮಾಡಿದ್ದೇನೆ’ ಎಂದಿದ್ದಾರೆ ಅಜಯ್ ರಾವ್.
‘ಮ್ಯಾನೇಜರ್, ಡೈರೆಕ್ಟರ್ ಸಿಕ್ಕಿದರೆ ನಾನೇ ಹೋಟೆಲ್ಗೆ ಕರೆದುಕೊಂಡು ಹೋಗಿ ಟೀ ಕೊಡಿಸಬೇಕಿತ್ತು. ಚಿಕ್ಕಪೇಟೆಲಿ ಇಡ್ಲಿ ಮಾಡುತ್ತಾರೆ. ಅಲ್ಲಿ ರಾತ್ರಿ ಹೋಗಿ 2 ಇಡ್ಲಿ ತಿನ್ನುತ್ತಿದ್ದೆ. ಅದು ನನ್ನ ರಾತ್ರಿಯ ಊಟ. ಒಂದು ವರ್ಷ ಹೀಗೆ ಮಾಡಿದ್ದೇನೆ. ಮಧ್ಯಾಹ್ನ ಹಸಿವಾದರೆ ಎಷ್ಟು ದುಡ್ಡಿದೆ ಎಂದು ಎಣಿಸುತ್ತಿದೆ. ಬೀದಿ ಬದಿಯಲ್ಲಿ ಮಾರೋ ಹುರಿಗಡ್ಲೆ ತಿಂದು ಮಧ್ಯಾಹ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಸೆಟ್ನಲ್ಲಿ ಏನೇ ಆದರೂ ಹೀರೋ ಹೋಗಬೇಕು ಅಂತ ರೂಲ್ಸ್ ಮಾಡಿಬಿಡಿ’; ಅಜಯ್ ರಾವ್
ಯಾವಾಗಲೂ ನಗುತ್ತಾ ಇರಬೇಕು ಎಂಬುದು ಅಜಯ್ ರಾವ್ ಪಾಲಿಸಿ. ಒಬ್ಬರ ನಗುವಿನಿಂದ ಮತ್ತೊಬ್ಬರು ನಗುತ್ತಾರೆ ಎಂಬುದನ್ನು ಅವರು ಬಲವಾಗಿ ನಂಬುತ್ತಾರೆ. ಇದುವೇ ಯಶಸ್ಸು ಎಂದು ಅವರು ಹೇಳಿದ್ದಾರೆ. 2022ರಲ್ಲಿ ರಿಲೀಸ್ ಆದ ‘ಶೋಕಿವಾಲ’ ಚಿತ್ರವೇ ಕೊನೆ. ಇದಾದ ಬಳಿಕ ಅಜಯ್ ರಾವ್ ಹೀರೋ ಆಗಿ ನಟಿಸಿದ ಯಾವ ಚಿತ್ರವೂ ರಿಲೀಸ್ ಆಗಿಲ್ಲ. ಸದ್ಯ ಅವರು ‘ಯುದ್ಧಕಾಂಡ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಏಪ್ರಿಲ್ನಲ್ಲಿ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:01 am, Sat, 29 March 25