Kotigobba 3: ವಿತರಕರ ಮೋಸದಿಂದ ‘ಕೋಟಿಗೊಬ್ಬ 3’ ಚಿತ್ರಕ್ಕೆ ಎಷ್ಟು ಕೋಟಿ ನಷ್ಟ? ಇಲ್ಲಿದೆ ಸೂರಪ್ಪ ಬಾಬು ಲೆಕ್ಕ
Kichcha Sudeep: ಕೆಲವು ವಿತರಕರು ಸರಿಯಾದ ಸಮಯಕ್ಕೆ ಹಣ ನೀಡದೇ ‘ಕೋಟಿಗೊಬ್ಬ 3’ ಚಿತ್ರದ ವಿರುದ್ಧ ಸಂಚು ಮಾಡಿದರು ಎಂದು ನಿರ್ಮಾಪಕ ಸೂರಪ್ಪ ಬಾಬು ಆರೋಪಿಸಿದ್ದಾರೆ. ತೊಂದರೆ ನೀಡಿದ ವಿತರಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಅವರು ಚಿಂತಿಸಿದ್ದಾರೆ.

ಕೆಲವು ವಿತರಕರು ಮಾಡಿದ ಮೋಸದಿಂದಾಗಿ ‘ಕೋಟಿಗೊಬ್ಬ 3’ ಚಿತ್ರದ ಬಿಡುಗಡೆ ಒಂದು ದಿನ ತಡವಾಗಬೇಕಾಯ್ತು. ಇದು ಇಡೀ ತಂಡಕ್ಕೆ ನೋವುಂಟು ಮಾಡಿತು. ಕಿಚ್ಚ ಸುದೀಪ್ ಅವರ ಅಭಿಮಾನಿ ಬಳಗಕ್ಕೆ ಬೇಸರ ತರಿಸಿತು. ಇಂಥ ಪರಿಸ್ಥಿತಿ ಎದುರಾಗಲು ಕಾರಣರಾದ ವಿತರಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಮಾಪಕ ಸೂರಪ್ಪ ಬಾಬು ನಿರ್ಧರಿಸಿದ್ದಾರೆ. ವಿತರಕರಾದ ಗೌತಮ್ ಚಂದು, ಎಂ.ಡಿ. ಖಾಜಾಪೀರ್ ಮತ್ತು ಕುಮಾರ್ ಫಿಲ್ಮ್ಸ್ ವಿರುದ್ಧ ಕೇಸ್ ದಾಖಲಿಸಲು ಸೂರಪ್ಪ ಬಾಬು ಚಿಂತನೆ ನಡೆಸಿರುವುದಾಗಿ ತಿಳಿಸಿದ್ದಾರೆ. ತಮಗೆ ಅಂದಾಜು 8ರಿಂದ 10 ಕೋಟಿ ರೂ. ನಷ್ಟ ಆಗಿದೆ ಎಂದು ಅವರು ಹೇಳಿದ್ದಾರೆ.
ತೊಂದರೆ ನೀಡಿದ ವಿತರಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸೂರಪ್ಪ ಬಾಬು ಚಿಂತಿಸಿದ್ದಾರೆ. ಕೆಲವು ವಿತರಕರು ಸರಿಯಾದ ಸಮಯಕ್ಕೆ ಹಣ ನೀಡದೇ ‘ಕೋಟಿಗೊಬ್ಬ 3’ ಚಿತ್ರದ ವಿರುದ್ಧ ಸಂಚು ಮಾಡಿದರು ಎಂದು ಅವರು ಆರೋಪಿಸಿದ್ದಾರೆ. ವಿತರಕರ ಸಂಚಿನಿಂದಾಗಿ ಚಿತ್ರದ ನಟ ಹಾಗೂ ನಿರ್ಮಾಣ ಸಂಸ್ಥೆಗೆ ಅಪಖ್ಯಾತಿ ಬಂದಿದೆ. ಹಾಗಾಗಿ ವಿತರಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸೂರಪ್ಪ ಬಾಬು ನಿರ್ಧರಿಸಿದ್ದಾರೆ. ಈ ವಿಚಾರವನ್ನ ಸ್ವತಃ ಸೂರಪ್ಪ ಬಾಬು ಖಚಿತ ಪಡಿಸಿದ್ದಾರೆ.
‘ನಮ್ಮ ಸಂಸ್ಥೆಯಿಂದ ನಿರ್ಮಾಣಗೊಂಡ ‘ಕೋಟಿಗೊಬ್ಬ 3’ ಚಿತ್ರ ಅಕ್ಟೋಬರ್ 14ರಂದು ಕರ್ನಾಟಕ ರಾಜ್ಯಾದ್ಯಂತ ಬಿಡುಗಡೆ ಆಗಬೇಕಿತ್ತು. ಆದರೆ ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ ಭಾಗಕ್ಕೆ ನಮ್ಮ ಸಿನಿಮಾದ ವಿತರಣೆ ಹಕ್ಕನ್ನು ಪಡೆದ ಮೆಹಲ್ ಫಿಲ್ಮ್ಸ್ ಮಾಲಿಕರಾದ ಗೌತಮ್ ಚಂದ್ ಮತ್ತು ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ವಿತರಕರಾದ M D ಖಾಜಾಪೀರ್ ಮತ್ತು ಕುಮಾರ್ ಫಿಲ್ಮ್ಸ್ ಮಾಲಿಕರಾದ ಕುಮಾರ್ ಅವರು ಮಾಡಿಕೊಂಡ ಕರಾರಿನ ಒಪ್ಪಂದದಂತೆ ಮುಂಗಡ ಹಣವಾಗಿ ಕೇವಲ 15% ಮಾತ್ರ ಪಡೆದು ಚಿತ್ರ ಬಿಡುಗಡೆಯ ಒಂದು ದಿನ ಮೊದಲು ಅಂದರೆ ದಿನಾಂಕ 13-10-2021ರಂದು ಚಿತ್ರದ ನಿರ್ಮಾಪಕರಿಗೆ ಬಾಕಿ ಹಣ ನೀಡಬೇಕೆಂದು ಒಪ್ಪಂದವಾಗಿತ್ತು. ಈ ಮೇಲೆ ತಿಳಿಸಿರುವ ಇಬ್ಬರು ವಿತರಕರು ಕಟ್ಟ ಕಡೆಯ ಸಮಯದಲ್ಲಿ ನಮಗೆ ಕೊಡಬೇಕಾದ ಹಣವನ್ನು ತಂದು ಕೊಡದೆ, ನಮ್ಮ ಕರೆಗಳಿಗೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸದೆ, ನಮ್ಮ ಚಿತ್ರ ಅಂದುಕೊಂಡ ದಿನದಂದು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ’ ಎಂದಿದ್ದಾರೆ ಸೂರಪ್ಪ ಬಾಬು.
‘ಇವರ ಈ ತಪ್ಪಿನಿಂದ ನಾವು ಒಂದು ದಿನದ ನಂತರ ಸಾಕಷ್ಟು ಕಷ್ಟದಲ್ಲಿ ಬಿಡುಗಡೆ ಮಾಡಬೇಕಾಯಿತು. ಹಾಗಾಗಿ ಈ ಮೇಲೆ ತಿಳಿಸಿದ ವಿತರಕರ ತಪ್ಪಿನಿಂದ ನಮ್ಮ ಸಂಸ್ಥೆಗೆ ಸರಿ ಸುಮಾರು 8ರಿಂದ 10 ಕೋಟಿ ನಷ್ಟವಾಗಿದೆ ಹಾಗೂ ನಮ್ಮ ಸಂಸ್ಥೆಗೂ ಈ ವಿತರಕರಿಗೂ ಆದ ಕರಾರಿನ ಪ್ರಕಾರ ಹಣ ನೀಡದೆ ನಮಗೆ ವಂಚನೆ ಎಸಗಿದ್ದು ನಮಗೆ ಬಹಳಷ್ಟು ಆರ್ಥಿಕ ನಷ್ಟ ಉಂಟು ಮಾಡಿರುತ್ತಾರೆ. ನನ್ನ ಮತ್ತು ನಮ್ಮ ನಾಯಕ ನಟರಿಗೆ ಅಪಖ್ಯಾತಿ ತರಲು ಸಂಚು ಮಾಡಿರುತ್ತಾರೆ. ಅದಕ್ಕಾಗಿ ಮಾನನಷ್ಟ ಮೊಕದ್ದಮೆಯೂ ಸೇರಿದಂತೆ ಯಾವ ರೀತಿಯ ಕಾನೂನು ಕ್ರಮ ಜರುಗಿಸಬೇಕೆಂದು ನಮ್ಮ ಕಾನೂನು ಸಲಹೆಗಾರರ ಸಂಪರ್ಕದಲ್ಲಿದ್ದೇವೆ. ಆದಷ್ಟು ಬೇಗ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಚಿಂತನೆ ನಡೆದಿದೆ’ ಎಂದು ಸೂರಪ್ಪ ಬಾಬು ಹೇಳಿದ್ದಾರೆ.
ಇದನ್ನೂ ಓದಿ:
Kotigobba 3: ಕಿಚ್ಚನ ಒಂದೇ ಒಂದು ಟ್ವೀಟ್ನಿಂದ ಹೆಚ್ಚಿತು ‘ಕೋಟಿಗೊಬ್ಬ 3’ ಕ್ರೇಜ್; ಅಂಥ ವಿಶೇಷ ಇದರಲ್ಲೇನಿದೆ?
‘ಕೋಟಿಗೊಬ್ಬ 3’ ವಿರುದ್ಧ ಷಡ್ಯಂತ್ರ ಆಗಿದೆ; ‘ಸಲಗ’ ತಂಡ ಇದರಲ್ಲಿ ಭಾಗಿ ಆಗಿಲ್ಲ: ಜಾಕ್ ಮಂಜು ಸ್ಪಷ್ಟನೆ
Published On - 9:24 am, Sat, 16 October 21