ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಕ್ ಆತ್ಮಹತ್ಯೆ; ಬೆಂಗಳೂರಿನ ಆರ್ ಆರ್ ನಗರದಲ್ಲಿ ಘಟನೆ
ನಟಿ ಕೃಷಿ ತಾಪಂಡ ಗೆಳೆಯ ವೈಶಾಕ್ ರಾಜರಾಜೇಶ್ವರಿ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದ್ಯಮಿ ಅರವಿಂದ್ ರೆಡ್ಡಿಗೆ ಕೊರಿಯರ್ ಮೂಲಕ ಬೆದರಿಕೆ ಹಾಕಿ, ಕೋಟಿಗಟ್ಟಲೆ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ವೈಶಾಕ್ ಬಂಧಿತನಾಗಿ ಜೈಲು ಸೇರಿದ್ದ. ಆತ್ಮಹತ್ಯೆಗೂ ಮುನ್ನ ಕೃಷಿ ತಾಪಂಡಗೆ ಕರೆ ಮಾಡಿ ತಿಳಿಸಿದ್ದ. ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆಯಾಗಿದೆ.

ಮುಖ್ಯಾಂಶಗಳು
- ಕೃಷಿ ತಾಪಂಡ ಗೆಳೆಯ ವೈಶಾಕ್ ಜೂನ್ 24ರ ರಾತ್ರಿ ಆತ್ಮಹತ್ಯೆಗೆ ಶರಣು
- ಉದ್ಯಮಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಜೈಲು ಸೇರಿದ್ದ ವೈಶಾಕ್
- ವೈಶಾಕ್ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ
ಉದ್ಯಮಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಕೃಷಿ ತಾಪಂಡ ಗೆಳೆಯ ವೈಶಾಕ್ ಜೂನ್ 24ರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬುಧವಾರ ರಾತ್ರಿ ಕೃಷಿ ಮನೆಯಲ್ಲೇ ವೈಶಾಕ್ ತಂಗಿದ್ದ. ಆ ಸಮಯದಲ್ಲಿ ಕೃಷಿ ನಿವಾಸದಲ್ಲಿ ಇರಲಿಲ್ಲ. ಈ ವೇಳೆ ನಟಿಗೆ ಕರೆ ಮಾಡಿ ತಾನು ಸಾಯುವುದಾಗಿ ವೈಶಾಕ್ ಹೇಳಿಕೊಂಡಿದ್ದ. ತಕ್ಷಣ ಕೃಷಿ ಈ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಿದ್ದರು. ಆ ಬಳಿಕ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಏನಿದು ಕೊರಿಯರ್ ಬೆದರಿಕೆ ಪ್ರಕರಣ?
ಕಳೆದ ಫೆಬ್ರವರಿಯಲ್ಲಿ ಉದ್ಯಮಿ ಅರವಿಂದ ರೆಡ್ಡಿ ಅವರಿಗೆ ಅನಾಮಧೇಯ ಹೆಸರಿನಲ್ಲಿ ಬೆದರಿಕೆ ಪತ್ರವೊಂದು ಬಂದಿತ್ತು. ಬ್ಲೂ ಡಾರ್ಟ್ ಕೊರಿಯರ್ ಮುಖಾಂತರ ಈ ಪತ್ರವನ್ನು ಕಳುಹಿಸಲಾಗಿತ್ತು. ಪತ್ರದಲ್ಲಿ ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಇತ್ತೀಚೆಗೆ ಕೃಷಿ ತಾಪಂಡ ಅವರು ಅರವಿಂದ ರೆಡ್ಡಿ ವಿರುದ್ಧ ದೂರು ನೀಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಶಾಕ್, ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ಬರೆದಿದ್ದ.
ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ
‘ಕೃಷಿ ಜೊತೆ ಇರುವ ಸಮಸ್ಯೆಯನ್ನು ನೀನು ತಕ್ಷಣ ಬಗೆಹರಿಸಿಕೊಳ್ಳಬೇಕು. ಅದರೊಂದಿಗೆ ಕ್ಷಮಾಪಣೆ ಪತ್ರ ಮತ್ತು 6 ರಿಂದ 7 ಕೋಟಿ ರೂಪಾಯಿ ಹಣವನ್ನು ಕಳುಹಿಸಬೇಕು. ಇಲ್ಲವಾದಲ್ಲಿ ನೀನು ಬೇರೆ ಬೇರೆ ರೀತಿಯ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಪತ್ರದಲ್ಲಿ ಉದ್ಯಮಿಗೆ ನೇರವಾಗಿ ಬೆದರಿಕೆ ಹಾಕಲಾಗಿತ್ತು. ಈ ಪತ್ರವನ್ನು ನೋಡಿ ಆತಂಕಗೊಂಡ ಅರವಿಂದ ರೆಡ್ಡಿ ಅವರು ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಕ್ ಆತ್ಮಹತ್ಯೆ; ಬೆಂಗಳೂರಿನ ಆರ್ ಆರ್ ನಗರದಲ್ಲಿ ಘಟನೆ
ಪೊಲೀಸ್ ತನಿಖೆಯಲ್ಲಿ ಸಿಕ್ಕಿಬಿದ್ದಿದ್ದ ವೈಶಾಕ್
ಅರವಿಂದ ರೆಡ್ಡಿ ನೀಡಿದ ದೂರಿನ ಮೇರೆಗೆ ಎಚ್ಎಎಲ್ (HAL) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದರು. ಈ ವೇಳೆ ವೈಶಾಕ್ ಸಿಕ್ಕಿ ಬಿದ್ದಿದ್ದರು.
ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ:
ಸದ್ಯ ವೈಶಾಕ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ಯಾವುದೇ ಪತ್ರ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:39 am, Thu, 25 June 26




