
ನಟಿ ಮೋಕ್ಷಿತಾ ಪೈ ಅವರು ‘ಪಾರು’ ಧಾರಾವಾಹಿ ಮೂಲಕ ಫೇಮಸ್ ಆದವರು. ಬಿಗ್ ಬಾಸ್ ಅವರ ಬದುಕನ್ನು ಬದಲಾಯಿಸಿದೆ. ಸಾಕಷ್ಟು ಆಫರ್ಗಳು ನಟಿಯನ್ನು ಅರಸಿ ಬರುತ್ತಿವೆ. ಅಳೆದು ತೂಗಿ ಮೋಕ್ಷಿತಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಅವರು ನಟಿಸಿರೋ ‘ಮಿಡಲ್ ಕ್ಲಾಸ್ ರಾಮಾಯಣ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಬೇಸಿಗೆ ರಜಾ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಆಗೋ ನಿರೀಕ್ಷೆ ಇದೆ. ಈ ಚಿತ್ರದ ಬಗ್ಗೆ, ತಮ್ಮ ಪಾತ್ರದ ಬಗ್ಗೆ ಮೋಕ್ಷಿತಾ ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.
‘ನಾನು ಮಿಡಲ್ ಕ್ಲಾಸ್ ರಾಮಾಯಣ ಚಿತ್ರದಲ್ಲಿ ಕಪ್ಪು ಬಣ್ಣದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ನಾನು ಕಪ್ಪಿದ್ದರೂ ಹುಡುಗ ನನ್ನನ್ನು ಏಕೆ ಮದುವೆ ಆಗುತ್ತಾನೆ? ಮದುವೆ ಆದ ಮೇಲೆ ಏನೇನು ಆಗುತ್ತದೆ ಎಂಬುದು ಸಿನಿಮಾದ ಕಥೆ. ಬಿಗ್ ಬಾಸ್ಗೂ ಮೊದಲೇ ಇದರ ಶೂಟಿಂಗ್ ಆಗಿತ್ತು. ನಾನು ಬಿಗ್ ಬಾಸ್ಗೆ ಹೋಗಿರಲಿಲ್ಲ ಎಂದರೆ ಸಿನಿಮಾ ಮೊದಲೇ ರಿಲೀಸ್ ಆಗುತ್ತಿತ್ತೇನೋ. ಇನ್ನು ಕೆಲವೇ ತಿಂಗಳಲ್ಲಿ ನಿಮ್ಮ ಮುಂದೆ ಬರುತ್ತದೆ’ ಎಂದು ಮೋಕ್ಷಿತಾ ಹೇಳಿಕೊಂಡಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ಬೆಂಗಳೂರಿನಲ್ಲೇ ನಡೆದಿದೆಯಂತೆ.
‘ಮಿಡಲ್ ಕ್ಲಾಸ್ ರಾಮಾಯಣ’ ಚಿತ್ರಕ್ಕೆ ಧನುಷ್ ಗೌಡ ನಿರ್ದೇಶನ ಮಾಡಿದ್ದಾರೆ. ವಿನು ಚಿತ್ರದ ನಾಯಕ. ಜಯರಾಮ್ ಗಂಗಪ್ಪನಹಳ್ಳಿ ಈ ಚಿತ್ರದಲ್ಲಿ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ, ನಿರ್ದೇಶಕ ಎಸ್. ನಾರಾಯಣ್ ಅವರು ಮೋಕ್ಷಿತಾ ಅವರ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ. ನಟನೆಗೆ ಒಳ್ಳೆಯ ಅವಕಾಶ ಇದೆ ಎಂಬ ಕಾರಣಕ್ಕೆ ಮೋಕ್ಷಿತಾ ಈ ಚಿತ್ರವನ್ನು ಮಾಡಿದರು.
‘ಬಿಗ್ ಬಾಸ್’ ಪೂರ್ಣಗೊಂಡ ಬಳಿಕ ಹೊಸ ಹೊಸ ಆಫರ್ಗಳು ಹುಡುಕಿ ಬರುತ್ತಿವೆ. ಆದರೆ, ಯಾವುದನ್ನೂ ಅವರು ಫೈನಲ್ ಮಾಡಿಲ್ಲ. ಮನಸ್ಸಿಗೆ ಒಪ್ಪುವಂತಹ ಪಾತ್ರ ಸಿಕ್ಕರೆ ಮಾಡೋದಾಗಿ ಮೋಕ್ಷಿತಾ ಹೇಳಿದ್ದಾರೆ. ಸಿನಿಮಾನೇ ಮಾಡಬೇಕು, ಧಾರಾವಾಹಿಯನ್ನೇ ಮಾಡಬೇಕು ಎಂಬಿತ್ಯಾದಿ ಆಲೋಚನೆಗಳನ್ನು ಅವರು ಇಟ್ಟುಕೊಂಡಿಲ್ಲ. ಯಾವುದು ಇಷ್ಟವಾಗುತ್ತದೆಯೋ ಅದನ್ನು ಮಾಡುವ ಆಲೋಚನೆಯಲ್ಲಿ ಮೋಕ್ಷಿತಾ ಇದ್ದಾರೆ.
ಇದನ್ನೂ ಓದಿ: ಮೋಕ್ಷಿತಾ ಪೈ ಹೊಸ ಲುಕ್ಗೆ ಫ್ಯಾನ್ಸ್ ಕ್ಲೀನ್ಬೋಲ್ಡ್
ಮೋಕ್ಷಿತಾ ಪೈ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೂರನೇ ರನ್ನರ್ ಅಪ್ ಆದರು. ಅನೇಕ ಘಟಾನುಘಟಿಗಳನ್ನು ಹಿಂದಿಕ್ಕಿ ಅವರು ಈ ಸ್ಥಾನವನ್ನು ಪಡೆದಿದ್ದಾರೆ ಅನ್ನೋದು ವಿಶೇಷ. ಅವರಿಗೆ ಬಣ್ಣದ ಲೋಕದಲ್ಲಿ ಮತ್ತಷ್ಟು ಅವಕಾಶಗಳು ಬರಲಿ ಅನ್ನೋದು ಅಭಿಮಾನಿಗಳ ಕೋರಿಕೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:09 pm, Fri, 28 February 25