ಸಿಎಂ ಭೇಟಿಯಾದ ನಟ-ನಟಿಯರು, ಕೇರಳದ ಹೇಮಾ ಸಮಿತಿ ಮಾದರಿ ಸಮಿತಿ ರವಿಸುವಂತೆ ಮನವಿ

ಕೇರಳದ ಚಿತ್ರರಂಗದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ಹೊರತಂದ ಹೇಮಾ ಸಮಿತಿ ವರದಿ ಸದ್ದು ಮಾಡುತ್ತಿದ್ದು, ಅದೇ ಮಾದರಿಯ ಸಮಿತಿ ಕರ್ನಾಟಕದಲ್ಲಿ ಸ್ಥಾಪನೆ ಆಗಬೇಕೆಂದು ಚಿತ್ರರಂಗದ ನಟ-ನಟಿಯರು ಒತ್ತಾಯಿಸಿದ್ದು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸಿಎಂ ಭೇಟಿಯಾದ ನಟ-ನಟಿಯರು, ಕೇರಳದ ಹೇಮಾ ಸಮಿತಿ ಮಾದರಿ ಸಮಿತಿ ರವಿಸುವಂತೆ ಮನವಿ
ಸಿದ್ದರಾಮಯ್ಯರ ಭೇಟಿಯಾದ ನಟ-ನಟಿಯರು
Follow us
|

Updated on:Sep 05, 2024 | 2:22 PM

ಹೇಮಾ ಸಮಿತಿ ವರದಿ ಬಹಿರಂಗವಾದ ಬೆನ್ನಲ್ಲೆ ಕನ್ನಡ ಚಿತ್ರರಂಗದಲ್ಲೂ ಸಹ ಮಹಿಳೆಯರ ಮೇಲೆ ಆಗುತ್ತಿರವ ದೌರ್ಜನ್ಯದ ವರದಿಗೆ ಒತ್ತಾಯ ಕೇಳಿ ಬಂದಿದೆ. ಫೈರ್ (ಫಿಲ್ಮಂ ಇಂಡಸ್ಟ್ರಿ ಫಾರ್ ರೈಟ್ಸ್ ಆಂಡ್ ಇಕ್ವಾಲಿಟಿ) ಸಂಘವು ಕರ್ನಾಟಕದಲ್ಲಿಯೂ ಕೇರಳ ಮಾದರಿಯಲ್ಲಿ ಸಮಿತಿಯೊಂದನ್ನು ರಚಿಸಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ವರದಿ ಮಾಡುವಂತೆ ಹಾಗೂ ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ ಅಗತ್ಯ ನೀತಿಗಳನ್ನು ರೂಪಿಸುವಂತೆ ಒತ್ತಾಯಿಸಿ ಎರಡು ದಿನದ ಹಿಂದಷ್ಟೆ ಸಿಎಂಗೆ ಪತ್ರ ಬರೆದಿತ್ತು. ಇಂದು (ಸೆಪ್ಟೆಂಬರ್ 05) ಫೈರ್ ನ ಕೆಲ ಸದಸ್ಯರು ಖುದ್ದಾಗಿ ಸಿಎಂ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ.

ನಟ ಚೇತನ್ ಅಹಿಂಸ, ನಟಿ ಶ್ರುತಿ ಹರಿಹರನ್, ಸಂಗೀತಾ ಭಟ್, ನೀತು ಶೆಟ್ಟಿ ಇನ್ನೂ ಕೆಲವರು ಇಂದು ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ಕರ್ನಾಟಕದಲ್ಲಿಯೂ ಸಹ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಸ್ಥಿತಿ-ಗತಿ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯೊಂದನ್ನು ನಿರ್ಮಿಸುವಂತೆ ಒತ್ತಾಯ ಮಾಡಿದ್ದಾರೆ. ಜೊತೆಗೆ ಸಮಿತಿ ನಿರ್ಮಾಣದ ಬಗ್ಗೆ ಇರುವ ಅವಶ್ಯಕತೆಯನ್ನು ಸಹ ಸಿದ್ದರಾಮಯ್ಯ ಅವರಿಗೆ ಮನಗಾಣಿಸುವ ಪ್ರಯತ್ನವನ್ನು ಚೇತನ್ ಅಹಿಂಸಾ ಹಾಗೂ ಇತರ ನಟಿಯರು ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಕೆಎಂ ಚೈತನ್ಯ, ‘ಕನ್ನಡ ಚಿತ್ರರಂಗಕ್ಕೂ ಇಂಥಹಾ ಸಮಿತಿಯ ಅವಶ್ಯಕತೆ ಇದೆ. ಏಕೆಂದರೆ ಈ 5 ವರ್ಷಗಳ ಏನಾಗಿದೆ ಅನ್ನೋದಕ್ಕಿಂತ ಇನ್ಮುಂದೇ ಲೈಂಗಿಕ ದೌರ್ಜನ್ಯ ಘಟನೆಗಳು ಆಗಬಾರದು ಅನ್ನೋದಷ್ಟೇ ಇದರ ಉದ್ದೇಶ. ಲೈಂಗಿಕ ದೌರ್ಜನ್ಯ ಮಾತ್ರವೇ ಅಲ್ಲದೆ. ಸಂಭಾವನೆಯಲ್ಲಿಯೂ ಇರುವ ಅಸಮಾನತೆಯನ್ನು ತೊಡೆದು ಹಾಕಬೇಕಿದೆ. ಇದಕ್ಕೆಲ್ಲ ಒಂದು ಸ್ಪಷ್ಟ ನೀತಿಯ ಅವಶ್ಯಕತೆ ಇದೆ’ ಎಂದಿದ್ದಾರೆ.

ಇದನ್ನೂ ಓದಿ:ಹೇಮಾ ಸಮಿತಿ ವರದಿ ಬೆಂಬಲಿಸಿದ ಶ್ರುತಿ ಹರಿಹರನ್ 

ಫೈರ್ ಸಂಸ್ಥೆಯ ಈ ಬೇಡಿಕೆಗೆ ಚಿತ್ರರಂಗದ ಹಲವರು ಬೆಂಬಲ ಸೂಚಿಸಿದ್ದಾರೆ. ಹಲವು ಸಿನಿಮಾ ಸೆಲೆಬ್ರಿಟಿಗಳು, ಕಿರುತೆರೆ ನಟ-ನಟಿಯರು ಸಹ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿ-ಗತಿ ಸುಧಾರಣೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಈಗಾಗಲೇ 150 ಕ್ಕೂ ಹೆಚ್ಚು ಮಂದಿ ಸಿಎಂಗೆ ನೀಡಿರುವ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ಇನ್ನು ಸಿಎಂ ಆಫ್ ಕರ್ನಾಟಕ ಅಧಿಕೃತ ಖಾತೆಯಿಂದ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ಹಿರಿಯ ಸಾಮಾಜಿಕ ಕಾರ್ಯಕರ್ತೆ ವಿಜಯಮ್ಮ, ನಟ ಚೇತನ್ ನೇತೃತ್ವದ ಫೈರ್ ನಿಯೋಗದವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಮಲಯಾಳಂ ಸಿನೆಮಾ ರಂಗದಲ್ಲಿ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಕುರಿತ ತನಿಖೆಗಾಗಿ ಸಮಿತಿ ರಚನೆ ಮಾಡಿದಂತೆ, ರಾಜ್ಯ ಸರ್ಕಾರವು ಸಮಿತಿ ರಚಿಸಿ, ಕನ್ನಡ ಚಿತ್ರರಂಗದಲ್ಲಿ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಮಗ್ರ ತನಿಖೆ ಮಾಡುವಂತೆ ಮನವಿ ಸಲ್ಲಿಸಿದರು’ ಎಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Thu, 5 September 24