AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಿ ನೋಡು ‘ಮಾರಾಯ’: ಮೈ ಆಟೋಗ್ರಾಫ್​ ಚಿತ್ರದಲ್ಲಿ ಹೈಸ್ಕೂಲ್​ ಹುಡುಗನಾಗಿದ್ದ ನಟ ಈಗ ಹೇಗಿದ್ದಾರೆ?

‘ಮಾರಾಯ’ ಸಿನಿಮಾದಲ್ಲಿ ಸೋಶಿಯಲ್​ ಮೀಡಿಯಾ ಕುರಿತಾದ ಕಥೆ ಇದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ. ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಇಲ್ಲಿ ನೋಡು ‘ಮಾರಾಯ’: ಮೈ ಆಟೋಗ್ರಾಫ್​ ಚಿತ್ರದಲ್ಲಿ ಹೈಸ್ಕೂಲ್​ ಹುಡುಗನಾಗಿದ್ದ ನಟ ಈಗ ಹೇಗಿದ್ದಾರೆ?
‘ಮೈ ಆಟೋಗ್ರಾಫ್​’ ಖ್ಯಾತಿಯ ಕುಮಾರ್​ ದೇವ್​, ಸುದೀಪ್​
Follow us
TV9 Web
| Updated By: ಮದನ್​ ಕುಮಾರ್​

Updated on: Apr 02, 2022 | 2:22 PM

ಸ್ಯಾಂಡಲ್​ವುಡ್​ನಲ್ಲಿ ‘ಮಾರಾಯ’ ಸಿನಿಮಾ (Maaraya Kannada Movie) ಸಿದ್ಧವಾಗಿದೆ. ಈ ಟೈಟಲ್​ ನೋಡಿದರೆ ಏನೋ ಡಿಫರೆಂಟ್​ ಆಗಿದೆ ಅಂತ ಅನಿಸೋದು ಸಹಜ. ಇಂಥ ಒಂದಷ್ಟು ಕಾರಣಗಳಿಂದಾಗಿ ‘ಮಾರಾಯ’ ಸಿನಿಮಾ ಸುದ್ದಿ ಆಗುತ್ತಿದೆ. ಕನಸುಗಳನ್ನು ಕಟ್ಟಿಕೊಂಡು ಚಿತ್ರರಂಗಕ್ಕೆ ಬರುವ ತಂಡಗಳು ಹಲವು. ಒಬ್ಬೊಬ್ಬರ ಹಾದಿ ಒಂದೊಂದು ಥರ. ಕೆಲವರು ಅದ್ದೂರಿ ಬಜೆಟ್​ನಲ್ಲಿ ಸಿನಿಮಾ ಮಾಡಿದರೆ, ಇನ್ನೂ ಕೆಲವರು ಸಿಂಪಲ್​ ಆಗಿ ಏನಾದರೂ ಮಾಡಲು ಪ್ರಯತ್ನಿಸುತ್ತಾರೆ. ‘ಮಾರಾಯ’ ಸಿನಿಮಾ ತಂಡ ಕೂಡ ಒಂದು ಮೆಸೇಜ್​ ಇಟ್ಟುಕೊಂಡು ಜನರ ಮುಂದೆ ಬರಲು ಸಜ್ಜಾಗಿದೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಅನೇಕ ಕಲಾವಿದರು ನಟಿಸಿದ್ದಾರೆ. ಬಿಗ್​ ಬಾಸ್​ ಖ್ಯಾತಿಯ ದಿವಾಕರ್​, ಹಿರಿಯ ನಟಿ ವಿನಯಾ ಪ್ರಸಾದ್​ (Vinaya Prasad), ‘ಸಲಗ’ ಸಿನಿಮಾದ ಸೂರಿಯಣ್ಣ ಖ್ಯಾತಿಯ ನಟ ದಿನೇಶ್​, ಡಿಂಗ್ರಿ ನಾಗರಾಜ್​, ಮಣಿ, ಶ್ರೇಯಾ, ತೀನಾ ತಿಮ್ಮಯ್ಯ ಮುಂತಾದವರು ನಟಿಸಿದ್ದಾರೆ. ಅಷ್ಟೇ ಅಲ್ಲ, ಕಿಚ್ಚ ಸುದೀಪ್​ ಅಭಿನಯದ ‘ಮೈ ಆಟೋಗ್ರಾಫ್​’ (My Autograph Movie) ಸಿನಿಮಾದಲ್ಲಿ ಹೈಸ್ಕೂಲ್​ ಹುಡುಗನ ಪಾತ್ರ ಮಾಡಿದ್ದ ಕುಮಾರ್​ ದೇವ್​ ಅವರು ಕೂಡ ‘ಮಾರಾಯ’ ಚಿತ್ರದಲ್ಲಿ ನಟಿಸಿದ್ದಾರೆ. ಹೀಗೆ ಅನೇಕ ಹಿರಿ-ಕಿರಿಯ ಕಲಾವಿದರು ಸೇರಿಕೊಂಡು ಈ ಸಿನಿಮಾ ಮಾಡಿದ್ದಾರೆ.

‘ಮೈ ಆಟೋಗ್ರಾಫ್​’ ಸಿನಿಮಾ ತೆರೆಕಂಡಾಗ ಕಥಾನಾಯಕನ ಹೈಸ್ಕೂಲ್​ ದಿನಗಳ ಎಪಿಸೋಡ್​ ತುಂಬ ಹೈಲೈಟ್​ ಆಗಿತ್ತು. ಹದಿ ಹರೆಯದಲ್ಲಿ ಚಿಗುರುವ ಆ ಮುಗ್ಧ ಪ್ರೀತಿಯ ಕಥೆ ಎಲ್ಲರಿಗೂ ಇಷ್ಟ ಆಗಿತ್ತು. ಹೈಸ್ಕೂಲ್ ವಿದ್ಯಾರ್ಥಿ ಪಾತ್ರದಲ್ಲಿ ಕುಮಾರ್​ ದೇವ್​ ಮಿಂಚಿದ್ದರು. ಈಗ ಅವರು ‘ಮಾರಾಯ’ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಈ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದ್ದು, ಅದರಲ್ಲಿ ಕೂಡ ‘ಮೈ ಆಟೋಗ್ರಾಫ್’​ ಚಿತ್ರದ ಆ ಕ್ಷಣವನ್ನು ಮತ್ತೆ ನೆನಪಿಸಲಾಗಿದೆ.

ಉದಯ್​ ಪ್ರೇಮ್​ ಅವರು ‘ಮಾರಾಯ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಕೆಲಸಗಳು ಪೂರ್ಣಗೊಂಡಿವೆ. ಸೆನ್ಸಾರ್​ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ನೀಡಲಾಗಿದೆ.

ತುಮಕೂರು ಮೂಲದ ಎನ್.ಜಿ. ಸುಜಾತಾ ನಂದನ್ ಅವರು ‘ಶ್ರೀಹೊನ್ನಾದೇವಿ ಗಂಗಾಧೇಶ್ವರ ಪ್ರೊಡಕ್ಷನ್’ ಬ್ಯಾನರ್​ ಮೂಲಕ ‘ಮಾರಾಯ’ ಸಿನಿಮಾವನ್ನು ನಿರ್ಮಿಸಿದ್ದಾರೆ. ‘ಮಜಾಭಾರತ’ ಖ್ಯಾತಿಯ ಜೆಕೆ, ಚಿಲ್ಲರ್​ ಮಂಜು, ಬಸು ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದು ಪ್ರೇಕ್ಷಕರಿಗೆ ಹಾಸ್ಯದ ಕಚಗುಳಿ ಇಡುವ ಭರವಸೆ ನೀಡಿದ್ದಾರೆ. ಖ್ಯಾತ ಗಾಯಕ ರಾಜೇಶ್​​ ಕೃಷ್ಣನ್​ ಅವರು ಈ ಸಿನಿಮಾದ ಶೀರ್ಷಿಕೆ ಗೀತೆ ಹಾಡಿದ್ದಾರೆ. ಯೂಟ್ಯೂಬ್​ನಲ್ಲಿ ಲಕ್ಷಾಂತರ ಜನರು ಇದನ್ನು ವೀಕ್ಷಿಸಿರುವುದು ತಂಡಕ್ಕೆ ಖುಷಿ ನೀಡಿದೆ. ಅದೇ ರೀತಿ ಯುಗಾದಿ ಹಬ್ಬದ ಪ್ರಯುಕ್ತ ‘ಮಾರಾಯ’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಅದು ಕೂಡ ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದಿದೆ.

ವಿನು ಮನಸು ಸಂಗೀತ ನಿರ್ದೇಶನ, ಉದಯಾನಂದ ಬರ್ಕೆ ಛಾಯಾಗ್ರಹಣ, ಶಿವಕುಮಾರ್ ಎ. ಸಂಕಲನ, ಚಂದ್ರು ಬಂಡೆ ಸಾಹಸ ನಿರ್ದೇಶನ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ ತಿಂಗಳಲ್ಲಿ ‘ಮಾರಾಯ’ ಸಿನಿಮಾ ರಿಲೀಸ್​ ಆಗಲಿದೆ.

(ವಿನಯಾ ಪ್ರಸಾದ್​, ಬಿಗ್​ ಬಾಸ್​ ದಿವಾಕರ್​ ಸಲಗ ದಿನೇಶ್​)

‘ಸಲಗ’ ಸಿನಿಮಾದಲ್ಲಿ ಸೂರಿಯಣ್ಣ ಪಾತ್ರದಲ್ಲಿ ದಿನೇಶ್​ ಅವರು ಮಿಂಚಿದ್ದರು. ಬಿಗ್​ ಬಾಸ್​ ಮೂಲಕ ದಿವಾಕರ್​ ಅವರಿಗೆ ದೊಡ್ಡ ಜನಪ್ರಿಯತೆ ಸಿಕ್ಕಿತ್ತು. ಇನ್ನು, ‘ಮಜಾಭಾರತ’ ಶೋನಲ್ಲಿ ಭಾಗವಹಿಸಿದ ಕಲಾವಿದರು ಕೂಡ ಜನರನ್ನು ರಂಜಿಸಿ ಈಗಾಗಲೇ ಫೇಮಸ್​ ಆಗಿದ್ದಾರೆ. ಡಿಂಗ್ರಿ ನಾಗರಾಜ್​, ವಿನಯಾ ಪ್ರಸಾದ್​ ಅವರಂತಹ ಕಲಾವಿದರ ಪ್ರತಿಭೆ ಏನೆಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಇವರೆಲ್ಲರ ಸಮಾಗಮ ಆಗಿರುವ ‘ಮಾರಾಯ’ ಸಿನಿಮಾದಲ್ಲಿ ಸೋಶಿಯಲ್​ ಮೀಡಿಯಾ ಕುರಿತಾದ ಕಥೆ ಇದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ.

ಇದನ್ನೂ ಓದಿ:

Vikrant Rona Release Date: ಜು.28ಕ್ಕೆ ‘ವಿಕ್ರಾಂತ್​ ರೋಣ’ ರಿಲೀಸ್​; ಟೀಸರ್​ ನೋಡಿ ಸುದೀಪ್​ ಫ್ಯಾನ್ಸ್​ ಖುಷ್​

‘ಯಾಕ್ರಿ ನಿಮಗೆ ಇಷ್ಟು ಗಾಂಚಲಿ ಅಂತ ಕೇಳ್ತಾರೆ, ಎಲ್ಲವೂ ಇವರಿಂದಾನೆ’: ವೇದಿಕೆಯಲ್ಲಿ ಸುದೀಪ್​ ಓಪನ್​ ಮಾತು