Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಮೊದಲ ಸಿನಿಮಾಕ್ಕೆ ಸಹಾಯ ಮಾಡಿದ್ದ ಪುನೀತ್ ರಾಜ್​ಕುಮಾರ್

ದರ್ಶನ್ ಅಭಿಮಾನಿಗಳು ಸಾಮಾನ್ಯವಾಗಿ ಪುನೀತ್ ರಾಜ್​ಕುಮಾರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೂದಲಿಸುತ್ತಿರುತ್ತಾರೆ. ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಆದರೆ ಪುನೀತ್​​, ದರ್ಶನ್​ರ ಮೊದಲ ಸಿನಿಮಾ ‘ಮೆಜೆಸ್ಟಿಕ್​’ಗೆ ಸಹಾಯ ಮಾಡಿದ್ದರು. ಈ ಬಗ್ಗೆ ಆ ಸಿನಿಮಾದ ನಿರ್ಮಾಪಕ ಹೇಳಿಕೊಂಡಿದ್ದಾರೆ.

ದರ್ಶನ್ ಮೊದಲ ಸಿನಿಮಾಕ್ಕೆ ಸಹಾಯ ಮಾಡಿದ್ದ ಪುನೀತ್ ರಾಜ್​ಕುಮಾರ್
Follow us
ಮಂಜುನಾಥ ಸಿ.
|

Updated on:Oct 29, 2024 | 10:34 AM

ಅಪ್ಪು ಅಗಲಿ ಇಂದಿಗೆ ಮೂರು ವರ್ಷ. ಈಗಲೂ ಸಹ ಅಭಿಮಾನಿಗಳ ಕಣ್ಣೀರು ಆರಿಲ್ಲ. ಸಾಮಾಜಿಕ ಜಾಲತಾಣ ತೆರೆದರೆ ಇಂದಿಗೂ ಅಪ್ಪು ಅವರ ವಿಡಿಯೋಗಳು ಹರಿದಾಡುತ್ತವೆ. ರಸ್ತೆಯ ಮೇಲೆ ಹೋಗುತ್ತಿದ್ದರೆ ಬದಿಯಲ್ಲಿ ನೂರಾರು ಪುನೀತ್​ರ ಚಿತ್ರಗಳು, ಬ್ಯಾನರ್​ಗಳು ಕಾಣುತ್ತವೆ. ಅಪ್ಪು ಅಗಲಿದ್ದರೂ ಸಹ ಅಭಿಮಾಣಿಗಳ ಎದೆಯಲ್ಲಿ ಇಂದಿಗೂ ಅಮರವಾಗಿದ್ದಾರೆ. ಆದರೆ ಕೆಲವರು ಅಪ್ಪು ಹೆಸರಿಗೆ ಮಸಿ ಬಳಿಯುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಆದರೆ ಯಶಸ್ಸು ಲಭಿಸಿಲ್ಲ, ಮುಂದೆಯೂ ಲಭಿಸುವುದಿಲ್ಲ. ಅಪ್ಪು ವಿಷಯ ಬಂದಾಗ ದರ್ಶನ್ ಅಭಿಮಾನಿಗಳ ಮುಖ ಕೆಂಪಾಗುತ್ತದೆ. ದರ್ಶನ್ ಅಭಿಮಾನಿಗಳು ಪುನೀತ್ ಅವರನ್ನು ವಿರೋಧಿಸುವುದು, ಮೂದಲಿಸುವುದು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣುತ್ತಿರುತ್ತದೆ.

ಆದರೆ ಅಪ್ಪುಗೆ ಯಾರ ಮೇಲೂ ಬೇಸರವಾಗಲಿ, ಸಿಟ್ಟಾಗಲಿ ಇರಲಿಲ್ಲ. ಯಾರನ್ನೂ ಪ್ರತಿಸ್ಪರ್ಧಿ ಎಂದು ನೋಡದೆ ಎಲ್ಲರನ್ನೂ ಗೆಳೆಯರ ರೀತಿಯಲ್ಲಿಯೇ ನೋಡುತ್ತಿದ್ದರು ಅಪ್ಪು. ಅಂದಹಾಗೆ ದರ್ಶನ್​ ಇಂದು ಸ್ಟಾರ್ ಆಗಿ ಮೆರೆಯಲು ಕಾರಣವಾದ ಅವರ ಮೊದಲ ಸಿನಿಮಾ ‘ಮೆಜೆಸ್ಟಿಕ್’ಗೆ ಸಹ ಪುನೀತ್ ರಾಜ್​ಕುಮಾರ್ ಸಹಾಯ ಮಾಡಿದ್ದರು. ಈ ಬಗ್ಗೆ ಸ್ವತಃ ‘ಮೆಜೆಸ್ಟಿಕ್’ ಸಿನಿಮಾದ ನಿರ್ಮಾಪಕ ಭಾಮಾ ಹರೀಶ್ ಮಾತನಾಡಿದ್ದಾರೆ.

ದರ್ಶನ್​ ಮೊದಲ ಬಾರಿಗೆ ನಾಯಕನಾಗಿ ನಟಿಸಿದ ‘ಮೆಜೆಸ್ಟಿಕ್’ ಸಿನಿಮಾ ನಿರ್ಮಾಣವಾಗಿದ್ದ ಭಾಮಾ ಹರೀಶ್ ಅವರ ಉಲ್ಲಾಸ್ ನಿರ್ಮಾಣ ಸಂಸ್ಥೆಯ ಮೂಲಕ. ಭಾಮಾ ಹರೀಶ್ ಅವರು ಆ ಸಿನಿಮಾದ ಮುಖ್ಯ ನಿರ್ಮಾಪಕರು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಭಾಮಾ ಹರೀಶ್, ‘ಮೆಜೆಸ್ಟಿಕ್ ಸಿನಿಮಾದ ಚಿತ್ರೀಕರಣಕ್ಕೆ ಪೂರ್ಣಿಮಾ ಸಂಸ್ಥೆಯ ಯುನಿಟ್ ಅನ್ನು ಬಳಸಿಕೊಂಡಿದ್ದೆವು. ಅದು ದೊಡ್ಮನೆಯವರ ಯುನಿಟ್. ಅದನ್ನು ಪುನೀತ್ ಅವರೇ ನೋಡಿಕೊಳ್ಳುತ್ತಿದ್ದರು’ ಎಂದಿದ್ದಾರೆ ಭಾಮಾ ಹರೀಶ್.

ಇದನ್ನೂ ಓದಿ:ಪುನೀತ್ ರಾಜ್​ಕುಮಾರ್ ಹೆಸರಿನ ನಗು ಕಳೆದು ಮೂರು ವರ್ಷ; ಅಂದು ನಡೆದಿದ್ದೇನು?

‘ಪೂರ್ಣಿಮಾ ಯುನಿಟ್ ಬಳಸಿ ಚಿತ್ರೀಕರಣ ಮಾಡಿ ಚಿತ್ರೀಕರಣ ಎಲ್ಲ ಮುಗಿದ ಮೇಲೆ ಹಣ ಸೆಟಲ್​ಮೆಂಟ್ ಮಾಡಲು ನಾನು ಅವರ ಕಚೇರಿಗೆ ಹೋದೆ. ಆಗ ಅಲ್ಲಿ ಪುನೀತ್ ರಾಜ್​ಕುಮಾರ್ ಇದ್ದರು. ಆಗಿನ್ನೂ ಅವರು ಯುವಕರು. ಅವರಿಗೆ, ನಾವು ತೂಗುದೀಪ ಶ್ರೀನಿವಾಸ್ ಅವರ ಮಗನನ್ನು ನಾಯಕನನ್ನಾಗಿ ಹಾಕಿಕೊಂಡು ಸಿನಿಮಾ ಮಾಡಿದ್ದೀವಿ ಎಂದು ಹೇಳಿದೆ. ಅದಕ್ಕೆ ತೂಗುದೀಪ ಅಂಕಲ್ ನಮ್ಮವರು, ನಮ್ಮ ಮನೆ ಸದಸ್ಯರು ಎಂದು ಹೇಳಿ, ನಮ್ಮಿಂದ ಬಹಳ ಕಡಿಮೆ ಹಣ ಪಡೆದುಕೊಂಡರು. ಅಲ್ಲದೆ, ಸಿನಿಮಾಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು’ ಎಂದು ಭಾಮಾ ಹರೀಶ್ ಹೇಳಿದ್ದಾರೆ.

ಅದೇ ಸಂದರ್ಶನದಲ್ಲಿ, ‘ಮೆಜೆಸ್ಟಿಕ್’ ಸಿನಿಮಾ ಮಾಡುವ ಮುಂಚೆ ಆ ಸಿನಿಮಾದ ನಾಯಕನಾಗಿ ನಾನು ಸುದೀಪ್ ಅವರನ್ನು ಹಾಕಿಕೊಂಡಿದ್ದೆ. ಸುದೀಪ್ ಅವರಿಗೆ ಅಡ್ವಾನ್ಸ್ ಸಹ ಕೊಟ್ಟಿದ್ದೆ. ಆದರೆ ಬೇರೆ ಸಿನಿಮಾ ಇದ್ದ ಕಾರಣ ಅವರು ನಟಿಸಲು ಆಗಲಿಲ್ಲ. ಆಗ ಅವರೇ ತೂಗುದೀಪ ಶ್ರೀನಿವಾಸ್ ಮಗ ಚೆನ್ನಾಗಿದ್ದಾನೆ. ಒಳ್ಳೆಯ ಹೈಟ್, ಪರ್ನಾಲಿಟಿ ಇದೆ ಅವರನ್ನು ಹಾಕಿಕೊಳ್ಳಿ ಎಂದು ನನಗೆ ಹೇಳಿದರು’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:32 am, Tue, 29 October 24