‘ದರ್ಶನ್ ಅವರನ್ನು ಈ ಸ್ಥಿತಿಯಲ್ಲಿ ನೋಡಲು ಕಷ್ಟ’: ಜೈಲಿನಲ್ಲಿ ಭೇಟಿ ಬಳಿಕ ರಚಿತಾ ರಾಮ್ ಪ್ರತಿಕ್ರಿಯೆ

ರಚಿತಾ ರಾಮ್​ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ದರ್ಶನ್​ ನಟನೆಯ ‘ಬುಲ್​ಬುಲ್​’ ಸಿನಿಮಾ ಮೂಲಕ. ಅದು ದರ್ಶನ್​ ಹೋಮ್​ ಬ್ಯಾನರ್​ ಸಿನಿಮಾ. ತಮಗೆ ಅವಕಾಶ ಕೊಟ್ಟ ದರ್ಶನ್​ ಈಗ ಈ ಸ್ಥಿತಿಯಲ್ಲಿ ಇರುವುದನ್ನು ನೋಡಿ ರಚಿತಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಇಂದು (ಆಗಸ್ಟ್​ 22) ದರ್ಶನ್​ ಅವರನ್ನು ರಚಿತಾ ಮಾತನಾಡಿಸಿದ್ದಾರೆ.

‘ದರ್ಶನ್ ಅವರನ್ನು ಈ ಸ್ಥಿತಿಯಲ್ಲಿ ನೋಡಲು ಕಷ್ಟ’: ಜೈಲಿನಲ್ಲಿ ಭೇಟಿ ಬಳಿಕ ರಚಿತಾ ರಾಮ್ ಪ್ರತಿಕ್ರಿಯೆ
ದರ್ಶನ್​, ರಚಿತಾ ರಾಮ್​

Updated on: Aug 22, 2024 | 5:17 PM

ನಟ ದರ್ಶನ್​ ಜೈಲು ಸೇರಿ ಎರಡು ತಿಂಗಳಿಗೂ ಹೆಚ್ಚು ಸಮಯ ಕಳೆದಿದೆ. ಈಗ ಅವರನ್ನು ನೋಡಲು ರಚಿತಾ ರಾಮ್​ ಬಂದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ ಅವರನ್ನು ರಚಿತಾ ರಾಮ್​ ಭೇಟಿ ಮಾಡಿದ್ದಾರೆ. ಭೇಟಿಯ ನಂತರ ಮಾಧ್ಯಮಗಳ ಜೊತೆ ರಚಿತಾ ಮಾತನಾಡಿದ್ದಾರೆ. ಈ ಮೊದಲು ಸೋಶಿಯಲ್​ ಮೀಡಿಯಾದಲ್ಲಿ ರಚಿತಾ ಅವರು ಈ ಪ್ರಕರಣದ ಬಗ್ಗೆ ಪೋಸ್ಟ್​ ಮಾಡಿದ್ದರು. ಈಗ ನೇರವಾಗಿ ತಮ್ಮ ಮಾತುಗಳನ್ನು ಮಾಧ್ಯಮಗಳ ಎದುರು ಹಂಚಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​, ಪವಿತ್ರಾ ಗೌಡ ಮುಂತಾದವರು ಪ್ರಮುಖ ಆರೋಪಿಗಳಾಗಿದ್ದಾರೆ. ಜೈಲಿನಲ್ಲಿರುವ ಅವರನ್ನು ಅನೇಕರು ಭೇಟಿ ಮಾಡಿದ್ದಾರೆ.

‘ದರ್ಶನ್​ ಅವರನ್ನು ಈ ಸ್ಥಿತಿಯಲ್ಲಿ ನೋಡೋಕೆ ಕಷ್ಟ ಆಗುತ್ತದೆ. ಅವರನ್ನು ನಾವೆಲ್ಲರೂ ತುಂಬ ಮಿಸ್​ ಮಾಡಿಕೊಳ್ಳುತ್ತಿದ್ದೇವೆ. ಅವರ ಅಭಿಮಾನಿಗಳು, ಅವರು ಕುಟುಂಬದವರು ಎಷ್ಟು ಮಿಸ್​ ಮಾಡಿಕೊಳ್ಳುತ್ತಿದ್ದಾರೋ ನಾನು ಕೂಡ ಅಷ್ಟೇ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ನಾನು ಕೂಡ ಅವರ ಫ್ಯಾನ್​. ನಾವೆಲ್ಲ ನಿಮಗಾಗಿ ಕಾಯುತ್ತಿದ್ದೇವೆ, ಪ್ಲೀಸ್​ ಬೇಗ ಬನ್ನಿ ಅಂತ ಹೇಳಿಬಂದಿದ್ದೇನೆ’ ಎಂದಿದ್ದಾರೆ ರಚಿತಾ ರಾಮ್​

‘ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ಆದಷ್ಟು ಬೇಗ ಹೊರಗೆ ಬರುತ್ತೇನೆ ಅಂತ ದರ್ಶನ್​ ನನಗೆ ಹೇಳಿದ್ದಾರೆ. ಅವರು ತುಂಬಾ ಆರೋಗ್ಯವಾಗಿದ್ದಾರೆ’ ಎಂದು ರಚಿತಾ ರಾಮ್​ ಅವರು ಹೇಳಿದ್ದಾರೆ. ‘ಬುಲ್​ಬುಲ್​’, ‘ಅಂಬರೀಷ’, ‘ಜಗ್ಗುದಾದ’, ‘ಕ್ರಾಂತಿ’ ಸಿನಿಮಾಗಳಲ್ಲಿ ದರ್ಶನ್​ ಜೊತೆ ರಚಿತಾ ರಾಮ್​ ನಟಿಸಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ರಚಿತಾ ರಾಮ್​ ನಟನೆಯ ‘ಬ್ಯಾಡ್​ ಮ್ಯಾನರ್ಸ್​’ ಹಾಗೂ ಈ ವರ್ಷ ತೆರೆಕಂಡ ‘ಮ್ಯಾಟ್ನಿ’ ಸಿನಿಮಾಗಳ ಪ್ರಚಾರಕ್ಕೆ ದರ್ಶನ್​ ಸಹಾಯ ಮಾಡಿದ್ದರು.

ಇದನ್ನೂ ಓದಿ: ಕೊಲೆ ಕೇಸ್​ನಲ್ಲಿ ದರ್ಶನ್​ಗೆ ಹೆಚ್ಚಿದ ಸಂಕಷ್ಟ; A2ನಿಂದ A1 ಮಾಡಿ ಚಾರ್ಜ್​ಶೀಟ್​ ಸಲ್ಲಿಕೆಗೆ ಸಿದ್ಧತೆ

ಶೀಘ್ರದಲ್ಲೇ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಕೆ ಮಾಡಲಿದ್ದಾರೆ. ಈ ಪ್ರಕರಣದಲ್ಲಿ ದರ್ಶನ್​ ಎ1 ಆಗುವ ಸಾಧ್ಯತೆ ಇದೆ. ಹಲವಾರು ಬಗೆಯ ಸಾಕ್ಷಿಗಳು ಪೊಲೀಸರಿಗೆ ಸಿಕ್ಕಿವೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಹತ್ಯೆ ಮಾಡಿದ ಆರೋಪ ದರ್ಶನ್​ ಮೇಲಿದೆ. ಪ್ರಕರಣದ ತನಿಖೆ ಈಗ ಕೊನೇ ಹಂತಕ್ಕೆ ಬಂದಿದೆ. ಈಗಾಗಲೇ ಸಾಧು ಕೋಕಿಲ, ತರುಣ್​ ಸುಧೀರ್​, ವಿನೋದ್​ ಪ್ರಭಾಕರ್​, ವಿನೋದ್​ ರಾಜ್​ ಮುಂತಾದವರು ಜೈಲಿಗೆ ತೆರಳಿ ದರ್ಶನ್​ ಅವರನ್ನು ಭೇಟಿಯಾಗಿ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us