‘ದೇವರೇ ಎದುರು ಬಂದರೂ ನಾನು ಕ್ಷಮೇ ಕೇಳಲ್ಲ’; ರಚಿತಾ ರಾಮ್ ನೇರ ಮಾತು
ರಚಿತಾ ರಾಮ್ ಅವರು ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಪ್ರಚಾರದಲ್ಲಿ ಭಾಗವಹಿಸದಿರುವುದಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿದೆ. ನಿರ್ದೇಶಕ ನಾಗಶೇಖರ್ ಅವರು ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದರು. ಈಗ ರಚಿತಾ ತಮ್ಮ ಮೌನ ಮುರಿದು, ಬೇರೆ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದ ಕಾರಣ ಪ್ರಚಾರಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಚಿತಾ ರಾಮ್ (Rachita Ram) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ‘ಸಂಜು ವೆಡ್ಸ್ ಗೀತಾ 2’ ಪ್ರಚಾರಕ್ಕೆ ಅವರು ಬಂದಿಲ್ಲ ಎನ್ನುವ ಆರೋಪವನ್ನು ತಂಡ ಮಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ನಾಗಶೇಖರ್ ಅವರು ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದಾರೆ. ಈ ವಿಚಾರದಲ್ಲಿ ಇಷ್ಟು ದಿನ ಮೌನವಾಗಿದ್ದ ರಚಿತಾ ರಾಮ್ ಅವರು ಇದೇ ಮೊದಲ ಬಾರಿ ಮಾತನಾಡಿದ್ದಾರೆ. ಈ ಪ್ರಕರಣದ ಪ್ರತಿ ವಿಚಾರವನ್ನೂ ತೆರೆದಿಟ್ಟಿದ್ದಾರೆ.
‘ಸಂಜು ವೆಡ್ಸ್ ಗೀತಾ 2’ ಚಿತ್ರ ಜನವರಿಯಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಸಿನಿಮಾನ ಇತ್ತೀಚೆಗೆ ಮತ್ತೊಮ್ಮೆ ರೀ-ರೀಲಿಸ್ ಮಾಡಲಾಯಿತು. ಈ ವೇಳೆ ತಂಡದವರು ಪ್ರಚಾರ ಮಾಡಿದರು. ಆದರೆ, ರಚಿತಾ ಎಲ್ಲಿಯೂ ಕಾಣಿಸಿಕೊಂಡಿಲ್ಲ. ರಚಿತಾ ಕರೆಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ನಾಗೇಶಖರ್ ದೂರಿದರು. ಈ ಎಲ್ಲಾ ವಿಚಾರಗಳಿಗೆ ರಚಿತಾ ಸ್ಪಷ್ಟನೆ ನೀಡಿದ್ದಾರೆ.
View this post on Instagram
ಈ ಮೊದಲು ‘ಸಂಜು ವೆಡ್ಸ್ ಗೀತಾ 2’ ಶೂಟ್ ವೇಳೆ ಮತ್ತೊಂದು ಚಿತ್ರದ ಪ್ರಚಾರವನ್ನು ಮಾಡಲು ನಿರ್ದೇಶಕ ನಾಗಶೇಖರ್ ಅವಕಾಶ ನೀಡಿರಲಿಲ್ಲವಂತೆ. ಈಗ ರಚಿತಾ ಅವರು ಬೇರೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದರು. ಹೀಗಾಗಿ, ಈ ಚಿತ್ರದ ಪ್ರಚಾರಕ್ಕೆ ಬರೋಕಾಗಿಲ್ಲ. ಅವರು ಮಾಡಿದ್ದನ್ನೇ ನಾನು ಮಾಡಿದ್ದೇನೆ ಎಂದು ರಚಿತಾ ಹೇಳಿದ್ದಾರೆ.
ಇದನ್ನೂ ಓದಿ: ‘ಸಂಜು ವೆಡ್ಸ್ ಗೀತಾ 2’ ತಂಡದ ಬಣ್ಣ ಬಯಲು ಮಾಡಿದ ರಚಿತಾ ರಾಮ್; ಆರೋಪಗಳಿಗೆ ತಿರುಗೇಟು
ಇನ್ನು ಸೋಶಿಯಲ್ ಮೀಡಿಯಾ ಮೂಲಕ ರಚಿತಾ ಅವರು ‘ಸಂಜು ವೆಡ್ಸ್ ಗೀತಾ 2’ ಚಿತ್ರವನ್ನು ಪ್ರಚಾರ ಮಾಡುತ್ತಲೇ ಇದ್ದರು. ಹೀಗಾಗಿ ರಚಿತಾಗೆ ತಾವು ತಪ್ಪು ಮಾಡಿದ್ದೇನೆ ಎಂದು ಅನಿಸಿಲ್ಲ. ‘ನಾನು ತಪ್ಪು ಮಾಡಿದ್ದೇನೆ ಎಂದು ಅನಿಸುತ್ತಿಲ್ಲ. ತಪ್ಪು ಮಾಡಿದ್ದೇನೆ ಎಂದರೆ ಚಿಕ್ಕ ಮಕ್ಕಳ ಕಾಲಿಗೆ ಬೇಕಿದ್ದರೂ ಬೀಳುತ್ತೇನೆ. ತಪ್ಪು ಮಾಡಿಲ್ಲ ಎಂದರೆ ದೇವರೇ ಎದುರು ಬಂದರೂ ಕ್ಷಮೆ ಕೇಳಲ್ಲ. ನನ್ನಿಂದ ನನ್ನ ಅಭಿಮಾನಿಗಳಿಗೆ ಬೇಸರ ಆಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಬೇರೆ ಯಾರಿಗೂ ನಾನು ಕ್ಷಮೆ ಕೇಳಲ್ಲ. ಲವ್ ಯೂ ಆಲ್’ ಎಂದಿದ್ದಾರೆ ಅವರು. ರಚಿತಾ ಪ್ರತಿಕ್ರಿಯೆಗೆ ತಂಡ ಯಾವ ರೀತಿಯಲ್ಲಿ ಉತ್ತರಿಸುತ್ತದೆ ಎಂಬುದನ್ನು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.