ನಟ್ಟು ಬೋಲ್ಟ್ ವಿಚಾರಕ್ಕೆ ಸುದೀಪ್ ಖಡಕ್ ತಿರುಗೇಟು; ‘ಕಾಲವೇ ಉತ್ತರ ಕೊಡುತ್ತೆ’ ಎಂದ ಡಿಕೆ ಶಿವಕುಮಾರ್
ಡಿಕೆಶಿ ಅವರ ‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ’ ಎಂಬ ಹೇಳಿಕೆಯನ್ನು ಸುದೀಪ್ ಖಂಡಿಸಿದ್ದಾರೆ. ಚಿತ್ರರಂಗದವರನ್ನು ಗೌರವಿಸುವಂತೆ ಅವರು ಡಿಕೆಶಿಯವರನ್ನು ಕೋರಿದ್ದಾರೆ. ಡಿಕೆಶಿ ಅವರು ಈ ವಿಷಯದ ಬಗ್ಗೆ "ಕಾಲವೇ ಉತ್ತರ ಕೊಡುತ್ತದೆ" ಎಂದು ಪ್ರತಿಕ್ರಿಯಿಸಿದ್ದಾರೆ. ಈ ವಿವಾದವು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್ ಕೆಲ ತಿಂಗಳ ಹಿಂದೆ ನೀಡಿದ್ದ ‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ’ ಎಂಬ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಹೇಳಿಕೆ ಬಗ್ಗೆ ಯಾರೊಬ್ಬರೂ ಪ್ರತಿಕ್ರಿಯಿಸಲು ಹೋಗಿರಲಿಲ್ಲ. ಈಗ ಸುದೀಪ್ (Kichcha Sudeep) ಅವರು ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಡಿಕೆಶಿ ಅವರು ಆ ರೀತಿಯಲ್ಲಿ ಹೇಳಿಕೆ ನೀಡಬಾರದಿತ್ತು ಎಂದು ನೇರವಾಗಿ ಹೇಳಿದ್ದಾರೆ. ಸುದೀಪ್ ಹೇಳಿಕೆಗೆ ಡಿಕೆಶಿ ಕೂಡ ಪ್ರತಿಕ್ರಿಯಿಸಿದ್ದು, ‘ಕಾಲವೇ ಉತ್ತರ ಕೊಡುತ್ತೆ’ ಎಂದಿದ್ದಾರೆ. ಈ ಘಟನೆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಡಿಕೆಶಿ ಹೇಳಿಕೆ..
ಬೆಂಗಳೂರು ಸಿನಿಮೋತ್ಸವ ಉದ್ಘಾಟನೆ ವೇಳೆ ಯಾವುದೇ ದೊಡ್ಡ ಸಿನಿಮಾ ಸೆಲೆಬ್ರಿಟಿಗಳು ಹಾಜರಿ ಹಾಕಿರಲಿಲ್ಲ. ಇದಕ್ಕೆ ಬೇಸರ ಮಾಡಿಕೊಂಡಿದ್ದ ಡಿಕೆಶಿ, ‘ವಾರ್ನಿಂಗ್ ಅಂತಾದ್ರೂ ಅಂದ್ಕೊಳ್ಳಿ, ಕೋರಿಕೆ ಅಂತಾದ್ರೂ ಅಂದ್ಕೊಳ್ಳಿ, ಚಿತ್ರರಂಗದವರ ನಟ್ಟು ಬೋಲ್ಟ್ ಹೇಗೆ ಟೈಟ್ ಮಾಡಬೇಕು ಅಂತ ಗೊತ್ತು’ ಎಂದಿದ್ದರು. ಈ ಹೇಳಿಕೆ ಚರ್ಚೆ ಹುಟ್ಟುಹಾಕಿತ್ತು. ಡಿಕೆಶಿ ಚಿತ್ರರಂಗದವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅನೇಕರು ಭಾವಿಸಿದರು.
ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ನಿರೂಪಣೆ ಬಗ್ಗೆ ನಿಲುವು ತಿಳಿಸಿದ ಸುದೀಪ್
ಸುದೀಪ್ ತಿರುಗೇಟು
ಇತ್ತೀಚೆಗೆ ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸುದೀಪ್ಗೆ ಈ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಅವರು ತಮ್ಮದೇ ಸ್ಟೈಲ್ನಲ್ಲಿ ಇದಕ್ಕೆ ಉತ್ತರಿಸಿದ್ದಾರೆ. ‘ನಾವು ಓಡಾಡೋ ಕಾರುಗಳ ನಟ್ಟು-ಬೋಲ್ಟ್ ಕೂಡ ಟೈಟ್ ಇರಬೇಕು. ಅದನ್ನು ಮಾಡೋಕೆ ನಾನು ಹೋದರೆ ಸರಿ ಇರೋದಿಲ್ಲ. ಮೆಕ್ಯಾನಿಕ್ ಬಳಿಯೇ ಹೋಗಬೇಕು. ಕಾರಿನ ವಿಚಾರ ಅವರಿಗೆ ಮಾತ್ರ ಗೊತ್ತಿರುತ್ತದೆ. ಚಿತ್ರರಂಗದ ವಿಚಾರ ಚಿತ್ರರಂಗದವರಿಗೆ ಮಾತ್ರ ಗೊತ್ತು. ಅವರ ಬಗ್ಗೆ ಗೌರವ ಇದೆ. ಕೆಲವು ಸತ್ಯವನ್ನು ತಿಳಿದುಕೊಂಡು ಮಾತನಾಡಬೇಕು’ ಎಂದು ಸುದೀಪ್ ಹೇಳಿದ್ದರು.
ಡಿಕೆಶಿ ಪ್ರತಿಕ್ರಿಯೆ
ಮಾಧ್ಯಮಗಳ ಎದುರು ಡಿಕೆಶಿ ಅವರಿಗೆ ಸುದೀಪ್ ಪ್ರತಿಕ್ರಿಯೆ ಬಗ್ಗೆ ಪ್ರಶ್ನೆ ಮಾಡಲಾಗಿದೆ. ‘ನನಗೆ ಯಾರಿಗೂ ಉತ್ತರ ಕೊಡೋಕೆ ಇಷ್ಟ ಇಲ್ಲ. ಫಿಲ್ಮ್ ಚೇಂಬರ್ಗೆ ಹೋಗಿ ನಾನು ಏನು ಮಾಡಿದ್ದೇನೆ ಎಂಬುದರ ಹಿಸ್ಟರಿ ತೆಗೆದುಕೊಂಡು ಬರಲಿ. ಅವರೆಲ್ಲರಿಗೂ ಉತ್ತರಿಸಬೇಕಿಲ್ಲ. ಕಾಲ ಉತ್ತರ ಕೊಡುತ್ತದೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:49 pm, Sat, 21 June 25