AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರರಂಗಕ್ಕೆ ಸ್ವರ್ಣಯುಗ ಇನ್ನೂ ಬಂದಿಲ್ಲ: ರಾಜ್ ಬಿ ಶೆಟ್ಟಿ

Raj B Shetty: 'ಕೆಜಿಎಫ್', 'ಕಾಂತಾರ' ಸೇರಿದಂತೆ ಇನ್ನೂ ಕೆಲವು ಸಿನಿಮಾಗಳು ಸೂಪರ್ ಹಿಟ್ ಆಗಿರುವ ಬೆನ್ನಲ್ಲೆ ಕನ್ನಡ ಚಿತ್ರರಂಗಕ್ಕೆ ಸುವರ್ಣಯುಗ ಮರಳಿದೆ ಎನ್ನಲಾಗುತ್ತಿದೆ. ಆದರೆ ಇದನ್ನು ಅಲ್ಲಗಳೆದಿರುವ ರಾಜ್ ಬಿ ಶೆಟ್ಟಿ, ಇನ್ನೂ ಸ್ವರ್ಣಯುಗ ಬಂದಿಲ್ಲ ಏಕೆ ಎಂಬುದನ್ನು ವಿವರಿಸಿದ್ದಾರೆ.

ಚಿತ್ರರಂಗಕ್ಕೆ ಸ್ವರ್ಣಯುಗ ಇನ್ನೂ ಬಂದಿಲ್ಲ: ರಾಜ್ ಬಿ ಶೆಟ್ಟಿ
ರಾಜ್ ಬಿ ಶೆಟ್ಟಿ
ಮಂಜುನಾಥ ಸಿ.
|

Updated on: Sep 15, 2023 | 8:26 PM

Share

ಕನ್ನಡ ಚಿತ್ರರಂಗಕ್ಕೆ (Sandalwood) ಇದು ಸುವರ್ಣಯುಗ ಎನ್ನಲಾಗುತ್ತಿದೆ. ‘ಕೆಜಿಎಫ್‘ (KGF), ‘ಕಾಂತಾರ‘ (Kantara), ‘777 ಚಾರ್ಲಿ’, ‘ವಿಕ್ರಾಂತ್ ರೋಣ’ ಇನ್ನೂ ಕೆಲವು ಸಿನಿಮಾಗಳು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತು ಪಡೆದುಕೊಂಡಿವೆ. ಕನ್ನಡ ಚಿತ್ರರಂಗವನ್ನು ಕ್ಷುಲ್ಲಕವಾಗಿ ಕಂಡಿದ್ದ ನೆರೆ-ಹೊರೆಯ ಚಿತ್ರರಂಗಗಳು ಈಗ ಮತ್ತೆ ಸ್ಯಾಂಡಲ್​ವುಡ್ ಕಡೆಗೆ ನಿರೀಕ್ಷೆಯ ದೃಷ್ಟಿಯಿಂದ ನೋಡುವಂತಾಗಿದೆ. ದಶಕಗಳ ಹಿಂದಿನ ಸ್ವರ್ಣಯುಗ ಚಿತ್ರರಂಗಕ್ಕೆ ಮರಳಿದೇ ಎಂದು ಹಲವರು ಹೆಮ್ಮೆ ಪಡುತ್ತಿದ್ದಾರೆ. ಆದರೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಈ ವಿಷಯದಲ್ಲಿ ಬೇರೆಯದೇ ವಾದವನ್ನು ಮುಂದಿರಿಸಿದ್ದಾರೆ.

ಟಿವಿ9 ಆಯೋಜಿಸಿದ್ದ ಶೃಂಗಸಭೆಯಲ್ಲಿ ಚಿತ್ರೋದ್ಯಮದ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ರಾಜ್ ಬಿ ಶೆಟ್ಟಿ, ”ಕನ್ನಡಕ್ಕೆ ಸುವರ್ಣಯುಗ ಮರಳಿ ಬಂದಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ನೋಡಿ ಒಂದು ಕಾಲದಲ್ಲಿ ಮಹನೀಯರಾದ ಡಾ ರಾಜ್​ಕುಮಾರ್ ಅವರು ವರ್ಷಕ್ಕೆ 14-15 ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆ ಎಲ್ಲ ಸಿನಿಮಾಗಳು ಸಹ ಸೂಪರ್ ಹಿಟ್ ಆಗುತ್ತಿದ್ದವು. ಆದರೆ ಈಗ ವರ್ಷಕ್ಕೆ ಆರೇಳು ಸಿನಿಮಾಗಳು ಹಿಟ್ ಆಗುತ್ತಿವೆ ಅಷ್ಟೆ. ಉಳಿದೆಲ್ಲ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಸೋಲುತ್ತಿವೆ. ಹೀಗಿದ್ದಾಗ ಸುವರ್ಣ ಯುಗ ಎಂದು ಕರೆಯುವುದು ಹೇಗೆ?” ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ನನ್ನ ಸಿನಿಮಾಗಳು ಮನುಷ್ಯನ ಹಾಗೂ ಹಿಂಸೆಯ ಅಧ್ಯಯನ: ರಾಜ್ ಬಿ ಶೆಟ್ಟಿ

‘ಹಾಗಿದ್ದರೆ ಇದನ್ನು ಗ್ಲೋಬಲ್ ಯುಗ’ ಎಂದು ಕರೆಯಬಹುದಾ? ಎಂಬ ಪ್ರಶ್ನೆಗೂ ಸಹ ಪೂರ್ಣ ಸಹಮತ ನೀಡದ ರಾಜ್​ ಬಿ ಶೆಟ್ಟಿ, ”ಕೆಜಿಎಫ್’, ‘ಕಾಂತಾರ’ ರೀತಿಯ ಸಿನಿಮಾಗಳು ಗಡಿಯನ್ನು ದಾಟಿ ಹೋಗಿ ಯಶಸ್ಸು ಗಳಿಸಿರುವ ಕಾರಣ ನಮಗೆ ಹಾಗೆ ಅನ್ನಿಸುತ್ತಿದೆ. ಆದರೆ ಅವುಗಳ ಸಂಖ್ಯೆ ಸಹ ಕಡಿಮೆಯೇ ಇದೆ. ಎಲ್ಲಿಯ ತನಕ ವರ್ಷಕ್ಕೆ ಆರು-ಏಳು ಸಿನಿಮಾಗಳಷ್ಟೆ ಹಿಟ್ ಆಗುತ್ತವೆಯೋ ಅಲ್ಲಿಯವರೆಗೆ ಸ್ವರ್ಣಯುಗ ಬಂದಿದೆ ಎಂದು ಹೇಳಲಾಗುವುದಿಲ್ಲ. ಆದರೆ ಈಗಿನದ್ದನ್ನು ‘ದುಡಿಯುತ್ತಿರುವ ಯುಗ’ ಎಂದು ಹೇಳಬಹುದು” ಎಂದಿದ್ದಾರೆ.

ಅದೇ ಸಂದರ್ಶನದಲ್ಲಿ ಸಿನಿಮಾಗಳ ಬಜೆಟ್​ ಬಗ್ಗೆ ಮಾತನಾಡುತ್ತಾ, ”ಪ್ರತಿಯೊಂದು ಕತೆಗೂ ಅದರದ್ದೇ ಆದ ಬಜೆಟ್​ ಇರುತ್ತದೆ, ಕತೆಯೇ ಒಂದು ನಿರ್ದಿಷ್ಟ ಬಜೆಟ್ ಬೇಡುತ್ತದೆ. ಆಯಾ ಕತೆ ಬೇಡುವ ಬಜೆಟ್ ಅನ್ನು ನಾವು ನೀಡಬೇಕಾಗುತ್ತದೆ. ನನ್ನ ಮೊದಲ ಸಿನಿಮಾ ‘ಒಂದು ಮೊಟ್ಟೆಯ ಕತೆ’ಗೆ ಸೀಮಿತ ಬಜೆಟ್ ಸಾಕಾಗಿತ್ತು, ನಿರ್ಮಾಪಕ ಕೊಡುತ್ತಾನೆಂದು ನಾನು 20 ಕೋಟಿ ಹಾಕಿ ಆ ಸಿನಿಮಾ ಮಾಡಿದ್ದರೆ ಸಿನಿಮಾ ಸೋಲುತ್ತಿದ್ದು, ಅದೇ ‘ಕೆಜಿಎಫ್’ ಸಿನಿಮಾದ ಕತೆಗೆ ಅದರದ್ದೇ ಆದ ಬಜೆಟ್ ಬೇಡಿಕೆ ಇತ್ತು, ಆ ಸಿನಿಮಾವನ್ನು ಎರಡು ಕೋಟಿಯಲ್ಲಿ ಮಾಡಿದ್ದರೆ ವರ್ಕೌಟ್ ಆಗುತ್ತಿರಲಿಲ್ಲ” ಎಂದು ವಿವರಿಸಿದರು.

ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾಕ್ಕೆ ರಾಜ್, ಚಿತ್ರಕತೆ ಬರೆದಿದ್ದಾರೆ. ಮೂಲಕತೆ ಟಿಕೆ ದಯಾನಂದ್ ಅವರದ್ದು. ಸಿನಿಮಾವನ್ನು ಬಾಸಿಲ್ ನಿರ್ದೇಶನ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಮೂಗ ವ್ಯಕ್ತಿ ಟೋಬಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಚೈತ್ರಾ ಆಚಾರ್ ಹಾಗೂ ಸಂಯುಕ್ತಾ ಹೊರನಾಡು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾಕ್ಕೆ ಧನಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ