ಎಸ್ಪಿ ಬಾಲಸುಬ್ರಮಣ್ಯಂ ಚಿತ್ರದಲ್ಲಿ ಹಾಡಿದ್ದ ರಾಜ್ಕುಮಾರ್; ಅಣ್ಣಾವ್ರ ಅಂಜಿಕೆ ಏನಿತ್ತು?
ರಾಜ್ಕುಮಾರ್ ಅವರ ಅದ್ಭುತ ಗಾಯನ ಪ್ರತಿಭೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಒಮ್ಮೆ ಎಸ್ಪಿಬಿ ನಟಿಸಿದ್ದ ‘ಮುದ್ದಿನ ಮಾವ’ ಚಿತ್ರಕ್ಕಾಗಿ ರಾಜ್ಕುಮಾರ್ ಹಾಡಿದ್ದರು. ಎಸ್ಪಿಬಿ ಅವರು ತಮ್ಮ ಪಾತ್ರದ ಹಾಡನ್ನು ರಾಜ್ಕುಮಾರ್ ಹಾಡಬೇಕೆಂದು ಬಯಸಿದ್ದರು. ರಾಜ್ಕುಮಾರ್ ಅವರು ಹಾಡಿದ ಬಳಿಕ, ಹಾಡು ಜನರಿಗೆ ಇಷ್ಟವಾಗುತ್ತದೆಯೇ ಎಂಬ ಆತಂಕ ಅವರಿಗೆ ಇತ್ತು

ರಾಜ್ಕುಮಾರ್ (Rajkumar) ಕಂಠ ಸಿರಿ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರು ಅದ್ಭುತವಾಗಿ ಹಾಡುತ್ತಿದ್ದರು. ಅವರ ಕಂಠದಿಂದ ಮೂಡಿ ಬಂದ ಹಾಡನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ ಮತ್ತು ಇದಕ್ಕೆ ಅವರಿಗೆ ಅವಾರ್ಡ್ಗಳೂ ಕೂಡ ಸಂದಿವೆ. ಒಮ್ಮೆ ಎಸ್ಪಿಬಿ ನಟಿಸಿದ್ದ ಸಿನಿಮಾಗಾಗಿ ರಾಜ್ಕುಮಾರ್ ಹಾಡಿದ್ದರು. ಈ ಘಟನೆಯನ್ನು ಎಸ್ಪಿಬಿ ಅವರು ಅಂದು ನೆನಪಿಸಿಕೊಂಡಿದ್ದರು. ಬಾಲಸುಬ್ರಮಣ್ಯಂ ಅವರ ಜನ್ಮದಿನದ ಸಂದರ್ಭದಲ್ಲಿ ಆ ಘಟನೆಯನ್ನು ನೆನಪಿಸಿಕೊಳ್ಳೋಣ.
ಎಸ್ಪಿಬಿ ಹಾಗೂ ಶಶಿಕುಮಾರ್ ಅವರು ‘ಮುದ್ದಿನ ಮಾವ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಶಶಿಕುಮಾರ್ ಮಾವನ ಪಾತ್ರದಲ್ಲಿ ಎಸ್ಪಿಬಿ ನಟಿಸಿದ್ದರು. ಈ ಸಿನಿಮಾ ಮೆಚ್ಚುಗೆ ಪಡೆಯಿತು. ಈ ಚಿತ್ರದ ತೂಕ ಹೆಚ್ಚಲು ರಾಜ್ಕುಮಾರ್ ಹಾಡೂ ಕೂಡ ಕಾರಣ ಆಯಿತು. ಈ ಸಿನಿಮಾಗಾಗಿ ರಾಜ್ಕುಮಾರ್ ಅವರು ‘ದೀಪಾವಳಿ.. ದೀಪಾವಳಿ’ ಹಾಡು ಹಾಗೂ ‘ಶಿವನೆ’ ಹಾಡನ್ನು ಹಾಡಿದ್ದರು.
ಹೀರೋ ಹಾಡನ್ನು ಎಸ್ಪಿಬಿ ಹಾಡುವುದಾಗಿ ತೀರ್ಮಾನಿಸಲಾಯಿತು. ಆದರೆ, ಎಸ್ಪಿಬಿ ತಮ್ಮ ಪಾತ್ರದ ಹಾಡನ್ನು ಬೇರೊಬ್ಬ ಗಾಯಕರು ಹಾಡಬೇಕು ಎಂದು ಬೇಡಿಕೆ ಇಟ್ಟರು. ಆದರೆ, ಆಗ ನೆನಪಾಗಿದ್ದು ರಾಜ್ಕುಮಾರ್. ಆದರೆ, ಹಾಡಲು ಅವರು ಒಪ್ಪಬೇಕಲ್ಲ. ಇದೇ ಅಂಜಿಕೆಯಲ್ಲಿ ತಂಡದವರು ರಾಜ್ಕುಮಾರ್ ಅವರನ್ನು ಸಂಪರ್ಕಿಸಿದರು.
ಎಸ್ಪಿಬಿ ಅವರು ರಾಘವೇಂದ್ರ ರಾಜ್ಕುಮಾರ್ ಬಳಿ ತಮ್ಮ ಇಂಗಿತ ಹೊರಹಾಕಿದರು. ಅವರು ಹೋಗಿ ರಾಜ್ಕುಮಾರ್ ಬಳಿ ಈ ವಿಚಾರ ಹೇಳಿದರು. ಇದನ್ನು ಕೇಳಿದ ರಾಜ್ಕುಮಾರ್ ಅವರು ‘ಗಂಗೆ ಬಂದು ಒಂದು ಬಟ್ಟಲಲ್ಲಿ ನೀರು ಕೊಡಿ’ ಅಂತ ಕೇಳಿದ ಹಾಗಾಯ್ತು ಎಂದು ಹೇಳಿಕೊಂಡಿದ್ದರಂತೆ.
ಇದನ್ನೂ ಓದಿ: ರಾಜ್ಕುಮಾರ್ ಸದಾ ಬಿಳಿ ಪಂಚೆ, ಶರ್ಟ್ನಲ್ಲೇ ಇರುತ್ತಿದ್ದರೇಕೆ? ಆ ಘಟನೆಯೇ ಕಾರಣ
ಹಾಡು ಹಾಡಿದ ಬಳಿಕ ರಾಜ್ಕುಮಾರ್ ಕರೆ ಮಾಡಿ ಹಾಡು ಹೇಗಿದೆ? ಎಲ್ಲಾದರೂ ತಪ್ಪಾಗಿದೆಯಾ ಎಂದೆಲ್ಲ ಕೇಳಿದ್ದರಂತೆ. ಜನರು ಇದ್ದನ್ನು ಒಪ್ಪಿಕೊಳ್ಳುತ್ತಾರಾ ಎನ್ನುವ ಭಯ ಅವರಿಗೆ ಇತ್ತು. ಈ ಘಟನೆಯನ್ನು ಎಸ್ಪಿಬಿ ಅವರು ಈ ಮೊದಲು ನೆನಪಿಸಿಕೊಂಡಿದ್ದರು. ಎಸ್ಪಿಬಿ ಅವರು ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಅವರಿಗೆ ಇಂದು (ಜೂನ್ 4) ಜನ್ಮದಿನ. ಅವರ ಹಾಡುಗಳನ್ನು ನೆನಪಿಸಿಕೊಳ್ಳಲಾಗುತ್ತಿದೆ. ಎಸ್ಪಿಬಿ ಅವರಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



