Ramya: ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಟೈಟಲ್​​ ಕಿರಿಕ್​; ರಮ್ಯಾ ಸಿನಿಮಾದ ವಿರುದ್ಧ ರಾಜೇಂದ್ರ ಸಿಂಗ್​ ಬಾಬು ದೂರು

| Updated By: ಮದನ್​ ಕುಮಾರ್​

Updated on: Dec 12, 2022 | 2:32 PM

Swathi Mutthina Male Haniye: ಒಂದೇ ಶೀರ್ಷಿಕೆಯಲ್ಲಿ ಎರಡು ಸಿನಿಮಾ ನಿರ್ಮಾಣ ಆಗುತ್ತಿರುವುದು ಅಚ್ಚರಿ ಮೂಡಿಸಿದೆ. ರಮ್ಯಾ ಅವರು ತಮ್ಮ ಚಿತ್ರದ ಟೈಟಲ್​ ಬದಲಾಯಿಸುತ್ತಾರಾ ಎಂಬ ಪ್ರಶ್ನೆ ಮೂಡಿದೆ.

Ramya: ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಟೈಟಲ್​​ ಕಿರಿಕ್​; ರಮ್ಯಾ ಸಿನಿಮಾದ ವಿರುದ್ಧ ರಾಜೇಂದ್ರ ಸಿಂಗ್​ ಬಾಬು ದೂರು
ರಾಜೇಂದ್ರ ಸಿಂಗ್ ಬಾಬು, ರಮ್ಯಾ
Follow us on

ನಟಿ ರಮ್ಯಾ (Ramya Divya Spandana) ಅವರು ಬಹಳ ಉತ್ಸಾಹದಲ್ಲಿ ನಿರ್ಮಾಪಕಿ ಆಗಿದ್ದಾರೆ. ಅವರ ನಿರ್ಮಾಣದಲ್ಲಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಮೂಡಿಬರುತ್ತಿದೆ. ಈಗಾಗಲೇ ಈ ಚಿತ್ರಕ್ಕೆ ಶೂಟಿಂಗ್​ ಮುಗಿದಿದೆ. ಆದರೆ ಈಗ ಶೀರ್ಷಿಕೆ ವಿಚಾರವಾಗಿ ಕಿರಿಕ್​ ಶುರುವಾಗುವ ಸೂಚನೆ ಸಿಕ್ಕಿದೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Mutthina Male Haniye) ಶೀರ್ಷಿಕೆಯನ್ನು ಬಳಸಬಾರದು ಎಂದು ಹಿರಿಯ ನಿರ್ದೇಶಕ ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು (S V Rajendra Singh Babu) ಅವರು ಆಕ್ಷೇಪ ಎತ್ತಿದ್ದಾರೆ. ಈ ಕುರಿತು ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಈ ಶೀರ್ಷಿಕೆಯನ್ನು ತಾವು ನೋಂದಾಯಿಸಿದ್ದು, ಬೇರೆ ಯಾರಿಗೂ ಇದನ್ನು ಬಳಸಲು ಅವಕಾಶ ನೀಡಬಾರದು ಎಂದು ಅವರು ಪತ್ರದಲ್ಲಿ ಖಡಕ್​ ಆಗಿ ತಿಳಿಸಿದ್ದಾರೆ.

1990ರಲ್ಲಿ ‘ಬಣ್ಣದ ಗೆಜ್ಜೆ’ ಚಿತ್ರ ಬಿಡುಗಡೆ ಆಗಿತ್ತು. ಆ ಸಿನಿಮಾಗೆ ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು ನಿರ್ದೇಶನ ಮಾಡಿದ್ದರು. ‘ಬಣ್ಣದ ಗೆಜ್ಜೆ’ ಚಿತ್ರದ ‘ಸ್ವಾತಿ ಮುತ್ತಿನ ಮಳೆ ಹನಿಯೇ..’ ಹಾಡು ಇಂದಿಗೂ ಫೇಮಸ್​. ಇದೇ ಶೀರ್ಷಿಕೆಯನ್ನು ಇಟ್ಟುಕೊಂಡು ನಟಿ ರಮ್ಯಾ ಅವರು ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ರಾಜೇಂದ್ರ ಸಿಂಗ್​ ಬಾಬು ಅವರು ಈ ಶೀರ್ಷಿಕೆಯನ್ನು ತಾವು ನೋಂದಾಯಿಸಿರುವುದಾಗಿ ತಿಳಿಸಿದ್ದಾರೆ. ಹಾಗಾಗಿ ತಮ್ಮ ಪರ ವಕೀಲರ ಮೂಲಕ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರಕ್ಕೆ ‘ರೆಬಲ್​ ಸ್ಟಾರ್​’ ಅಂಬರೀಷ್​ ಹಾಗೂ ಸುಹಾಸಿನಿ ಅವರು ಜೋಡಿ ಎಂಬುದು ವಿಶೇಷ. ಈ ಚಿತ್ರಕ್ಕೆ ಶೇಕಡ 80ರಷ್ಟು ಶೂಟಿಂಗ್​ ಮುಗಿದಿತ್ತು. ಆದರೆ ಅಂಬರೀಷ್​ ನಿಧನರಾದ ಬಳಿಕ ಕೆಲವು ದೃಶ್ಯಗಳ ಚಿತ್ರೀಕರಣ ಬಾಕಿ ಉಳಿದುಕೊಂಡಿತು ಎಂದು ಪತ್ರದಲ್ಲಿ ರಾಜೇಂದ್ರ ಸಿಂಗ್​ ಬಾಬು ತಿಳಿಸಿದ್ದಾರೆ.

ಇದನ್ನೂ ಓದಿ
Ramya: 18ನೇ ಪ್ರಾಯದಲ್ಲಿ ರಮ್ಯಾ ಹೇಗಿದ್ದರು ನೋಡಿ; ವೈರಲ್​ ಆಗಿದೆ ಹಳೇ ಐಡಿ ಕಾರ್ಡ್​​ ಫೋಟೋ
ಕನ್ನಡದ ಪ್ರಸಿದ್ಧ ನಟಿಯರ ಪಟ್ಟಿಯಲ್ಲಿ ರಮ್ಯಾಗೆ 4ನೇ ಸ್ಥಾನ; ರಚಿತಾ, ಆಶಿಕಾ, ರಶ್ಮಿಕಾ, ರಾಧಿಕಾ ನಡುವೆ ನಂ.1 ಯಾರು?
Ramya: ತಮ್ಮನ್ನು ತಾವೇ ‘ಡ್ರಾಮಾ ಕ್ವೀನ್​’ ಎಂದು ಕರೆದುಕೊಂಡ ನಟಿ ರಮ್ಯಾ; ಕಾರಣ ಏನು?
Ramya: ಕಡೆಗೂ ಶೂಟಿಂಗ್​ ಸೆಟ್​ಗೆ ಬಂದ ರಮ್ಯಾ: ಡಾಲಿ ಜತೆ ಇರುವ ವಿಡಿಯೋ ವೈರಲ್​; ಏನಿದು ಸಮಾಚಾರ?

ಇದನ್ನೂ ಓದಿ:  ಬೆರಳೆಣಿಕೆ ದಿನಗಳಲ್ಲಿ ಸಿನಿಮಾ ಶೂಟಿಂಗ್​ ಪೂರ್ಣಗೊಳಿಸಿದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ತಂಡ

ರಮ್ಯಾ ಅವರು ‘ಆಪಲ್​ ಬಾಕ್ಸ್​’ ಹೆಸರಲಿನಲ್ಲಿ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಅದರ ಮೂಲಕ ನಿರ್ಮಾಣ ಆಗುತ್ತಿರುವ ಮೊದಲ ಚಿತ್ರ ‘ಸ್ವಾತಿ ಮುತ್ತಿನ ಮಳೆ ಹನಿಯೇ’. ರಾಜ್​ ಬಿ. ಶೆಟ್ಟಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಸಿರಿ ರವಿಕುಮಾರ್​ ಅವರು ನಾಯಕಿ ಆಗಿದ್ದಾರೆ. ಆದರೆ ಈಗ ಈ ಚಿತ್ರಕ್ಕೆ ಶೀರ್ಷಿಕೆ ವಿವಾದ ಎದುರಾಗಿದೆ.

ಇದನ್ನೂ ಓದಿ: Actress Ramya: ‘ನಾನು ಆ ಚಿತ್ರದಲ್ಲಿ ನಟಿಸುತ್ತಿಲ್ಲ’; ಸ್ಪಷ್ಟನೆ ನೀಡಿದ ನಟಿ ರಮ್ಯಾ

ಒಂದೇ ಶೀರ್ಷಿಕೆಯಲ್ಲಿ ಎರಡು ಸಿನಿಮಾ ನಿರ್ಮಾಣ ಆಗುತ್ತಿರುವುದು ಅಚ್ಚರಿ ಮೂಡಿಸಿದೆ. ರಮ್ಯಾ ಅವರು ತಮ್ಮ ಚಿತ್ರದ ಶೀರ್ಷಿಕೆ ಬದಲಾಯಿಸುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಈ ಕುರಿತು ಅವರು ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:32 pm, Mon, 12 December 22