‘ಯುದ್ಧಕಾಂಡ’ ವೇದಿಕೆಯಲ್ಲಿ ಅಪ್ಪನ ತ್ಯಾಗದ ವಿಷಯ ತೆರೆದಿಟ್ಟ ರವಿಚಂದ್ರನ್
ಅದ್ದೂರಿಯಾದ ಸಿನಿಮಾಗಳನ್ನು ಮಾಡಿ ಮನಗೆದ್ದ ರವಿಚಂದ್ರನ್ ಅವರಿಗೆ ಅವರ ತಂದೆ ಬೆಂಬಲವಾಗಿ ನಿಂತಿದ್ದರು. ತಂದೆಯ ತ್ಯಾಗವನ್ನು ರವಿಚಂದ್ರನ್ ಅವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅಜಯ್ ರಾವ್ ನಟನೆಯ ‘ಯುದ್ಧಕಾಂಡ’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ರವಿಚಂದ್ರನ್ ಅವರು ತಂದೆಯ ಬಗ್ಗೆ ಮನಸಾರೆ ಮಾತನಾಡಿದ್ದಾರೆ.

ನಟ ರವಿಚಂದ್ರನ್ (Ravichandran) ಅವರಿಗೆ ಸಿನಿಮಾ ಮೇಲೆ ಇರುವ ಪ್ರೀತಿ ಬಹಳ ದೊಡ್ಡದು. ಸಿನಿಮಾಗಾಗಿ ಅವರು ಸಾಕಷ್ಟು ಹಣವನ್ನು ಕಳೆದುಕೊಂಡಿದ್ದಾರೆ. ಆದರೆ ಅದಕ್ಕೆ ಅವರು ಬೇಸರ ಮಾಡಿಕೊಂಡಿಲ್ಲ. ಏನೇ ಮಾಡಿದರೂ ಸಿನಿಮಾಗಾಗಿ ಮಾಡಿರುವುದು ಎಂಬ ನಂಬಿಕೆ ಅವರದ್ದು. ಹಾಗಾಗಿ ರವಿಚಂದ್ರನ್ ಅವರು ಚಿತ್ರರಂಗದಲ್ಲಿ ಅನೇಕರಿಗೆ ಸ್ಫೂರ್ತಿ ಆಗಿದ್ದಾರೆ. ನಟ ಅಜಯ್ ರಾವ್ (Ajay Rao) ಅವರು ಕೂಡ ರವಿಚಂದ್ರನ್ ಅವರನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ‘ಯುದ್ಧಕಾಂಡ’ (Yuddhakanda) ಸಿನಿಮಾ ಮಾಡಿದ್ದಾರೆ. ಹಾಗಾಗಿ ರವಿಚಂದ್ರನ್ ಕೈಯಿಂದಲೇ ಟ್ರೇಲರ್ ಬಿಡುಗಡೆ ಮಾಡಿಸಲಾಗಿದೆ. ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ರವಿಚಂದ್ರನ್ ಅವರು ತಮ್ಮ ಸಿನಿಮಾ ಜರ್ನಿಯ ಬಗ್ಗೆ ಮಾತನಾಡಿದರು.
‘ಕೋಟಿಗಟ್ಟಲೆ ರೂಪಾಯಿ ಹಣ ಹೂಡಿ ಸಿನಿಮಾ ಮಾಡಿಕೊಂಡು ಬಂದಾಗ ನಮ್ಮ ಅಪ್ಪ ದುಡ್ಡು ಹಾಕುತ್ತಿದ್ದರು. ನಂಗೆ ಆ ದುಡ್ಡಿನ ಬೆಲೆ ಗೊತ್ತಿರಲಿಲ್ಲ. ಇವತ್ತೂ ನನಗೆ ದುಡ್ಡಿನ ಬೆಲೆ ಗೊತ್ತಿಲ್ಲ. ಹಂಗೆ ಬೆಳೆದುಕೊಂಡು ಬಂದೆ. ನನಗೆ 100 ಟ್ಯಾಂಕ್ ನೀರು ಬೇಕು. ನನಗೆ 100 ಜನ ಡ್ಯಾನ್ಸರ್ಸ್ ಬೇಕು. ನಮ್ಮ ಅಪ್ಪ ಎಲ್ಲಿಂದ ತರುತ್ತಿದ್ದರು? ಏನು ಮಾಡುತ್ತಿದ್ದರು ಎಂಬುದು ನನಗೆ ಗೊತ್ತಿಲ್ಲ. ಏನೋ ಮಗ ಕನಸು ಕಾಣುತ್ತಿದ್ದಾನೆ. ಅವನಿಗೆ ಏನು ಬೇಕೋ ಅದನ್ನು ಕೊಡ್ರೋ ಎನ್ನುತ್ತಿದ್ದರು. ಅದರ ಹಿಂದೆ ಅವರು ಎಷ್ಟು ಸಾಲ ಮಾಡುತ್ತಿದ್ದಾರೆ, ಎಷ್ಟು ಕಷ್ಟಪಡುತ್ತಿದ್ದಾರೆ ಅಂತ ನನಗೆ ಗೊತ್ತಿರಲಿಲ್ಲ’ ಎಂದು ರವಿಚಂದ್ರನ್ ಅವರು ಹೇಳಿದ್ದಾರೆ.
‘ಆದರೆ ಬೇರೆ ದಿನಗಳು ಬಂದವು. ಪ್ರತಿ ಪೈಸೆಯ ಬೆಲೆ ನನಗೆ ಗೊತ್ತಾಯಿತು. ನನ್ನ ಜೇಬು ಖಾಲಿ ಆದಾಗ ಅರೆ, ನನ್ನ ಬಳಿ ದುಡ್ಡು ಇಲ್ಲವಲ್ಲ ಅನಿಸಿತು. ಎಷ್ಟೇ ದುಡ್ಡು ಇಲ್ಲ ಎಂದರೂ ಕೂಡ ಸಿನಿಮಾ ಮಾಡುವ ಹುಚ್ಚು ನಮ್ಮನ್ನು ಬಿಡಲ್ಲ. ಇರುವ ದುಡ್ಡಲ್ಲೇ ಸಿನಿಮಾ ಮಾಡಬೇಕು ಎಂಬುದನ್ನು ಕನಸು ಕಾಣಲು ಶುರು ಮಾಡಿದವನು ನಾನು’ ಎಂದಿದ್ದಾರೆ ರವಿಚಂದ್ರನ್.
‘ಹಣ ಖರ್ಚು ಮಾಡುವುದು ಮುಖ್ಯವಲ್ಲ. ಜನರಿಗೆ ನಾವು ಏನು ಕಂಟೆಂಟ್ ತಲುಪಿಸುತ್ತೇವೆ? ನಮ್ಮ ಭಾವನೆ ಏನು ರೀಚ್ ಆಗುತ್ತದೆ? ಪ್ರೇಕ್ಷಕರ ಮನಸ್ಸನ್ನು ಎಷ್ಟು ಹಿಂಡುತ್ತೇವೆ ಎಂಬುದು ತುಂಬಾ ಮುಖ್ಯ. ಯುದ್ಧಕಾಂಡ ಸಿನಿಮಾದ ಟ್ರೇಲರ್ ನೋಡಿದಾಗ ನನಗೆ ಹೀಗೆ ಅನಿಸಿತು. ನಾನು ಮಂಜಿನ ಹನಿ ಸಿನಿಮಾ ಟ್ರೇಲರ್ ಬಿಟ್ಟಿದ್ದೆ. ಒಂದು ಹೆಣ್ಣಿನ ಕೂಗು, ಮಗುವಿನ ಅಳು. ಅದಕ್ಕೆ ಕರಗದೇ ಇರುವ ಮನಸ್ಸೇ ಇಲ್ಲ ಅಂತ ಹೇಳಿದ್ದೆ. ಅದನ್ನು ನಿಮ್ಮ ಸಿನಿಮಾದಲ್ಲಿ ಕಾಪಿ ಹೊಡೆದಿದ್ದೀರಿ ಅನಿಸಿತು ನನಗೆ’ ಎಂದು ಹೇಳಿ ನಗು ಚೆಲ್ಲಿದರು ರವಿಚಂದ್ರನ್.
ಇದನ್ನೂ ಓದಿ: ಈ ವರ್ಷವೇ ರಚಿತಾ ರಾಮ್ ಮದುವೆ: ಅಪ್ಡೇಟ್ ಕೊಟ್ಟ ರವಿಚಂದ್ರನ್
‘ಯುದ್ಧಕಾಂಡ’ ಸಿನಿಮಾತಂಡ ನೋಡಿ ಖುಷಿ ಆಯಿತು. ಅವರ ಬದ್ಧತೆ ನೋಡಿ ಖುಷಿ ಆಯಿತು. ಎಲ್ಲರೂ ಖುಷಿಯಾಗಿ ಸಿನಿಮಾ ಮಾಡಿದ್ದೀರಿ. ಚೆನ್ನಾಗಿ ಸಿನಿಮಾ ಮಾಡಿದ ತೃಪ್ತಿ ನಿಮ್ಮ ಮನಸ್ಸಿಗೆ ಇರುತ್ತದೆ. ಅಜಯ್ ರಾವ್ ಮನಸ್ಸಿನಲ್ಲಿ ತೃಪ್ತಿ ಕಾಣುತ್ತಿದೆ. ಮಾತಿನಲ್ಲಿ ಆತ್ಮವಿಶ್ವಾಸ ಕಾಣುತ್ತಿದೆ. ಗೆಲ್ಲುತ್ತೇನೆ ಎಂಬ ಭರವಸೆ ಕಾಣುತ್ತಿದೆ’ ಎಂದಿದ್ದಾರೆ ರವಿಚಂದ್ರನ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:20 pm, Sun, 13 April 25