ಹುಟ್ಟುಹಬ್ಬದ ದಿನ ಕೊನೆಗೂ ಕಾಂತಾರ 2 ಸಿನಿಮಾದ ಅಪ್​ಡೇಟ್ ಕೊಟ್ಟ ರಿಷಬ್ ಶೆಟ್ಟಿ

Kantara 2: ರಿಷಬ್ ಶೆಟ್ಟಿ ಹುಟ್ಟುಹಬ್ಬದಂದು ಕಾಂತಾರ 2 ಸಿನಿಮಾದ ಅಪ್​ಡೇಟ್ ಸಿಗುತ್ತೆ ಎಂದು ಕಾದಿದ್ದವರಿಗೆ ಕೊನೆಗೂ ಸಿಹಿ ಸುದ್ದಿ ಕೊಟ್ಟಿದ್ದಾರೆ ರಿಷಬ್ ಶೆಟ್ಟಿ.

ಹುಟ್ಟುಹಬ್ಬದ ದಿನ ಕೊನೆಗೂ ಕಾಂತಾರ 2 ಸಿನಿಮಾದ ಅಪ್​ಡೇಟ್ ಕೊಟ್ಟ ರಿಷಬ್ ಶೆಟ್ಟಿ
ರಿಷಬ್-ಕಾಂತಾರ 2
Follow us
|

Updated on: Jul 07, 2023 | 10:48 PM

ರಿಷಬ್ ಶೆಟ್ಟಿ (Rishab Shetty) ಹುಟ್ಟುಹಬ್ಬ (Birthday) ಅದ್ಧೂರಿಯಾಗಿ ನೆರವೇರಿದೆ. ರಿಷಬ್, ತಮ್ಮ ಹುಟ್ಟುಹಬ್ಬದಂದು ಬಹುನಿರೀಕ್ಷಿತ ಸಿನಿಮಾ ಕಾಂತಾರ 2 ಅಪ್​ಡೇಟ್ ಹಂಚಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು ಆದರೆ ಅದು ಆಗಿರಲಿಲ್ಲ. ಆದರೆ ಹುಟ್ಟುಹಬ್ಬ ಮುಗಿಯುವ ವೇಳೆಗೂ ಕೊನೆಗೂ ರಿಷಬ್ ಶೆಟ್ಟಿ ಕಾಂತಾರ 2 (Kantara 2) ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಯಾವ ಹಂತದಲ್ಲಿದೆ? ಚಿತ್ರೀಕರಣ ಯಾವಾಗ? ಸಿನಿಮಾದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂಬುದನ್ನು ಹೇಳಿದ್ದಾರೆ.

ಇಂದು (ಜುಲೈ 7) ನಂದಿ ಲಿಂಕ್ ಗ್ರೌಂಡ್ಸ್​ನಲ್ಲಿ ನಡೆದ ಹುಟ್ಟುಹಬ್ಬ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಟ್ಟಿಗೆ ಮಾತನಾಡಿದ ರಿಷಬ್ ಶೆಟ್ಟಿ, ”ಕಾಂತಾರ 2 ಸಿನಿಮಾದ ಕೆಲಸಗಳು ನಡೆಯುತ್ತಿವೆ. ಈಗ ಸಂಭಾಷಣೆ ಭಾಗವನ್ನು ಮುಗಿಸಿದ್ದೇವೆ. ಇನ್ನು ಮುಂದೆ ಲೊಕೇಶನ್ ಹುಡುಕಾಟ, ಕಲಾವಿದರ ಆಯ್ಕೆಗಳು ನಡೆಯಲಿವೆ. ಆ ಬಳಿಕ ಹೊಂಬಾಳೆ ಫಿಲಮ್ಸ್​ನವರು ಅಧಿಕೃತವಾಗಿ ಸಿನಿಮಾದ ಚಿತ್ರೀಕರಣದ ಬಗ್ಗೆ ಘೋಷಣೆ ಮಾಡಲಿದ್ದಾರೆ” ಎಂದರು.

”ಕಾಂತಾರ 2 ಸಿನಿಮಾದ ಘೋಷಣೆ, ಚಿತ್ರೀಕರಣ, ಬಿಡುಗಡೆ ಇದೇ ವರ್ಷ ಆಗಲಿದೆ” ಎಂದ ರಿಷಬ್ ಶೆಟ್ಟಿ, ಸಿನಿಮಾದ ಬಗ್ಗೆ ಕೆಲವು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ ಎಂದೂ ಸಹ ಹೇಳಿದರು. ಸಿನಿಮಾದ ಚಿತ್ರೀಕರಣವನ್ನು ಮಳೆಯಲ್ಲಿಯೇ ಮಾಡುತ್ತೀವಿ, ಮಾರುದ್ದ ಗಡ್ಡ ಬಿಡುತ್ತೀನಿ, ವಿಶೇಷ ಕಸರತ್ತುಗಳನ್ನು ಕಲಿಯುತ್ತಿದ್ದೀನಿ, ಕಾಂತಾರ 1 ಸಿನಿಮಾದ ಮುಹೂರ್ತ ಮಾಡಿದ ಸಮಯಕ್ಕೆ ಕಾಂತಾರ 2 ಸಿನಿಮಾದ ಮುಹೂರ್ತವೂ ನಡೆಯಲಿದೆ ಎಂದೆಲ್ಲ ಹೇಳಲಾಗುತ್ತಿದೆ. ಸಿನಿಮಾದ ಮುಹೂರ್ತ ಬೇರೆಯ ಸಮಯಕ್ಕೆ ಆಗುತ್ತದೆ, ಅದನ್ನು ಹೊಂಬಾಳೆ ಫಿಲಮ್ಸ್ ನಿರ್ಣಯ ಮಾಡುತ್ತದೆ ಎಂದಿದ್ದಾರೆ.

ಇದನ್ನೂ ಓದಿ:ಸಿದ್ಧವಾಯ್ತು ‘ಕಾಂತಾರ 2’ ಸ್ಕ್ರಿಪ್ಟ್​ನ ಮೊದಲ ಡ್ರಾಫ್ಟ್​? ಶೀಘ್ರವೇ ಶೂಟಿಂಗ್ ಆರಂಭಿಸಲಿದ್ದಾರೆ ರಿಷಬ್ ಶೆಟ್ಟಿ

ಹುಟ್ಟುಹಬ್ಬ ಆಚರಣೆ ಬಗ್ಗೆ ಮಾತನಾಡಿದ ರಿಷಬ್ ಶೆಟ್ಟಿ, ”ಊರಲ್ಲಿದ್ದಾಗ ಹುಟ್ಟುಹಬ್ಬ ಆಚರಣೆಯ ಕಲ್ಪನೆಯೇ ಇರಲಿಲ್ಲ. ಕಾಲೇಜಿಗೆ ಬಂದ ಮೇಲೆ ಅದರಲ್ಲೂ ಬೆಂಗಳೂರಿಗೆ ಬಂದಮೇಲೆ ಹುಟ್ಟುಹಬ್ಬವನ್ನು ಹೀಗೂ ಆಚರಿಸಿಕೊಳ್ಳುತ್ತಾರೆ ಎಂಬುದು ಗೊತ್ತಾದದ್ದು. ಸಿನಿಮಾಕ್ಕೆ ಬಂದಮೇಲೂ ಸಹ ಹುಟ್ಟುಹಬ್ಬದಂದು ಕೆಲಸ ಮಾಡುವ ಎಂಬ ಆಲೋಚನೆಯೇ ನನಗೆ ಇತ್ತು. ಆದರೆ ಈ ಬಾರಿ ಅಭಿಮಾನಿಗಳನ್ನು ಭೇಟಿ ಆಗುವ ಎಂಬ ಆಸೆಯಿತ್ತು. ಹಾಗೆಯೇ ಸ್ನೇಹಿತರು, ಕುಟುಂಬದವರ ಕೋರಿಕೆ ಮೇರೆಗೆ ಈ ಕಾರ್ಯಕ್ರಮ ಆಯೋಜನೆಯಾಯ್ತು” ಎಂದರು.

”ಕಾಂತಾರ ಆದ ಬಳಿಕ ಹಲವರು ಮನೆಯ ಬಳಿ ಬಂದಿದ್ದರು, ಬೇರೆ ಕಾರ್ಯಕ್ರಮಗಳಿಗೆ ಹೋದಾಗ ಭೇಟಿ ಆಗಲು ಯತ್ನಿಸುತ್ತಿದ್ದರು ಆಗುತ್ತಿರಲಿಲ್ಲ. ಆ ಬಳಿಕ ಹಲವರು ಮೆಸೇಜ್ ಮಾಡುತ್ತಿದ್ದರು. ಅಲ್ಲದೆ ಕಾಂತಾರ ಆದ ಬಳಿಕ ಅಭಿಮಾನಿಗಳಿಗೆ ಧನ್ಯವಾದ ಹೇಳಬೇಕಿತ್ತು ಅದಕ್ಕೆ ಇದಕ್ಕಿಂತಲೂ ಒಳ್ಳೆಯ ವೇದಿಕೆ ಸಿಗುವುದಿಲ್ಲ ಎಂದುಕೊಂಡೆವು. ಹಾಗಾಗಿ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಣೆ ಮಾಡಿ ಅವರಿಗೆ ಧನ್ಯವಾದ ಹೇಳಿದ್ದೇವೆ” ಎಂದರು.

ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಕರ್ನಾಟಕದಲ್ಲಿ ಮಾತ್ರವೇ ಅಲ್ಲದೆ ನೆರೆಯ ರಾಜ್ಯಗಳಲ್ಲಿಯೂ ಅವರ ಅಭಿಮಾನಿಗಳಿದ್ದಾರೆ. ಇಂದು ಸಹ ಸಾವಿರಾರು ಸಂಖ್ಯೆಯಲ್ಲಿ ರಿಷಬ್​ರ ಅಭಿಮಾನಿಗಳು ಭೇಟಿಗೆ ಆಗಮಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ