ಅಂದು ಪುನೀತ್​ ಅವರಿಂದ 30 ಸಾವಿರ ರೂ. ನೆರವು ಪಡೆದಿದ್ದ ಗೌರಿಶ್ರೀ ಇಂದು ನಿರ್ದೇಶಕಿ, ನಿರ್ಮಾಪಕಿ

| Updated By: ಮದನ್​ ಕುಮಾರ್​

Updated on: Jan 27, 2022 | 4:17 PM

‘ಪರಮಾತ್ಮ’ ಸಿನಿಮಾದಲ್ಲಿ ಪುನೀತ್​ ಜೊತೆ ಕೆಲಸ ಮಾಡುವ ಅವಕಾಶ ಗೌರಿಶ್ರೀ ಅವರಿಗೆ ಸಿಕ್ಕಿತ್ತು. ಆ ದಿನಗಳ ನೆನಪನ್ನು ಅವರೀಗ ಮೆಲುಕು ಹಾಕಿದ್ದಾರೆ.

ಅಂದು ಪುನೀತ್​ ಅವರಿಂದ 30 ಸಾವಿರ ರೂ. ನೆರವು ಪಡೆದಿದ್ದ ಗೌರಿಶ್ರೀ ಇಂದು ನಿರ್ದೇಶಕಿ, ನಿರ್ಮಾಪಕಿ
‘ಜನರಕ್ಷಕ’ ಪೋಸ್ಟರ್​ ಲಾಂಚ್​, ಪುನೀತ್​ ರಾಜ್​ಕುಮಾರ್​
Follow us on

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಕನ್ನಡ ಚಿತ್ರರಂಗ ಮರೆಯಲು ಸಾಧ್ಯವಿಲ್ಲ. ಬಾಲನಟ ಆಗಿದ್ದಾಗಿನಿಂದಲೂ ಚಂದನವನಕ್ಕೆ (Sandalwood) ಅವರ ಕಲಾಸೇವೆ ಸಂದಿದೆ. ಚಿತ್ರರಂಗದಲ್ಲಿರುವ ಎಷ್ಟೋ ಜನರಿಗೆ ಅವರು ನೇರವಾಗಿ ಸಹಾಯ ಮಾಡಿದ್ದರು. ಆ ರೀತಿ ಸಹಾಯ ಪಡೆದವರು ನಂತರ ಒಳ್ಳೊಳ್ಳೆಯ ಸಾಧನೆ ಮಾಡಿದ್ದುಂಟು. ಅದಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ. ಕೆಲವು ವರ್ಷಗಳ ಹಿಂದೆ ನೃತ್ಯ ಶಿಕ್ಷಕಿ ಗೌರಿಶ್ರೀ ಅವರು ಪುನೀತ್​ ರಾಜ್​ಕುಮಾರ್​ ಅವರಿಂದ 30 ಸಾವಿರ ರೂಪಾಯಿ ಸಹಾಯ ಪಡೆದುಕೊಂಡಿದ್ದರು. ಇಂದು ಅವರು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಒಂದು ಸಿನಿಮಾ ತಯಾರಿಸುವಷ್ಟು ಶಕ್ತಿ ಪಡೆದುಕೊಂಡಿದ್ದಾರೆ. ತಮ್ಮದೇ ತಂಡವನ್ನು ಕಟ್ಟಿಕೊಂಡು ‘ಜನರಕ್ಷಕ’ ಸಿನಿಮಾ (Janarakshaka Movie) ಮಾಡಿದ್ದಾರೆ. ‘ನಾ ಭಕ್ಷಕ’ ಎಂಬ ಟ್ಯಾಗ್​ಲೈನ್​ ಕೂಡ ಈ ಚಿತ್ರಕ್ಕಿದೆ. ಇತ್ತೀಚೆಗೆ ಈ ಚಿತ್ರದ ಪೋಸ್ಟರ್​ ಲಾಂಚ್​ ಮಾಡಲಾಯಿತು. ಆ ವೇದಿಕೆಯಲ್ಲಿ ಪುನೀತ್​ ರಾಜ್​ಕುಮಾರ್​ ಅವರನ್ನು ನೆನಪು ಮಾಡಿಕೊಳ್ಳಲಾಯಿತು. 

‘ಪರಮಾತ್ಮ’ ಸಿನಿಮಾದಲ್ಲಿ ಪುನೀತ್​ ಜೊತೆ ಕೆಲಸ ಮಾಡುವ ಅವಕಾಶ ಗೌರಿಶ್ರೀ ಅವರಿಗೆ ಸಿಕ್ಕಿತ್ತು. ಆ ದಿನಗಳ ನೆನಪನ್ನು ಅವರೀಗ ಮೆಲುಕು ಹಾಕಿದ್ದಾರೆ. ‘ನಾನು ಒಂದು ಡ್ಯಾನ್ಸ್​ ಸ್ಕೂಲ್​ ಶುರು ಮಾಡಬೇಕು ಎಂದುಕೊಂಡಾಗ ಪುನೀತ್​ ಅವರು ಬೆನ್ನುತಟ್ಟಿದ್ದರು. ಅಂದು ನನಗೆ 30 ಸಾವಿರ ರೂಪಾಯಿ ಕೊರತೆ ಆಗಿತ್ತು. ಕೇಳಿದಾಗ ನಿಂತ ಜಾಗದಲ್ಲೇ ಪುನೀತ್​ ರಾಜ್​ಕುಮಾರ್​ ಅವರು 30 ಸಾವಿರ ರೂಪಾಯಿ ನೀಡಿದ್ದರು. ಇಂದು ಅವರ ಆಶೀರ್ವಾದದಿಂದ ನಮ್ಮ ಸ್ಕೂಲ್​ ಚೆನ್ನಾಗಿ ನಡೆಯುತ್ತಿದೆ’ ಎನ್ನುವ ಗೌರಿಶ್ರೀ ಅವರು ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

‘ಜನರಕ್ಷಕ’ ಸಿನಿಮಾಗೆ ಕಥೆ-ಚಿತ್ರಕಥೆ ಬರೆದು, ನಿರ್ದೇಶನ ಮಾಡಿ, ಬಂಡವಾಳ ಹೂಡಿ, ನೃತ್ಯ ನಿರ್ದೇಶನವನ್ನೂ ಮಾಡಿರುವುದು ಗೌರಿಶ್ರೀ ಅವರ ಹೆಚ್ಚುಗಾರಿಕೆ. ಅಲ್ಲದೇ, ಮುಖ್ಯಭೂಮಿಕೆಯಲ್ಲೂ ಅವರೇ ನಟಿಸಿದ್ದಾರೆ. ಹಾಗಾಗಿ ಅವರ ಪ್ರಯತ್ನಕ್ಕೆ ಬೆನ್ನು ತಟ್ಟಿದ್ದಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಿನ್ನೇಗೌಡ. ಪೋಸ್ಟರ್​ ರಿಲೀಸ್​ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದು ಅವರು ಶುಭ ಹಾರೈಸಿದ್ದಾರೆ. ‘ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯರ ಸಂಖ್ಯೆ ಕಡಿಮೆ. ಡಾ. ಪಾರ್ವತಮ್ಮ ರಾಜ್​ಕುಮಾರ್​ ಅವರು ಯಶಸ್ವಿ ನಿರ್ಮಾಪಕಿ ಆಗಿದ್ದರು. ಎಷ್ಟೋ ಕಲಾವಿದರಿಗೆ, ತಂತ್ರಜ್ಞರಿಗೆ ಅವರು ಅವಕಾಶ ಕೊಟ್ಟಿದ್ದರು. ಅದೇ ರೀತಿ ಗೌರಿಶ್ರೀ ಬೆಳೆಯಲಿ’ ಎಂದು ಚಿನ್ನೇಗೌಡ ಹಾರೈಸಿದರು. ಗೌರಿಶ್ರೀ ಕಾರ್ಯಕ್ಕೆ ಹಿರಿಯ ಕಲಾವಿದ ಕರಿಸುಬ್ಬು ಕೂಡ ಪ್ರೋತ್ಸಾಹ ನೀಡಿದ್ದಾರೆ.

‘ವಿ2 ಪ್ರೊಡಕ್ಷನ್ಸ್​’ ಮೂಲಕ ‘ಜನರಕ್ಷಕ’ ಸಿನಿಮಾ ತಯಾರಾಗುತ್ತಿದೆ. ಚಿತ್ರೀಕರಣ ಮುಕ್ತಾಯ ಆಗಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಅನುಭವಿ ಛಾಯಾಗ್ರಾಹಕ ಪಿಕೆಎಚ್ ದಾಸ್​​ ಅವರು ಈ ಚಿತ್ರಕ್ಕೆ ಕ್ಯಾಮೆರಾಮ್ಯಾನ್​ ಆಗಿ ಕೆಲಸ ಮಾಡಿದ್ದಾರೆ. ಒಂದು ಹಾಡಿಗೆ ಫೈವ್​ ಸ್ಟಾರ್​ ಗಣೇಶ್​ ಕೊರಿಯೋಗ್ರಫಿ ಮಾಡಿದ್ದಾರೆ. ಸುಪ್ರೀಮ್​ ಸುಬ್ಬು ಸಾಹಸ ನಿರ್ದೇಶನ, ದೇವದಾಸ್​ ಸಂಗೀತ ನಿರ್ದೇಶಕ ಈ ಚಿತ್ರಕ್ಕಿದೆ.

‘ಜನರಕ್ಷಕ’ ಸಿನಿಮಾದಲ್ಲಿ ಗೌರಿಶ್ರೀ, ರಘು, ಸೋಮ ಸುಂದರ್​, ಪ್ರಿಯಾ, ತ್ರಿಶೂಲ್​, ರತ್ನಮಾಲಾ, ನಾಗೇಂದ್ರ, ಭಾಗ್ಯಶ್ರೀ ಮುಂತಾದವರು ಅಭಿನಯಿಸಿದ್ದಾರೆ. ಶೀಘ್ರದಲ್ಲೇ ಚಿತ್ರವನ್ನು ತೆರೆಕಾಣಿಸಬೇಕು ಎಂಬ ಗುರಿ ಇಟ್ಟುಕೊಂಡು ‘ಜನರಕ್ಷಕ’ ಸಿನಿಮಾ ತಂಡ ಕಾರ್ಯಮಗ್ನವಾಗಿದೆ. ಕುಡಿತದ ಚಟದಿಂದ ಜೀವನ ಹೇಗೆ ಹಾಳಾಗುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ವಿವರಿಸುವುದರ ಮೂಲಕ ಸಮಾಜಕ್ಕೊಂದು ಉತ್ತಮ ಸಂದೇಶ ನೀಡುವುದಾಗಿ ಗೌರಿಶ್ರೀ ಹೇಳಿದ್ದಾರೆ.

ಇದನ್ನೂ ಓದಿ:

ಕಡು ಬಡತನದಲ್ಲೂ ಅಪ್ಪುಗಾಗಿ ಅದ್ದೂರಿ ಕಾರ್ಯಕ್ರಮ; ಮಗನಿಗೆ ಪುನೀತ್​ ಎಂದು ನಾಮಕರಣ

James Special Poster: ‘ಜೇಮ್ಸ್’​ ಹೊಸ ಪೋಸ್ಟರ್​ ರಿಲೀಸ್​; ಪುನೀತ್​ ಫ್ಯಾನ್ಸ್​ಗೆ ಗಣರಾಜ್ಯೋತ್ಸವದ ಗಿಫ್ಟ್