ಕನ್ನಡದ ಸಾಂಗ್ ಕೇಳಿದರೆ ಗಾಯಕರು ಹಾಡೋದು ಕಡ್ಡಾಯ; ಪೊಲೀಸರಿಂದ ಹೊಸ ಸೂಚನೆ
ಸೋನು ನಿಗಮ್ ಅವರು ಕನ್ನಡ ಹಾಡು ಹಾಡಲು ನಿರಾಕರಿಸಿದ್ದಕ್ಕೆ ವಿವಾದದ ಉಂಟಾಗಿದೆ. ಅವರ ಕ್ಷಮೆಯಾಚನೆ ಬೆನ್ನಲ್ಲೆ ಬೆಂಗಳೂರು ಗ್ರಾಮಾಂತರ ಪೊಲೀಸರು ಹೊಸ ಮಾರ್ಗಸೂಚಿಗಳನ್ನು ನೀಡಿದ್ದಾರೆ. ಕನ್ನಡಿಗರಿಗೆ ಅವಮಾನ ಮಾಡಿದ್ದಕ್ಕಾಗಿ ಸೋನು ಅವರನ್ನು ಬ್ಯಾನ್ ಮಾಡಲಾಗಿತ್ತು. ಆದರೆ ಈಗ ಬ್ಯಾನ್ ತೆರವುಗೊಳ್ಳುವ ಸಾಧ್ಯತೆಗಳಿವೆ.

ಗಾಯಕ ಸೋನು ನಿಗಮ್ (Sonu Nigam) ಅವರ ಕಾರ್ಯಕ್ರಮದ ವೇಳೆ ನಡೆದ ಘಟನೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಕನ್ನಡದ ಹಾಡು ಹೇಳುವಂತೆ ಸೋನು ನಿಗಮ್ಗೆ ಕೇಳಲಾಯಿತು. ಈ ವೇಳೆ ಸೋನು ನಿಗಮ್ ಅವರು ‘ಕನ್ನಡ.. ಕನ್ನಡ.. ಈ ಕಾರಣಕ್ಕೆ ಪಹಲ್ಗಾಮ್ ದಾಳಿ ಆಯಿತು’ ಎಂದು ವಿವಾದ ಸೃಷ್ಟಿಸಿದ್ದರು. ಕನ್ನಡಿಗರಿಗೆ ಅವಮಾನ ಮಾಡಿದ ಅವರನ್ನು ಬ್ಯಾನ್ ಮಾಡುವ ಬಗ್ಗೆ ಸ್ಯಾಂಡಲ್ವುಡ್ನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬೆನ್ನಲ್ಲೇ ಅವರು ಕ್ಷಮೆ ಕೇಳಿದ್ದಾರೆ. ಭವಿಷ್ಯದಲ್ಲಿ ಈ ರೀತಿಯ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಹೊಸ ಸೂಚನೆ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕಾನ್ಸರ್ಟ್ ಮಾಡಿದಾಗ ಯಾರಾದರೂ ಕನ್ನಡ ಹಾಡು ಕೇಳಿದರೆ ಅದನ್ನು ಹಾಡಲೇಬೇಕು ಎಂದು ಹೇಳಿದ್ದಾರೆ.
ಸೋನು ನಿಗಮ್ ಅವರಿಗೆ ಕನ್ನಡ ಹಾಡು ಹೇಳುವಂತೆ ಕೆಲವರು ಕೇಳಿದ್ದರು. ಇದಕ್ಕೆ ನೋ ಎಂದಿದ್ದಕ್ಕೆ ಸಾಕಷ್ಟು ವಿವಾದಗಳು ಉಂಟಾದವು. ಈಗ ಬೆಂಗಳೂರು ಗ್ರಾಮಾಂತರ ಎಸ್ಪಿಯಿಂದ ಖಡಕ್ ಸೂಚನೆ ಒಂದಿ ಬಂದಿದೆ. ಯಾರೇ ಕಾರ್ಯಕ್ರಮ ಮಾಡಿದರೂ ಪೊಲೀಸರ ಅನುಮತಿ ತೆಗೆದುಕೊಳ್ಳೂವುದು ಕಡ್ಡಾಯ ಎಂದು ಎಸ್ಪಿ ತಿಳಿಸಿದ್ದಾರೆ.
ಕೇವಲ ಅನುಮತಿ ಪಡೆದರೆ ಮಾತ್ರ ಸಾಧ್ಯವಾಗುವುದಿಲ್ಲ ಅದರ ಜೊತೆಗೆ ಮಾರ್ಗಸೂಚಿ ನೀಡಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಪ್ರೇಕ್ಷಕರು ಕನ್ನಡ ಹಾಡು ಕೇಳಿದರೆ ಯಾವುದೇ ಗಾಯಕರು ಇದ್ದರೂ ಅದನ್ನು ಹಾಡಲೇಬೇಕು. ಅನಗತ್ಯವಾಗಿ ಪ್ರೇಕ್ಷಕರ ಜೊತೆ ಕಿರಿಕ್ ಮಾಡುವಂತಿಲ್ಲ’ ಎಂದು ಪೊಲೀಸರು ಸೂಚಿಸಿದ್ದಾರೆ. ಇನ್ನು, ಜಾತಿ, ದೇಶ, ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡುವಂತಿಲ್ಲ. ಅನುಮತಿ ಪಡೆಯುವ ವೇಳೆ ಮಾರ್ಗಸೂಚಿ ಪಾಲಿಸಲು ಪೊಲೀಸರ ಸೂಚನೆ ನೀಡಿದ್ದಾರೆ. ಮಾರ್ಗಸೂಚಿ ಒಪ್ಪದೇ ಇದ್ದರೆ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ ಮಾಡಲಾಗುತ್ತದೆ.
ಇದನ್ನೂ ಓದಿ: ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್; ಪ್ರೀತಿಗಾಗಿ ಅಹಂಕಾರ ಬದಿಗಿಟ್ಟ ಗಾಯಕ
ಕನ್ನಡಿಗರ ಬಳಿ ಕ್ಷಮೆ ಕೇಳಬೇಕು ಎಂಬುದು ಎಲ್ಲರ ಒತ್ತಾಯ ಆಗಿತ್ತು. ಈ ಒತ್ತಾಯ ಈಡೇರಿದೆ. ಸೋನು ನಿಗಮ್ ಅವರು ಈಗಾಗಲೇ ಕ್ಷಮೆ ಕೇಳಿದ್ದಾರೆ. ಹೀಗಾಗಿ, ಬ್ಯಾನ್ನ ಹಿಂಪಡೆಯುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕರ್ನಾಟಕ ಫಿಲ್ಮ್ ಚೇಂಬರ್ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.