‘ವೀರ ಕಂಬಳ’ ಸಿನಿಮಾದಲ್ಲಿ ವೀರೇಂದ್ರ ಹೆಗ್ಗಡೆ ನಟಿಸಿದ್ದು ಯಾಕೆ? ಇಲ್ಲಿದೆ ಕಾರಣ
ಕಂಬಳದ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ವೀರೇಂದ್ರ ಹೆಗ್ಗಡೆಯವರು ನಟಸಲು ಒಪ್ಪಿಗೆ ಸೂಚಿಸಿದ್ದರು. ಈ ಸಿನಿಮಾದಲ್ಲಿನ ಮುಖ್ಯ ಸಂದೇಶವನ್ನು ರವಾನಿಸುವ ಪಾತ್ರಕ್ಕೆ ವೀರೇಂದ್ರ ಹೆಗ್ಗಡೆ ಜೀವ ತುಂಬಿದ್ದಾರೆ. ಅವರ ಪಾತ್ರ ಕೂಡಾ ‘ವೀರ ಕಂಬಳ’ ಚಿತ್ರದ ಆಕರ್ಷಣೆಗಳಲ್ಲಿ ಒಂದಾಗಿದೆ ಎಂಬುದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಾತು.

ಖ್ಯಾತ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು (Rajendra Singh Babu) ಅವರು ನಿರ್ದೇಶನ ಮಾಡಿರುವ ‘ವೀರ ಕಂಬಳ’ ಸಿನಿಮಾ ಫೆಬ್ರವರಿ 27ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ರಿಲೀಸ್ ದಿನಾಂಕ ಹತ್ತಿರ ಆಗಿರುವ ಈ ಹೊತ್ತಿನಲ್ಲಿ ಹೊಸ ಹೊಸ ಅಪ್ಡೇಟ್ಸ್ ಹಂಚಿಕೊಳ್ಳಲಾಗುತ್ತಿದೆ. ‘ವೀರ ಕಂಬಳ’ (Veera Kambala) ರೂಪುಗೊಂಡಿದ್ದರ ಹಿಂದೆ ದಶಕಗಳಷ್ಟು ಸುದೀರ್ಘವಾದ ಕಥನವಿದೆ. ಅಂದಾಜು ಏಳುನೂರು ವರ್ಷಗಳಷ್ಟು ಐತಿಹ್ಯವಿರುವ ಕಂಬಳದ ಬಗ್ಗೆ ಇಂಚಿಂಚು ಮಾಹಿತಿಯನ್ನು ಕಲೆಹಾಕುವ ಮೂಲಕ ರಾಜೇಂದ್ರ ಸಿಂಗ್ ಬಾಬು ಅವರು ಈ ಸಿನಿಮಾವನ್ನು ರೂಪಿಸಿದ್ದಾರೆ. ಈ ಸಿನಿಮಾದಲ್ಲಿನ ಒಂದು ಮಹತ್ವದ ಪಾತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ (Veerendra Heggade) ನಟಿಸಿದ್ದಾರೆ.
ವೀರೇಂದ್ರ ಹೆಗ್ಗಡೆ ಅವರು ‘ವೀರ ಕಂಬಳ’ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಈ ಮೊದಲೇ ಹೊರಬಂದಿತ್ತು. ಆದರೆ, ನಿರ್ದೇಶಕರಾಗಲಿ, ಚಿತ್ರತಂಡದವರಾಗಲಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಬಿಟ್ಟು ಕೊಡದೆ ಗೌಪ್ಯತೆ ಕಾಪಾಡಿಕೊಂಡಿದ್ದರು. ಈಗ ವೀರೇಂದ್ರ ಹೆಗ್ಗಡೆ ನಿರ್ವಹಿಸಿರೋ ಪಾತ್ರದ ಚಹರೆಗಳನ್ನು ನಿರ್ದೇಶಕರೇ ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಈ ಪಾತ್ರಕ್ಕೆ ವೀರೇಂದ್ರ ಹೆಗ್ಗಡೆ ಅವರನ್ನೇ ಆಯ್ಕೆ ಮಾಡಿಕೊಂಡಿದ್ದರ ಹಿಂದಿರುವ ಅಂಶಗಳನ್ನೂ ಕೂಡ ರಾಜೇಂದ್ರ ಸಿಂಗ್ ಬಾಬು ಅವರು ಹಂಚಿಕೊಂಡಿದ್ದಾರೆ. ಕಂಬಳದ ಇತಿಹಾಸ ಕೆದಗುತ್ತಾ ಹೋದಂತೆಲ್ಲ ಅದಕ್ಕೂ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೂ ಇರುವ ನಂಟಿನ ವಿಚಾರ ರಾಜೇಂದ್ರ ಸಿಂಗ್ ಬಾಬು ಅವರಿಗೆ ಅಚ್ಚರಿ ಮೂಡಿಸಿತು. ಅದಕ್ಕಾಗಿ ಈ ನಿರ್ಧಾರ ತೆಗೆದುಕೊಂಡರು.
ಅದುವರೆಗೆ ತುಳುನಾಡ ಸೀಮೆಯ ಖಾಸಗಿ ಮನರಂಜನೆಯ ಕ್ರೀಡೆಯಾಗಿದ್ದ ಕಂಬಳವನ್ನು 70ರ ದಶಕದಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜಿಸಿದ್ದವರು ವೀರೇಂದ್ರ ಹೆಗ್ಗಡೆ. ಆ ನಂತರ ಅದು ಬೇರೆ ಬೇರೆ ರೂಪಗಳಲ್ಲಿ ರೂಪಾಂತರಗೊಂಡು ಇಡೀ ಕರುನಾಡನ್ನೇ ಸೆಳೆದುಕೊಂಡಿತ್ತು. ಈ ಕಾರಣದಿಂದಲೇ ವೀರೇಂದ್ರ ಹೆಗ್ಗಡೆ ‘ವೀರ ಕಂಬಳ’ ಸಿನಿಮಾದಲ್ಲಿನ ಮಹತ್ವದ ಪಾತ್ರ ಮಾಡಬೇಕೆಂಬ ಆಸೆಯು ನಿರ್ದೇಶಕರ ಮನಸಲ್ಲಿ ಮೂಡಿತ್ತು. ಅದು ನೆರವೇರಿದೆ. ಬಹಳ ಸಂಭ್ರಮದಿಂದಲೇ ವೀರೇಂದ್ರ ಹೆಗ್ಗಡೆ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಹುದ್ದೆಗಾಗಿ ಹಂಬಲಿಸಿದವನು ನಾನಲ್ಲ, ಕೇಳಿದವನೂ ಅಲ್ಲ: ವಿರೇಂದ್ರ ಹೆಗ್ಗಡೆ
‘ವೀರ ಕಂಬಳ’ ಸಿನಿಮಾವನ್ನು ‘ಬಾಬಾಸ್ ಬ್ಲೆಸಿಂಗ್ ಫಿಲ್ಮ್ಸ್’ ಬ್ಯಾನರ್ ಮೂಲಕ ಡಾ. ವಿನಿತಾ ವಿಜಯ್ ಕುಮಾರ್ ರೆಡ್ಡಿ ಮತ್ತು ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಧಿಕಾ ನಾರಾಯಣ್ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ತುಳು ಭಾಷೆಯಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದ್ದು, ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಮುಂತಾದವರು ನಟಿಸಿದ್ದಾರೆ.
ವಿಜಯ್ ಕೊಡಿಯಾಲ್ಬೈಲ್ ಅವರು ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಅವರು ಸಂಗೀತ ನೀಡಿದ್ದಾರೆ. ಆರ್. ಗಿರಿ ಅವರ ಛಾಯಾಗ್ರಹಣ, ಶ್ರೀನಿವಾಸ್ ಎಸ್. ಬಾಬು ಅವರ ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಅವರ ಕಲಾ ನಿರ್ದೇಶನ, ಕಾಂತ ಅವರ ಪ್ರಸಾದನ, ಭಾಷಾ ಅವರ ವಸ್ತ್ರವಿನ್ಯಾಸ ಈ ಸಿನಿಮಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




