ಕಿರುತೆರೆಗೆ ಬಿ.ಸಿ. ಪಾಟೀಲ್ ಗ್ರ್ಯಾಂಡ್ ಎಂಟ್ರಿ; ರಾಯರ ಧಾರಾವಾಹಿಯಲ್ಲಿ ಮಹತ್ವದ ಪಾತ್ರ
ಕನ್ನಡದ ಹಿರಿಯ ನಟ ಬಿ.ಸಿ. ಪಾಟೀಲ್ ಅವರು ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಶ್ರೀ ರಾಘವೇಂದ್ರ ಮಹಾತ್ಮೆ' ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರು ಕರಟಗಿರಿಯ ದೇಸಾಯಿ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಹಿರಿಯ ನಟಿ ಅರುಣಾ ಬಾಲರಾಜ್ ಅವರ ಪತ್ನಿಯಾಗಿ ನಟಿಸಲಿದ್ದಾರೆ. ರಾಯರ ಸೃಷ್ಟಿಸುವ ಪವಾಡದ ಕಥಾಹಂದರದಲ್ಲಿ ದೇಸಾಯಿ ಕುಟುಂಬದ ಪಾತ್ರ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಮುಖ್ಯಾಂಶಗಳು
- ಬೆಳ್ಳಿತೆರೆಯಿಂದ ಕಿರುತೆರೆಗೆ ಹೆಜ್ಜೆ ಇಟ್ಟ 'ಕೌರವ' ಬಿ.ಸಿ. ಪಾಟೀಲ್: ರಾಯರ ಸರಣಿಯಲ್ಲಿ ಧಮಾಕಾ ಎಂಟ್ರಿ
- ಬಿ.ಸಿ. ಪಾಟೀಲ್ ಹಾಗೂ ಅರುಣಾ ಬಾಲರಾಜ್ ಕಾಂಬಿನೇಷನ್: ಜೀ ಕನ್ನಡ ವಾಹಿನಿಯಲ್ಲಿ ದೇಸಾಯಿ ದಂಪತಿಯ ಕಥೆ
- ಮಗನನ್ನು ಬದುಕಿಸುವ ರಾಯರ ದಿವ್ಯ ಪವಾಡ: ವೀಕ್ಷಕರನ್ನು ಮಂತ್ರಮುಗ್ಧಗೊಳಿಸಲಿರುವ ವಾರಾಂತ್ಯದ ಮಹಾ ಸಂಚಿಕೆ
ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಬಿ.ಸಿ. ಪಾಟೀಲ್ ಅವರು ಇದೇ ಮೊದಲ ಬಾರಿಗೆ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೀ ಕನ್ನಡ ವಾಹಿನಿಯ ಜನಪ್ರಿಯ ಭಕ್ತಿ ಪ್ರಧಾನ ಧಾರಾವಾಹಿ ‘ಶ್ರೀ ರಾಘವೇಂದ್ರ ಮಹಾತ್ಮೆ’ ಮೂಲಕ ಅವರು ಹೊಚ್ಚಹೊಸ ಇನಿಂಗ್ಸ್ ಆರಂಭಿಸುತ್ತಿದ್ದಾರೆ. ವೀಕ್ಷಕರ ಮನಗೆದ್ದಿರುವ ಈ ಸರಣಿಯಲ್ಲಿ ಬಿ.ಸಿ. ಪಾಟೀಲ್ ಅವರು ಅತ್ಯಂತ ಪ್ರಮುಖವಾದ ‘ಕರಟಗಿರಿಯ ದೇಸಾಯಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದಾ ವಿಭಿನ್ನ ಸಿನಿಮಾಗಳ ಮೂಲಕ ಅಬ್ಬರಿಸುತ್ತಿದ್ದ ‘ಕೌರವ’ ಬಿ.ಸಿ. ಪಾಟೀಲ್ ಅವರನ್ನು ಈಗ ರಾಯರ ಮಹಿಮೆಯ ಕಥಾಹಂದರದಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಅರುಣಾ ಬಾಲರಾಜ್ ಜೊತೆ ಜುಗಲ್ಬಂದಿ
ಇದೇ ವಾರಾಂತ್ಯದ ಸಂಚಿಕೆಯಲ್ಲಿ ಬಿ.ಸಿ. ಪಾಟೀಲ್ ಅವರ ಎಂಟ್ರಿ ಅದ್ಧೂರಿಯಾಗಿ ನಡೆಯಲಿದೆ. ವಿಶೇಷವೆಂದರೆ, ಚಿತ್ರರಂಗದ ಮತ್ತೊಬ್ಬ ಹಿರಿಯ ನಟಿ ಅರುಣಾ ಬಾಲರಾಜ್ ಅವರು ಈ ಧಾರಾವಾಹಿಯಲ್ಲಿ ಬಿ.ಸಿ. ಪಾಟೀಲ್ ಅವರಿಗೆ ಪತ್ನಿಯಾಗಿ ಸಾಥ್ ನೀಡುತ್ತಿದ್ದಾರೆ. ಈ ಇಬ್ಬರು ಹಿರಿಯ ಕಲಾವಿದರ ಆಗಮನದಿಂದಾಗಿ ‘ಶ್ರೀ ರಾಘವೇಂದ್ರ ಮಹಾತ್ಮೆ’ ಸರಣಿಗೆ ಮತ್ತಷ್ಟು ಕಳೆ ಬಂದಂತಾಗಿದೆ. ರಾಯರ ದಿವ್ಯ ಸಂಚಾರದ ಹಾದಿಯಲ್ಲಿ ಎದುರಾಗುವ ಕರಟಗಿರಿಯ ದೇಸಾಯಿ ಕುಟುಂಬದ ಕಥೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಮಂತ್ರ ಮುಗ್ಧಗೊಳಿಸಿದ ರಾಯರ ಪವಾಡ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಗೆ ಈಗಾಗಲೇ ಮನೆಮನೆಯಿಂದಲೂ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಯರ ಪಾತ್ರದಲ್ಲಿ ಪರೀಕ್ಷಿತ್ ಅವರ ಜೀವಂತ ನಟನೆಗೆ ಭಕ್ತರು ತಲೆದೂಗಿದ್ದಾರೆ. ಕಳೆದ ವಾರ ಪೂರ್ವಾಶ್ರಮದ ಪತ್ನಿ ಸರಸ್ವತಿಗೆ ಸದ್ಗತಿ ನೀಡಿದ ಸಂಚಿಕೆ ನೋಡುಗರ ಕಣ್ಣಾಲಿಗಳನ್ನು ಒದ್ದೆಯಾಗಿಸಿತ್ತು. ಇದೀಗ ಮೂಲರಾಮನ ಅಪ್ಪಣೆಯಂತೆ ಸಂಚಾರ ಹೊರಟಿರುವ ರಾಯರು ಭುವನಗಿರಿ ಮುಗಿಸಿ ಕರಟಗಿರಿಗೆ ಆಗಮಿಸಲಿದ್ದಾರೆ.
ಇದನ್ನೂ ಓದಿ: ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್
ರಾಯರ ಸ್ವಾಗತಕ್ಕೆ ದೇಸಾಯಿ (ಬಿ.ಸಿ. ಪಾಟೀಲ್) ಭಕ್ಷ್ಯ ಭೋಜನಗಳನ್ನು ಸಿದ್ಧಪಡಿಸುವಾಗ ಅವರ ಮಗ ಅಡುಗೆ ಮನೆಯ ಸೀಕರಣೆ ಪಾತ್ರೆಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾನೆ. ಆಗ ಪೂಜೆಯಲ್ಲಿದ್ದ ರಾಯರು ಮಂತ್ರ ಪ್ರೋಕ್ಷಣೆಯ ಮೂಲಕ ಸತ್ತ ಮಗುವನ್ನು ಬದುಕಿಸುವ ಮಹಾ ಪವಾಡ ಈ ವಾರ ಅನಾವರಣಗೊಳ್ಳಲಿದೆ. ಈ ಭಕ್ತಿಪೂರ್ವಕ ಸಂಚಿಕೆಗಳು ಇದೇ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:26 am, Thu, 2 July 26




