AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜನ ನಾಯಗನ್’ ನೋಡಿ ಸಂಭ್ರಮಿಸಿದ ನಟ ರವಿ ಮೋಹನ್: ತಮಿಳುನಾಡು ಸಚಿವರ ಕಣ್ಣೀರು

ಸೆನ್ಸಾರ್ ಮಂಡಳಿ ಜೊತೆಗಿನ 7 ತಿಂಗಳ ಹೋರಾಟದ ಬಳಿಕ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಆಗಿದೆ. ದಳಪತಿ ವಿಜಯ್ ಅವರ ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು, ರಾಜಕೀಯ ಕ್ಷೇತ್ರದ ಗಣ್ಯರು ಕೂಡ ಈ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಜನ ನಾಯಗನ್’ ನೋಡಿ ಸಂಭ್ರಮಿಸಿದ ನಟ ರವಿ ಮೋಹನ್: ತಮಿಳುನಾಡು ಸಚಿವರ ಕಣ್ಣೀರು
Ravi Mohan, Mohamad Parvez
ಮದನ್​ ಕುಮಾರ್​
|

Updated on: Jul 24, 2026 | 10:41 PM

Share

ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ ವಿಜಯ್ (CM Vijay) ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಸಿನಿಮಾ ಜುಲೈ 23ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ವಿಮರ್ಶಕರಿಂದ ಈ ಸಿನಿಮಾಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಪ್ರೇಕ್ಷಕರು ಹಾಗೂ ವಿಜಯ್ ಅಭಿಮಾನಿಗಳು ಚಿತ್ರಮಂದಿರಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದೀಗ ಖ್ಯಾತ ನಟ ರವಿ ಮೋಹನ್ (Ravi Mohan) ಸಹ ಥಿಯೇಟರ್‌ಗೆ ತೆರಳಿ ಸಿನಿಮಾ ವೀಕ್ಷಿಸಿದ್ದು, ವಿಜಯ್ ಅವರ ಎಂಟ್ರಿ ಸೀನ್‌ಗೆ ಶಿಳ್ಳೆ ಹೊಡೆದು ಸಂಭ್ರಮಿಸಿದ್ದಾರೆ.

ಚೆನ್ನೈನ ಖ್ಯಾತ ವೆಟ್ರಿ ಥಿಯೇಟರ್​ನ ಕೊನೆಯ ಸಾಲಿನಲ್ಲಿ ಕುಳಿತು ರವಿ ಮೋಹನ್ ಅವರು ಸಾರ್ವಜನಿಕರೊಂದಿಗೆ ‘ಜನ ನಾಯಗನ್’ ವೀಕ್ಷಿಸಿದ್ದಾರೆ. ವಿಜಯ್ ಅವರ ಗ್ರ್ಯಾಂಡ್ ಎಂಟ್ರಿ ದೃಶ್ಯ ಬಂದಾಗ ರವಿ ಮೋಹನ್ ಎದ್ದು ನಿಂತು ಚಪ್ಪಾಳೆ ತಟ್ಟಿ, ಸೀಟಿ ಹೊಡೆದು ಖುಷಿಪಟ್ಟ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿನಿಮಾ ಮುಗಿದ ಬಳಿಕ ಥಿಯೇಟರ್ ಹೊರಗೆ ಕಾದಿದ್ದ ಅಭಿಮಾನಿಗಳೊಂದಿಗೆ ಅವರು ಸೆಲ್ಫಿ ಕೂಡ ತೆಗೆಸಿಕೊಂಡಿದ್ದಾರೆ.

ಥಿಯೇಟರ್‌ನಲ್ಲೇ ಕಣ್ಣೀರಿಟ್ಟ ತಮಿಳುನಾಡು ಸಚಿವ:

ವಿಜಯ್ ಅವರ ರಾಜಕೀಯ ಪ್ರವೇಶದ ಬಳಿಕ ಬಿಡುಗಡೆ ಆಗಿರುವ ಕೊನೆಯ ಚಿತ್ರ ಇದಾಗಿರುವುದರಿಂದ ಅಭಿಮಾನಿಗಳಿಗೆ ಇದು ಅತ್ಯಂತ ಭಾವುಕ ಕ್ಷಣವಾಗಿದೆ. ಕೇವಲ ಅಭಿಮಾನಿಗಳು ಮಾತ್ರವಲ್ಲದೆ, ತಮಿಳುನಾಡು ಕಾರ್ಮಿಕ ಕ್ಷೇಮಾಭಿವೃದ್ಧಿ ಸಚಿವ ಮೊಹಮ್ಮದ್ ಪರ್ವೇಜ್ ಅವರು ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸುತ್ತಾ ಕಣ್ಣೀರು ಹಾಕಿದ್ದಾರೆ.

ಸಿನಿಮಾದ ಪ್ರಮುಖ ದೃಶ್ಯವೊಂದರಲ್ಲಿ ಸಚಿವರು ಕಣ್ಣೀರು ಒರೆಸಿಕೊಳ್ಳುತ್ತಿರುವ ದೃಶ್ಯ ವೈರಲ್ ಆಗಿದೆ. ‘ವಿಜಯ್ ಅವರ ಕೊನೆಯ ಸಿನಿಮಾ ಇದಾಗಿರುವುದರಿಂದ ಮತ್ತು ಅವರು ಸಂಪೂರ್ಣವಾಗಿ ರಾಜಕೀಯದಲ್ಲಿ ಸಕ್ರಿಯವಾಗಿರುವುದರಿಂದ ಈ ಸಿನಿಮಾ ವೀಕ್ಷಣೆ ತಮಗೆ ಅತ್ಯಂತ ಭಾವುಕ ಅನುಭವ ನೀಡಿತು’ ಎಂದು ಚಿತ್ರ ವೀಕ್ಷಣೆಯ ಬಳಿಕ ಸಚಿವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ವಿಚ್ಛೇದನ ಸಿಗೋ ತನಕ ಸಿನಿಮಾ ಮಾಡಲ್ಲ ಅಂತ ಹೇಳಿ ಈಗ ಉಲ್ಟಾ ಹೊಡೆದ ಜಯಂ ರವಿ

‘ಜನ ನಾಯಗನ್’ ಕಥೆ ಏನು?

ಎಚ್. ವಿನೋದ್ ನಿರ್ದೇಶನದ ಹಾಗೂ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಿಸಿರುವ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಹಾಗೂ ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತೀರಿಹೋದ ತಮ್ಮ ಸ್ನೇಹಿತನ ಮಗಳನ್ನು ಸಾಕಿ ಬೆಳೆಸಿ, ಆಕೆಯ ಬಾಲ್ಯದ ನೋವುಗಳನ್ನು ಮರೆಸಿ ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲು ಪಡುವ ಶ್ರಮ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಭ್ರಷ್ಟರ ವಿರುದ್ಧ ನಡೆಸುವ ಹೋರಾಟವೇ ಈ ಚಿತ್ರದ ಮುಖ್ಯ ಕಥಾವಸ್ತುವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us