ಬಿಗ್ ಬಾಸ್ ಅಗ್ನಿಪರೀಕ್ಷೆಯಿಂದ ಹೊರಹೋದ ಕುಮಾರಿಗೆ 5 ಲಕ್ಷ ರೂ. ಸಹಾಯಧನ, ದುಬೈನಲ್ಲಿ ಜಾಬ್ ಆಫರ್
'ಬಿಗ್ ಬಾಸ್ ಅಗ್ನಿಪರೀಕ್ಷೆ' ಶೋನಿಂದ ಅನಾರೋಗ್ಯದ ಕಾರಣ ಮುಗ್ಧ ಸ್ಪರ್ಧಿ ಕುಮಾರಿ ಅರ್ಧಕ್ಕೆ ನಿರ್ಗಮಿಸಿದ್ದಾರೆ. ಆದರೆ, ಅವರಿಗೆ ಇಕೋ ಪ್ಲ್ಯಾನೆಟ್ ಎಲಿವೇಟರ್ ಸಂಸ್ಥೆಯಿಂದ ಬರೋಬ್ಬರಿ 5 ಲಕ್ಷ ನಗದು ಬಹುಮಾನ ಹಾಗೂ ಶಿಕ್ಷಣ ಪೂರ್ಣಗೊಂಡ ನಂತರ ಕರ್ನಾಟಕ ಅಥವಾ ದುಬೈನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಬೃಹತ್ ಜಾಬ್ ಆಫರ್ ಸಿಕ್ಕಿದೆ.

ಮುಖ್ಯಾಂಶಗಳು
- ಅನಾರೋಗ್ಯದ ಕಾರಣ ಶೋಗೆ ಬೈ-ಬೈ
- ಕಣ್ಣೀರಿಡುತ್ತಲೇ ನಿರ್ಗಮಿಸಿದ ಸ್ಪರ್ಧಿ ಕುಮಾರಿ
- ಆಟ ಅರ್ಧಕ್ಕೇ ಮುಗಿದ್ರೂ ಒಲಿದುಬಂತು ಅದೃಷ್ಟ
‘ಬಿಗ್ ಬಾಸ್ ಅಗ್ನಿಪರೀಕ್ಷೆ’ (Bigg Boss) ರಿಯಾಲಿಟಿ ಶೋನಲ್ಲಿ ತಮ್ಮ ಮುಗ್ಧತೆಯಿಂದಲೇ ವೀಕ್ಷಕರ ಹಾಗೂ ತೀರ್ಪುಗಾರರ ಮನ ಗೆದ್ದವರು ಕುಮಾರಿ. ಇದೀಗ ಅನಾರೋಗ್ಯದ ಕಾರಣದಿಂದಾಗಿ ಶೋನಿಂದ ಅರ್ಧಕ್ಕೆ ನಿರ್ಗಮಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಂಚಿಕೆಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ವೈದ್ಯರ ಸಲಹೆಯಂತೆ ಆಟವನ್ನು ಮುಂದುವರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಅವರು ಶೋ ತೊರೆಯುತ್ತಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
ಕುಮಾರಿ ಅವರು ಯಾಕೆ ಶೋನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಇದಕ್ಕೆ ಉತ್ತರ ಸಿಕ್ಕಿರಲಿಲ್ಲ. ಅವರು ಬಿಗ್ ಬಾಸ್ನಲ್ಲಿ ಕಾಣಿಸಿಕೊಳ್ಳಬೇಕು ಎಂದು ಅನೇಕರು ಕೋರಿಕೆ ಇಡುತ್ತಿದ್ದರು. ‘ನನ್ನನ್ನು ಕಳುಹಿಸಲು ಕುಮಾರಿ ಅವರನ್ನು ಕರೆತರಲಾಗುತ್ತಿಲ್ಲ’ ಎಂದು ಪೂರ್ಣಿಮಾ ಆರೋಪಿಸಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ. ಕುಮಾರಿ ಅನಾರೋಗ್ಯದ ಕಾರಣದಿಂದಲೇ ಶೋನಲ್ಲಿ ಉಳಿಯುತ್ತಿಲ್ಲ.
View this post on Instagram
ಆಟ ಅರ್ಧಕ್ಕೆ ಮುಗಿದರೂ ಕುಮಾರಿಯ ಭವಿಷ್ಯಕ್ಕೆ ಬಿಗ್ ಬಾಸ್ ವೇದಿಕೆ ಹೊಸ ಬೆಳಕು ನೀಡಿದೆ. ಕಾರ್ಯಕ್ರಮದ ಪ್ರಾಯೋಜಕರಾದ ‘ಇಕೋ ಪ್ಲ್ಯಾನೆಟ್ ಎಲಿವೇಟರ್’ ಸಂಸ್ಥೆಯು ಕುಮಾರಿಗೆ ಬರೋಬ್ಬರಿ 5 ಲಕ್ಷ ನಗದನ್ನು ಸಹಾಯವಾಗಿ ನೀಡಲಾಗಿದೆ. ಇದಷ್ಟೇ ಅಲ್ಲದೆ, ಕುಮಾರಿಯ ಶಿಕ್ಷಣ ಮುಗಿದ ನಂತರ ಕರ್ನಾಟಕದಲ್ಲಿ ಸಂಸ್ಥೆಯ ಯಾವುದೇ ಶಾಖೆಯಲ್ಲಿ ಅಥವಾ ದುಬೈನಲ್ಲಿರುವ ಅವರ ಶಾಖೆಯಲ್ಲಿ ಕೆಲಸ ಮಾಡಲು ಬೃಹತ್ ಉದ್ಯೋಗಾವಕಾಶ ನೀಡಲಾಗಿದೆ.
ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್ 13’: ಕಿಚ್ಚ ಸುದೀಪ್ ಪಡೆದ ಸಂಭಾವನೆ ಎಷ್ಟು?
ವೇದಿಕೆಯಿಂದ ನಿರ್ಗಮಿಸುವ ವೇಳೆ ಕುಮಾರಿ ಹಾಗೂ ಇತರ ಸ್ಪರ್ಧಿಗಳು ತೀವ್ರ ಭಾವುಕರಾಗಿ ಕಣ್ಣೀರಿಟ್ಟರು. ಹಳ್ಳಿಯಿಂದ ಬಂದ ತಮಗೆ ಬೆಂಗಳೂರು ನೋಡುವ ಹಾಗೂ ಇಷ್ಟು ದೊಡ್ಡ ವೇದಿಕೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದಕ್ಕೆ ಕುಮಾರಿ ಸಂತಸ ವ್ಯಕ್ತಪಡಿಸಿದರು. ಶೋನಿಂದ ಹೊರಬಿದ್ದರೂ ಸಿಕ್ಕಿರುವ ಈ ದೊಡ್ಡ ಮೊತ್ತ ಮತ್ತು ಕೆಲಸದ ಆಫರ್ ಕುಮಾರಿಯ ಜೀವನಕ್ಕೆ ದೊಡ್ಡ ಆಸರೆಯಾಗಿದೆ. ಅನಾರೋಗ್ಯಕ್ಕೆ ಒಳಗಾಗಿರೋ ಅವರ ತಾಯಿ ಚಿಕಿತ್ಸೆಗೆ ಈ ಹಣ ಸಹಕಾರಿ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




